ತ್ರಿಭಾಷಾ ಸೂತ್ರ ಜಾರಿಯಾಗಲಿ

ನವೀನ್‌ಕುಮಾರ್  ಪಿರಿಯಾಪಟ್ಟಣ
ರಾಷ್ಟ್ರದಲ್ಲಿ ಎಲ್ಲಡೆ ತ್ರಿಭಾಷಾ ಸೂತ್ರ ಕಡ್ಡಾಯ ವಾಗಿ ಜಾರಿಯಾಗಬೇಕು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ಪಿರಿಯಾಪಟ್ಟಣದಲ್ಲಿ ನಡೆದ ೧೦ನೇ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಭಾಷೆಯ ಉಳಿವಿಗಾಗಿ ಇಂದು ಹೋರಾಟ ಅನಿವಾರ್ಯ. ಕನ್ನಡ ನಾಡು ನುಡಿಯ ವಿಚಾರ ಬಂದಾಗ ಕನ್ನಡಿಗರು ಪಕ್ಷಾತೀತವಾಗಿ ಹೋರಾಟ ನಡೆಸುವುದು ಅಗತ್ಯ ಎಂದರು.
ಪುಂಡತನ ಸಲ್ಲ: ಇಂದು ಕನ್ನಡ ಭಾಷೆ ಅಪಾಯಕಾರಿ ಪರಿಸ್ಥಿತಿಯಲ್ಲಿದೆ. ಯಾವುದೇ ಭಾಷೆಯನ್ನು ನಾವು ವಿರೋಧಿಸುವುದು ಬೇಡ. ಬದಲಿಗೆ ಎಲ್ಲಾ ಭಾಷೆಯನ್ನು ಗೌರವಿ ಸುತ್ತ ಕನ್ನಡವನ್ನು ಮಾತ್ರ ಕಲಿಯೋಣ, ಬೆಳಗಾವಿ ಹೋರಾಟದಲ್ಲಿ ಮಹಾಜನ ವರದಿ ಅಂತಿಮ ಎಂದಿದ್ದರೂ ಭಾಷೆಯ ವಿಚಾರದಲ್ಲಿ ಮಹಾರಾಷ್ಟ್ರದ ಕೆಲವು ರಾಜಕಾರಣಿಗಳು ಪುಂಡತನ ತೋರುತ್ತಿದ್ದು, ಭಾಷೆಯ ವಿಷಯದಲ್ಲಿ  ರಾಜಕೀಯ ದ್ವೇಷ ಉಂಟು ಮಾಡುತ್ತಿರುವುದು ಸರಿಯಲ್ಲ  ಎಂದರು.
ಆಂಗ್ಲ ವ್ಯಾಮೋಹ ಆತಂಕ:  ಕರ್ನಾಟಕ ದಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಮತ್ತು ದಬ್ಬಾಳಿಕೆ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೆ ಶೇ. ೬೮ರಷ್ಟು ಇತರ ಭಾಷಿಕರಿದ್ದು ಇವರು ಕನ್ನಡ ಭಾಷೆಗೆ ಗೌರವ ಕೊಡದಿದ್ದರೂ ಬದುಕಬಹುದೆಂಬ ನಿರ್ಣಯಕ್ಕೆ ಬಂದಿರುವುದು ಅಪಾಯಕಾರಿ ಸಂಗತಿಯಾಗ ಲಿದೆ. ಆದ್ದರಿಂದ ಅತಿಯಾದ ಸೌಜನ್ಯ ನಮ್ಮ ಭಾಷೆಗೆ ಮಾರಕವಾಗಿದ್ದು ಮುಂದಿನ ದಿನ ಗಳಲ್ಲಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶ ವಾದರೂ ಆಶ್ವರ್ಯವಿಲ್ಲ ಎಂದು ತಿಳಿಸಿದರು.
ರಾಜ್ಯದ ಪ್ರತಿ ತಾಲೂಕಿನಲ್ಲಿ ಕನ್ನಡ ಅಭಿವೃದ್ದಿ  ಪ್ರಾಧಿಕಾರದ ವತಿಯಿಂದ ಕನ್ನಡ ಭವನ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದ ಅವರು. ಇದಕ್ಕಾಗಿ ಪ್ರತಿತಾಲೂಕಿಗೆ ೭ ಲಕ್ಷ ರೂ.   ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. ಕನ್ನಡದ ಕೆಲಸಗಳ ವಿಚಾರದಲ್ಲಿ ಇಂದೇ ಮಾಡುವ ಮನೋಭಾವನೆ ಅಗತ್ಯ ಎಂದು ತಿಳಿಸಿದರು.
ಸಮ್ಮೇಳನದ ಅಧ್ಯಕ್ಷ ಪಿ.ಕೆ.ರಾಜಶೇಖರ್ ಮಾತನಾಡಿ, ನನ್ನ ಹುಟ್ಟೂರಿನಲ್ಲಿ ಅಧ್ಯಕ್ಷ ಸ್ಥಾನ ಪಡೆದಿದ್ದು, ಹೃದಯ ತುಂಬಿ ಬಂದಿದೆ. ಸಮ್ಮೇಳನವನ್ನು ಯಶಸ್ವಿ ಮಾಡುವಲ್ಲಿ ಪಿರಿಯಾಪಟ್ಟಣದ ಜನರ ಕೊಡುಗೆ, ಶ್ರಮ, ನಡವಳಿಕೆಗಳಿಂದ ನಾವು ಹೊಗೆಸೊಪ್ಪಿನ ಶ್ರೀಮಂತಿಕೆಯ ಜತೆಗೆ ಹೃದಯ ಶ್ರೀಮಂತಿಕೆ ಯನ್ನು ಹೊಂದಿದ್ದೇವೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ ಎಂದರು.
ಭಾಷಣದಲ್ಲಿ ಗದ್ಗದಿತರಾದ ಪಿಕೆಆರ್ ನಾನೊಬ್ಬ ನಿಮ್ಮಡಿಯಲ್ಲಿ ಅರಳಿದ ಹೂ ಆದೆ ಎಂದು ಕಾವ್ಯಮಯವಾಗಿ ನುಡಿದರು. ಮನೆಯ ತಾಯಿ ಕನ್ನಡವನ್ನು ಕಲಿಸಿದರೆ ಮಾತ್ರ ಕನ್ನಡ ಉಳಿಯುತ್ತದೆ. ಇಂಗ್ಲಿಷ್‌ನ ಪಿಂಕಿ,ರಿಂಕಿಗಳನ್ನು ಬಿಟ್ಟು ಕನ್ನಡದ ಹೆಸರನ್ನು ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಮನೆಯಿಂದಲೇ ಕನ್ನಡ ಉಳಿಸಿ ಬೆಳೆಸುವ ಪ್ರಕ್ರಿಯೆ ಆರಂಭವಾಗಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾಡಿದ ಸಂಸದ ವಿಶ್ವನಾಥ್, ಸರಕಾರ ಕನ್ನಡ ಸಂಸ್ಕೃತಿಯನ್ನು ಜನರ ಹೃದಯದಲ್ಲಿ ಮೂಡಿಸಬೇಕು ಎಂಬ ಹಿನ್ನೆಲೆಯಲ್ಲಿ ಸಮ್ಮೇಳನಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.
ಕನ್ನಡಭವನ ಕಟ್ಟಲು ತಮ್ಮ ವ್ಯಾಪ್ತಿಯ ೮ ತಾಲೂಕುಗಳಿಗೆ ತಲಾ ೫ ಲಕ್ಷ ರೂ.ಗಳನ್ನು ಮಂಜೂರು ಮಾಡುವುದಾಗಿ ಪ್ರಕಟಿಸಿದ ಅವರು, ಇಂಥ ಸಮ್ಮೇಳನಗಳಲ್ಲಿ ಬರಿ ಠರಾವುಗಳನ್ನು ಮಾಡದೆ ಇವುಗಳ ಪರಿಣಾಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ಶಾಸಕ ಕೆ.ವೆಂಕಟೇಶ್, ತಾಲೂಕಿನಲ್ಲಿ ವಾಸಿಸುವವರು ಹೆಚ್ಚಿನವರು ರೈತಾಪಿ ವರ್ಗದವರಾಗಿದ್ದರೂ ಇಂಥ ಕನ್ನಡ ಸಂಸ್ಕೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದಲ್ಲಿ ೫೦ ಮಂದಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಜಿಲ್ಲೆಯ ಮಹನೀಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಶಿಕ್ಷಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಟಿ.ಸಿ.ವಸಂತ್‌ರಾಜೇ ಅರಸ್ ತಾವು ಕಾರ್ಯನಿರ್ವಹಿಸಿದ  ಈ ಕಾಲೇಜು  ಕಾಂಪೌಂಡ್ ಬಿದ್ದುಹೋಗಿದೆ. ಇದನ್ನು ಸರಿಪಡಿಸುವಂತೆ ಮನವಿ ಮಾಡಿದರು. ಖ್ಯಾತ ಚಲನ ಚಿತ್ರ ನಿರ್ದೇಶಕ ಪುಟ್ಟಣ್ಣ ಕಣಗಾಲರ ಪತ್ನಿ ನಾಗಲಕ್ಷ್ಮಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಸತ್ಯನಾರಾಯಣ, ತೋಂಟದಾರ್ಯ, ಸಾ.ರಾ.ಮಹೇಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮೈ.ವಿ.ರಾಜು, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ತಾ.ಅಧ್ಯಕ್ಷ ವೈ.ಡಿ.ರಾಜಣ್ಣ ಹಾಜರಿದ್ದರು.

ಜನರ ಹೃದಯವಂತಿಕೆಯಿಂದ ಮಾತ್ರ ಭಾಷಾ ಬೆಳವಣಿಗೆ
ಭಾಷೆಯ ಬೆಳವಣಿಗೆ ಕೇವಲ  ಸರಕಾರದ ಹಣದಿಂದ ಸಾಧ್ಯವಿಲ್ಲ , ಜನರ ಹೃದಯವಂತಿಕೆಯಿಂದ ಮಾತ್ರ ಸಾಧ್ಯ ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದರು. 
ಪಿರಿಯಾಪಟ್ಟಣದಲ್ಲಿ ನಡೆಯುತ್ತಿರುವ ೧೦ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಚುಟುಕು ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪಿರಿಯಾಪಟ್ಟಣ ತಾಲೂಕು ಪುಟ್ಟಣ್ಣ ಕಣಗಾಲ್ ರಂಥ ಉತ್ತಮ ನಿರ್ದೇಶಕ, ಕಣಗಾಲ್ ಪ್ರಭಾಕರ ಶಾಸ್ತ್ರಿಯವರಂಥ   ಉತ್ತಮ ಸಾಹಿತಿಗಳನ್ನು ಕೊಡುಗೆಯಾಗಿ ನೀಡಿದೆ ಎಂದರು.
ಭಾಷೆಯ ಅವನತಿಯಾದರೆ ಸರ್ವನಾಶವಾದಂತೆ.  ಆದ್ದರಿಂದ  ಕನ್ನಡದ ವಿಚಾರದಲ್ಲಿ ಬಿ.ಎಸ್.ಯಡಿಯೂರಪ್ಪ  ನೇತೃತ್ವದ ಸರಕಾರ  ಕನ್ನಡಿಗರ ಬೆನ್ನೆಲುಬಾಗಿ ನಿಂತಿದೆ ಎಂದು ತಿಳಿಸಿದರು.
ಕನ್ನಡ ಸಂಸ್ಕೃತಿ ಇಲಾಖೆಗೆ ೧೮೦ ಕೋಟಿ ರೂ.ಗಳನ್ನು ಸರಕಾರ ಅನುದಾನ ನೀಡಿದ್ದು , ಪ್ರತಿ ಜಿಲ್ಲಾ  ಸಾಹಿತ್ಯ ಸಮ್ಮೇಳನ ನಡೆಸಲು ೫ ಲಕ್ಷ ರೂ.ಗಳನ್ನು ನೀಡುತ್ತಿದೆ. ಅದೇ ರೀತಿ ಎಲ್ಲಾ ತಾಲೂಕಿನಲ್ಲೂ  ತಾಲೂಕು ಕನ್ನಡ ಸಮ್ಮೇಳನ ನಡೆಸಲು ೧ ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಯಾದಲ್ಲಿ ಮಾತ್ರ ಸಂಸ್ಕೃತಿಯ ವಿನಿಮಯ ಮತ್ತು ಅಭಿವೃದ್ಧಿ  ಸಾಧ್ಯ.  ಈ ನಿಟ್ಟಿನಲ್ಲಿ ಮೈಸೂರು ಪಾರಂಪರಿಕ ನಗರವಾಗಿ ಬೆಳೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ  ನರ್ಮ್ ಯೋಜನೆಯನ್ನು ಬೆಂಗಳೂರಿಗಷ್ಟೇ ಅಲ್ಲದೆ ಮೈಸೂರಿಗೂ ನೀಡಿದೆ.  ಬೆಂಗಳೂರಿನಂಥ ನಗರಗಳಲ್ಲಿ ಔದಾರ್ಯ ವಿದ್ದರೆ ನಾವೇ ಹೊರಗಿರಬೇಕಾಗುತ್ತದೆ. ಅತಿಯಾದ ಔದಾರ್ಯ ಗಳನ್ನು ಬಿಟ್ಟು  ನಮ್ಮ ತನವನ್ನು ಉಳಿಸಿಕೊಳ್ಳವ ಕರ್ತವ್ಯ ಮಾಡಬೇಕಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎಲ್ಲಾ ಬಸ್ ನಿಲ್ದಾಣಗಳನ್ನು ಹೈಟೆಕ್‌ಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಿರಿಯಾಪಟ್ಟಣ ಬಸ್ ನಿಲ್ದಾಣಕ್ಕೆ ಒಂದು ಕೋಟಿ ರೂ ಮಂಜೂರು ಮಾಡಲಾಗುತ್ತಿದೆ. ಅಲ್ಲದೆ,  ತಾಲೂಕಿನ  ಬೆಟ್ಟದಪುರ ನಿಲ್ದಾಣಕ್ಕೆ ೩೦ ಲಕ್ಷ ರೂ., ಹುಣಸೂರಿನ ಬಸ್‌ನಿಲ್ದಾಣದ ಅಭಿವೃದ್ಧಿಗೆ ೩೦ ಲಕ್ಷ ರೂ., ಕಟ್ಟೆಮಳಲವಾಡಿ ನಿಲ್ದಾಣಕ್ಕೆ ೩೦ ಲಕ್ಷ ರೂ. ನೀಡಲು ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷ ಪಿ.ಕೆ.ರಾಜಶೇಖರ್, ಶಾಸಕ ಕೆ.ವೆಂಕಟೇಶ್  ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ