‘ಸಂಗೀತ ವಿವಿ ಬದಲು ಜನಪದ ವಿವಿ ಸ್ಥಾಪಿಸಿ’

ನವೀನ್‌ಕುಮಾರ್ /ಹನಗೋಡು ನಟರಾಜ್, ಪಿರಿಯಾಪಟ್ಟಣ
ಜನಪದ ವಿಶ್ವವಿದ್ಯಾನಿಲಯ  ಸ್ಥಾಪಿಸಲು  ಹಿಂದೇಟು ಹಾಕುತ್ತಿರುವ  ಸರಕಾರ ಸಂಗೀತ  ವಿಶ್ವವಿದ್ಯಾನಿಲಯ ಸ್ಥಾಪಿಸಲು  ಆದ್ಯತೆ  ನೀಡುತ್ತಿರುವುದು ವಿಷಾದನೀಯ ಎಂದು  ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ  ಹೇಳಿದರು.
ಪಿರಿಯಾಪಟ್ಟಣದ  ಗೋಣಿಕೊಪ್ಪ  ರಸ್ತೆಯಲ್ಲಿರುವ ಸರಕಾರಿ ಪದವಿಪೂರ್ವಕಾಲೇಜಿನ  ಪ್ರಾಂಗಣದ ಪುಟ್ಟಣ್ಣಕಣಗಾಲ್  ವೇದಿಕೆಯಲ್ಲಿ  ಮೈಸೂರು ಜಿಲ್ಲಾ ೧೦ನೇ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 
ದೇಶದ  ೪೫ ವಿಶ್ವವಿದ್ಯಾನಿಲಯಗಳಲ್ಲಿ  ಸಂಗೀತಕ್ಕೆ ಪ್ರತ್ಯೇಕ ವಿಭಾಗಗಳಿವೆ. ಇವುಗಳಲ್ಲೇ ಕೆಲವು ಕಡೆ ವಿದ್ಯಾರ್ಥಿಗಳಿಗಿಂತ  ಅಧ್ಯಾಪಕರೇ ಹೆಚ್ಚಾಗಿದ್ದಾರೆ . ಆದ್ದರಿಂದ ಸಂಗೀತ ವಿವಿಗೆ ಬದಲಾಗಿ  ಸರಕಾರ ಜನಪದ  ವಿವಿಗೆ ಮಾನ್ಯತೆ  ನೀಡಬೇಕಿತ್ತು ಎಂದರು.
ಮೂರು ಸಾವಿರ ವರ್ಷಗಳ ಇತಿಹಾಸ ಉಳ್ಳ ಕನ್ನಡ ಭಾಷೆ  ಅನೇಕ ದಾಳಿ, ಅನ್ಯಭಾಷಿಕರ  ಆಕ್ರಮಣದ ನಡುವೆಯೂ ಇಂದಿಗೂ  ತನ್ನ ತನವನ್ನು  ಉಳಿಸಿಕೊಂಡು ಬೆಳೆದಿದೆ. ಆದರೆ ಕನ್ನಡಿಗರಲ್ಲಿ  ಆಂಗ್ಲಭಾಷೆಯ  ವ್ಯಾಮೋಹ ಹೆಚ್ಚುತ್ತಿದ್ದು, ಐಎಎಸ್, ಐಪಿಎಸ್ ಅಧಿಕಾರಿಗಳು ಇಂಗ್ಲಿಷ್‌ನಲ್ಲೇ  ವ್ಯವಹರಿ ಸುತ್ತ ಇನ್ನೂ ಬ್ರಿಟಿಷರ  ಗುಲಾಮಗರಿ ಪ್ರದರ್ಶಿಸುತ್ತಿದ್ದಾರೆ. ಚಿಂತಕ  ರಾಮಮನೋಹರ ಲೋಹಿಯಾ ಅವರು ಈ ಹುದ್ದೆ ಗಳನ್ನು ರದ್ದುಮಾಡಿ ಸ್ಥಳೀಯ ಭಾಷೆಯಲ್ಲೇ  ತರಬೇತಿ ನೀಡಿದ ಅಧಿಕಾರಿಗಳನ್ನೇ ನೇಮಿಸಬೇಕೆಂದು ಶಿಫಾರಸು ಮಾಡಿದ್ದರು. ಈವರೆಗೆ ಇದು ಜಾರಿಗೆ ಬಂದಿಲ್ಲ. ಕನ್ನಡ ಸಾಹಿತ್ಯದಲ್ಲಿ  ಕೇವಲ ಸಾಹಿತ್ಯ  ಕೃತಿ ರಚನೆಯಾದರೆ ಸಾಲದು, ಬದಲಾಗಿ ಬದುಕನ್ನು ರೂಪಿಸುವ ಸಾಹಿತ್ಯ ರಚನೆಯಾಗಬೇಕಿದೆ ಎಂದರು.
ನೆರೆಯ ರಾಜ್ಯಗಳಾದ  ತಮಿಳುನಾಡು, ಆಂಧ್ರ ,ಕೇರಳಗಳಲ್ಲಿ  ಮಾತೃ ಭಾಷೆಗೆ  ಪ್ರಾಧಾನ್ಯ ನೀಡುತ್ತಿದ್ದು , ಭಾಷೆಯ ಅಭಿಮಾನದ ಜತೆಗೆ  ದುರಭಿಮಾನವೂ ಅವರದಾಗಿದೆ. ಆದರೆ  ಕರ್ನಾಟಕದಲ್ಲಿ ಇತರ ಭಾಷೆಗಳಿಗೆ ಆದ್ಯತೆ  ನೀಡುತ್ತಿದ್ದು, ಭಾಷೆಯ ನಿರಭಿಮಾನವನ್ನು  ಮೂಡಿಸುತ್ತಿರುವುದು ದುರಂತ ಎಂದರು.
ಸನ್ಮಾನ  ಸ್ವೀಕರಿಸಿ ಮಾತನಾಡಿದ ಸಾಹಿತಿ ದೇಜಗೌ, ಕನ್ನಡ  ಸಮೃದ್ಧ  ಭಾಷೆ .ಇದರಲ್ಲಿನ  ಕಂಪು, ಸಂಪತ್ತು ಬೇರೆ ಭಾಷೆಯಲ್ಲಿ  ಇಲ್ಲ. ಜಗತ್ತಿನ ಎಲ್ಲ ಭಾಷೆಗಿಂತ ಶ್ರೀಮಂತ ಭಾಷೆ ಕನ್ನಡ ನಾಡಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ  ಶಾಲೆ ನಡೆಸುವವರಿಗೆ ಸರಕಾರ ಹೆಚ್ಚಿನ ತೆರಿಗೆ ವಿಧಿಸಬೇಕು ಹಾಗೂ ಕನ್ನಡ ಮಾಧ್ಯಮ ದಲ್ಲೇ ವ್ಯಾಸಂಗ ಮಾಡಿದವರಿಗೆ ಮಾತ್ರ  ಸರಕಾರಿ ಹುದ್ದೆ ಎಂಬ ನೀತಿ ಜಾರಿ ಮಾಡುವ ಗಂಡಸುತನ ತೋರಬೇಕು.  ಆಗ ಮಾತ್ರ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯತೆ  ಸಿಗಲಿದೆ ಎಂದು ಹೇಳಿದರು.
ಸಮಾರಂಭದಲ್ಲಿ  ೧೩ ನೂತನ ಕೃತಿಗಳನ್ನು ವಿವಿಧ ಗಣ್ಯರು ಬಿಡುಗಡೆ  ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಯರಾಮರಾಜೇ ಅರಸ್ ಮಾತನಾಡಿ,  ಮುಂದಿನ ಸಾಲಿನಿಂದ ತಾಲೂಕು ಮಟ್ಟದಲ್ಲಿ  ಸಾಹಿತ್ಯ ಸಮ್ಮೇಳನ ನಡೆಸಲು ೧ ಲಕ್ಷ ರೂ. ಅನುದಾನ  ನೀಡಲು ಹಾಗೂ ಕನ್ನಡದಲ್ಲಿ  ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ೧ ಲಕ್ಷ ರೂ. ಬಹುಮಾನ  ನೀಡಲು ಸರಕಾರ  ನಿರ್ಧರಿಸಿದೆ  ಎಂದರು. ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ಚರ್ಚಿಸಲು  ಮೈಸೂರಿನಲ್ಲಿ  ಏ.೧೮ ರಂದು ೯೦ ಮಂದಿ ವಿದ್ವಾಂಸರ ಸಭೆ ನಡೆಯಲಿದೆ. ಇಲ್ಲಿ  ಶಾಸ್ತ್ರೀಯ ಸ್ಥಾನಮಾನಕ್ಕೆ ಬೇಕಾದ ಅನುದಾನ, ಭಾಷೆಯ ಬೆಳವಣಿಗೆಗೆ ಅಗತ್ಯವಾದ ಕ್ರಿಯಾಯೋಜನೆ  ತಯಾರಿಸಲಾಗುವುದು ಎಂದರು.
ಕಸಾಪ ರಾಜ್ಯಾಧ್ಯಕ್ಷ  ನಲ್ಲೂರು ಪ್ರಸಾದ್ ಮಾತನಾಡಿ,  ಮಹಾಜನ್ ವರದಿ ಅಂತಿಮ ಎಂದಿದ್ದರೂ  ಮಹಾರಾಷ್ಟ್ರ ಬೆಳಗಾವಿ ವಿಚಾರದಲ್ಲಿ  ಕಿತಾಪತಿ ಮಾಡುತ್ತಿದೆ.  ಗೋವಾ ಮಹದಾಯಿ ಯೋಜನೆಗೆ ,ಆಂಧ್ರಪ್ರದೇಶ  ಕೃಷ್ಣಾ ಯೋಜನೆಗೆ ಅಡ್ಡಗಾಲು ಹಾಕುತ್ತಿವೆ. ತಮಿಳುನಾಡು ಕಾವೇರಿ  ನೀರಿಗಾಗಿ ಹುಯಿಲೆಬ್ಬಿಸುತ್ತಿದೆ. ರಾಜಕಾರಣಿಗಳು ನಾಡು, ನುಡಿಯ  ವಿಚಾರ ಬಂದಾಗ ಪಕ್ಷಭೇದ ಮರೆತು ಕನ್ನಡದ ಪಕ್ಷದಂತೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದರು.
 ಕಸಾಪ ಜಿಲ್ಲಾಧ್ಯಕ್ಷ  ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕ  ಮಾತುಗಳನ್ನಾಡಿದರು. ಶಾಸಕ  ಕೆ.ವೆಂಕಟೇಶ್ ಸ್ವಾಗತಿಸಿದರು. ನಿಕಟಪೂರ್ವ ಅಧ್ಯಕ್ಷ ಅಕಬರ ಅಲಿ ಕನ್ನಡ ಬಾವುಟ  ಹಸ್ತಾಂತರಿ ಸಿದರು. ವೇದಿಕೆಯಲ್ಲಿ ಶಾಸಕರಾದ ಎಚ್.ಸಿ.ಮಹಾದೇವಪ್ಪ , ಎಚ್.ಎಸ್.ಮಹಾದೇವಪ್ರಸಾದ್, ಮಾಜಿ ಸಚಿವೆಯರಾದ  ರಾಣಿಸತೀಶ್, ಲೀಲಾದೇವಿ ಆರ್.ಪ್ರಸಾದ್, ಮಾಜಿ ಶಾಸಕ ಎಚ್.ಸಿ.ಬಸವರಾಜು, ಜಿ.ಪಂ.ಉಪಾಧ್ಯಕ್ಷೆ  ನಂದಿನಿ ಚಂದ್ರಶೇಖರ್, ಮಾಜಿ ಅಧ್ಯಕ್ಷ  ಮರಿಗೌಡ, ಜಿ.ಪಂ.ಸದಸ್ಯರು, ತಾ.ಪಂ.ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ  ಜಮೃದ್, ಪ.ಪಂ.ಅಧ್ಯಕ್ಷೆ ನಾಗಮ್ಮ, ಕಸಾಪ ತಾ.ಅಧ್ಯಕ್ಷ ವೈ.ಡಿ.ರಾಜಣ್ಣ, ಕಾರ್ಯದರ್ಶಿ ಶಫೀಉಲ್ಲಾ  ಮತ್ತಿತರರು ಹಾಜರಿದ್ದರು.
ಪಿರಿಯಾಪಟ್ಟಣಕ್ಕೂ ಬಂದಿದ್ದ ಬುಕನಾನ್
ಟಿಪ್ಪು ಪತನದ ನಂತರದ ವರ್ಷವೇ ಈಸ್ಟ್ ಇಂಡಿಯಾ ಕಂಪನಿ ಫ್ರಾನ್ಸಿನ್ ಬುಕನಾನ್ ಅವರ ಪ್ರವಾಸ ಏರ್ಪಡಿಸಿ ಇತಿಹಾಸ ಬರೆ ಯುವಂತೆ ಹೇಳಿತು. ಅಂತೆಯೇ ಬುಕನಾನ್ ಪ್ರವಾಸ ಕೈಗೊಂಡು ಶ್ರೀರಂಗಪಟ್ಟಣ, ನಂತರ ಪಾಲಹಳ್ಳಿ ಮೂಲಕ ಪಿರಿಯಾಪಟ್ಟಣಕ್ಕೆ ಭೇಟಿ ಇತ್ತಿದ್ದ. ಆತ ಬಂದ ಸಮಯಕ್ಕೆ ಪಿರಿಯಾ ಪಟ್ಟಣ ಕೋಟೆಯೊಳಗಿನ ಊರು ಸಂಪೂರ್ಣ ನಾಶವಾಗಿತ್ತು. ಆಗ ಸೆಪ್ಟೆಂಬರ್, ೧೮೦೦.
ಕೋಟೆ ಹೊರಗೆ ಕೆಲವೇ ಮನೆಗಳು ಇದ್ದುವು. ಭೀತರಾಗಿದ್ದ ಆ ಮನೆ ಗಳವರು ಸಂಜೆವರೆಗೂ ಬಾಗಿಲು ಗಳನ್ನು ಭದ್ರಪಡಿಸಿ ಹೊರ ಹೋಗಿ ರಾತ್ರಿ ಮಾತ್ರ ವಾಸ ಮಾಡುತ್ತಿದ್ದು, ನಂತರದ ವರ್ಷದಲ್ಲಿ ಕೆಲವೇ ತಿಂಗಳುಗಳಲ್ಲಿ ಪಟ್ಟಣವನ್ನು ಶೀಘ್ರವಾಗಿ ಅಭಿವೃದ್ಧಿಪಡಿಸಲಾಯಿತೆಂದು ಬುಕನಾನ್ ತನ್ನ ಗ್ರಂಥದಲ್ಲಿ ದಾಖಲಿಸಿದ್ದಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ