ಪರಸ್ಪರ ವಿರೋಧಿಗಳಿಗೂ ಅವಿರೋಧ ಆಯ್ಕೆಯ ಜಪ

ಒಂದೇ ಒಂದು ನಾಮಪತ್ರ ಸಲ್ಲಿಕೆ

ವಿಕ ಸುದ್ದಿಲೋಕ ಕೊಳ್ಳೇಗಾಲ

ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಬೆದರಿಕೆ ಹಾಕಿರುವ ತಾಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂಬ ಕಾರಣಕ್ಕೆ ಎಲ್ಲ ೧೦ ಗ್ರಾಮಗಳ ಜನತೆ ಒಗ್ಗೂಡಿ ಚುನಾವಣೆ ಬಹಿಷ್ಕರಿಸುವ ತೀರ್ಮಾನಕ್ಕೆ ಬಂದಿದ್ದರು. ಅಲ್ಲದೆ ಈ ಬಗ್ಗೆ ತಹಸೀಲ್ದಾರ್‌ಗೆ ಪತ್ರ ಬರೆದಿದ್ದರು. ಹೀಗಾಗಿ ೨೧ ಸದಸ್ಯ ಸ್ಥಾನಗಳನ್ನು ಹೊಂದಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ೬ ದಿನಗಳಿಂದ ಒಂದು ನಾಮಪತ್ರವೂ ಸಲ್ಲಿಕೆಯಾಗಿರಲಿಲ್ಲ. ಆದರೆ ನಾಮಪತ್ರ ಸಲ್ಲಿಸಲು ಕೊನೆ ದಿನವಾದ ಬುಧವಾರ ಗ್ರಾಮಸ್ಥರ ತೀರ್ಮಾನವನ್ನು ಕಡೆಗಣಿಸಿ ಚೆನ್ನೂರು ಬಾಲಕ್ ಸಾಮಾನ್ಯ ಕ್ಷೇತ್ರದಿಂದ ಶೆಟ್ಟಿ ಎಂಬುವರು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ನಾಮಪತ್ರ ಸಲ್ಲಿಸಿರುವ ವ್ಯಕ್ತಿಯನ್ನು ಮನವೊಲಿಸಿ ವಾಪಸ್ ತೆಗೆಸುವ ಯತ್ನ ನಡೆದಿದೆ.

ಸಿಎಂ ಹುಟ್ಟೂರಿನಲ್ಲಿ ಅವಿರೋಧ ಆಯ್ಕೆ ?

ವಿಕ ಸುದ್ದಿಲೋಕ ಕೆ.ಆರ್.ಪೇಟೆ

ಜಾ.ದಳ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ಹಗೆತನಕ್ಕೆ ಹೆಸರಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟೂರು ಬೂಕನಕೆರೆಯಲ್ಲಿ ಈ ಬಾರಿ ಗ್ರಾ.ಪಂ. ಚುನಾವಣೆಯಲ್ಲಿ ಅವಿರೋಧ ಆಯ್ಕೆ ಖಚಿತವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೌರವಾರ್ಥ ಗ್ರಾ.ಪಂ.ನ ಎಲ್ಲಾ ೯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಸಲು ಗ್ರಾಮದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ. ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗಿದೆ.

ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಬೂಕನಕೆರೆ ಅಭಿವೃದ್ಧಿಗೆ ೩೦ ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ. ಇದು ಅವಿರೋಧ ಆಯ್ಕೆಗೆ ಕಾರಣ.

ಯಡಿಯೂರಪ್ಪ ಅವರು ಪ್ರತಿಪಕ್ಷ ನಾಯಕರಾಗಿದ್ದಾಗ ಈ ಗ್ರಾಮದಲ್ಲಿ ರಾಜಕೀಯ ಘರ್ಷಣೆ ಸಂಭವಿಸಿ ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆಯಲ್ಲಿ ನೂರಾರು ಮಂದಿ ತಿಂಗಳಾನುಗಟ್ಟಲೆ ಊರು ತೊರೆದಿದ್ದರು. ಈ ಬಗ್ಗೆ ಯಡಿಯೂರಪ್ಪ ಸದನದಲ್ಲಿ ಗಮನ ಸೆಳೆದಿದ್ದರು.

ಇಂಥ ಗ್ರಾಮದಲ್ಲಿ ಈಗ ಅವಿರೋಧ ಆಯ್ಕೆ ನಡೆಯುತ್ತಿರುವುದು ಶಾಂತಿ ಮತ್ತು ಸೌಹಾರ್ದ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದರ ಹಿಂದೆ ಮುಖ್ಯಮಂತ್ರಿ ಸೋದರಳಿಯರ ಪಾತ್ರ ಸ್ಪಷ್ಟ. ಕೆಲವರು ಹೆಚ್ಚುವರಿಯಾಗಿ ನಾಮಪತ್ರ ಸಲ್ಲಿಸಿದ್ದರೂ ವಾಪಸಾತಿ ಪತ್ರಕ್ಕೂ ಸಹಿ ಹಾಕಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಸದ್ಯದ ತೀರ್ಮಾನದ ಪ್ರಕಾರ ಬಿ.ಎಸ್. ರವೀಶ್, ಸರಸ್ವತಮ್ಮ, ಶಂಭುಲಿಂಗಶೆಟ್ಟಿ, ನಾಗರಾಜು, ಬಿ.ಪಿ. ಕುಮಾರ್, ಅಶ್ವತ್ಥಮೂರ್ತಿ, ಕುಮಾರಿ, ಗೀತಾ, ಶಾಂತಮ್ಮ ಆಯ್ಕೆಯಾಗಲಿರುವರು.

ಬಿಜೆಪಿ-ಕಾಂಗ್ರೆಸ್ ಸಾಥ್-ಸಾಥ್...

ವಿಕ ಸುದ್ದಿಲೋಕ ಶ್ರೀಮಂಗಲ

ಈ ಜೋಡಿ ಬಲು ಅಪರೂಪದ್ದು. ಕಾಂಗ್ರೆಸ್- ಬಿಜೆಪಿ ಪಕ್ಷಗಳೆರಡೂ ರಾಷ್ಟ್ರ- ರಾಜ್ಯ- ಜಿಲ್ಲಾ ರಾಜಕೀಯದಲ್ಲಿ ಬದ್ಧ ವೈರಿಗಳು. ಆದರೆ, ಕೊಡಗಿನ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಭಾಯಿ-ಭಾಯಿ.

ತಕ್ಷಣಕ್ಕೆ ಇದನ್ನು ಒಪ್ಪುವುದು ಕಷ್ಟ. ಆದರೂ ಬಿಜೆಪಿ- ಕಾಂಗ್ರೆಸ್ ಸ್ಥಾನ ಹೊಂದಾಣಿಕೆ ಮಾಡಿ ಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವೀಣಾ ಅಚ್ಚಯ್ಯ ಮಂಗಳವಾರ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಪ್ರಕರಣದಲ್ಲಿ ಅವರ ಹೇಳಿಕೆಗೆ ಉಲ್ಟಾ ಪಲ್ಟಾ.

ಮೇ ೧೨ ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್- ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಂಟಿಯಾಗಿ ನಾಮಪತ್ರ ಸಲ್ಲಿಸಿದರು.. ಒಟ್ಟು ೧೮ ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಕಳೆದ ಬಾರಿ ಹೊಂದಿದ್ದಷ್ಟೇ ೧೨ ಸ್ಥಾನಗಳನ್ನು ಕಾಂಗ್ರೆಸ್ ಪಡೆದು ಕೊಳ್ಳಲಿದೆ. ಜೆಡಿ(ಎಸ್) ಹೊಂದಿದ್ದ ೧ ಸ್ಥಾನವೂ ಕಾಂಗ್ರೆಸ್‌ಗೆ ದಕ್ಕಿದೆ. ಬಿಜೆಪಿ ಗೆಲುವು ಸಾಧಿಸಿದ್ದ ೫ ಸ್ಥಾನಗಳು ಬಿಜೆಪಿಯಲ್ಲೇ ಉಳಿದಿವೆ. ಆ ಮೂಲಕ ೧೮ ಸ್ಥಾನಕ್ಕೂ ಅಭ್ಯರ್ಥಿ ಗಳನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಎರಡೂ ಪಕ್ಷಗಳ ಉದ್ದೇಶ.

ಅವಿರೋಧವಾಗಿ ಆಯ್ಕೆಯಾಗುವ ಗ್ರಾ.ಪಂ.ಗೆ ರಾಜ್ಯ ಸರಕಾರದ ೧೫ ಲಕ್ಷ ರೂ. ವಿಶೇಷ ಅನುದಾನ ಲಭ್ಯವಾಗಲಿದೆಯೆಂಬ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹೇಳಿಕೆ ಈ ಹುಮ್ಮಸ್ಸು ತುಂಬಿದೆ. ಅವಿರೋಧವಾಗಿ ಆಯ್ಕೆಯಾದ ಸದಸ್ಯರ ಕ್ಷೇತಕ್ಕೆ ತಲಾ ೧ ಲಕ್ಷ ರೂ. ಅನುದಾನ ಸಿಗಲಿದೆ. ಈ ಅನುದಾನ ಬಳಸಿ ಗ್ರಾಮಾಭಿವೃದ್ಧಿ ಮಾಡಲು ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಬಿಜೆಪಿ ಕುಟ್ಟ ಸ್ಥಾನೀಯ ಸಮಿತಿ ಅಧ್ಯಕ್ಷ ಚೋಡುಮಾಡ ಸೂರತ್ ಹಾಗೂ ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಮುಕ್ಕಾಟೀರ ಶಿವು ಪತ್ರಿಕೆಗೆ ತಿಳಿಸಿದ್ದಾರೆ.

ಆದರೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಒಪ್ಪಂದದ ೧೮ ಅಭ್ಯರ್ಥಿಗಳಲ್ಲದೆ, ಬೇರೆಯವರೂ ನಾಮಪತ್ರ ಸಲ್ಲಿಸಿದ್ದು, ಅವಿರೋಧ ಆಯ್ಕೆಗೆ ತೊಡಕಾಗಿದೆ. ಇನ್ನೆರಡು ದಿನಗಳಲ್ಲಿ ನಾಮಪತ್ರ ಸಲ್ಲಿಸಿರುವ ಇತರರ ಮನವೊಲಿಸಿ ವಾಪಸು ತೆಗೆಸಲಾಗುವುದೆಂದು ಎರಡೂ ಪಕ್ಷಗಳ ನಾಯಕರು ಹೇಳುತ್ತಿದ್ದು, ಅದು ಎಷ್ಟು ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

ಅವಿರೋಧ ಆಯ್ಕೆಯೆಡೆಗೆ ಅಪರಿಮಿತ ಆಸಕ್ತಿ

ಮಡಹಳ್ಳಿ ಮಹೇಶ್ ಗುಂಡ್ಲುಪೇಟೆ

ರಾಜಕೀಯ ಜಿದ್ದಾಜಿದ್ದಿಗೆ ಹೆಸರಾದ ತಾಲೂಕಿನಲ್ಲಿ ಈಗ ಅವಿರೋಧ ಆಯ್ಕೆಯ ಲೆಕ್ಕಾಚಾರ.

ತಾಲೂಕಿನಲ್ಲಿ ಒಟ್ಟು ೩೦ ಗ್ರಾ.ಪಂ.ಗಳಿದ್ದು, ೪೮೦ ಸ್ಥಾನಗಳಿವೆ. ತಾಲೂಕಿನ ೧೮೦ ಗ್ರಾಮಗಳು ಸಜ್ಜಾಗಿವೆ. ಸ್ಪರ್ಧಾಕಾಂಕ್ಷಿಗಳು ತಮ್ಮ ಬೆಂಬಲಿಗರು ಹಾಗೂ ಹಿತೈಷಿಗಳೊಂದಿಗೆ ತಮ್ಮ ಇಷ್ಟ ದೇವರಿಗೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. ನಂತರ ಬಹು ಮಂದಿ ಸಂತೋಷದಲ್ಲಿ ಮದ್ಯದಂಗಡಿಗೆ ಲಗ್ಗೆ ಹಾಕಿದರು.

ಹಂಗಳ ಗಾ.ಪಂ.ಯಲ್ಲಿ ೨೨ ಸ್ಥಾನಗಳಿಗೂ ಅವಿರೋಧ ಆಯ್ಕೆ ಯಾಗುವ ಸಂಭವ ಹೆಚ್ಚು. ೧೪ ಸ್ಥಾನಗಳಲ್ಲಿ ೧೦ ಬಿಜೆಪಿ ಹಾಗೂ ೪ ಕಾಂಗ್ರೆಸ್ ಬೆಂಬಲಿಗರಿಗೆ ಎನ್ನುವ ಬಗ್ಗೆ ಮಾತುಕತೆ ಗಳು ನಡೆದಿವೆ. ಅಲ್ಲದೇ ಪುತ್ತನಪುರ, ಹಂಗಳಪುರ, ಮೇಲುಕಾಮನಹಳ್ಳಿ ಹಾಗೂ ಮಗುವಿನಹಳ್ಳಿ ಗ್ರಾಮಗಳಲ್ಲಿ ಅವಿರೋಧ ಆಯ್ಕೆಯ ಬಗ್ಗೆ ಎರಡೂ ಪಕ್ಷದ ಮುಖಂಡರು ಚರ್ಚೆಯಲ್ಲಿ ತೊಡಗಿದ್ದಾರೆನ್ನಲಾಗಿದೆ.

ಶಿಂಡನಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ೧೫ ಸದಸ್ಯ ಬಲವಿದ್ದು, ಶಿಂಡನಪುರ, ಕಂದೇಗಾಲ, ಕೆಲಸೂರುಪುರ ಗ್ರಾಮಗಳಲ್ಲಿ ಬಿಜೆಪಿ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದೆ. ದೊಡ್ಡತುಪ್ಪೂರು ಮತ್ತು ಬೆಟ್ಟಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇಲ್ಲಿಯೂ ಹೊಂದಾಣಿಕೆಯ ಲೆಕ್ಕಾಚಾರ. ತಾಲೂಕಿನ ಈಗಾಗಲೇ ಮಡಹಳ್ಳಿ ಗ್ರಾಮದಲ್ಲಿ ೫ ರಲ್ಲಿ ೪ ಸ್ಥಾನಗಳು ಆಯ್ಕೆಯಾ ಗಿವೆ. ಸಾಮಾನ್ಯ ವರ್ಗದ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಬೇಕು.

ಮುಖಂಡರಿಗೆ ಧರ್ಮ ಸಂಕಟ: ಮೀಸಲು ಸ್ಥಾನಗಳಿಗೆ ಸಮಸ್ಯೆ ಯಿಲ್ಲ. ಸಾಮಾನ್ಯ ವರ್ಗದ ಸ್ಥಾನಗಳಿಗಿರುವ ಪೈಪೋಟಿ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾದ ನಂತರ ಆಕಾಂಕ್ಷಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು ಎಂಬ ಕಾರಣಕ್ಕೆ ಸುಮ್ಮನಿದ್ದಾರೆ.

ಅವಿರೋಧ ಆಯ್ಕೆಗಾಗಿ ಕೆಲವು ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಾಣ ಹಾಗೂ ಇತರೆ ಉದ್ದೇಶಗಳಿಗೆ ಹಣದ ಬೇಡಿಕೆಯನ್ನು ಇಡಲಾಗುತ್ತಿದೆ.

ಶಾಸಕರಿಗೆ ಪ್ರತಿಷ್ಠೆ ವಿಚಾರ: ಶಾಸಕ ಎಚ್.ಎಸ್.ಮಹಾದೇವ ಪ್ರಸಾದ್ ತಾಲೂಕಿನ ಪ್ರತಿಗ್ರಾಮದಲ್ಲೂ ಇರುವ ತಮ್ಮ ಬೆಂಬಲಿಗರ ಪಡೆಗೆ ಚುನಾವಣೆಯಲ್ಲಿ ಗೆಲ್ಲುವ ಹೊಣೆಯನ್ನು ವಹಿಸಿದ್ದಾರೆ. ಚುನಾವಣೆಯಲ್ಲಿ ಹಣಕ್ಕಿಂತ ಜಾತಿ ಹಾಗೂ ಸ್ಥಳೀಯವಾಗಿ ಅಭ್ಯರ್ಥಿಗಳ ಸಂಬಂಧಗಳೇ ಪ್ರಾಮುಖ್ಯ ವಹಿಸುತ್ತವೆ. ಆದ ಕಾರಣ ಎಲ್ಲದರದ್ದೂ ಅದರತ್ತಲೇ ಗಮನ.

ಬಿಜೆಪಿ ಪಾಳೆಯದಲ್ಲೂ: ಇನ್ನೊಂದೆಡೆ ೨೦೦೮ ರ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಎಚ್.ಎಸ್.ಮಹಾದೇವಪ್ರಸಾದ್ ಅವರಿಗೆ ಪೈಪೋಟಿ ನೀಡಿದ್ದ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಇತ್ತ ಗಮನಹರಿಸಿದ್ದಾರೆ. ತಾಲೂಕಿನ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ಮಧ್ಯೆಯೇ ಜಿದ್ದಾಜಿದ್ದಿ. ಒಂದೆಡೆ ಅವಿರೋಧ ಆಯ್ಕೆಗೆ ಕಸರತ್ತು ನಡೆಯುತ್ತಿದ್ದರೆ, ಮತ್ತೊಂದೆಡೆ ಚುನಾವಣೆ ಮೂಲಕವೇ ತಮ್ಮ ಪರಾಕ್ರಮ ಮೆರೆಯಲೂ ಮುಖಂಡರು ಹಾತೊರೆಯುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ