ಮೈಸೂರು ಪ್ರಾಂತ್ಯದಲ್ಲಿ ಮತ್ತೆ ಕಾಣಿಸಿಕೊಂಡ ಕಾಲರಾ

ಶಿವಕುಮಾರ್ ಬೆಳ್ಳಿತಟ್ಟೆ  ಮೈಸೂರು
ಕಲುಷಿತ ನೀರಿನಿಂದ ಬರುವ ಕಾಲರಾ ರೋಗ ಮತ್ತೆ ಮೈಸೂರು ಪ್ರಾಂತ್ಯದಲ್ಲಿ ಕಾಣಿಸಿಕೊಳ್ಳತೊಡಗಿದೆ.
ಮೈಸೂರು, ಮಂಡ್ಯ, ಕೊಡಗು ಚಾಮರಾಜ ನಗರ, ಹಾಸನ ಜಿಲ್ಲೆಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಮೈಸೂರಿನಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಇತ್ತೀಚೆಗೆ ದಿನಕ್ಕೆ ಕನಿಷ್ಠ ಐದಾರು ಮಂದಿ ವಾಂತಿಭೇದಿ ತೊಂದರೆಯಿಂದ ದಾಖಲಾಗುತ್ತಿದ್ದು, ಅಂಥ ಪ್ರಕರಣಗಳು ಈ ವರ್ಷ  ೧೦೦೦ಕ್ಕೂ ಅಧಿಕವಾಗಿವೆ. ಈ ಪೈಕಿ ಕೆಲವು ಕಾಲರಾ ಪ್ರಕರಣಗಳಾಗಿ ದೃಢಪಟ್ಟಿವೆ.
ಮೂರು ತಿಂಗಳಲ್ಲಿ ಒಟ್ಟು ೩೩ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷಕ್ಕೆ (೧೫ ಪ್ರಕರಣ) ಹೋಲಿಸಿದರೆ  ಹೆಚ್ಚು. ಮಂಡ್ಯ ಜಿಲ್ಲೆಯಲ್ಲಿ ೧೨ ಪ್ರಕರಣಗಳು ದಾಖಲಾಗಿದ್ದು, ಈ ಬಗ್ಗೆ ಸುತ್ತಮುತ್ತ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಿ.ಎಂ. ವಾಮದೇವ ಪತ್ರಿಕೆಗೆ ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾಲರಾ?: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಮಾತ್ರ ಇದ್ದು, ಹಳೇ ಮೈಸೂರು ಭಾಗದ ಜಿಲ್ಲೆಗಳ ಮಂದಿ ಮೈಸೂರು ಆಸ್ಪತ್ರೆಯಲ್ಲೇ ದಾಖಲಾಗುತ್ತಿದ್ದಾರೆ. ಚಾಮರಾಜನಗರ-೨, ಮೈಸೂರು- ೫, ಹಾಸನ, ಮಡಿಕೇರಿ ತಲಾ ಒಂದೊಂದು ಪ್ರಕರಣಗಳಿದ್ದು, ಮಂಡ್ಯದಲ್ಲಿ ಅತಿ ಹೆಚ್ಚು-೧೨.
ಕಲುಷಿತ ನೀರು: ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಸುತ್ತಮುತ್ತಲ ಗ್ರಾಮಗಳಲ್ಲಿ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಮಿಶ್ರಣವಾಗುತ್ತಿರುವುದೇ ಮಂಡ್ಯ ಜಿಲ್ಲೆಯಲ್ಲಿ ಕಾಲರಾ ಪ್ರಕರಣಗಳು ಹೆಚ್ಚುತ್ತಿರಲು ಕಾರಣವೆನ್ನಲಾಗಿದೆ. ಕೆಆರ್‌ಎಸ್ ಬಳಿ ಇರುವ ಪಂಪ್‌ಹೌಸ್‌ನಿಂದ ಪೂರೈಕೆಯಾಗುವ ಕುಡಿಯುವ ನೀರಿಗೆ ನೀರು ಪೂರೈಕೆಯಾಗುತ್ತದೆ.  ಆ ನೀರನ್ನು ಶುದ್ಧೀಕರಿಸಲು ಹೊಸಹಳ್ಳಿ ಬಳಿ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಆದರೆ ಕೆಲ ತಿಂಗಳಿನಿಂದ ಫಿಲ್ಟರ್‌ಗಳು ಸ್ಥಗಿತಗೊಂಡಿದ್ದು, ಶ್ರೀರಂಗಪಟ್ಟಣ ತಾಲೂಕಿಗೆ ಸೇರಿದ ಪಾಲಹಳ್ಳಿ, ಪಂಪಿನ ಹೊಸಹಳ್ಳಿ, ಮೊಗರಹಳ್ಳಿ, ಮಂಟಿ, ಹೊಸ ಆನಂದೂರು ಗ್ರಾಮಗಳಿಗೆ ನದಿ ನೀರು ಶುದ್ಧೀಕರಣವಾಗದೇ ಪೂರೈಕೆಯಾಗುತ್ತಿದೆ. ಆದ್ದರಿಂದ ಈ ಗ್ರಾಮಗಳ ಅನೇಕ ಮಂದಿ ವಾಂತಿಭೇದಿ ಸಮಸ್ಯೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಪೈಕಿ ೯ಕ್ಕೂ ಹೆಚ್ಚು ಮಂದಿಗೆ ಕಾಲರಾ ಇರುವುದು ದೃಢವಾಯಿತು ಎಂದು ಶ್ರೀರಂಗಪಟ್ಟಣ ತಾಲೂಕು ಕಿರಿಯ ಆರೋಗ್ಯ ಸಹಾಯಕ ಗಿರೀಶ್ ಹೇಳಿದ್ದಾರೆ.
ಆ ಗ್ರಾಮಗಳಲ್ಲಿ ಇನ್ನೂ ವಾಂತಿ, ಭೇದಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆದರೆ ಅಲ್ಲಿನ ಫಿಲ್ಟರ್‌ಗಳ ದುರಸ್ತಿ ಇನ್ನೂ ನಡೆದಿಲ್ಲ. ಬದಲಾಗಿ ಗ್ರಾಮಗಳಲ್ಲಿ ನೀರಿನ ಟ್ಯಾಂಕ್ ಮತ್ತು ಇತರ ನೀರು ಸಂಗ್ರಹ ಜಾಲಗಳನ್ನು ಶುದ್ಧೀಕರಿಸಲಾಗುತ್ತಿದೆ. ಹಾಗೆಯೇ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಹತ್ತಳ್ಳಿ, ಪಾಂಡವಪುರ ತಾಲೂಕಿನ ಹಗ್ಗನಹಳ್ಳಿ ಸೇರಿದಂತೆ ಜಿಲ್ಲೆಯ ಗಡಿ ಭಾಗದಲ್ಲೂ ಇದೇ ಸಮಸ್ಯೆ ತಲೆದೋರಿದ್ದು, ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಈ ಬಗ್ಗೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಅಧಿಕಾರಿಗಳು ಜಿಲ್ಲಾಧಿಕಾರಿಗೂ ಮಾಹಿತಿ ನೀಡಿದ್ದಾರೆ. ಅಲ್ಲದೆ ಸುತ್ತಮುತ್ತಲ ಜಿಲ್ಲೆಗಳ ಆರೋಗ್ಯಾಧಿಕಾರಿಗಳಿಗೆ ಪ್ರತ್ಯೇಕ ಪತ್ರಗಳ ಮೂಲಕ ಎಚ್ಚರಿಕೆ ವಹಿಸಲು ಮಾಹಿತಿ ನೀಡಿದ್ದಾರೆ. ಜನರಿಗೆ ರೋಗದ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕಾರ‍್ಯಕ್ರಮಗಳನ್ನೂ ರೂಪಿಸಿದ್ದಾರೆ. ಕಲುಷಿತ ನೀರು ಪತ್ತೆ ಹಚ್ಚುವುದು, ಕುದಿಸಿ ಆರಿಸಿದ ನೀರು ಕುಡಿಯುವುದು ಹಾಗೂ ತಕ್ಷಣದ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಕಿಡ್ನಿಗೂ ಆಪತ್ತು: ಕಲುಷಿತ ನೀರಿನಿಂದ ಆರಂಭ ಗೊಳ್ಳುವ  ಈ ಕಾಯಿಲೆಗೆ ನೀರೇ ಮದ್ದು.  ಸತತ ವಾಂತಿಭೇದಿಯಾದಾಗ ಹೆಚ್ಚು ನೀರಿನಾಂಶದ ಆಹಾರ ಸೇವಿಸುವುದೇ  ತಕ್ಷಣದ ಪರಿಹಾರ. ಆದರೆ ರೋಗ ಲಕ್ಷಣ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆ ಪಡೆಯ ಬೇಕು. ವಿಳಂಬವಾದರೆ ದೇಹದಲ್ಲಿ  ನೀರಿನಾಂಶ ಕಡಿಮೆಯಾಗಿ ಕರುಳು ಒಣಗುತ್ತದೆ. ಕಿಡ್ನಿ ಕಾರ್ಯ ಸ್ಥಗಿತವಾಗಿ ರೋಗಿ ಸಾಯಲೂಬಹುದು.
ಯಳಂದೂರಿನಲ್ಲಿ ವಾಂತಿಭೇದಿ: ಒಬ್ಬನ ಸಾವು
ವಿಕ ಸುದ್ದಿಲೋಕ ಯಳಂದೂರು
ವಾಂತಿಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಬಳೇಪೇಟೆ ನಿವಾಸಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟಿದ್ದಾರೆ.
ಬಳೇಪೇಟೆ ಉಪ್ಪಾರ ಬೀದಿಯ ಅಂಕಶೆಟ್ಟಿ (೬೦) ಮೃತಪಟ್ಟವರು. ಎರಡು ದಿನಗಳ ಹಿಂದೆ ಬೀದಿಯಲ್ಲಿ ವಾಂತಿಭೇದಿ ಕಾಣಿಸಿಕೊಂಡಿತ್ತು. ಹೀಗಾಗಿ ಸುಮಾರು ೨೦ ಮಂದಿ ಪಟ್ಟಣದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಗುರುವಾರ ಅಂಕಶೆಟ್ಟಿಗೆ ವಾಂತಿ ಭೇದಿ ಕಾಣಿಸಿಕೊಂಡ ಪರಿಣಾಮ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಾ ದರಾದರೂ ಚಿಕಿತ್ಸೆ ಫಲಕಾರಿಯಾಗದೆ ಕೆಲ ಸಮಯಕ್ಕೇ ಕೊನೆಯುಸಿರೆಳೆದರು. ಇನ್ನೂ ೬ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಗುಣಮುಖ ರಾಗುತ್ತಿದ್ದಾರೆ.
ವಾಂತಿಭೇದಿಗೆ ಕುಡಿಯುವ ನೀರು ಕಲುಷಿತ ಗೊಂಡಿದ್ದೇ ಕಾರಣ ಎನ್ನಲಾಗಿದೆ. ಇದು ಎರಡು ದಿನಗಳ ಹಿಂದೆಯೇ ಪತ್ತೆಯಾದ ಹಿನ್ನೆಲೆಯಲ್ಲಿ ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಲಾಗಿದೆ. ಆದರೆ ಅಂಕಶೆಟ್ಟಿ  ಸಾವಿಗೆ ವಾಂತಿಭೇದಿ ಕಾರಣವಲ್ಲ. ಅವರಿಗೆ ಅಸ್ತಮಾ ಕಾಯಿಲೆ ಇತ್ತು. ಹೀಗಾಗಿ ಅವರು ನಮ್ಮ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯ ಗಣೇಶ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ