ದಲಿತರಲ್ಲಿ ಹೆಚ್ಚಿದ ರಾಜಕೀಯ ಪ್ರಜ್ಞೆ

ವಿಕ ವಿಶೇಷ ಮೈಸೂರು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅತಿಹೆಚ್ಚು  ಸ್ಪರ್ಧೆ ಏರ್ಪಟ್ಟಿರುವುದು ಎಲ್ಲಿ ಗೊತ್ತೆ ? ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ  !
ಸಾಮಾನ್ಯ ಸೇರಿದಂತೆ ಎಲ್ಲ ರೀತಿಯ ಮೀಸಲು ವರ್ಗದಲ್ಲಿ  ಒಂದು ಸ್ಥಾನಕ್ಕೆ ಸರಾಸರಿ ಮೂವರು ಸ್ಪರ್ಧೆಯಲ್ಲಿದ್ದರೆ, ಪರಿಶಿಷ್ಟ ಜಾತಿಯ ಸಾಮಾನ್ಯ ವರ್ಗದಲ್ಲಿ ಮಾತ್ರ ಒಂದು ಸ್ಥಾನಕ್ಕೆ ನಾಲ್ವರು !
ಮೇ ೧೨ರಂದು ನಡೆಯಲಿರುವ ಮೈಸೂರು ಜಿಲ್ಲೆಯ  ಎಲ್ಲ  ಗ್ರಾ. ಪಂ. ಸದಸ್ಯ ಸ್ಥಾನಗಳ ಚುನಾವಣೆಯ ಅಂತಿಮ ಹಣಾಹಣಿ ಪಟ್ಟಿಯನ್ನು ನೋಡಿದರೆ- ಪರಿಶಿಷ್ಟ ಜಾತಿ ಬಂಧುಗಳಲ್ಲಿ  ರಾಜಕೀಯ ಆಸಕ್ತಿ ಹೆಚ್ಚಿರುವುದು  ಕಂಡು ಬರುತ್ತದೆ.
ಗ್ರಾ. ಪಂ. ಚುನಾವಣೆಯಲ್ಲಿ  ಮೀಸಲು ನೀತಿಯನ್ನು  ಅರ್ಹ ಎಲ್ಲ ಜಾತಿ-ಜನಾಂಗಗಳಿಗೆ, ಅದರಲ್ಲೂ ಮಹಿಳೆಯರಿಗೆ ವೈಜ್ಞಾನಿಕವಾಗಿ ಸಲ್ಲುವಂತೆ  ಜಾರಿಗೊಳಿಸಲಾಗಿದೆ. ಪರಿಶಿಷ್ಟ   ಜಾತಿ (ಸಾಮಾನ್ಯ), ಪರಿಶಿಷ್ಟ  ಜಾತಿ(ಮಹಿಳೆ);  ಪರಿಶಿಷ್ಟ  ಪಂಗಡ(ಸಾ), ಪರಿಶಿಷ್ಟ ಪಂಗಡ(ಮ);  ಬಿಸಿಎ(ಸಾ), ಬಿಸಿಎ(ಮ); ಬಿಸಿಬಿ(ಸಾ), ಬಿಸಿಬಿ(ಮ);  ಸಾಮಾನ್ಯ(ಸಾ), ಸಾಮಾನ್ಯ(ಮ) ಎಂಬ ವರ್ಗೀಕರಣದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಜಿಲ್ಲೆಯ ಎಲ್ಲ ಜಾತಿ, ಜನಾಂಗಗಳ ಅರ್ಹರು ರಾಜಕೀಯ ಮೀಸಲು ವ್ಯಾಪ್ತಿಗೆ ಬರುತ್ತಾರೆ. (ಬಿಸಿಬಿಗೆ ಬರುವ ಒಕ್ಕಲಿಗರು, ಲಿಂಗಾಯತರು, ಕ್ರೈಸ್ತರನ್ನು ಹೊರತು ಪಡಿಸಿ, ಉಳಿದ  ಎಲ್ಲ ಹಿಂದುಳಿದ ಜಾತಿಗಳು ಬಿಸಿಎ ವ್ಯಾಪ್ತಿಗೆ ಬರುತ್ತವೆ. ಈ  ವರ್ಗದಲ್ಲೂ ಯಾರಿಗಾದರೂ ಐದು ಎಕರೆಗಿಂತ ಹೆಚ್ಚು ಜಮೀನು, ೨ ಲಕ್ಷ ರೂ. ಗಿಂತ ಅಧಿಕ ಆದಾಯ ಇದ್ದು, ಆದಾಯ ತೆರಿಗೆದಾರರು  ಇದ್ದರೆ, ಅಂಥವರಿಗೆ ಮೀಸಲು ಇರುವುದಿಲ್ಲ)
ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು: ಜಿಲ್ಲೆಯ ೨೩೫ ಗ್ರಾ. ಪಂ. ಗಳ ೪೩೦೦ ಸ್ಥಾನಗಳ ಪೈಕಿ ೪೦೮೦ ಸದಸ್ಯ ಸ್ಥಾನಗಳಿಗೆ ೧೩,೨೯೮ ಮಂದಿ ಸ್ಪರ್ಧಿಸಿದ್ದಾರೆ.  (ಒಟ್ಟು ಸ್ಥಾನಗಳ ಪೈಕಿ ೯ ಸ್ಥಾನಗಳು ಖಾಲಿ  ಉಳಿದಿದ್ದು, ೨೧೧ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ)
ಈ ಪೈಕಿ ಪರಿಶಿಷ್ಟ ಜಾತಿ ಸಾಮಾನ್ಯ ವರ್ಗದ ೫೨೨ ಸ್ಥಾನಗಳಿಗೆ ೧೮೮೮ ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅಂದರೆ ಸರಾಸರಿ ಒಂದು ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು. ಉಳಿದಂತೆ  ಪರಿಶಿಷ್ಟ ಜಾತಿಯ ಮಹಿಳೆಯರ ಸ್ಥಾನಗಳಿಗೆ ಹೊರತು ಪಡಿಸಿ ಉಳಿದ ಎಲ್ಲ ವರ್ಗಗಳಲ್ಲಿಯೂ ಒಂದು ಸ್ಥಾನಕ್ಕೆ ಮೂವರು ಕಣದಲ್ಲಿ ಇದ್ದಾರೆ.  ಪರಿಶಿಷ್ಟ ಪಂಗಡದ (ಮಹಿಳೆ ) ವರ್ಗದಲ್ಲಿ  ಒಂದು ಸ್ಥಾನಕ್ಕೆ ಸರಾಸರಿ  ಇಬ್ಬರು ಅಭ್ಯರ್ಥಿಗಳು  ಕಣದಲ್ಲಿ ಇದ್ದಾರೆ.
ಇಲ್ಲೆಲ್ಲಾ ಇದೇ ಕೊನೆಯ ಪಂಚಾಯಿತಿ ಚುನಾವಣೆ
ಆರ್. ಕೃಷ್ಣ  ಮೈಸೂರು
ಈ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ.
ಮೈಸೂರು ಮಗ್ಗುಲಲ್ಲೇ ಇರುವ ೧೫ ಗ್ರಾಮ ಪಂಚಾಯಿತಿಗಳಿಗೆ ಇದೇ ಕೊನೆ ಚುನಾವಣೆ ಆಗಲಿದ್ದು, ಮುಂದೆ ಇವು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಬೃಹತ್ ನಗರವಾಗಲು ಹೊರಟಿರುವ ಮೈಸೂರು ನಗರಪಾಲಿಕೆ ಯೊಳಗೆ ೧೫ ಗ್ರಾ. ಪಂ. ವ್ಯಾಪ್ತಿಯ ೪೨ ಗ್ರಾಮಗಳು ಸೇರ್ಪಡೆ ಗೊಳ್ಳುವುದರಿಂದ ಈ ಗ್ರಾಮಗಳಲ್ಲಿ ಮುಂದೆಂದೂ ಪಂಚಾಯಿತಿ ಚುನಾವಣೆ ನಡೆಯುವುದಿಲ್ಲ.
ಮೈಸೂರು ಹೆಸರಿನೊಂದಿಗೆ ಬೆಸೆದುಕೊಂಡಿರುವ ಚಾಮುಂಡಿ ಬೆಟ್ಟ ಇಷ್ಟು ವರ್ಷ, ಮೂರು ಸದಸ್ಯರನ್ನು ಹೊಂದಿದ್ದ ರಾಜ್ಯದ ಅತಿ ಚಿಕ್ಕ ಗ್ರಾಮ ಪಂಚಾಯಿತಿಯಾ ಗಿಯೇ ಕಾರ‍್ಯ ನಿರ್ವಹಿಸಿತ್ತು. ಇದು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಸೇರ್ಪಡೆಗೊಳ್ಳಲಿದೆ. ಇದರೊಂದಿಗೆ ನಗರಕ್ಕೆ ಹೊಂದಿಕೊಂಡಂತಿರುವ ಶ್ರೀರಾಂಪುರ, ಹಿನಕಲ್, ಆಲನಹಳ್ಳಿ, ಉತ್ತನ ಹಳ್ಳಿ, ಬೋಗಾದಿ, ರಮ್ಮನಹಳ್ಳಿ, ಹಂಚ್ಯಾ, ಬೆಳವಾಡಿ ಗ್ರಾಮ ಪಂಚಾಯಿತಿಗಳು ಬೃಹತ್ ನಗರಪಾಲಿಕೆ ವ್ಯಾಪ್ತಿಗೆ ಒಳಪಡಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಈ ಗ್ರಾಮಗಳಿಗೆ ಕೊನೆಯ ಗ್ರಾ.ಪಂ. ಚುನಾವಣೆ ಅಗಲಿದೆ.
ನರ್ಮ್ ಯೋಜನೆಯ ಷರತ್ತಿನ ಪ್ರಕಾರ ಮುಂದಿನ ೪೦-೫೦ ವರ್ಷದ ಮುಂದಾಲೋಚನೆಯ ಯೋಜನೆ ಹಮ್ಮಿ ಕೊಳ್ಳಬೇಕಿರು ವುದರಿಂದ ಪಾಲಿಕೆಯನ್ನು ಬೃಹತ್ ನಗರಪಾಲಿಕೆ ಯನ್ನಾಗಿ ಮಾರ್ಪಾಡು ಮಾಡುವುದು ಅನಿವಾರ್ಯ. ಈಗಾಗಲೇ ಬೆಂಗಳೂರು ಬೃಹತ್ ನಗರಪಾಲಿಕೆಯಾಗಿ ಮಾರ್ಪಾಡಾಗಿದ್ದು, ಈಗಷ್ಟೆ ಚುನಾವಣೆ ಮುಗಿಸಿದೆ.  ನರ್ಮ್ ಯೋಜನೆ ಜಾರಿಗೊಂಡ ಕೊಯಮತ್ತೂರು, ವಿಜಯವಾಡ, ವಿಶಾಖಪಟ್ಟಣ ಗಳು ಬೃಹತ್‌ನಗರವಾಗಿವೆ.
ಇದೇ ಮಾದರಿಯನ್ನು ಮೈಸೂರು ನಗರಪಾಲಿಕೆಯೂ ಅನುಸರಿಸ ಬೇಕಿದ್ದು, ‘ಬೃಹತ್‌ನಗರ’ ಯೋಜನೆಯನ್ನು ಸಿದ್ಧ ಪಡಿಸಿದೆ. ಯೋಜನೆಯನ್ನು ರಾಜ್ಯ ಸರಕಾರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದು, ಅನುಮತಿ ನೀಡುವುದಷ್ಟೇ ಬಾಕಿ ಉಳಿದಿದೆ. ಬೃಹತ್‌ನಗರವಾಗದಿರುವುದರಿಂದ ಎರಡನೇ ಹಂತದ ನರ್ಮ್ ಅನುದಾನ ಬಿಡುಗಡೆ ಮಾಡುವುದಿಲ್ಲ ಎಂಬ ಷರತ್ತು ವಿಧಿಸಿ ರುವುದರಿಂದ ಮೈಸೂರು ಅನಿವಾರ್ಯವಾಗಿ ಬೃಹತ್ ನಗರವಾಗ ಬೇಕಿದೆ. ಈ ಬಗ್ಗೆ  ಪಾಲಿಕೆ, ಈಗಾಗಲೇ ಸಾಮಾನ್ಯ ಸಭೆಯಲ್ಲಿ ತನ್ನ  ಸರಹದ್ದು ವಿಸ್ತರಿಸುವ ಕುರಿತು ಒಂದು ವರ್ಷದ ಹಿಂದೆಯೇ  (೨೦೦೯ರ ಮೇ ೨೯) ಚರ್ಚಿಸಿದ್ದು, ಅನುಮೋದನೆ ಪಡೆಯಲಾಗಿದೆ.
೨೦೧೧ರಲ್ಲಿ ನಡೆಯುವ  ಜನಗಣತಿ ವೇಳೆ , ನಗರದ ಹೊರ ವಲಯದಲ್ಲಿರುವ ಬಡಾವಣೆಗಳು ಎಂದು ಗುರುತಿಸಿ ಗಣತಿ ನಡೆಸು ವಂತೆ ಸರಕಾರವನ್ನು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಲಿ ೮೯ ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಮೈಸೂರ ನಗರಪಾಲಿಕೆ ೬೫ ವಾರ್ಡ್‌ಗಳನ್ನು ಹೊಂದಿದೆ. ಇದನ್ನು ೨೧೦ ಚದರ ಕಿ.ಮೀ.ಗೆ ವಿಸ್ತರಿಸಿಕೊಂಡು ನೂರಕ್ಕೂ ಹೆಚ್ಚು ವಾರ್ಡ್ ಗಳನ್ನು ಹೊಂದಲು ಯೋಜನೆ ರೂಪುಗೊಂಡಿದೆ. ಪಾಲಿಕೆಗೆ ಮೂರು ವರ್ಷದಲ್ಲಿ ಸಾಮಾನ್ಯ ಚುನಾವಣೆ ನಡೆಯಲಿದ್ದು, ಆ ವೇಳೆಗೆ ಬೃಹತ್ ನಗರಪಾಲಿಕೆಗೆ ಸ್ಪಷ್ಟ ರೂಪು ದೊರೆಯಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ