ಬೆರಳೆಣಿಕೆ ಗ್ರಾಮಗಳಿಗಷ್ಟೆ ರಸ್ತೆ, ಚರಂಡಿ ಸೌಲಭ್ಯ

ವಿಕ ತಂಡ, ಮಂಡ್ಯ
ರಾಜ್ಯ ಮತ್ತು ಕೇಂದ್ರದ ಪ್ರತಿ ಬಜೆಟ್‌ನಲ್ಲಿ ಗ್ರಾಮೀಣಾ ಭಿವೃದ್ಧಿಗೆ ಒಟ್ಟಾರೆ ಬಜೆಟ್‌ನ ಶೇಕಡ ೨೦ರಷ್ಟು ಅನುದಾನ ಮೀಸಲಾಗುತ್ತಲೇ ಬಂದಿದೆ. ಅನುದಾನದ ಹೊಳೆ ಎಲ್ಲಿಗೆ ಹರಿದು ಹೋಗಿದೆ ಎನ್ನುವುದೇ ತಿಳಿಯದಂತಾಗಿದೆ.
ಮಂಡ್ಯ ಜಿಲ್ಲೆಯು ಮೇಲ್ನೋಟಕ್ಕೆ ಸಾಕಷ್ಟು ಅಭಿವೃದ್ಧಿ ಹೊಂದಿರುವ ‘ಶ್ರೀಮಂತ’ ಜಿಲ್ಲೆ. ಆದರೆ, ಡಾಂಬರು ರಸ್ತೆ, ಸುಸಜ್ಜಿತ ಚರಂಡಿ ಸೇರಿದಂತೆ ಮೂಲ ಸೌಲಭ್ಯ ಗಳನ್ನು ಕಂಡಿರುವ ಗ್ರಾಮಗಳು ಇಲ್ಲಿರುವುದು ಬೆರಳೆಣಿಕೆಷ್ಟು ಮಾತ್ರವೇ.
ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ಬಳಿಕವಂತೂ ರಸ್ತೆ ಮತ್ತು ಚರಂಡಿ ಹೆಸರಿನಲ್ಲಿ ಬಿಡುಗಡೆಯಾದ ಅನುದಾನಕ್ಕೆ ಲೆಕ್ಕವೇ ಇಲ್ಲ. ಅಲ್ಲೊಂದಿಲ್ಲೊಂದು ಗ್ರಾಮಗಳು ಸೌಲಭ್ಯ ಹೊಂದಿವೆ. ಶೇಕಡ ೯೫ ಗ್ರಾಮ ಗಳಲ್ಲಿ ಈಗಲೂ ಓಬಿರಾಯನ ಕಾಲದ ಸ್ಥಿತಿಯೇ ಇದೆ.
ಸುವರ್ಣ ಗ್ರಾಮೋದಯ ಯೋಜನೆ ಜಾರಿಗೊಂಡಿ ರುವ ಗ್ರಾಮಗಳಲ್ಲೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಹೀಗಿರುವಾಗ ಯಾವುದೇ ವಿಶೇಷ ಯೋಜನೆಗೆ ಒಳಪಡದ ಗ್ರಾಮಗಳ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಮಳೆಗಾಲದಲ್ಲಿ ಬಹುಪಾಲು ಗ್ರಾಮಗಳ ರಸ್ತೆಗಳಲ್ಲಿ ವಾಹನಗಳ ಸಂಚಾರವಿರಲಿ, ಜನ ಮತ್ತು ಜಾನುವಾರುಗಳೂ ತಿರುಗಾಡದಂಥ ಸ್ಥಿತಿ ಇದೆ. ಚರಂಡಿಗಳು ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಾಗಿ ಜನರನ್ನು ಕಾಡುತ್ತಿವೆ.
ಇಚ್ಛಾಶಕ್ತಿ ಕೊರತೆ: ಹೇಗೆ ಚರಂಡಿ ಮತ್ತು ರಸ್ತೆ ಒಂದ ಕ್ಕೊಂದು ಬೆಸೆದುಕೊಂಡಿರುತ್ತವೆಯೋ ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆ ದಾರರು ಅಂಟಿಕೊಂಡಿರುತ್ತಾರೆ. ಚುಕ್ಕಾಣಿ ಹಿಡಿದವರ ಹಿಂದೆ ಗುತ್ತಿಗೆದಾರರ ಹಿಂಡು ಅಲೆಯುತ್ತಿರುತ್ತದೆ.
ಚುನಾವಣೆ ಗೆಲ್ಲುವಾಗಷ್ಟೇ ಅಭಿವೃದ್ಧಿಯ ಮಂತ್ರ ಜಪಿಸಲಾಗುತ್ತದೆ. ಗೆದ್ದ ಮೇಲೆ ಹಣ ಮಾಡುವ ದಂಧೆಗೆ ಇಳಿಯುತ್ತಾರೆ. ವಿಜಯೋತ್ಸವದ ಮರು ಕ್ಷಣ ದಲ್ಲೇ ಗುತ್ತಿಗೆದಾರರ ಹಿಂಡು ಚುನಾಯಿತ ಪ್ರತಿನಿಧಿಯ ಬೆನ್ನಿಗೆ ನಿಲ್ಲುವುದು ಮಾಮೂಲು.
ಗ್ರಾ.ಪಂ. ಹಂತದ ಚುನಾಯಿತ ಪ್ರತಿನಿಧಿಯಿಂದಿ ಡಿದು ಪಾರ್ಲಿಮೆಂಟ್ ಸದಸ್ಯನವರೆಗೂ ಗುತ್ತಿಗೆದಾರರ ಮಿತ್ರರೇ. ಅದರಲ್ಲೂ ಕೆಲ ಜನಪ್ರತಿನಿಧಿಗಳು ಬೇನಾಮಿ ಹೆಸರಿನಲ್ಲಿ ಸ್ವತಃ ಗುತ್ತಿಗೆ ಕೆಲಸ ನಿರ್ವಹಿಸುತ್ತಿರುವ ಸುದ್ದಿ ಹೊಸದೇನಲ್ಲ. ಯಾವುದೇ ಅನುದಾನ ಬಿಡುಗಡೆ ಯಾದರೆ ಸಾಕು. ಚುನಾಯಿತ ಪ್ರತಿನಿಧಿಗಳು ಯಾವ ಕೆಲಸ ಆಗ ಬೇಕೆನ್ನುವ ಗೋಜಿಗೆ ಹೋಗುವುದೇ ಇಲ್ಲ. ಎಷ್ಟು ಕಮೀಷನ್ ಗಿಟ್ಟಿಸಿಕೊಳ್ಳಬಹುದೆನ್ನುವ ಲೆಕ್ಕಾಚಾರ ದಲ್ಲಿ ಮುಳುಗುತ್ತಾರೆ.
ಅವೈಜ್ಞಾನಿಕ ಕೆಲಸ: ದಾಕ್ಷಿಣ್ಯಕ್ಕೆ ಬಸುರಾದಂತೆ ಎನ್ನುವ ನಾಣ್ಣುಡಿಯಂತೆ ಗ್ರಾಮೀಣ ಪ್ರದೇಶದಲ್ಲಿ ಚುನಾಯಿತ ಪ್ರತಿನಿಧಿಗಳು ನೀತಿ-ನಿಯಮಾವಳಿಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿರುವುದೇ ಹೆಚ್ಚು.
ಬಹುತೇಕ ಗ್ರಾಮಗಳಲ್ಲಿ ರಸ್ತೆಗಳು ಒಂದೇ ವಿಸ್ತೀರ್ಣ ದಲ್ಲಿ ಇರುವುದಿಲ್ಲ. ರಸ್ತೆ ಹೋದಂತೆಲ್ಲಾ ಚರಂಡಿ ಕೂಡಾ ಅಂಕು ಡೊಂಕಾಗಿಯೇ ಸಾಗಬೇಕಿದೆ. ಚುನಾಯಿತ ಪ್ರತಿನಿಧಿ ತನ್ನ ಆಪ್ತೇಷ್ಟರು, ಬಂಧುಗಳ ಅನುಕೂಲಕ್ಕೆ ತಕ್ಕಂತೆಲ್ಲಾ ರಸ್ತೆ, ಚರಂಡಿಯ ದಿಕ್ಕನ್ನೇ ಬದಲಿಸಿರುವ ಪ್ರಕರಣ ಸಾಕಷ್ಟಿವೆ.
ಇಂಥ ತಂಟೆ, ತಕರಾರಿನಿಂದ ಅದೆಷ್ಟೋ ಗ್ರಾಮಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿವೆ. ನಡೆದಿರುವ ಅಷ್ಟಿಷ್ಟು ಕಾಮಗಾರಿಗಳು ವರ್ಷ ತುಂಬುವ ಮುನ್ನವೇ ಅಧ್ವಾನಗೊಳ್ಳುತ್ತಿವೆ. ರಸ್ತೆಗಳ ಆಸ್ಪಾಲ್ಟಿಂಗ್ ಸಮರ್ಪಕ ವಾಗಿರುವುದಿಲ್ಲ. ಹಾಕುವ ಡಾಂಬರು ದಪ್ಪ ನಾಯಿ ನಾಲಗೆಗಿಂತಲೂ ಸಣ್ಣದಾಗಿರುತ್ತದೆ.
ದಂಧೆಕೋರರ ಹಾವಳಿ: ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳು ಹದಗೆಡಲು ಮರಳು ಲೂಟಿಕೋರರೂ ಕಾರಣ. ಜಿಲ್ಲಾ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪೊಲೀಸರ ಉಪಟಳ ಹೆಚ್ಚಿರುವ ಹಿನ್ನೆಲೆಯಲ್ಲಿ ಓವರ್ ಲೋಡ್ ಮರಳು ಲಾರಿಗಳು ಗ್ರಾಮೀಣ ರಸ್ತೆಗಳಲ್ಲಿ ಸಾಗುತ್ತಿವೆ.
ವ್ಯವಸ್ಥೆಯಿನ್ನೂ ಮರೀಚಿಕೆ: ಜಿಲ್ಲೆಯ ೨೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆಯೇ ಇಲ್ಲ. ಚುನಾವಣೆ ಬಂದಾಗ ದಲಿತರ ಅಭ್ಯುದಯದ ಬಗ್ಗೆ ಭರವಸೆಗಳ ಮಹಾಪೂರವನ್ನೇ ಹರಿಸುವ ರಾಜಕಾರಣಿ ಗಳು ಆ ಸಮುದಾಯದ ಕಾಲೋನಿಗಳ ಅಭಿವೃದ್ಧಿಗೆ ಕಿಂಚಿತ್ ಕಾಳಜಿ ವಹಿಸಿಲ್ಲ.
ಈಗಲೂ ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನೇ ಕಾಣದ ಕುಗ್ರಾಮಗಳು ಬಹುಪಾಲು ದಲಿತರೇ ವಾಸಿಸುವ ಗ್ರಾಮಗಳಾಗಿವೆ. ಅದೇ ಸಮುದಾಯದ ಜನಪ್ರತಿನಿಧಿಗಳಿರುವ ಕಡೆಯೂ ಅಭಿವೃದ್ಧಿ ಶೂನ್ಯ.
ಮಂಡ್ಯ
ತಾಲೂಕಿನ ಹೊಳಲು, ಎಚ್.ಕೋಡಿಹಳ್ಳಿ ಸೇರಿದಂತೆ ೪ ಗ್ರಾಮಗಳಲ್ಲಷ್ಟೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಒಂದಿಷ್ಟು ಸಮಾಧಾನಕರವಾಗಿದೆ. ಉಳಿದಂತೆ ಯಾವೊಂದು ಗ್ರಾಮದಲ್ಲೂ ಅಚ್ಚುಕಟ್ಟಾಗಿಲ್ಲ.
ಮಂಡ್ಯ ತಾಲೂಕು ೩ ವಿಧಾನಸಭೆ ಕ್ಷೇತ್ರಗಳಲ್ಲಿ ಹರಿದು ಹಂಚಿ ಹೋಗಿದೆ. ಕ್ಷೇತ್ರ ಮರು ವಿಂಗಡಣೆಗೆ ಮುಂಚೆ ಕೆರಗೋಡು ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದ ಗ್ರಾಮಗಳಲ್ಲಂತೂ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಶೋಚನೀಯವಾಗಿದೆ.
ತಗ್ಗಹಳ್ಳಿ ಜಿ.ಪಂ. ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಒತ್ತಾಯಿಸಿ ಆ ಭಾಗದ ಜನರು ಸಾಕಷ್ಟು ಹೋರಾಟ ನಡೆಸಿದ್ದರೂ ಪ್ರಯೋಜನವಾಗಿಲ್ಲ. ರಸ್ತೆ ಸರಿ ಇಲ್ಲ ಎನ್ನುವ ಕಾರಣಕ್ಕೆ ಈ ಭಾಗದಲ್ಲಿ ಕೆಲ ಬಸ್‌ಗಳ ಸಂಚಾರವೇ ಸ್ಥಗಿತಗೊಂಡಿದೆ.
ಪಾಂಡವಪುರ
೫ ವರ್ಷದಿಂದ ಈಚೆಗೆ ಗ್ರಾಮೀಣ ಪ್ರದೇಶದ ಸಾಕಷ್ಟು ಕಡೆ ಅಭಿವೃದ್ಧಿ ನಾಗಾಲೋಟದಲ್ಲಿ ಸಾಗಿದೆ. ಆದರೆ, ತಾಲೂಕಿನ ಸಮಗ್ರ ಗ್ರಾಮಗಳ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಸಾಧ್ಯವಾಗಿಲ್ಲ.
ಕೆರೆ ತೊಣ್ಣೂರು, ಗೌಡಗೆರೆ, ಸುಂಕಾತೊಣ್ಣೂರು, ಮೂಡಲಕೊಪ್ಪಲು, ಬೆಳ್ಳಾಳೆ, ಸಿಂಗ್ರಿಗೌಡನಕೊಪ್ಪಲು, ಮೂಡಲಕುಪ್ಪೆ, ನುಗ್ಗಹಳ್ಳಿ, ಕುರಹಟ್ಟಿ, ಚೀಕನಹಳ್ಳಿ ಮತ್ತಿತರ ಗ್ರಾಮಗಳು ಮತ್ತು ಸಂಪರ್ಕ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿವೆ.
ಚಲುವರಸನಕೊಪ್ಪಲು, ಹೊಸಹಳ್ಳಿ, ಚಿಕ್ಕಾಡೆ ಗ್ರಾಮದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿ, ಬೇಬಿ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆಯಿಲ್ಲ. ಮಳೆ ಮತ್ತು ಕೊಚ್ಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಮದ್ದೂರಿಗೆ ಶಾಪ: ನಾಲ್ಕೂವರೆ ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ, ಇದೀಗ ಕೇಂದ್ರ ಮಂತ್ರಿಯಾಗಿರುವ ಎಸ್.ಎಂ. ಕೃಷ್ಣ ಅವರ ಹುಟ್ಟೂರು ಸೋಮನಹಳ್ಳಿಯೂ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ಹೇಳ ತೀರದಾಗಿದೆ.
ಸರಕಾರದ ಅನುದಾನದಡಿ ನಡೆದ ರಸ್ತೆ ಮತ್ತು ಚರಂಡಿ ಕೆಲಸಗಳು ಗುತ್ತಿಗೆದಾರರು, ಎಂಜಿನಿಯರ್‌ಗಳು, ಜನಪ್ರತಿನಿಧಿಗಳ ಕಿಸೆ ತುಂಬಿಸುವುದಕ್ಕಷ್ಟೇ ಸೀಮಿತವಾಗಿವೆ. ಮರಳು ಲಾರಿಗಳ ಹಾವಳಿಯಿಂದ ಸಾಕಷ್ಟು ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ.
ಶ್ರೀರಂಗಪಟ್ಟಣ
ತಾಲೂಕಿನ ಕುಗ್ರಾಮಗಳಿರಲಿ, ಪಟ್ಟಣಕ್ಕೆ ಹೊಂದಿ ಕೊಂಡಿರುವ ಗ್ರಾಮಗಳಲ್ಲೇ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿಯಿಲ್ಲ. ಗಂಜಾಂ, ಪಾಲಹಳ್ಳಿ, ಬೆಳಗೊಳ, ಅರಕೆರೆ, ಕೊಡಿಯಾಲ ಸೇರಿದಂತೆ ಪ್ರಮುಖ ಗ್ರಾಮ ಗಳೇ ಅವ್ಯವಸ್ಥೆಯ ಆಗರವಾಗಿವೆ.
ಶ್ರೀರಂಗಪಟ್ಟಣಕ್ಕೆ ೫ ಶಾಸಕರನ್ನು ನೀಡಿದ ಅರಕೆರೆ ಮತ್ತು ಸುತ್ತಮುತ್ತಲ ಗ್ರಾಮಗಳ ರಸ್ತೆಗಳಲ್ಲಿ            ಮುಷ್ಟಿ ಗಾತ್ರದ ಕಲ್ಲುಗಳು ಎದ್ದು ನಿಂತಿವೆ. ರಸ್ತೆಯಲ್ಲೇ ನೀರು ಹರಿಯುವುದು ಈ ತಾಲೂಕಿನವರಿಗೆ ಮಾಮೂಲಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ