ಒಂದೇ ಜಾತಿಯ ದಂಪತಿ ಚುನಾವಣೆಯಲ್ಲಿ ಅಂತರ್ಜಾತಿ !



ವಿಕ ವಿಶೇಷ ಮೈಸೂರು
ತಾಲೂಕಿನ ಪ್ರತಿಷ್ಠಿತ ಗ್ರಾ. ಪಂ.ಯ ವ್ಯಾಪ್ತಿಗೆ ಬರುವ ಕುಟುಂಬದಲ್ಲಿ ಗಂಡ ಹೆಂಡತಿ ಇಬ್ಬರೂ ರಾಜಕಾರಣಿಗಳು. ಕಳೆದ ಚುನಾವಣೆಯಲ್ಲಿ ಗಂಡ ಬಿಸಿಎಂ(ಎ) ಅಡಿ ಆಯ್ಕೆಯಾಗಿದ್ದರು. ಈಗ ಅವರ ಪತ್ನಿ ಪರಿಶಿಷ್ಟ ಪಂಗಡ ಮೀಸಲು ಸ್ಥಾನದಡಿ ನಾಮಪತ್ರ ಸಲ್ಲಿಸಿದ್ದಾರೆ !
ಒಂದೇ ಕುಟುಂಬದಲ್ಲಿ ಗಂಡ ಒಂದು ಜಾತಿ, ಹೆಂಡತಿ ಇನ್ನೊಂದು ಜಾತಿ. ಇದರರ್ಥ ಅಂತರ್ಜಾತಿ ವಿವಾಹಿತರೇನಲ್ಲ. ಇಬ್ಬರೂ ರಾಜ ಪರಿವಾರ ಜಾತಿಗೆ ಸೇರಿದವರು, ಪರಸ್ಪರ ನೆಂಟ ರಿಷ್ಟರು. ಹೀಗಿದ್ದರೂ ಇದ್ಹೇಗೆ ಎಂದರೆ ಉತ್ತರ ಸರಳ- ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲಲು ಮೀಸಲಿನ ದುರ್ಬಳಕೆ !
ಗ್ರಾ. ಪಂ. ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಬಿಸಿಎಂ (ಎ) ವರ್ಗದ ಮೀಸಲು ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ಸಮಯಕ್ಕೆ ತಕ್ಕಂತೆ ಜಾತಿಗಳನ್ನು ದುರುಪಯೋಗ ಪಡಿಸಿ ಕೊಳ್ಳುತ್ತಿರುವುದು ವರದಿಯಾಗುತ್ತಿದೆ.
ಕಡಕೊಳ ಗ್ರಾ. ಪಂ. ನ ಬಿಸಿಎಂ(ಎ) ಮೀಸಲು ಸ್ಥಾನಕ್ಕೆ ರಾಜ ಪರಿವಾರ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಅವರ ತಾಯಿ ಅದೇ ಗ್ರಾ. ಪಂ. ಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಪರಿಶಿಷ್ಟ ಪಂಗಡ ಎಂದು ಘೋಷಿಸಿಕೊಂಡು, ಆ ಜಾತಿಯ ಸವಲತ್ತು ಪಡೆದಿದ್ದಾರೆ. ಚುನಾವಣೆಗೆ ನಿಲ್ಲಲು ಮಗ ಬಿಸಿಎಂ(ಎ) ಆದ್ರೆ, ಸವಲತ್ತು ಪಡೆಯುವ ತಾಯಿ ಎಸ್ಟಿ .
ಜಿಲ್ಲೆಯ ೨೩೫ ಗ್ರಾಮ ಪಂಚಾಯಿತಿಗಳ ೪೩೦೦ ಸ್ಥಾನಗಳಿಗೆ ಮೇ ೧೨ರಂದು ಚುನಾವಣೆ ನಡೆಯುತ್ತಿದ್ದು, ಈ ಪೈಕಿ ಪರಿಶಿಷ್ಟ ಪಂಗಡಕ್ಕೆ ೬೨೦ ಹಾಗೂ ಬಿಸಿಎಂ(ಎ)ಗೆ ೧೧೬೭ ಸ್ಥಾನಗಳು. ಪರಿಶಿಷ್ಟ ಪಂಗಡದಡಿ ಜಿಲ್ಲೆಯಲ್ಲಿ ಪ್ರಮುಖವಾಗಿ ಬೇಡ, ವಾಲ್ಮೀಕಿ, ನಾಯಕ ಜನಾಂಗದವರು ಸ್ಪರ್ಧಿಸಲು ಅರ್ಹರು. ಒಕ್ಕಲಿಗರು, ಲಿಂಗಾಯಿತರು, ಕ್ರೈಸ್ತರನ್ನು ಹೊರತು ಪಡಿಸಿ ಉಳಿದ ಎಲ್ಲ ಹಿಂದುಳಿದ ಜಾತಿಗಳು ಬಿಸಿಎಂ(ಎ) ಮೀಸಲಿನಡಿ ಸ್ಪರ್ಧಿಸಬಹುದು. ಹೀಗಿದ್ದರೂ ಬಹಳಷ್ಟು ಕಡೆ ರಾಜ ಪರಿವಾರ ಹಾಗೂ ಕಾಡು ಕುರುಬ ಕೋಮಿನವರು ಈ ಮೀಸಲು ಬಳಸುತ್ತಿದ್ದಾರೆ ಎಂಬ ದೂರುಗಳು ಜಿಲ್ಲಾಧಿಕಾರಿ ಕಚೇರಿಗೆ ಮುಟ್ಟಿವೆ.
ಕಡಕೊಳ, ಸಿಂಧುವಳ್ಳಿ, ಉದ್ಬೂರು, ರಮ್ಮನಹಳ್ಳಿ, ಕಳಲೆ, ಇಲವಾಲ, ಗಾಡವಗೆರೆ, ತಲಕಾಡು, ಬೆಟ್ಟದಪುರ, ಭೇರ್ಯ, ಮಿರ್ಲೆ ಸೇರಿದಂತೆ ಬಹಳಷ್ಟು ಕಡೆ ಜಾತಿ ದುರ್ಬಳಕೆಯ ದೂರುಗಳು ಕೇಳಿ ಬರುತ್ತಿವೆ. ಕೆಲವೆಡೆ ಗ್ರಾಮ ಪಂಚಾಯಿತಿ ಸ್ಥಾನಗಳ ಮೀಸಲಷ್ಟೇ ಬದಲಾಗಿಲ್ಲ. ಕೆಲವರ ಜಾತಿಯೂ ಬದಲಾಗಿದೆ !
ಮೀಸಲು ದುರ್ಬಳಕೆ ಇತಿಹಾಸ: ೧೯೭೧ರ ಜನಗಣತಿವರೆಗೆ ರಾಜ್ಯ ದಲ್ಲಿರುವ ಮೂಲನಿವಾಸಿಗಳು, ಗಿರಿಜನರು ಮತ್ತು ಬೆಳಗಾವಿ, ಕೊಡಗು ಜಿಲ್ಲೆಯ ಕೆಲ ನಾಯಕರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರು. ಒಟ್ಟೂ ಜನಸಂಖ್ಯೆ ೩.೯೦ ಲಕ್ಷ. ೧೯೮೧ರ ಜನಗಣತಿ ವೇಳೆಗೆ, ಇತರೆ ಜಿಲ್ಲೆಗಳ ನಾಯಕರು ಕೂಡ ತಮ್ಮನ್ನು ಪರಿಶಿಷ್ಟ ಪಂಗಡ ಎಂದು ಸ್ವಯಂ ಘೋಷಿಸಿಕೊಂಡು, ಗಣತಿಯಲ್ಲಿ ದಾಖಲಿಸಿದರು. ಅಲ್ಲಿಯವರೆಗೆ ನಾಯಕರು ಬಿಸಿಎಂ(ಎ) ವರ್ಗಕ್ಕೆ ಸೇರಿದ್ದರು. ಗಣತಿ ಬಳಿಕ ರಾಜಕೀಯ ಕಾರಣಕ್ಕಾಗಿ ಈ ಎಲ್ಲರನ್ನೂ ಪರಿಶಿಷ್ಟ ಪಂಗಡ ಎಂದೇ ಪರಿಗಣಿಸಲಾಯಿತು. ೧೯೯೧ರ ಜನಗಣತಿಯಲ್ಲೂ ಪುನರಾವರ್ತನೆ ಆಯಿತು.
ಪರಿಣಾಮ-ಗಿರಿಜನೇತರ ಕೋಮಿಗೆ ಸೇರಿದ ಹತ್ತಾರು ಜಾತಿಗಳು ‘ಪರಿಶಿಷ್ಟ ಪಂಗಡ’ದಡಿ ಆಶ್ರಯ ಪಡೆದು, ಮೀಸಲಿನ ಲಾಭ ಪಡೆದವು. ಈ ಮಧ್ಯೆ ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿದ್ದ ಪರಿವಾರದವರು ಪರಿಶಿಷ್ಟ ಪಂಗಡಕ್ಕೆ ಸೇರಲು ಪ್ರಯತ್ನಿಸಿ ವಿಫಲರಾದರು. ಹೀಗಿದ್ದರೂ ಕೆಲವರು ಶಾಲೆಗೆ ದಾಖಲಾಗುವಾಗ ತಮ್ಮ ಜಾತಿ ಕಾಲಂನಲ್ಲಿ ಪರಿವಾರ ನಾಯಕರು ಎಂದು ಬರೆಸಿ ಕೊಳ್ಳುವುದು ತಪ್ಪಿಲ್ಲ.
ದುರ್ಬಳಕೆ ಹೇಗೆ ? ಸಾಮಾನ್ಯವಾಗಿ ಶಾಲೆಗೆ ಸೇರುವಾಗ ಪರಿವಾರ ಕೋಮಿನ ವರು ಹಾಗೂ ಕಾಡು ಕುರುಬರು ತಮ್ಮ ಜಾತಿಯನ್ನು ಪರಿಶಿಷ್ಟ ಪಂಗಡ ಎಂದು ಬರೆಸಿಕೊಳ್ಳುತ್ತಾರೆ. ಇದನ್ನು ತೋರಿಸಿಯೇ ಮುಂದೆ ತಾವು ಪರಿಶಿಷ್ಟ ಪಂಗಡ ಎಂದು ಪ್ರಮಾಣ ಪತ್ರ ಪಡೆಯುತ್ತಾರೆ. ಒಂದು ವೇಳೆ ಬಿಸಿಎಂ(ಎ)ನಡಿ ಲಾಭ ಪಡೆಯ ಬೇಕಾದಲ್ಲಿ ಬೇರೊಂದು ದಾಖಲೆಯನ್ನು ತೋರಿಸು ತ್ತಾರೆ. ನಾವು ಪರಿವಾರದವರಷ್ಟೆ, ಪರಿವಾರ ನಾಯಕರಲ್ಲ. ಹಾಗಾಗಿ ಬಿಸಿಎಂ(ಎ) ಎಂದು ಬಿಂಬಿಸಿಕೊಳ್ಳುತ್ತಾರೆ. ಒಟ್ಟಾರೆ ಎರಡು ಮೀಸಲುಗಳನ್ನು ಸಂದರ್ಭಕ್ಕೆ ತಕ್ಕಂತೆ ದುರುಪಯೋಗಪಡಿಸಿ ಕೊಳ್ಳುವುದು !
ಪಂಚಾಯಿತಿ ಚುನಾವಣೆಗೆ ಏಕಿಷ್ಟು ರಶ್...?
ಚೀ. ಜ. ರಾಜೀವ ಮೈಸೂರು
ತಾಲೂಕಿನ ಕಡಕೊಳ ಗ್ರಾಮ ಪಂಚಾಯಿತಿಯ ೨೨ ಸ್ಥಾನಗಳಿಗೆ ಮೇ ೧೨ರಂದು ನಡೆಯಲಿ ರುವ ಚುನಾವಣೆಗೆ ನಾಮಪತ್ರಗಳ ಸಂಖ್ಯೆ ೭೪. ಇದರಲ್ಲಿ ಯುವಕರ ಸಂಖ್ಯೆಯೇ ಅಧಿಕ !
ಈ ಅಂಕಿ-ಸಂಖ್ಯೆ ಮತ್ತು ಯುವಕರ ಚುನಾವಣೆ ಪ್ರೀತಿ ಗ್ರಾಮದ ಹಿರಿಯರು ಮತ್ತು ಯಜಮಾನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಮಾತ್ರವಲ್ಲ, ಕಾಲ ಕೆಟ್ಟು ಹೋಯಿತು ಎಂಬ ‘ಸ್ಥಾಪಿತ ಹಳಹಳಿಕೆ’ ಅವರನ್ನು ಚಿಂತೆಗೀಡು ಮಾಡಿದೆ. ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದವರ ಸಂಖ್ಯೆ ೩೫ರ ಗಡಿ ದಾಟಿರಲಿಲ್ಲ. ಈ ಬಾರಿ ದ್ವಿಗುಣ. ಇದು ಒಂದರ ಕಥೆಯಲ್ಲ. ಜಿಲ್ಲೆಯ ಬಹುತೇಕ ಕಡೆ ಇದೇ ರೀತಿಯ ಬೆಳವಣಿಗೆ. ಇದರ ಹಿನ್ನೆಲೆ ಶೋಧನೆಗೆ ಕಡಕೊಳ ಸುತ್ತಮುತ್ತಲಿನ ಗ್ರಾಮಗಳನ್ನು ಸುತ್ತಾಡಿದರೆ, ಸಿಗುವ ಉತ್ತರಗಳು ಸ್ವಾರಸ್ಯಕರ.
ಪಂಚಾಯಿತಿ ವ್ಯವಸ್ಥೆಯ ಮೂರನೇ ಸ್ತರದಲ್ಲಿ ಅರಳುತ್ತಿರುವ ರಾಜಕೀಯ ಪ್ರಜ್ಞೆ, ಗ್ರಾಮೀಣ ಉದ್ಯೋಗ ಖಾತ್ರಿಯಂಥ ಯೋಜನೆಗಳ ಮೂಲಕ ಗ್ರಾ. ಪಂ. ಗಳಿಗೆ ಹರಿದು ಬರುತ್ತಿರುವ ಲಕ್ಷಾಂತರ ರೂ. ಅನುದಾನ, ಬಿಜೆಪಿಯ ಆಪರೇಷನ್ ಕಮಲ...ಹೀಗೆ ತರಹೇವಾರಿ ಉತ್ತರಗಳು.
ರಾಜಕೀಯ ಅರಿವು: ‘ಮೊದಲೆಲ್ಲಾ ಊರಲ್ಲಿ ಯಜಮಾನ ಮನುಷ್ಯರಿಗೆ, ಅವರ ಮಾತಿಗೆ ಬೆಲೆ-ಗೌರವ ಇರುತ್ತಿತ್ತು. ಈಗ ಹಾಗಿಲ್ಲ. ಯಾವು ದಾದರೂ ಊರಿನ ಕೆಲಸದ ಬಗ್ಗೆ ಸಲಹೆ-ಸೂಚನೆ ನೀಡಲು ಹೋದರೆ, ನೀನೇನೂ ಎಲೆಕ್ಟೆಡ್ ಮೆಂಬ್ರಾ ಎಂದು ಪ್ರಶ್ನಿಸುತ್ತಾರೆ. ಅವ್ರು ಕೇಳೋದ್ರಲ್ಲೂ ತಪ್ಪಿಲ್ಲ. ಅದಕ್ಕಾಗಿ ನಾಮಪತ್ರ ಸಲ್ಲಿಸಿದ್ದೇನೆ’ ಎನ್ನು ತ್ತಾರೆ ಕಡಕೊಳದ ಮಹೇಶ್ ಎಂಬ ಯುವಕ.
‘ಐದು ವರ್ಷದ ಹಿಂದೆ ಚುನಾವಣೆಗೆ ೪೦ ಜನ ನಿಂತಿದ್ರು. ಊರಿನ ಯಜಮಾನ್ರಾದ ರಂಗ ನಾಯ್ಕ, ವಜ್ರ ನಾಯ್ಕ್ ಅವರು ಎಲ್ರನ್ನೂ ಕರ‍್ಸೆ ಮಾತಾಡಿದ್ದಕ್ಕೆ ೧೦ ಜನ ವಾಪಸ್ ತೆಗೆದುಕೊಂಡ್ರು. ಮೂರು ಜನರ ಅವಿರೋಧ ಆಯ್ಕೆ ಆಗಿತ್ತು’ ಎನ್ನುವ ಗ್ರಾಮದ ಸಿದ್ದನಾಯಕ ಅವರಿಗೆ ಈಗಿನ ಬೆಳವಣಿಗೆಗಳು ಬೇಸರ ತಂದಿವೆ. ‘ಈಗ ನಮ್ಮೂರಲ್ಲಿ ರಂಗನಾಯ್ಕರು ಇಲ್ಲ. ಯಾರೂ ಯಾರ ಮಾತನ್ನು ಕೇಳೋದಿಲ್ಲ. ನಾಮಪತ್ರ ಸಲ್ಲಿಸಿರುವವರದ್ದು ನಾವು-ನಮ್ಮಿಷ್ಟ ಅನ್ನೋ ಧೋರಣೆ. ಎಲ್ರೂ ರಾಜಕಾರಣಿಗಳೇ. ಕಾಲ ಕೆಟ್ಟು ಹೋಯಿತು’ ಎಂದು ಹಳಹಳಿಸುತ್ತಾರೆ.
ಖಾತ್ರಿ ಯೋಜನೆ ಆಕರ್ಷಣೆ: ಚುನಾವಣೆಗೆ ನಾಮಪತ್ರ ಸಲ್ಲಿಸಿರುವವರ ಪೈಕಿ ೩೦ ರಿಂದ ೫೦ ವರ್ಷದೊಳಗಿನವರು ಹೆಚ್ಚಿದ್ದಾರೆ. ಬಹುತೇಕ ಹೊಸ ಮುಖಗಳು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸುವರ್ಣ ಗ್ರಾಮದಂಥ ಯೋಜನೆ ಗಳು ಕೆಲವರನ್ನು ಆಕರ್ಷಿಸಿವೆ. ‘ಖಾತ್ರಿ ಯೋಜನೆ ಯಲ್ಲಿ ಏನು ಕೆಲಸ ಇದೆ, ಏನು ಮಾಡಬಹುದು ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆದರೆ, ಖಾತ್ರಿ ಯೋಜನೆ ದೆಸೆಯಿಂದ ಕೆಲ ತಿಂಗಳಲ್ಲೇ ದುಂಡುಗಾದವರು (ಹಣ ಮಾಡಿಕೊಂಡ ಜನ) ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ. ಇದರಿಂದಲೂ ಬಹಳಷ್ಟು ಜನ ಸ್ಪರ್ಧೆಗಿಳಿದಿದ್ದಾರೆ’ ಎನ್ನುತ್ತಾರೆ ಕಡಕೊಳ ಕನ್ನಡ ಗೆಳೆಯರ ಬಳಗದ ಉಪಾಧ್ಯಕ್ಷ ಕುಮಾರಸ್ವಾಮಿ.
ಸಾಮಾನ್ಯವಾಗಿ ಗ್ರಾ.ಪಂ. ಕಾಮಗಾರಿಗಳ ಗುತ್ತಿಗೆಯನ್ನು, ಅಲ್ಲಿನ ಸದಸ್ಯರೇ ತಮ್ಮ ಬಂಧು- ಬಾಂಧವರ ಹೆಸರಿನಲ್ಲಿ ಪಡೆಯುವುದು ಹೊಸ ದೇನಲ್ಲ. ಜಾತಿ, ಹಣದ ಪ್ರಭಾವ ಇದ್ದ ಸದಸ್ಯರು ಮಾತ್ರ ಕಾಮಗಾರಿ ಮಾಡಿಸಿ, ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಆದರೆ, ಖಾತ್ರಿ ಹಾಗೂ ಸುವರ್ಣ ಗ್ರಾಮ ಯೋಜನೆ ಜಾರಿಗೆ ಬಂದ ಬಳಿಕ ಪಂಚಾಯಿತಿಯ ಬಹುತೇಕ ಸದಸ್ಯರ ಸ್ಥಿತಿ-ಗತಿ ಸುಧಾರಿಸಿದೆ ಎಂದು ಹೇಳುತ್ತಾರೆ.
ಆಪರೇಷನ್ ಕಮಲದ ಪ್ರಭಾವ !: ಸಾಮಾನ್ಯ ವಾಗಿ ನಾಮಪತ್ರ ಸಲ್ಲಿಸಿದವರೆಲ್ಲರಿಗೂ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಆಗ್ರಹವೇನಿ ರದು. ಸ್ಪರ್ಧಿಸಲೇಬೇಕೆಂದು ಹಠ ತೊಟ್ಟ ಅಭ್ಯರ್ಥಿ ರಾಜಿಗೆ ಕರೆದರೆ, ಒಂದು ಆಟ ಆಡಿ ಬಿಡೋಣ ಎಂಬ ಮನೋಭಾವ. ಇಂಥವರು ಎಲ್ಲ ಕಾಲದಲ್ಲೂ ಎಲ್ಲ ಚುನಾವಣೆ ಸಂದರ್ಭದಲ್ಲೂ ಇರುತ್ತಾರೆ. ಆದರೆ, ಈ ಬಾರಿ ಇಂಥವರು ಹೆಚ್ಚು. ಚುನಾಯಿತ ಪ್ರತಿನಿಧಿಗಳನ್ನು ಖರೀದಿಸುವ ಆಪರೇಷನ್ ಕಮಲ ಎಂಬ ಕಾರ‍್ಯಾಚರಣೆ ತಮ್ಮ ಬಾಗಿಲಿಗೂ ಬಂದೀತೆಂಬ ಆಲೋಚನೆ.
‘ಅವಿರೋಧ ಆಯ್ಕೆಗೆ ಸಹಕರಿಸಿದರೆ, ಬಿಜೆಪಿ ಯವ್ರು ಉಳಿದ ಕ್ಯಾಂಡಿಡೇಟ್‌ಗಳಿಗೆ ದುಡ್ಡು ಕೊಡ್ತಾರಂತೆ. ಇದಕ್ಕಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಳಿಗೆ ಈಗಾಗ್ಲೆ ನೋಟಿನ ಕಂತೆ ಬಂದಿದೆಯಂತೆ. ಹಾಗಾಗಿ ನಾನೂ ನಾಮ ಪತ್ರಸಲ್ಲಿಸಿದ್ದೇನೆ. ನನಗೂ ಒಂದಿಷ್ಟು ಹಣ ನೀಡಲಿ’ ಎಂದವರು ಹೆಸರು ಬಹಿರಂಗ ಪಡಿಸಲು ಬಯಸದ ಅಭ್ಯರ್ಥಿಯೊಬ್ಬ. ಬಿಜೆಪಿ ಮುಖಂಡರು ಹಣ ಹಂಚಿ ದ್ದಾರೋ ಇಲ್ಲವೋ, ಇಂಥದೊಂದು ವದಂತಿ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವುದಂತೂ ಸತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ