ಜಿ.ಪಂ.ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ

ವಿಕ ಸುದ್ದಿಲೋಕ ಮೈಸೂರು
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದ್ದು, ಅಧಿಕೃತ ಅಭ್ಯರ್ಥಿ ವಿರುದ್ಧ ಬಂಡಾಯ ವಾಗಿ ಕಣಕ್ಕಿಳಿದ ಎಸ್.ಎನ್.ಸಿದ್ಧಾರ್ಥ ಅಧ್ಯಕ್ಷರಾಗಿ ಆಯ್ಕೆಯಾದರು.
ಮಂಗಳವಾರ ಜಿಲ್ಲಾ ಪಂಚಾಯಿತಿಯಲ್ಲಿ ಪ್ರಾದೇಶಿಕ ಆಯುಕ್ತರಾದ ಎಂ.ವಿ.ಜಯಂತಿ ಅಧ್ಯಕ್ಷತೆಯಲ್ಲಿ ನಡೆದ ಕೊನೆ ೮ ತಿಂಗಳ ಅವಧಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದ ಬಸವ ರಾಜಪುರ ಸಿದ್ದಪ್ಪ ೧೭ ಮತಗಳನ್ನು ಪಡೆದು ಪರಾಭವಗೊಂಡರೆ, ಜಾ.ದಳ-ಬಿಜೆಪಿ-ಪಕ್ಷೇತರ ಸದಸ್ಯರ ೧೯ ಮತಗಳ ಜತೆಗೆ ಕಾಂಗ್ರೆಸ್‌ನ ಏಳು ಸದಸ್ಯರ ಬೆಂಬಲ ಪಡೆದು ೨೬ ಸದಸ್ಯ ಬಲದೊಂದಿಗೆ ಸಿದ್ಧಾರ್ಥ ಚುನಾಯಿತರಾದರು.
ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಎಚ್.ಸಿ.ಲಕ್ಷ್ಮಣ್ ಅವರ ಪರವಾಗಿ ಯಾವುದೇ ಮತ ಬರಲಿಲ್ಲ. ಸ್ವತಃ ಲಕ್ಷ್ಮಣ್ ಅವರು ಸಿದ್ಧಾರ್ಥ ಅವರ ಪರ ಕೈ ಎತ್ತಿದರು. ಚುನಾವಣೆಗೆ ಬಂದರೂ ಒಬ್ಬ ಸದಸ್ಯ ತಟಸ್ಥರಾಗಿ ಉಳಿದರೆ ಇಬ್ಬರು ಗೈರು ಹಾಜರಾಗಿದ್ದರು.
ಕಾಂಗ್ರೆಸ್ ಹರಸಾಹಸ: ಜಿಲ್ಲಾ ಪಂಚಾಯಿತಿಯ ಕೊನೆಯ ಅವಧಿಯ ಹೊತ್ತಿಗೂ ೩೨ ಸದಸ್ಯರೊಂದಿಗೆ ಬಹುಮತ ಹೊಂದಿದ್ದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನಾಮಪತ್ರ ಸಲ್ಲಿಕೆವರೆಗೂ ಕುತೂಹಲ ಏರ್ಪಟ್ಟಿತ್ತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಡಾ.ಎಚ್.ಸಿ.ಮಹಾದೇವಪ್ಪ ಅವರು ಹತ್ತು ತಿಂಗಳ ಹಿಂದೆ ನೀಡಿದ ಮಾತಿನಂತೆ ಸಿದ್ಧಾರ್ಥ ಪರವಾಗಿದ್ದರೆ, ಮತ್ತೊಬ್ಬ ಶಾಸಕ ವಿ.ಶ್ರೀನಿವಾಸ ಪ್ರಸಾದ್ ಹಾಗೂ ಸಂಸದ ಎಚ್.ವಿಶ್ವನಾಥ್ ಅವರು  ಕೃಷ್ಣರಾಜನಗರ ಭಾಗದ ದಲಿತರಿಗೆ ಅವಕಾಶ ಸಿಗಬೇಕು ಎನ್ನುವ ಪಟ್ಟು ಹಿಡಿದು ಸಿದ್ದಪ್ಪ ಅವರ ಪರವಾಗಿ ನಿಂತರು. ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಅವರು ಪ್ರಸಾದ್ ಹಾಗೂ ವಿಶ್ವನಾಥ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಸಿದ್ದಪ್ಪ ಅವರಿಗೆ ಬೆಂಬಲ ಸೂಚಿಸಿದರು.
ಕಾಂಗ್ರೆಸ್‌ನಲ್ಲಿ ಒಗ್ಗಟ್ಟು ಇಲ್ಲದ್ದನ್ನು ಅರಿತ ಜಾ.ದಳ ಹಾಗೂ ಬಿಜೆಪಿ ಸದಸ್ಯರು ತಮ್ಮ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಗೆದ್ದು ಈಗ ಬಿಜೆಪಿ ಯಲ್ಲಿ ಗುರುತಿಸಿಕೊಂಡಿರುವ ಎಚ್.ಸಿ.ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿ ದರು. ಮಧ್ಯಾಹ್ನ ೧ರವರೆಗೆ ನಾಮಪತ್ರ ವಾಪಸಿಗೆ ಅವಕಾಶವಿದ್ದರೂ ಕಾಂಗ್ರೆಸ್ ತನ್ನ ಅಭ್ಯರ್ಥಿ ಯನ್ನು ಬದಲಿಸುವ ನಿರ್ಧಾರ ಕೈಗೊಂಡಿದ್ದ ರಿಂದ ಸಿದ್ಧಾರ್ಥ ಹಾಗೂ ಲಕ್ಷ್ಮಣ್ ಕಣದಲ್ಲಿ ಉಳಿದರು. ಮಧ್ಯಾಹ್ನ ಮೂರಕ್ಕೆ ಚುನಾವಣೆ ನಡೆದಾಗ ಸಿದ್ದಪ್ಪ ಅವರ ಪರವಾಗಿ ೧೭ ಮತಗಳು ಬಂದವು. ಆನಂತರ ಸಿದ್ಧಾರ್ಥ  ಅವರ ಪರವಾಗಿ ೨೬ ಸದಸ್ಯರು ಕೈ  ಎತ್ತಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಲಕ್ಷ್ಮಣ್ ಅವರೂ ಸಿದ್ದಾರ್ಥ ಅವರಿಗೆ ಬೆಂಬಲ ಸೂಚಿಸಿದರು. ಇದರಿಂದ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಸದಸ್ಯರು ಹೊರ ನಡೆದರೆ, ಬಂಡಾಯ ವಾಗಿಯೇ ಕಣಕ್ಕಿಳಿದ ಸಿದ್ಧಾರ್ಥ ಗೆಲುವಿನ ನಗೆ ಬೀರಿದರು. ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಸಿದ್ಧಾರ್ಥ ಅವರ ಗೆಲುವನ್ನು ಪ್ರಕಟಿಸಿದರು.
ಸಿದ್ದು, ಮಹಾದೇವಪ್ಪ ಕೃಪಾಕಟಾಕ್ಷ: ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರ ಆಶೀರ್ವಾದದಿಂದಲೇ ಅಧ್ಯಕ್ಷನಾಗಿದ್ದೇನೆ.
ಇದು ಜಿಲ್ಲಾಪಂಚಾಯಿತಿ ನೂತನ ಅಧ್ಯಕ್ಷ ಸಿದ್ಧಾರ್ಥ ಅವರ ಪ್ರತಿಕ್ರಿಯೆ.
ನಿನಗೆ ಅಧ್ಯಕ್ಷ ಸ್ಥಾನದ ಅವಕಾಶ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಅವರಿಬ್ಬರೂ ಹೇಳಿದ್ದರು. ಅವರ ಆಶೀರ್ವಾದ ಹಾಗೂ ಬಹುತೇಕ ಸದಸ್ಯರ ಬೆಂಬಲದಿಂದಲೇ ಅಧ್ಯಕ್ಷನಾದೆ ಎಂದು ಹೇಳಿದರು.
ಒಗ್ಗಟ್ಟಿನಿಂದ ನಾನು ಆಯ್ಕೆಯಾಗುತ್ತೇನೆ ಎಂದು ನಿರೀಕ್ಷಿಸಿದ್ದೆ. ಜತೆಗೆ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗುತ್ತೇನೆ ಎಂದುಕೊಂಡಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಇನ್ನು ಮುಂದೆ ಒಗ್ಗಟ್ಟಿನಿಂದಲೇ ಸದಸ್ಯರನ್ನು ಕೊಂಡೊಯ್ದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ