ಯುಜಿಸಿಗೆ ‘ಲೆಕ್ಕ’ ನೀಡಲು ಸೆಮಿನಾರ್‌ಗಳೆಂಬ ಪ್ರಹಸನ !

ಚೀ. ಜ. ರಾಜೀವ  ಮೈಸೂರು
‘ಆ ಪ್ರೊಫೆಸರ್ ಏನು ಮಾತನಾಡಿದ್ರು ಅಂಥ ನನಗೆ ನಿಜಕ್ಕೂ ಗೊತ್ತಾಗಲಿಲ್ಲ. ಪ್ರಬಂಧ ಮಂಡಿಸಲು ನೀಡಿದ ವಿಷಯವನ್ನು ಯಾಕೆ ಅಷ್ಟೊಂದು ಕ್ಲಿಷ್ಟವಾಗಿ, ಗಹನವಾಗಿ ಹೇಳಿದ್ರೂ ಅನ್ನೋದು ಕೂಡ ತಿಳೀಲಿಲ್ಲ.  ಎಷ್ಟೇ ಆದ್ರೂ ಇದು - ರಾಷ್ಟ್ರೀಯ ವಿಚಾರ ಸಂಕಿರಣ  ಅಲ್ವಾ. ಅದಕ್ಕೆ ಅವರು ಯಾರಿಗೂ ಅರ್ಥವಾಗ ದಂತೆ ಮಾತನಾಡಿದ್ರೂ ಅಂಥ ಕಾಣುತ್ತೆ.... !’  
‘ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಇತ್ತೀಚಿನ ಬೆಳವಣಿಗೆ’ ಕುರಿತು  ನಗರದಲ್ಲಿ ನಡೆದ  ವಿಚಾರ ಸಂಕಿರಣದಲ್ಲಿ  ಭಾಗವಹಿಸಿದ್ದ  ಇಂಗ್ಲಿಷ್  ಅಧ್ಯಾಪಕರೊಬ್ಬರ ಅನಿಸಿಕೆ ಇದು. ‘ಈ ವಿಚಾರ ಸಂಕಿರಣದಿಂದ ನಿಮಗೆಷ್ಟು ಲಾಭವಾಯಿತು ?’  ಎಂಬ ಪ್ರಶ್ನೆಗೆ  ಅವರು ನೀಡಿದ  ಹೇಳಿಕೆಯಲ್ಲಿ ಪ್ರಶ್ನೆ, ಅನುಮಾನ, ಕುತೂಹಲ, ವ್ಯಂಗ್ಯ  ಮತ್ತು ವಿಷಾದ  ಎಲ್ಲವೂ ಇತ್ತು, ಸಮರ್ಪಕ ಉತ್ತರವೊಂದನ್ನು ಬಿಟ್ಟು .
ಎರಡು ವರ್ಷದ ಹಿಂದೆಯಷ್ಟೇ ನೌಕರಿ ಹಿಡಿದು, ವೃತ್ತಿಯ ಬಗ್ಗೆ  ಅತ್ಯುತ್ಸಾಹ  ಹೊಂದಿರುವ  ತರುಣ ಅಧ್ಯಾಪಕನ ಪಾಡು ಹೀಗಿರುವಾಗ, ವಿಚಾರ ಸಂಕಿರಣದಲ್ಲಿ  ಭಾಗವಹಿಸಿದ್ದ ವಿದ್ಯಾರ್ಥಿಗಳ  ಸ್ಥಿತಿ ಏನಾಗಿರಬೇಡ ? 
ನಮ್ಮ ಕಾಲೇಜುಗಳಲ್ಲಿ ನಡೆಯುವ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಯುಜಿಸಿ ಪ್ರಾಯೋಜಿತ  ಪ್ರಾದೇಶಿಕ/ ರಾಷ್ಟ್ರೀಯ/ ಅಂತಾರಾಷ್ಟ್ರೀಯ ವಿಚಾರಸಂಕಿರಣ ಮತ್ತು ಕಾರ್ಯಾಗಾರಗಳ ಗುಣಮಟ್ಟದ  ಬಗ್ಗೆ  ಶೈಕ್ಷಣಿಕ ವಲಯ ಕಂಡುಕೊಂಡಿರುವ ಸತ್ಯವಿದು !
ದೇಶ-ವಿದೇಶದ ಶಿಕ್ಷಣ ತಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ, ಪರಸ್ಪರ ಜ್ಞಾನ  ವಿನಿಮಯಕ್ಕೆ ದಾರಿ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳು ಮತ್ತು  ಅಧ್ಯಾಪಕರ ಅರಿವಿನ ಮಟ್ಟವನ್ನು ವಿಸ್ತರಿಸುವ ಮಹತ್ತರ ಉದ್ದೇಶದಿಂದ ಯುಜಿಸಿ ಆರಂಭಿಸಿರುವ ‘ಸೆಮಿನಾರ್/ವರ್ಕ್‌ಶಾಪ್’ಗಳು ತಲುಪಿರುವ ಸ್ಥಿತಿ ಇದು.
ಶೈಕ್ಷಣಿಕ ಬೇಸರಕ್ಕೆ ಬ್ರೇಕ್ ಸಿಗಲಿಲ್ಲ: ಈ ಹಿಂದೆ ಪದವಿಯ ಬಹುತೇಕ ವಿದ್ಯಾರ್ಥಿಗಳ ಪಾಲಿಗೆ  ಶೈಕ್ಷಣಿಕ ವರ್ಷ ಎಂದರೆ  ತರಗತಿ, ಪ್ರಯೋಗಾಲಯ, ಪರೀಕ್ಷೆಗಳು, ವರ್ಷದ ಆರಂಭದಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ, ಅಂತ್ಯದಲ್ಲಿ ಸಮಾರೋಪಕ್ಕೆ ಹೊಂದಿಕೊಂಡಂತೆ ಒಂದಿಷ್ಟು  ಶಿಕ್ಷಣೇತರ ಕಾರ‍್ಯಕ್ರಮ.... ಇಷ್ಟೇ  ಆಗಿರುತ್ತಿದ್ದವು. ಈ ಶೈಕ್ಷಣಿಕ ವೇಳಾಪಟ್ಟಿ  ಸಹಜವಾಗಿಯೇ ವಿದ್ಯಾರ್ಥಿ ಗಳು ಮತ್ತು ಬೋಧಕರ ಪಾಲಿಗೆ  ನೀರಸ ಹಾಗೂ ನಿರಾಶದಾಯಕವಾಗಿರುತ್ತಿತ್ತು. ಈ ಬೇಸರ, ಏಕತಾನತೆಯನ್ನು ಹೊಡೆದೋಡಿಸಲು ಯುಜಿಸಿ ಎರಡು ವರ್ಷಗಳಿಂದ ವಿಚಾರ ಸಂಕಿರಣ ಮತ್ತು ಕಾರ‍್ಯಾಗಾರ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿದೆ.
ಕಲಿಯುವ ವಿಷಯದಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆ ಮೇಲೆ ಬೆಳಕು ಚೆಲ್ಲುವುದು, ಅಧ್ಯಾಪಕರ ಹಾಗೂ ವಿದ್ಯಾರ್ಥಿಗಳ ಜ್ಞಾನದ ಮಟ್ಟ ಕಾಲಕ್ಕೆ ತಕ್ಕಂತೆ ಪರಿಷ್ಕೃತವಾಗಬೇಕು ಎಂಬುದು ಯುಜಿಸಿಯ ಇನ್ನೊಂದು ಮಹದಾಸೆ.  ಈ ಉದ್ದೇಶ ಗಳು ಒಳ್ಳೆಯದೇ ಆಗಿ ದ್ದರೂ, ಅದನ್ನುಕಾಲೇಜು ಗಳು ಬಳಸಿಕೊಳ್ಳುತ್ತಿ ರುವ ರೀತಿ- ನೀತಿಯಲ್ಲಿ ಮಾತ್ರ ಸದುದ್ದೇಶ  ಕಾಣಿಸುತ್ತಿಲ್ಲ. ನಮ್ಮ ಕಾಲೇಜಲ್ಲೂ  ಇಂತಿಷ್ಟು ಸೆಮಿನಾರ್ ಆದವು ಎಂದು ಲೆಕ್ಕ  ಹಿಡಿಯ ಲೆಂದೇ  ಬಹಳಷ್ಟು ಕಾಲೇಜುಗಳು ಕಾಟಾಚಾರಕ್ಕೆ ಕಾರ್ಯಾಗಾರ ನಡೆಸುತ್ತಿವೆ ಎಂಬುದು ಸಾಮಾನ್ಯ ಆರೋಪ.
ಹೆಸರು ಹೇಳಲು ಇಚ್ಛಿಸದ ಪ್ರಾಂಶುಪಾಲ ರೊಬ್ಬರು ಹೇಳುವ ಪ್ರಕಾರ, ‘ಕಾಲೇಜು ಗಳ  ನಿರ್ವಹಣೆಗೆ ಮಾನ್ಯತೆ ನೀಡುವ ಪದ್ಧತಿಯನ್ನು ನ್ಯಾಕ್ ಜಾರಿಗೆ ತಂದ ಬಳಿಕ, ಸಂಘಟಿಸುವ ಕಾರ್ಯಾಗಾರ, ಸೆಮಿನಾರ್‌ಗಳ  ‘ಅಂಕಿ-ಸಂಖ್ಯೆಗೆ’ ಮೌಲ್ಯ ಬಂದಿದೆ. ಹಾಗಾಗಿ ಶಾಸ್ತ್ರಕ್ಕೆ ಸೆಮಿನಾರ್ ಎಂಬಂತಾಗಿದೆ. ಗುಣಮಟ್ಟವನ್ನು  ಮತ್ತು ಅದರ ಪರಿಣಾಮವನ್ನು ಅಳೆದು ಕಾರ್ಯಾಗಾರಕ್ಕೆ ಮೌಲ್ಯ ನೀಡುವ ವ್ಯವಸ್ಥೆ ಇದ್ದಿದ್ದರೆ, ಚೆನ್ನಾಗಿರುತ್ತಿತ್ತು’
‘ಇಲ್ಲಿಗೆ ಬರುವ ಅಧ್ಯಾಪಕರಿಗೆ ರಜೆ ಸೌಲಭ್ಯ, ಸಾರಿಗೆ ಭತ್ಯೆ ನೀಡಲಾಗುವುದು. ಇಲ್ಲಿ ಪ್ರಬಂಧ ಮಂಡಿಸುವ ಅಧ್ಯಾಪಕರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರ  ಉಂಟು. ಅಧ್ಯಾಪಕರು ಸ್ವಂತದ್ದೆಂದು ಖರ್ಚು ಮಾಡುವುದು ನೋಂದಣಿ ಶುಲ್ಕ ಮಾತ್ರ. ಅದರ ಬಾಬ್ತಿಗೆ ಊಟ, ಬ್ಯಾಗ್ ನೀಡುತ್ತೇವೆ. ಕೆಲ ಅಧ್ಯಾಪಕರು ವಿಚಾರ ಸಂಕಿರಣದ ಲಾಭ-ನಷ್ಟವನ್ನು ಈ ಮಟ್ಟದಲ್ಲಿ  ಅಳೆಯುತ್ತಿದ್ದಾರೆ’ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸುತ್ತಾರೆ.
‘ಯಾವಾಗಲೂ ತರಗತಿಯಲ್ಲಿ  ಕುಳಿತು ಪಾಠ ಕೇಳಿ-ಕೇಳಿ ಬೋರ್ ಆಗಿರುತ್ತದೆ. ಹಾಗಾಗಿ, ನಮ್ಮ ಅಧ್ಯಾಪಕರು ಇಂಥ ವಿಚಾರ ಸಂಕಿರಣಗಳಿಗೆ ನಮ್ಮನ್ನೂ ಕಳುಹಿಸುತ್ತಾರೆ. ಆದರೆ, ಈ ಗೋಷ್ಠಿಗಳು ತರಗತಿಗಳಿಗಿಂತ ಬೋರ್ ಆಗುತ್ತವೆ. ನಮ್ಮ ತಿಳಿವಳಿಕೆ ಮಟ್ಟಕ್ಕೆ ಮೀರಿದ ಸಂಗತಿಯನ್ನೇ ಸಂಪನ್ಮೂಲ ವ್ಯಕ್ತಿಗಳು ಮಾತನಾಡುತ್ತಾರೆ. ಹಾಗಾಗಿ, ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ’ ಎಂಬುದು ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಯೊಬ್ಬರ ಅನಿಸಿಕೆ.
ಒಟ್ಟಾರೆ- ಯುಜಿಸಿ ನೀಡುತ್ತಿರುವ ಸೌಲಭ್ಯವನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು  ಒಂದು ಮೌಲಿಕ ವಿಚಾರ ಸಂಕಿರಣ ಇಲ್ಲವೇ ಕಾರ್ಯಾಗಾರವನ್ನು ನಡೆಸಬೇಕಿದೆಯಷ್ಟೇ !
ಸ್ವಲ್ಪ ಪ್ರಯೋಜನವೂ ಆಗಿದೆ...!
ಎಲ್ಲ ಕಾಲೇಜುಗಳು ಕಾಟಾಚಾರಕ್ಕೆ ನಡೆಸುತ್ತವೆ ಎಂದೇನಿಲ್ಲ. ಕೆಲವು ಕಡೆ ಗುಣಮಟ್ಟದ ವಿಚಾರಸಂಕಿರಣಗಳು/ಕಾರ್ಯಾಗಾರಗಳು  ನಡೆದಿವೆ.  ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಜೆಎಸ್‌ಎಸ್ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ(ಸ್ವಾಯತ್ತ) ಪ್ರಾಂಶುಪಾಲ ಪ್ರೊ. ಬಿ. ವಿ. ಸಾಂಬಶಿವಯ್ಯ.
ನಮ್ಮ ಕಾಲೇಜಿನಲ್ಲೇ ೨೦೦೯-೧೦ನೇ ಸಾಲಿನಲ್ಲಿ ನಾಲ್ಕು ಕಾರ್ಯಾಗಾರ, ಎರಡು ವಿಚಾರ ಸಂಕಿರಣ ಆಯೋಜಿಸಿದ್ದೇವೆ. ಗ್ರಾಹಕ ಚಳವಳಿ, ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್, ಉದ್ಯಮಶೀಲತೆ, ತ್ರೈಯೋಗ ಕುರಿತು ನಾಲ್ಕು ಕಾರ್ಯಾಗಾರ, ಕೃಷ್ಣದೇವರಾಯ ಮತ್ತು ಬುದ್ಧನ ವಿಚಾರ ಕುರಿತು ವಿಚಾರ ಸಂಕಿರಣ ಆಯೋಜಿಸಿದ್ದೆವು. ಎಲ್ಲವೂ ಎಲ್ಲರಿಗೂ  ಅರ್ಥವಾಗಿದೆ, ಪ್ರಯೋಜನವಾಗಿದೆ  ಎಂದು ಪತ್ರಿಕೆಗೆ ತಿಳಿಸಿದರು. ವಿಷಯ ಮತ್ತು ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಲ್ಲಿ  ಜಾಣ್ಮೆ, ಶ್ರದ್ಧೆ ತೋರಿಸಿದರೆ ಯುಜಿಸಿ ಕಾರ್ಯಕ್ರಮ ಎಲ್ಲರಿಗೂ ಪ್ರಯೋಜನಕಾರಿ ಎಂಬುದು ಅವರ ಅನಿಸಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ