ಪರಮಾತ್ಮ ಆಡಿಸಿದಂತೆ ಆಡಿದ ಕಾಡಾನೆ...!

ಚಮ್ಮಟೀರ ಪ್ರವೀಣ್ ಉತ್ತಪ್ಪ ಗೋಣಿಕೊಪ್ಪಲು
‘ಗುಂಡಿನ ಮತ್ತೇ ಗಮ್ಮತ್ತು, ಅಳತೆ ಮೀರಿದರೆ ಆಪತ್ತು...’ ಎಂಬ ವಿಚಾರ ಅರಿಯದ ಕಾಡಾನೆಯೊಂದು ಕಳ್ಳಬಟ್ಟಿ ತಯಾರಿಸಲು ಕೆಲವರು ಅರಣ್ಯದಲ್ಲಿ ಬಚ್ಚಿಟ್ಟಿದ್ದ ಪುಳಗಂಜಿ ಕುಡಿದು ತಲೆ ತಿರುಗಿ ಬಿದ್ದುದು ಫಜೀತಿಗೆ ಕಾರಣ ವಾಯಿತು.
ತಿತಿಮತಿ ಸಮೀಪದ ಮಾವುಕಲ್ಲು ರಕ್ಷಿತಾರಣ್ಯದ ಕಾರೆಹಡ್ಲು ಗಿರಿಜನ ಹಾಡಿಯ ಸಮೀಪದಲ್ಲಿರುವ ಕೃಷಿ ಭೂಮಿಯಲ್ಲಿ ಪುಳಗಂಜಿ ಕುಡಿದು ತಲೆತಿರುಗಿ ನೆಲಕ್ಕುರುಳಿದ್ದ ಕಾಡಾನೆಯನ್ನು ಕಂಡ ಗಿರಿಜನರು ಭಯ ಗೊಂಡು ಬೊಬ್ಬೆ ಹಾಕಿದರು. ಎಷ್ಟು ಕೂಗಿದರೂ ಆನೆಯ ಕಿವಿಗೆ ಅವರ ಬೊಬ್ಬೆ ಮುಟ್ಟಲೇ ಇಲ್ಲ. ಮಲಗಿದ್ದ ಆನೆಯ ಪಕ್ಕದಲ್ಲಿಯೇ ಅದರ ಮರಿ ಅಮ್ಮನಿಗೆ ಕಾವಲು ಕಾಯುತ್ತಾ ನಿಂತಿತ್ತು.
ಸುದ್ದಿ ತಿಳಿದು ಮತ್ತಷ್ಟು ಮಂದಿ ಓಡೋಡಿ ಬಂದರು. ಯಾರೆಷ್ಟೇ ಕೂಗು ಹಾಕಿದರೂ ಆನೆ ಎಚ್ಚರಗೊಳ್ಳಲಿಲ್ಲ. ‘ಕುಡಿಯೋದೇ ನನ್ನ ವೀಕ್ನೆಸ್ಸು...’ ಎಂಬಂತೆ ಮತ್ತಿನಿಂದ ಹೊರಬರಲು ಸಾಧ್ಯವಾಗದೆ ಮಲಗಿದ್ದಲ್ಲಿಯೇ ತೊಳಲಾಡು ತಿತ್ತು. ಅರಣ್ಯಾಧಿಕಾರಿಗಳಿಗೆ ಕರೆ ಹೋಯಿತು. ಸ್ಥಳಕ್ಕೆ ಆಗಮಿಸಿದ ಎಸಿಎಫ್ ಅಲೆ ಗ್ಸಾಂಡರ್, ಅದರ ಮೈಮೇಲೆ ನೀರು ಚಿಮುಕಿಸಿದರು. ಚಿಕಿತ್ಸೆ ಕೊಡಿಸಲು ವೈದ್ಯರನ್ನು ಕರೆತರುವ ಪ್ರಯತ್ನ ಮಾಡಿದ ರಾದರೂ ಅದು ಸಫಲವಾಗಲಿಲ್ಲ.
ಸಾಕಾನೆಗಳ ನೆರವು: ಮದವೇರಿದ ಆನೆಯ ಮೇಲೇಳಿಸುವ ಕಾರ‍್ಯಕ್ಕೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಭರತ ಹಾಗೂ ಅಶೋಕನನ್ನು ಕರೆತರ ಲಾಯಿತು. ಮಲಗಿದ್ದ ಕಾಡಾನೆಯ ಗತ್ತು ನೋಡಿದ ಅಶೋಕ, ಅದರ ಬಳಿ ಸುಳಿಯಲು ಹಿಂದೇಟು ಹಾಕಿದ. ಆದರೆ, ಭರತ ಧೈರ್ಯ ಮಾಡಿದ. ನೇರವಾಗಿ ಕಾಡಾನೆಯ ಬಳಿ ತೆರಳಿ ಎಬ್ಬಿಸುವ ಕಾರ್ಯದಲ್ಲಿ ನಿರತನಾದ.
ಕಾವಲಿತ್ತು ಮರಿಯಾನೆ: ಕಾಡಾನೆಯ ಪಕ್ಕದಲ್ಲಿಯೇ ಅದರ ಮರಿ ಬೀಡು ಬಿಟ್ಟಿತ್ತು. ತಾಯಿಗೆ ಏನು ಮಾಡಿ ಬಿಡುತ್ತಾರೋ ಎಂಬ ಭಯ ಮರಿಗೆ ಕಾಡುತಿದ್ದಂತೆ ಭಾಸವಾಗುತ್ತಿತ್ತು. ಹೀಗಾಗಿ ಯಾರನ್ನೂ ಅದು ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ. ಸುಮಾರು ೨ ಗಂಟೆಗಳ ಕಾಲ ಪ್ರಯತ್ನ ನಡೆಸಿ ಮರಿಯಾನೆಯನ್ನು ಓಡಿಸಲಾ ಯಿತು. ನಂತರ ಭರತನ ಸಹಕಾರ ದೊಂದಿಗೆ ಕಾಡಾನೆಯನ್ನು ಮೇಲೆಬ್ಬಿ ಸುವ ಕಾರ್ಯ ಮುಂದುವರಿಯಿತು.
ಸತತ ಯತ್ನ ವಿಫಲವಾದಾಗ ಹುಸಿಗೋಪ ದಿಂದ ಭರತ ಕಾಡಾನೆಯನ್ನು ತಿವಿದ. ತಿವಿತದ ಹೊಡೆತಕ್ಕೆ ಬೆಚ್ಚಿದ ಆನೆ ಕುಡಿದ ಅಮಲಿನಲ್ಲಿಯೇ ಮೆಲ್ಲನೆ ಕಣ್ತೆರೆದು ಒಮ್ಮೆ ಸುತ್ತ ದೃಷ್ಠಿ ಹಾಯಿಸಿತು. ಸುತ್ತಲೂ ನೆರೆದಿದ್ದ ಜನರನ್ನು ಕಂಡು ಅವಾಕ್ಕಾಯಿತು. ಗಲಿಬಿಲಿಗೊಂಡು ಕಾಡಿನ ಕಡೆಗೆ ಓಟ ಕಿತ್ತಿತು. ಕಾಡಾನೆ ತನ್ನ ಮೇಲೆಯೇ ದಾಳಿ ನಡೆಸಲು ಬರುತ್ತಿದೆ ಎಂದು ಭ್ರಮಿಸಿದ ಭರತನೂ ಓಟ ಕಿತ್ತ. ಅಶೋಕ ಮಾವುತನ ಮಾತನ್ನೂ ಕೇಳದಾದ. ಕಾಡಾನೆ, ಜತೆಗೆ ಭರತನ ಓಟ, ಮಾವುತನ ಪರದಾಟ ನೆರೆದವರಿಗೆ ಮನರಂಜನೆ ಒದಗಿಸಿತು.
ಈಗ ಬಿದಿರು ಹೂ ಬಿಟ್ಟಿರುವುದರಿಂದ ಆನೆಗಳಿಗೆ ಆಹಾರದ ಕೊರತೆ ಎದುರಾಗಿದೆ. ಜತೆಗೆ ಬೇಸಿಗೆಯಾಗಿರು ವುದರಿಂದ ಎಲ್ಲೆಂದರಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ ದಾಹವನ್ನು ನೀಗಿಸಿ ಕೊಳ್ಳಲು ಆನೆ, ಕಳ್ಳಬಟ್ಟಿ ತಯಾರಿಸಲು ಬಳಕೆ ಮಾಡುವ ಪುಳಗಂಜಿ ಕುಡಿದಿರುವ ಸಾಧ್ಯತೆ ಇದೆ ಎಂಬುದು ಅರಣ್ಯಾಧಿಕಾರಿಗಳ ಸ್ಪಷ್ಟನೆ.
೨೫ ವರ್ಷದ ಆನೆಗೆ ಯಾವುದೇ ಕಾಯಿಲೆ ಇಲ್ಲ ಎಂಬುದು ಅವರ ಸಮಜಾಯಿಷಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ