ರಂಗಾಯಣದಲ್ಲಿ ‘ಮಕ್ಕಳ ಮೇಳ’ದ ಕೊನೇ ದಿನ

ವಿಕ ಸುದ್ದಿಲೋಕ ಮೈಸೂರು
ನಾಟಕ, ಸಂಗೀತ, ಗೀತೆಗಳ ಗುಂಗಿನಲ್ಲಿ ಮುಳುಗೇಳುವ ರಂಗಾಯಣ, ಕಲಾಮಂದಿರದ ಹೊರ ಅಂಗಳ ಭಾನುವಾರ ದಂದು ಎಂದಿನಂತಿರಲಿಲ್ಲ. ಇಡೀ ಆವರಣದಲ್ಲಿ ಹಳ್ಳಿ ಸಂತೆ ವಾತಾವರಣ ಯಥಾವತ್ ಅನಾವರಣಗೊಂಡಿತು !
ಮಕ್ಕಳ ಗಲಗಲ ಸದ್ದು... ಗಿಜಿಗಿಜಿ ಗಲಾಟೆ... ಕಾಲುಗಳಿಗೆ ತೊಡರುವ ಮಕ್ಕಳ ನಡುವೆಯೇ ದಾರಿ ಮಾಡಿಕೊಂಡು ಸಂತೆ ಬೀದಿಯಲ್ಲಿ ನಗು ನಗುತ್ತಲೇ ಸಾಗಿದ ಹಿರಿಯರು... ಕುಳಿತ ಲ್ಲಿಂದ ಎದ್ದು ಬಂದು ಗಿರಾಕಿಗಳಿಗೆ ಮುಗಿಬಿದ್ದ ಪುಟಾಣಿ ವ್ಯಾಪಾರಿಗಳು... ಎತ್ತ ಹೋಗುವುದೆಂದು ಅರಿಯದೇ ದಿಕ್ಕೆಟ್ಟು ನಿಂತ ಗ್ರಾಹಕರು... ಆ ಅಪ್ರಬುದ್ಧ ವ್ಯಾಪಾರಿಗಳ ಹಿಂದೆ ನಿಂತು ವ್ಯಾಪಾರದ ಒಳಗುಟ್ಟು ಹೇಳಿಕೊಡುತ್ತಿದ್ದ ಹೆತ್ತವರು...
ಅದು ‘ದೇಸಿ ಚಿಣ್ಣರ ಮೇಳ’ದ ಕೊನೇ ದಿನದ ಸಂಭ್ರಮ. ಮಕ್ಕಳಿಗೇ ಮೀಸಲಾದ ‘ಚಿಣ್ಣರ ಸಂತೆ’. ಅಲ್ಲಿ ಅವರೇ ವ್ಯಾಪಾರಿಗಳು. ಮಕ್ಕಳೊಡನೆ ಪೋಷಕರೂ ಗ್ರಾಹಕರಾಗಿ ದ್ದರು. ಮರದ ನೆರಳಿನಲ್ಲಿ ವ್ಯಾಪಾರ ಭರಾಟೆ ಸಾಗಿತ್ತು.
ಅಂಕಲ್, ಆಂಟಿ... ಗರ‍್ಮಗರ‍್ಮ ಕಡ್ಲೆಪುರಿ ತಗೊಳ್ಳಿ, ನಾಲಗೆ ಚಪ್ಪರಿಸುವ ಚಕ್ಕುಲಿ, ಕೋಡುಬಳೆ, ರೊಟ್ಟಿ ಚೆಟ್ನಿ ತಗೊಳ್ಳಿ, ನಿಂಬೆ ಜ್ಯೂಸ್ ತುಂಬಾ ಚೆನ್ನಾಗಿದೆ, ಬಟ್ಟೆ ಬ್ಯಾಗ್ ಕೇವಲ ೧೫ ರೂ... ಇಲ್ ಬನ್ನಿ ಅಂಕಲ್... ಎನ್ನುತ್ತಾ ಕೂಗಿ ಕರೆದದ್ದೇ ಕರೆದದ್ದು. ಸ್ಯಾರಿ ಉಟ್ಟ ಪುಟ್ಟ ಪೋರಿ ಸೊಪ್ಪೋ ಸೊಪ್ಪೋ.. ಎಂದು ಸಾರುತ್ತಾ ಮಾರುತ್ತಿದ್ದದ್ದು ಗಮನ ಸೆಳೆಯಿತು. ಕಡ್ಲೇಕಾಯಿ ಮಾರಾಟವೂ ಜೋರಿತ್ತು. ತಮ್ಮ ಮಕ್ಕಳೊಳಗಿನ ‘ವ್ಯಾಪಾರಿ’ಯ ಕಂಡು ಅಚ್ಚರಿ, ಖುಷಿ ಹೆತ್ತವರಿಗೆ.
ಈ ಸಂತೆಯೊಳಗೆ ಏನಿಲ್ಲ: ನೀರು ಮಜ್ಜಿಗೆ, ಕೋಸುಂಬರಿ, ಸೌತೆಕಾಯಿ, ಪಾನಿಪೂರಿ, ಕಡ್ಲೆಪುರಿ, ಚುರುಮುರಿ, ಮಂಡಕ್ಕಿ, ಅಕ್ಕಿರೊಟ್ಟಿ, ಮಸಾಲೆ ಮಾವಿನಕಾಯಿ, ಕೊಬ್ಬರಿ ಮಿಠಾಯಿ, ಚಾಕಲೇಟ್, ಕೋಡುಬಳೆ, ಚಕ್ಕುಲಿ, ನಿಪ್ಪಟ್ಟು, ರವೆಉಂಡೆ, ಪ್ರೂಟ್ ಸಲಾಡ್, ತೆಂಗಿನಕಾಯಿ, ಸೊಪ್ಪು-ತರಕಾರಿ, ಮಾವು, ಹಲಸು, ಬಾಳೆ ಹಣ್ಣು, ಹೂವು, ಆಟಿಕೆಗಳು, ಪುಸ್ತಕಗಳು, ಬಳೆ, ರಿಬ್ಬನ್, ಕೊರಳ ಸರಗಳು, ಮಣ್ಣಿನ ಹಣತೆಗಳು, ಮಣ್ಣಿನ ಗೊಂಬೆ ಗಳು... ಹೀಗೆ ತರೇಹವಾರಿ ವಸ್ತುಗಳ ಅಲ್ಲಿ ಲಭ್ಯವಿದ್ದವು.
ಕೆಲ ಮಕ್ಕಳು ರೆಡಿಮೇಡ್ ತಿನಿಸುಗಳನ್ನು ಅಂಗಡಿಯಿಂದ ತಂದು ಮಾರಾಟಕ್ಕಿಟ್ಟಿದ್ದರೆ, ಇನ್ನು ಹಲವರು ಮನೆಯಲ್ಲಿ ಅಮ್ಮ ತಯಾರಿಸಿಕೊಟ್ಟಿದ್ದ ತಿನಿಸುಗಳನ್ನು ಮಾರುತ್ತಿದ್ದರು. ಮಕ್ಕಳು ಗಿರಾಕಿಗಳನ್ನು ಕಾಡಿ, ಬೇಡಿ, ಕೈಹಿಡಿದು ಎಳೆದೊಯ್ದು ವ್ಯಾಪಾರ ಮಾಡಿಸಿದ್ದು ಕಂಡು ಬಂದಿತು. ಬಿದಿರಿನ ಬುಟ್ಟಿ ಯಲ್ಲಿ ಸ್ಕೆಚ್ ಪೆನ್ನು, ಪೆನ್ಸಿಲ್, ರಬ್ಬರ್ ಇಟ್ಟುಕೊಂಡು ಮಾರುತ್ತಿದ್ದಳು ಪುಟಾಣಿಯೊಬ್ಬಳು. ತಮ್ಮ ಪದಾರ್ಥಗಳು ಮಾರಾಟವಾಗಿ ಕೈಗೆ ಕಾಸು ಬರುತ್ತಿದ್ಧಂತೆ ಮುಖವರಳಿಸಿ ನಿಲ್ಲುವ ಅವರ ಸಂಭ್ರಮ ಅವರ್ಣೀಯ.
‘ಅಮ್ಮ ತಾಯಿ...’ ಭಿಕ್ಷುಕರು: ಭಿಕ್ಷೆ ಬೇಡುವ ಆಧುನಿಕ ಭಿಕ್ಷುಕರೂ ಅಲ್ಲಿದ್ದರು. ಹರಕಲು ಪ್ಯಾಂಟ್, ಟೀ ಶರ್ಟ್ ತೊಟ್ಟ ಅನನ್ಯ ಮತ್ತವನ ಗೆಳೆಯ ಭಿಕ್ಷೆಗಿಳಿದಿದ್ದರು. ಎರಡೂ ಕಾಲಿಲ್ಲದ (ನಕಲಿ)ವಿಕಲಚೇತನನೊಬ್ಬ ಪುಟ್ಟ ನಾಲ್ಕು ಚಕ್ರ ಗಳಿದ್ದ ಹಲಗೆಯ ಮೇಲೆ ತೆವಳುತ್ತಲೇ ಸಾಗಿ, ವ್ಯಾಪಾರಿಗಳು ಕನಿಕರ ತೋರುವಂತೆ ಮಾಡಿದ. ಪಕ್ಕದಲ್ಲೇ ಮುತ್ತುರಾಜ್ ಟೂರಿಂಗ್ ಟಾಕೀಸ್‌ನ ಟೆಂಟ್ ತಲೆಎತ್ತಿ ಸಿನಿಮಾ ಪ್ರದರ್ಶಿಸಿತು. ಶಿಬಿರದ ಮಕ್ಕಳ ಆಟೋಟಗಳನ್ನು ಚಿತ್ರದಲ್ಲಿ ತೋರಿಸಲಾಯಿತಲ್ಲದೇ, ನಡುವೆ ರಾಜಕುಮಾರ್ ಚಿತ್ರದ ತುಣುಕುಗಳೂ ಪ್ರದರ್ಶನಗೊಂಡಿತು. ಅಪ್ಪ, ಅಮ್ಮ ನಿಂದ ಕಾಸು ಪಡೆದ ಮಕ್ಕಳು ಸಿನಿಮಾ ನೋಡಿ ಖುಷಿಪಟ್ಟರು.
ರಂಗಾಯಣದ ಪ್ರಭಾರ ನಿರ್ದೇಶಕ ಕಾ.ತ. ಚಿಕ್ಕಣ್ಣ, ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡರು ಸಂತೆಯಲ್ಲೊಂದು ಸುತ್ತು ಬಂದು ಮಕ್ಕಳ ವ್ಯಾಪಾರ ವೈಖರಿಗೆ ತಲೆದೂಗಿದರು. ‘ಮುರ್ಖರ ಪೆಟ್ಟಿಗೆಯೊಳಗೆ ಕಳೆದು ಹೋಗ ಬಹುದಾಗಿದ್ದ ಸಮಯವನ್ನು ಮಕ್ಕಳು ಈ ರೀತಿಯ ಕ್ರಿಯಾ ಶೀಲ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದು ಖುಷಿಯಾ ಗಿದೆ’ ಎನ್ನುವುದು ಪೋಷಕರ ಅನಿಸಿಕೆಯಾಗಿತ್ತು.
ಅಂಬಾರಿ ಆನೆ ಸವಾರಿ
ಬೆನ್ನ ಮೇಲೆ ಚಿನ್ನದಂಬಾರಿ ಹೊತ್ತ ಆನೆ ವೇಷಧಾರಿಗಳು ಸಂತೆಗೆ ಬಂದು ವ್ಯಾಪಾರಿಗಳು ನೀಡುವ ತಿಂಡಿ ತಿನಿಸುಗಳಿಗಾಗಿ ಸೊಂಡಿಲಿನಲ್ಲಿ ಚಾಚಿದರು. ಸಿಕ್ಕಿದ್ದನ್ನು ಬಾಚಿ ದರು. ಮಕ್ಕಳು ಕಣ್ಣರಳಿಸಿ ನೋಡು ವಂತೆ ಮಾಡಿತು. ಮೈಮ್ ರಮೇಶ್ ನೇತೃತ್ವದ ತಂಡ ವೊಂದು ನವಿಲು, ಕುಕ್ಕುಟ, ಆನೆ ಮುಖವಾಡ ತೊಟ್ಟು, ಪುರಾಣದ ಮಂತ್ರಿ ಮಹೋದಯರ ಧಿರಿಸು ಉಟ್ಟು, ಭಾಜಾ ಭಜಂತ್ರಿ ಹಿಡಿದು ತಮಟೆ ಬಾರಿಸುತ್ತಾ ಸಂತೆ ಸುತ್ತಿ ರಂಜಿಸಿತು.
ಪರಿಸರ ಪ್ರೇಮ
ಬಟ್ಟೆ ಬ್ಯಾಗ್ ಮಾರುತ್ತಿದ್ದ ಸಂಜಯ್ ಪರಿಸರ ಉಳಿಸುವಂತೆ ಮನವಿ ಮಾಡುವ ಕರಪತ್ರಗಳನ್ನು ಹಂಚುತ್ತಾ ತನ್ನ ಪರಿಸರ ಪ್ರೇಮ ಮೆರೆದ. ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ -ಬಟ್ಟೆ ಚೀಲ ಬಳಸಿ, ಪ್ಲಾಸ್ಟಿಕ್ ಕೈಚೀಲ ತ್ಯಜಿಸಿ- ಪರಿಸರ ಉಳಿಸಿ... ಇತ್ಯಾದಿ ನೀತಿಪಾಠವಿದ್ದ ಕರ ಪತ್ರದ ಕೊನೆಯಲ್ಲಿ -‘ಈ ಸುದ್ದಿ ಯನ್ನು ಓದಿ ೯ ಜನಕ್ಕೆ ಕೊಡಿ. ಸದ್ಯದಲ್ಲೇ ನಿಮಗೆ ಭೂಮಾತೆ ಒಳ್ಳೆಯದನ್ನು ನೀಡುತ್ತಾಳೆ. ತಪ್ಪಿದ್ದಲ್ಲಿ ತೊಂದರೆ ಖಚಿತ, ಎಚ್ಚರವಾಗಿರಿ’ ಎನ್ನುವ ಒಕ್ಕಣೆಯೂ ಇದ್ದದ್ದು ಗಮನಾರ್ಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ