ತಲೆಬಿಸಿ ಮಾಡಿಕೊಳ್ಳದಿರುವುದೇ ಪರಿಹಾರದ ಮೊದಲ ಹಂತ

ವಿಕ ಸುದ್ದಿಲೋಕ ಮೈಸೂರು
‘ತಲೆನೋವು ಬಂತೆಂದರೆ ಬೆಚ್ಚಿ ಬೀಳುವ ಅಗತ್ಯವಿಲ್ಲ. ಎಲ್ಲಾ ತಲೆನೋವುಗಳು ಅಪಾಯಕಾರಿ ತಲೆನೋವು ಆಗಿರುವುದಿಲ್ಲ. ತಲೆಬಿಸಿ ಮಾಡಿಕೊಳ್ಳದಿರುವುದೇ ಪರಿಹಾರದ ಮೊದಲ ಹಂತ. ನಂತರ ತಕ್ಷಣವೇ ವೈದ್ಯರನ್ನು ಕಾಣುವುದು ಸೂಕ್ತ. ವೈದ್ಯರ ಸಲಹೆ ಇಲ್ಲದೇ  ಸ್ವ-ಚಿಕಿತ್ಸೆ ಸಲ್ಲದು. ಅದು ನಿಜವಾಗಲೂ ಅಪಾಯಕಾರಿ. ತಲೆನೋವನ್ನು ಕಷ್ಟಪಟ್ಟು ಅನುಭವಿಸಬೇಡಿ, ಚಿಕಿತ್ಸೆ ಪಡೆದುಕೊಳ್ಳಿ’
- ಇದು ನರರೋಗ ತಜ್ಞ ವೈದ್ಯರಾದ ಡಾ.ಸುರೇಶ್ ಅವರ ಸಲಹೆ. ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ  ‘ಫೋನ್- ಇನ್ ’ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ತಲೆನೋವಿನ ಸಮಸ್ಯೆ’ಗಳಿಗೆ ಸಂಬಂಧಿಸಿದ ಸಾರ್ವಜನಿಕರ ಅನುಮಾನಗಳಿಗೆ ಸಾವಧಾನವಾಗಿ ಉತ್ತರಿಸಿ ಪರಿಹರಿಸಿದರು, ಸಲಹೆ ನೀಡಿದರು, ಮಾರ್ಗದರ್ಶನ ಮಾಡಿದರು.
ವೈದ್ಯರಿಗೆ ದೂರವಾಣಿಯಲ್ಲಿ ಬಂದ ಎಲ್ಲಾ ಕರೆಗಳು ‘ತಲೆ ನೋವಿನ ಸಮಸ್ಯೆಗಳನ್ನು ಹೊತ್ತು ತಂದವು. ಆನೇಕ ಕರೆಗಳಲ್ಲಿ ತಲೆ ನೋವಿನ ಕುರಿತಂತೆ ವಿನಾಕಾರಣ ಆತಂಕವಿರುವುದು ವ್ಯಕ್ತ ವಾಯಿತು. ಚಿಕಿತ್ಸೆ ಪಡೆದುಕೊಳ್ಳುವಲ್ಲಿ ವಿಳಂಬ, ಚಿಕಿತ್ಸೆಯನ್ನು ಮುಂದುವರಿಸದಿರುವುದು ತಿಳಿದುಬಂತು. ಮೂರು ದಿನಗಳಿಂದ ಹಿಡಿದು ಅನೇಕ ವರ್ಷಗಳವರೆಗೆ ನೋವಿನ ಬಾಧೆ ಅನುಭವಿಸಿ ದವರು ಆತಂಕದಿಂದಲೇ ಕರೆ ಮಾಡಿ ‘ನೋವು’ ತೋಡಿ ಕೊಂಡರು.
ಶೇ.೨೦ ರಷ್ಟು ಜನಸಂಖ್ಯೆಯಲ್ಲಿ ತಲೆನೋವು ಸರ್ವೇಸಾಮಾನ್ಯ. ಅದರಲ್ಲಿ ಶೇ.೮೦ ರಷ್ಟು ಅರೆತಲೆನೋವು (ಮೈಗ್ರೇನ್) ಆಗಿರುತ್ತದೆ. ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಅರೆತಲೆನೋವು, ಕ್ಲಸ್ಟರ್ ತಲೆನೋವು, ಟೆನ್‌ಷನ್ ತಲೆನೋವು, ಇತ್ಯಾದಿಗಳು ಕೆಲ ತಲೆನೋವಿನ ಬಗೆಗಳು. ಮೈಗ್ರೇನ್‌ಗೆ ೩ ರಿಂದ ೬ ತಿಂಗಳು ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ವ್ಯಕ್ತಿಯ ವಯಸ್ಸು, ದೇಹಸ್ಥಿತಿ, ಮನಸ್ಥಿತಿಯನ್ನು ಆಧರಿಸಿ ಚಿಕಿತ್ಸೆ ಅವಧಿ ವಿಸ್ತರಣೆಯಾಗುತ್ತದೆ. ವೈದ್ಯರ ಸಲಹೆ ಅನುಸರಿಸಿ ಔಷಧ ಸೇವಿಸಬೇಕು ಎಂದು ತಿಳಿಸಿದರು.
ಕಾರಣಗಳು ಅನೇಕ: ನಮ್ಮ ದೈಹಿಕ ಸಮಸ್ಯೆಗಳಿಂದಲೇ ತಲೆನೋವು ಬರುವುದರಿಂದ ತಡೆಗೆ ಔಷಧ ತೆಗೆದುಕೊಳ್ಳಲೇಬೇಕು. ಅದು ತಾತ್ಕಾಲಿಕವಾದರೂ ಶೇ.೮೦ ರಷ್ಟು ಗುಣವಾಗುತ್ತದೆ. ಉಳಿದಂತೆ ಇತರ ಬಹುವಿಧಾನ (ಮಲ್ಟಿಪಲ್)ಗಳನ್ನು ಬಳಸಬಹುದು. ತಲೆನೋವಿಗೆ ಕಾರಣ ಅನೇಕ. ಮೆದುಳಿಗೆ ರಕ್ತಪೂರೈಸುವ ರಕ್ತನಾಳಗಳ ವ್ಯತ್ಯಾಸದಿಂದ ಮೈಗ್ರೇನ್ ಬರುತ್ತದೆ. ಗ್ಲುಕೋಸ್ ಅಂಶ ರಕ್ತದ ಮೂಲಕ ಮೆದುಳಿಗೆ ಪೂರೈಕೆಯಾಗುವಲ್ಲಿ ವ್ಯತ್ಯಾಸವಾದರೆ ತಲೆನೋವು/ಮೈಗ್ರೇನ್ ಕಾಡುತ್ತದೆ. ಅನುವಂಶೀಯತೆ, ದೈಹಿಕ ಒತ್ತಡ ಇತ್ಯಾದಿಗಳು ಕಾರಣವಾದರೂ ಅವುಗಳೇ ನಿಖರವಾದವು ಎಂದು ಹೇಳಲಾಗದು.
ತಲೆಬೇನೆಗೆ  ಅನೇಕ ಸಾಮಾನ್ಯ ಕಾರಣಗಳೂ ಉಂಟು. ಹಲವ ರಿಗೆ ಪ್ರಯಾಣ, ವಾಸನೆ, ಹಬೆ, ಆವಿ, ಹೊಗೆ, ಘಾಟು, ಹಸಿವು, ಬಿಸಿಲಿನ ಬೇಗೆ, ನಿದ್ರಾಹೀನತೆ, ಕೆಲ ಆಹಾರಗಳು ಆಗಬರದಿರುವುದು ತಲೆನೋವು ಸೃಷ್ಟಿಸುತ್ತವೆ. ಗೆಡ್ಡೆ (ಟ್ಯೂಮರ್) ಯಿಂದ ಶೇ.೨೦ ರಷ್ಟು ತಲೆನೋವು ಬರುತ್ತದೆ. ಆದರೆ ಎಲ್ಲಾ ತಲೆನೋವು ಟ್ಯೂಮರ್ ಅಲ್ಲ. ಮೊಟ್ಟ ಮೊದಲು ಏಕಾಏಕಿ ತಲೆ ಸಿಡಿಯುವಷ್ಟು ತಲೆನೋವು ಕಾಣಿಸಿಕೊಂಡು ವಾಂತಿಯಾದರೆ ಸ್ಕ್ಯಾನ್ ಮಾಡಿಸಬೇಕು. ಸಾಮಾನ್ಯ ತಲೆನೋವಿಗೆ ಸ್ಕ್ಯಾನಿಂಗ್ ಅನಗತ್ಯ.
ಮೆದುಳಿನ ಬದಲಾವಣೆ, ನ್ಯೂರಾನ್ಸ್ ಮೇಲಿನ ಒತ್ತಡ, ಮೆದುಳಿನಲ್ಲಿರುವ ರಾಸಾಯನಿಕಗಳ ಪ್ರಕ್ರಿಯೆ ಈ ಮೂರು ಸಿದ್ಧಾಂತಗಳ/ಥಿಯರಿಗಳ ಮೇಲೆ ಮೈಗ್ರೇನ್ ಬರಬಹುದೆಂದು ತಿಳಿಯಲಾಗಿದೆ. ವಿದೇಶದಲ್ಲಿ  ಪ್ರಸ್ತುತ ತಲೆನೋವು ಒಂದು ಪ್ರತ್ಯೇಕ ಕಾಯಿಲೆಯಾಗಿ ಪರಿಗಣಿತವಾಗುತ್ತಿದೆ. ಅದಕ್ಕೇ ಮೀಸಲಾದ ಆಸ್ಪತ್ರೆಗಳು ತಲೆಎತ್ತಲಾರಂಭಿಸಿವೆ.
ಕನ್ನಡಕ ಪರಿಹಾರ ಅಲ್ಲ: ದೃಷ್ಟಿದೋಷ ತಲೆಬೇನೆಗೆ ನೇರ ಕಾರಣವಲ್ಲ. ದೃಷ್ಟಿದೋಷದಿಂದ ಶೇ.೧ ರಷ್ಟು ಮಾತ್ರ ತಲೆನೋವು ಬರುತ್ತದೆ. ಕನ್ನಡಕ ಧರಿಸುವುದರಿಂದಲೇ ಪರಿಹಾರ ಸಿಗುವುದಿಲ್ಲ. ತಲೆನೋವು ಬಂದಾಕ್ಷಣ ಕನ್ನಡಕ ಧರಿಸಲು ಮುಂದಾಗುವುದು ಮೂಢನಂಬಿಕೆ. ದೃಷ್ಟಿ ದೌರ್ಬಲ್ಯದಿಂದ ಓದುವಾಗ, ಕಂಪ್ಯೂಟರ್ ಬಳಸುವಾಗ ಅಥವಾ ಇನ್ಯಾವುದೇ ಕಾರ‍್ಯದಲ್ಲಿ ದೃಷ್ಟಿ ಮತ್ತು ಸ್ನಾಯುಗಳನ್ನು ಅದಕ್ಕೆ ಬಲವಂತವಾಗಿ ಹೊಂದಿಸಿಕೊಳ್ಳುವ ಭರದಲ್ಲಿ ಬಿಗಿಹಿಡಿದಾಗ ತಲೆಬೇನೆ ಶುರುವಾಗುತ್ತದೆ. ಹಾಗಾಗಿ ತಲೆನೋವಿಗೆ ಕಾರಣವಾಗುವ ಇತರ ನಿಖರ ಕಾರಣಗಳನ್ನು ಪತ್ತೆ ಮಾಡುವುದು ಒಳಿತು ಎಂದರು. 
ಮಕ್ಕಳಲ್ಲೂ ತಲೆಬೇನೆ: ೫ ರಿಂದ ೧೫ ವರ್ಷದ ಮಕ್ಕಳಲ್ಲಿ ತಲೆನೋವು ಸಾಮಾನ್ಯ. ಪುಟ್ಟ ಮಕ್ಕಳಿಗೆ ತಲೆಬೇನೆ/ಮೈಗ್ರೇನ್ ಕಾಣಿಸಿಕೊಳ್ಳಲು ಅನೇಕ ಕಾರಣಗಳಿರುತ್ತವೆ. ಮೆದುಳಿನ ಬೆಳವಣಿಗೆಯಲ್ಲಿ ಏರುಪೇರು, ಹೆಚ್ಚು ನೀರಿನಾಂಶ, ಹುಟ್ಟಿನಿಂದಲೇ ಗೆಡ್ಡೆ ಇದ್ದರೆ, ಪ್ರಸವ ವೇಳೆ ಮಗುವಿಗೆ ಡ್ಯಾಮೇಜ್ ಆಗಿ ರಕ್ತಸ್ರಾವವಾಗಿದ್ದರೆ, ವೈರಾಣು ಸೋಂಕು, ಅನುವಂಶೀಯತೆ, ಸೈನೋಸೈಟೀಸ್ ಮತ್ತಿತರ ಅನೇಕ ಕಾರಣಗಳಿರುತ್ತವೆ.
ಆದರೆ ಅದನ್ನು ಪರೀಕ್ಷೆಯಿಂದ ದೃಢಪಡಿಸಿಕೊಳ್ಳುವುದು ಅವಶ್ಯ. ನಿಖರ ಕಾರಣ ಪತ್ತೆಯಾದರೆ ಚಿಕಿತ್ಸೆ ಸುಲಭ. ದೊಡ್ಡವರ ತಲೆನೋವಿಗೆ ಮಾತ್ರೆ ನಿವಾರಕವಾಗಬಹುದು. ಆದರೆ ಮಕ್ಕಳಿಗೆ ಪರೀಕ್ಷೆ ನಂತರವೇ ಚಿಕಿತ್ಸೆ ಅವಶ್ಯ. ಮೈಗ್ರೇನ್‌ಗೆ ಅನುವಂಶೀಯತೆ ಶೇ.೨೦-೩೦ ರಷ್ಟು ಕಾರಣವಾದರೆ, ಶೇ.೭೦-೮೦ ರಷ್ಟು ಇತರ ಕಾರಣಗಳಿಂದ ಬರುತ್ತದೆ. ಧ್ಯಾನ, ಯೋಗದಿಂದಲೂ ಒಂದಷ್ಟು ತಲೆನೋವಿನ ಬಾಧೆ ನಿವಾರಿಸಿಕೊಳ್ಳಬಹುದಾಗಿದೆ. ಆಯುರ್ವೇದ ಔಷಧ ಬಳಕೆಯಿಂದಲೂ ಗುಣಪಡಿಸಬಹುದೆಂದು ಸಾಬೀತಾಗಿದೆ ಎಂದು ತಿಳಿಸಿದರು.
ನಮ್ಮ ವೈದ್ಯರು
ಡಾ.ಸುರೇಶ್, ಎಂಬಿಬಿಎಸ್,ಎಂಡಿ,ಡಿಎಂ
ನರರೋಗ ತಜ್ಞರಾದ ಡಾ.ಸುರೇಶ್ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರರೋಗಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ರಾಗಿದ್ದಾರೆ. ಮೈಸೂರಿನಲ್ಲೇ ಪೂರ್ಣ ವಿದ್ಯಾಭ್ಯಾಸ ಪೂರೈಸಿರುವ ಅವರು, ಪಿಯುಸಿವರೆಗೆ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಮೈಸೂರು ಮಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮತ್ತು ಎಂಡಿ ಕಲಿತ ಅವರು, ಬೆಂಗಳೂರಿನ ನಿಮ್ಹಾನ್‌ನಲ್ಲಿ ಡಿಎಂ ಮುಗಿಸಿದರು. ೨೦೦೦ ರಲ್ಲಿ ಸರಕಾರಿ ಹುದ್ದೆಗೆ ವೈದ್ಯರಾಗಿ ಸೇರಿದರು. ಮೊಬೈಲ್ -೯೪೪೮೦೪೫೦೫೪.
ಎಲ್ಲಿ , ಯಾವಾಗ ಸಿಗುತ್ತಾರೆ ?
ತಲೆನೋವಿನ ಸಮಸ್ಯೆಗಳಿಗೆ ಈ ವೈದ್ಯರನ್ನು ದೊಡ್ಡಾಸ್ಪತ್ರೆ ಎಂದೇ ಖ್ಯಾತವಾಗಿರುವ ಕೆ.ಆರ್.ಆಸ್ಪತ್ರೆಯ ನರರೋಗಶಾಸ್ತ್ರ ವಿಭಾಗದ ಕೊಠಡಿ ಸಂಖ್ಯೆ ೯ ರ ಹೊರರೋಗಿಗಳ ವಿಭಾಗ (ಒಪಿಡಿ)ದಲ್ಲಿ ವಾರದಲ್ಲಿ ಎರಡು ದಿನಗಳು (ಬುಧವಾರ ಮತ್ತು ಶನಿವಾರ) ಭೇಟಿ ಮಾಡಿ ಪರಿಹಾರ ಪಡೆದುಕೊಳ್ಳಬಹುದು.
ವಿರಾಮದಿಂದ ಆರಾಮ
ಕಥೆ, ಕವಿತೆಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಮೈಸೂರಿನ ಉಷಾ ಎಂಬುವವರು ಪಾತ್ರ ಸೃಷ್ಟಿಸಲು ತಿಣು ಕಾಡುವಾಗ ತಲೆನೋವು ಧುತ್ತನೆ ಕಾಡುತ್ತದೆ ಎಂದು  ಅಳಲು ತೋಡಿ ಕೊಂಡರು. ಅಂದು ಕೊಂಡ ಪಾತ್ರಗಳು ಸಿಗದಿದ್ದಾಗ ತಲೆ, ಕುತ್ತಿಗೆ ಮಾಂಸ ಖಂಡಗಳು ಬಿಗಿ ಯಾಗಿ ಟೆನ್‌ಷನ್ ಶುರುವಾಗಿ ತಲೆ ಬಾಧೆಗೆ ಮೂಲವಾಗುತ್ತದೆ ಎಂದು ಅಲವತ್ತು ಕೊಂಡರು. ಅದಕ್ಕೆ ವೈದ್ಯರು - ಭಾವನಾತ್ಮಕ ಲೋಕದಲ್ಲಿ ಇರುವವರು ಗುರಿ ತಲುಪದಿದ್ದಾಗ ನಿರಾಶರಾಗಿ ಯೋಚನೆಗೆ ಬೀಳುವುದರಿಂದ ತಲೆನೋವು ಕಾಣಿಸಿಕೊಳ್ಳು ತ್ತದೆ. ಇದಕ್ಕೆ ಸರಳ ಪರಿಹಾರವೆಂದರೆ ಕೆಲಸದ ನಡುವೆ ‘ವಿರಾಮ’ ತೆಗೆದುಕೊಳ್ಳುವುದು ಎಂದು ಸಲಹೆ ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ