ಬಿಳಿಗಿರಿರಂಗನಬೆಟ್ಟ : ರಾಜಗೋಪುರ ನಿರ್ಮಾಣ ಇನ್ನೂ ಕನಸು


ಡಿ. ಪಿ. ಶಂಕರ್ ಯಳಂದೂರು ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನಬೆಟ್ಟದ ದೇವಾಲಯಕ್ಕೆ ರಾಜಗೋಪುರ ನಿರ್ಮಿಸುವ ಯೋಜನೆ ಇನ್ನೂ ಕೈಗೂಡೇ ಇಲ್ಲ. ಶಂಕುಸ್ಥಾಪನೆ ನೆರವೇರಿಸಿ ೩ ವರ್ಷ ಕಳೆದರೂ ಕಾಮಗಾರಿಯ ಸದ್ದೇ ಇಲ್ಲ.
ಚಂಪಕಾರಣ್ಯವೆಂದೇ ಖ್ಯಾತಿ ಪಡೆದ ಬಿಳಿಗಿರಿ ರಂಗನಬೆಟ್ಟದಲ್ಲಿ ರಂಗನಾಥಸ್ವಾಮಿಯ ದೇವಾಲಯ ವಿದ್ದು, ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ದೇವಾಲಯ ವನ್ನು ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಯಾರೂ ಕೈ ಹಾಕಿಲ್ಲ. ಹೋಗಲಿ ಪ್ರವಾಸಿ ತಾಣದಲ್ಲಿರುವ ಈ ಪುರಾಣ ಪ್ರಸಿದ್ಧ ದೇವಾಲಯದ ಪ್ರವೇಶ ದ್ವಾರದಲ್ಲಿ ರಾಜಗೋಪುರ ನಿರ್ಮಿಸಬೇಕು ಎಂಬ ಭಕ್ತರ ಕನಸು ಇನ್ನೂ ನನಸಾಗಿಲ್ಲ.
ಶಂಕುಸ್ಥಾಪನೆ ನೆರವೇರಿದೆ: ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ದೇವಾಲಯಕ್ಕೆ ರಾಜಗೋಪುರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇದಾಗಿ ೩ ವರ್ಷ ಕಳೆದರೂ ರಾಜಗೋಪುರದ ಬಗ್ಗೆ ಯಾರೂ ಮಾತೇ ಆಡುತ್ತಿಲ್ಲ.
ಆರಂಭದಲ್ಲಿ ಗೋಪುರಕ್ಕೆ ಸರಕಾರದಿಂದಲೇ ೩೪ ಲಕ್ಷ ರೂ. ಮಂಜೂರಾಗಿತ್ತು. ಅಲ್ಲದೆ ಭಕ್ತರಿಂದ ದೇಣಿಗೆ ಸಂಗ್ರಹಿಸುವ ಸಲುವಾಗಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಸುಮಾರು ೨.೨೫ ಕೋಟಿ ರೂ. ವೆಚ್ಚದಲ್ಲಿ ಸುಂದರ ಹಾಗೂ ಬೃಹತ್ ರಾಜಗೋಪುರ ನಿರ್ಮಿಸಬೇಕು ಎಂಬುದು ಅಂದಿನ ಯೋಜನೆಯಾಗಿತ್ತು.
ಹೀಗಾಗಿ ಭಕ್ತರು ಸಹ ಲಕ್ಷಾಂತರ ರೂ. ದೇಣಿಗೆ ನೀಡಿದ್ದಾರೆ. ಬೆಂಗಳೂರಿನ ಉದ್ಯಮಿ ಸುರೇಂದ್ರ ನಾಥ್‌ಸಿಂಗ್ ಎಂಬುವವರು ೫೯ ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಅವರು ದೇಣಿಗೆ ನೀಡಿಯೇ ೨ ವರ್ಷ ಗಳಾಗಿವೆ. ಅಲ್ಲದೆ ಇನ್ನೂ ಸಾಕಷ್ಟು ಭಕ್ತರು ಹಾಗೂ ಸರಕಾರದ ಹಣ ಸೇರಿ ಒಟ್ಟು ೧.೨೫ ಕೋಟಿ ರೂ. ಸಂಗ್ರಹವಾಗಿದೆ. ಆದರೂ ಗೋಪುರ ನಿರ್ಮಾಣ ಕಾರ್ಯವನ್ನು ಆರಂಭಿಸಲು ಯಾರಿಗೂ ಮನಸ್ಸಿಲ್ಲ.
ಇದಕ್ಕೆ ಶಂಕುಸ್ಥಾಪನೆ ನೆರವೇರಿಸುವ ಸಂದರ್ಭ ಎಸ್. ಬಾಲರಾಜು ಶಾಸಕರಾಗಿದ್ದರು. ನಂತರ ಆರ್. ಧ್ರುವನಾರಾಯಣ್. ಇದೀಗ ಜಿ.ಎನ್.ನಂಜುಂಡಸ್ವಾಮಿ ಶಾಸಕರಾಗಿದ್ದಾರೆ. ಮೂರು ಮಂದಿ ಶಾಸಕರನ್ನು ಕಂಡರೂ ದೇವಾಲಯದ ಗೋಪುರ ನಿರ್ಮಾಣದ ಕನಸು ಮಾತ್ರ ಈಡೇರಲಿಲ್ಲ.
ಬೆಟ್ಟದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯುತ್ತದೆ. ಆ ವೇಳೆಯಲ್ಲಿ ರಾಜಗೋಪುರದ ವಿಚಾರ ಪ್ರಸ್ತಾಪವಾಗುತ್ತಲೇ ಇರುತ್ತದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಿ ಬಿಡುವ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.
ಜಾತ್ರೆ ಮುಗಿದ ಮೇಲೆ ಆ ವಿಚಾರದ ಕುರಿತು ಯಾರೂ ಚಕಾರ ಎತ್ತುವುದಿಲ್ಲ. ಹೀಗಾಗಿ ಪುರಾಣ ಪ್ರಸಿದ್ಧ ದೇವಾಲಯ ಪಾಳು ಪಾಳಾಗಿ ಕಾಣುತ್ತಿದೆ. ರಾಜಗೋಪುರ ನಿರ್ಮಾಣಗೊಂಡರೆ ದೇವಾಲಯಕ್ಕೆ ಒಂದು ಕಳೆ ಬರುತ್ತದೆ ಎಂಬುದು ಭಕ್ತರ ಅನಿಸಿಕೆ. ಗೋಪುರ ನಿರ್ಮಿಸಬೇಕು ಎಂಬುದು ಸಾಕಷ್ಟು ಭಕ್ತರ ಆಸೆಯೂ ಕೂಡ.
ಸಂಬಂಧಿಸಿದವರು ಆದಷ್ಟು ಶೀಘ್ರ ಭಕ್ತರ ಕನಸನ್ನು ನನಸು ಮಾಡಲಿ ಎಂಬುದು ಎಲ್ಲರ ಆಗ್ರಹ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ