ನಾಲ್ಕೇ ತಿಂಗಳಲ್ಲಿ ಏರಿತು ಅಪರಾಧ ಪ್ರಮಾಣ

ವಿಕ ಸುದ್ದಿಲೋಕ ಮೈಸೂರು
ನಾಲ್ಕು  ತಿಂಗಳಲ್ಲಿ ಮೈಸೂರು ನಗರದ ಅಪರಾಧ ಪ್ರಮಾಣ ಸರ್ರನೇ ಏರಿದೆಯೇ?
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯಕುಮಾರ್ ಸಿಂಗ್ ಭಾನುವಾರ ನಗರಕ್ಕೆ ಆಗಮಿಸಿದಾಗ ನಗರ ಪೊಲೀಸ್ ಆಯುಕ್ತರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿನ ಅಂಕಿ ಅಂಶಗಳು ಇಂಥಹದೊಂದು ಶಂಕೆಯನ್ನು ಹುಟ್ಟು ಹಾಕಿದೆ.
೨೦೦೯ರ ಡಿಸೆಂಬರ್, ಈ ವರ್ಷದ ಜನವರಿ, ಫೆಬ್ರವರಿ, ಮಾರ್ಚ್ ಸೇರಿ ನಾಲ್ಕೇ ತಿಂಗಳಲ್ಲಿ ಮೈಸೂರಿನಲ್ಲಿ ಕಳವಾದ ವಸ್ತುಗಳ ಪ್ರಮಾಣ ೧.೭೩ ಕೋಟಿ ರೂ.  ಇದು ಹಿಂದಿನ ಎರಡು ವರ್ಷದಲ್ಲಿನ ಇದೇ ಅವಧಿಯ ಮೊತ್ತದ ಎರಡು ಪಟ್ಟು. ಈ ನಾಲ್ಕು ತಿಂಗಳಲ್ಲಿ ವಶಪಡಿಸಿಕೊಂಡ ಮೊತ್ತ ೫೨.೦೯ ಲಕ್ಷ ರೂ.  ಹಿಂದಿನ ಎರಡು ವರ್ಷದಲ್ಲಿ ಇದು ಅರ್ಧದಷ್ಟು ಕಡಿಮೆ.
ಈ ಅಂಕಿ ಅಂಶ ನೋಡಿದಾಗ ಮೈಸೂರಿನಲ್ಲಿ ಪತ್ತೆಯಾದ ಪ್ರಮಾಣದಲ್ಲಿ ಏರಿಕೆ ಕಂಡು ಬಂದರೂ,. ಅಪರಾಧದಲ್ಲೂ ಹೆಚ್ಚಳವಾಗಿರುವುದು ಗೋಚರಿಸುತ್ತದೆ.
ಸರಗಳ್ಳತನ ಮಿತಿ ಮೀರಿದೆ: ಸರಗಳ್ಳತನ ತಪ್ಪಿಸಲೆಂದೇ ಬೆಳಗ್ಗೆಯಿಂದ ಮಧ್ಯ ರಾತ್ರಿವರೆಗೆ ವಿವಿಧ ಆಪರೇಶನ್‌ಗಳನ್ನು ನಗರ ಪೊಲೀಸರು ಆರಂಭಿಸಿದ್ದಾರೆ. ಆದರೂ ಸರಗಳ್ಳತನ ಮಾತ್ರ ಸೆನ್ಸೆಕ್ಸ್ ಮಾದರಿಯಲ್ಲೇ ಏರಿಕೆಯಾಗಿದೆ.
೨೦೦೮ರ ನಾಲ್ಕು ತಿಂಗಳಲ್ಲಿ ೧೨ ಸರಗಳ್ಳತನ ವರದಿ ಯಾಗಿ ೩ ಪತ್ತೆಯಾಗಿದ್ದವು. ಅದೇ ೨೦೦೯ರಲ್ಲಿ ೨೪ ಸರಗಳ್ಳತನ ನಡೆದು ಪತ್ತೆಯಾಗಿದ್ದು ಕೇವಲ ೨ ಮಾತ್ರ. ಅದೇ ೨೦೧೦ರಲ್ಲಿ ವರದಿಯಾದ ಸರಗಳ್ಳ ತನದ ಪ್ರಕರಣಗಳು ೪೨. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ದ್ವಿಗುಣ ವಾಗುತ್ತಾ ಹೋಗುತ್ತಿದೆ. ಇನ್ನು ಪತ್ತೆ ವಿಚಾರದಲ್ಲೂ ನಗರ ಪೊಲೀಸರು ಹಿಂದೆ ಬಿದ್ದಿದ್ದಾರೆ. ನಾಲ್ಕು ತಿಂಗಳಲ್ಲಿ ಪತ್ತೆಯಾದ ಸರಗಳ್ಳತನ ೧೧ ಅಷ್ಟೇ. ಸರಗಳ್ಳತನದಿಂದ ಆದ ಕಳವಿನ ಪ್ರಮಾಣ ೧೪.೭೩ ಲಕ್ಷ ರೂ. ೨೦೦೮ರಲ್ಲಿ ೨.೯೫ ಲಕ್ಷ ರೂ, ೨೦೦೯ರಲ್ಲಿ ೬.೫೭ ಲಕ್ಷ ರೂ. ನಷ್ಟಿದ್ದು. ಇದೂ ಗಣನೀಯವಾಗಿ ಏರಿದೆ.
ಹಗಲು ಇಳೀತು, ರಾತ್ರಿ ಏರಿತು: ಇನ್ನು ಮನೆಗಳ್ಳತನ ಹಾಗೂ ಸಾಮಾನ್ಯ ಕಳ್ಳತನದ ಪ್ರಮಾಣದಲ್ಲೂ ಏರಿಕೆಯಾಗಿದೆ. ಹಗಲು ಕಳ್ಳತನ ಪ್ರಮಾಣ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ ೧೦ ಹಾಗೂ ೪ ಇದ್ದವು. ಈ ನಾಲ್ಕು ತಿಂಗಳಲ್ಲಿ ಇದು ಒಂದಕ್ಕೆ ಇಳಿದಿದೆ. ಅದೇ ರಾತ್ರಿ ಕಳ್ಳತನ ಪ್ರಮಾಣ ಏರಿದೆ. ೨೦೦೮ರಲ್ಲಿ ೭೨, ೨೦೦೯ರಲ್ಲಿ ೨೭ ಇದ್ದ ಪ್ರಮಾಣ ೨೦೧೦ರಲ್ಲಿ ೫೧ಕ್ಕೆ ಜಿಗಿದಿದೆ. ಸಾಮಾನ್ಯ ಕಳವಿನ ಮೊತ್ತವೂ ಎರಡು ಪಟ್ಟನ್ನೂ ದಾಟಿದೆ. ೨೦೦೮ರಲ್ಲಿ ೪೭,೧೦,೨೬೯ ರೂ.ಗಳಷ್ಟು ಕಳವಾದರೆ, ೨೦೦೯ರಲ್ಲಿ ೭೦,೧೭,೦೫೦ಕ್ಕೆ ಜಿಗಿಯಿತು. ಈ ವರ್ಷದ ನಾಲ್ಕು ತಿಂಗಳಲ್ಲಿ ಇದು ೯೭,೫೧,೮೬೫. ಪತ್ತೆಯಾದ ಪ್ರಮಾಣ ೨೯,೫೮,೬೪೦ ರೂ.
ಹಗಲು ಎಚ್ಚರಿಕೆಯಾಗಿರುವ ಪೊಲೀಸರು ರಾತ್ರಿ ಕಾರ‍್ಯಾಚರಣೆ ಯಲ್ಲಿ ಎತ್ತ ಜಾರುತ್ತಿದ್ದಾರೆ ಎನ್ನುವುದನ್ನು ಈ ಅಂಕಿ ಅಂಶ ತೋರುತ್ತದೆ.
ಸಾಮಾನ್ಯ ಕಳ್ಳತನದಲ್ಲೂ ಇದೇ ಅಂಕಿ ಅಂಶ, ೨೦೦೮ರಲ್ಲಿ ೨೩೦, ೨೦೦೯ರಲ್ಲಿ ೧೮೭ ಇದ್ದರೆ ಈ ವರ್ಷ ಇದು ೩೦೫ಕ್ಕೆ ಏರಿ ಹೋಗಿದೆ. ಸುಲಿಗೆ ಪ್ರಕರಣ ದಾಖಲಾಗಿದ್ದು ೧೮. ಹಿಂದಿನ ವರ್ಷದಲ್ಲಿ ಕ್ರಮವಾಗಿ ೧೫ ಹಾಗೂ ೬ ಇದ್ದವು.
ಇದೇ ರೀತಿ ದರೋಡೆ ಪ್ರಕರಣ ಹಿಂದಿನ ಎರಡು ವರ್ಷದ ಈ ಅವಧಿಯಲ್ಲಿ ಯಾವುದೇ ಪ್ರಕರಣ ದಾಖಲಾಗೇ ಇಲ್ಲ. ಈ ವರ್ಷ ಒಂದು ಪ್ರಕರಣ ದಾಖಲಾದರೂ ಪತ್ತೆಯಾಗಿರುವುದು ಸಮಾಧಾನದ ಸಂಗತಿ. ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಹಿಂದಿನ ಎರಡು ವರ್ಷ ಕ್ರಮವಾಗಿ ೨, ೧ ಇದ್ದರೆ, ಈ ವರ್ಷ ನಾಲ್ಕಕ್ಕೆ ಏರಿದೆ. ಲಾಭಕ್ಕಾಗಿ ಕೊಲೆ ನಡೆದ ಪ್ರಕರಣಗಳು ಹಿಂದಿನ ಎರಡು ವರ್ಷದಲ್ಲಿ ಯಾವುದೂ ಇಲ್ಲ. ಈಗ ಆ ಸಂಖ್ಯೆ ೨. ಪತ್ತೆಯಾಗಿದ್ದು ೧.
ಇದೇ ಅವಧಿಯಲ್ಲಿ ಕೊಲೆಯಾದ ಪ್ರಕರಣದಲ್ಲಿ ಅರ್ಧದಷ್ಟು ಇಳಿಮುಖವಾಗಿದೆ. ೨೦೦೮ರಲ್ಲಿ ೧೧, ೨೦೦೯ರಲ್ಲಿ ೧೨ ಪ್ರಕರಣ ದಾಖಲಾಗಿ ಭೇದಿಸಲ್ಪಟ್ಟಿದ್ದವು.
ಸುನೀಲ್ ಅಗರವಾಲ್ ಅವರು ನಗರ ಪೊಲೀಸ್ ಆಯುಕ್ತರಾಗಿ ಬಂದ ೧೦ ತಿಂಗಳ ಅವಧಿಯಲ್ಲಿ ಪೊಲೀಸಿಂಗ್ ಬಲವಾಗಿದೆ ಎನ್ನುವ ಭಾವನೆ ಒಂದು ಕಡೆಯಿದ್ದರೂ, ಅಪರಾಧದ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದು ಏಕೆ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕು.
ಉತ್ಸಾಹದ ಪ್ರದರ್ಶನ
ಈ ನಡುವೆ ನಗರದ ವಿವಿಧ ಠಾಣೆಗಳ ಪೊಲೀಸರು ವಶಪಡಿಸಿಕೊಂಡ ಮಾಲುಗಳ ಪ್ರದರ್ಶನ ಗಮನ ಸೆಳೆಯಿತು. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಬೈಕ್‌ಗಳು, ಕಂಪ್ಯೂಟರ್ ಉತ್ಪನ್ನಗಳು, ಚಿನ್ನಾಛರಣಗಳು, ಪಾರಂಪರಿಕ ಮಹತ್ವದ ವಿಗ್ರಹ, ನಾಣ್ಯಗಳ ಪ್ರದರ್ಶನದಲ್ಲಿ ಉತ್ಸಾಹ ಕಂಡು ಬಂದಿತು.
ಮಂಡಿ, ಕುವೆಂಪುನಗರ, ಸರಸ್ವತಿಪುರಂ, ನರಸಿಂಹ ರಾಜ ಠಾಣೆ ಪೊಲೀಸರು ವಶಪಡಿಸಿಕೊಂಡ ವಸ್ತುಗಳ ಪ್ರಮಾಣ ಗಮನ ಸೆಳೆದರೆ, ಲಕ್ಷ್ಮಿಪುರಂ ಠಾಣೆ ಇನ್ಸ್‌ಪೆಕ್ಟರ್ ಸೂರ‍್ಯನಾರಾಯಣರಾವ್ ವಶಪಡಿಸಿಕೊಂಡಿರುವ ೧೧೬ ಗ್ರಾಂ.ನ ಚಿನ್ನದ ಬಿಸ್ಕೇಟ್ ವಿಶೇಷವೆನಿಸಿತು. ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಅಜಯಕುಮಾರ್‌ಸಿಂಗ್ ಅವರು ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು, ಬೈಕ್‌ಗಳನ್ನು ನೋಡಿ, ಶೋರೂಂಗಳಿಂದಲೇ ಕದ್ದ ಹೊಸ ಬೈಕ್‌ಗಳಂತೆಯೇ ಇದೆಯಲ್ಲಾ ಎಂದು  ಅಚ್ಚರಿಯಿಂದಲೇ ಕೇಳಿದರು. ಇದು ಹೊರಗಡೆಯೇ ಕದ್ದು ಸಿಕ್ಕಿಬಿದ್ದಿದ್ದು ಎಂದು ಆಯುಕ್ತ ಸುನೀಲ್ ಅಗರವಾಲ್ ಸ್ಪಷ್ಟನೆ ನೀಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ