ಲಾಟರಿ ಜಾಕ್‌ಪಾಟ್, ವೋಟಿನ ಜತೆಗೆ ನೋಟು, ಗೊರಕೆ ಹೊಡೆದ ಅಭ್ಯರ್ಥಿ !

ಮೈಸೂರು
೩ ಬಾರಿ ಲಘು ಲಾಠಿ ಏಟು
ಗೆಲುವಿನ ಖುಷಿ ಅನುಭವಿಸಲು ಬಂದವರು, ಪೊಲೀಸರ ಬೆತ್ತದ ರುಚಿ ನೋಡಬೇಕಾಯಿತು.
ನಗರದ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕೇಂದ್ರದಲ್ಲಿ ಮಿತಿಮೀರಿ ಜಮಾಯಿಸಿದ್ದವರನ್ನು ಚದುರಿಸಲು ಪೊಲೀಸರು ಮೂರು ಬಾರಿ ಲಘುಲಾಠಿ ಪ್ರಹಾರ ನಡೆಸಬೇಕಾಯಿತು. ಇದರಿಂದ ಮೊದಲೇ ಪರಾಜಿತಗೊಂಡು ಕ್ರೋಧಗೊಂಡಿದ್ದ ವೆಂಕಟಲಕ್ಷ್ಮಿಸೇರಿದಂತೆ ಐದು ಮಂದಿಗೆ ಸಣ್ಣಪುಟ್ಟ ಪೆಟ್ಟಾಗಿದ್ದರಿಂದ ತಮ್ಮ ಆಕ್ರೋಶವನ್ನೆಲ್ಲಾ ಪೊಲೀಸರ ಮೇಲೆ ಪ್ರದರ್ಶಿಸಿದರು. ಬಳಿಕ ಅಕ್ಕ-ಪಕ್ಕ ನೆರೆದಿದ್ದವರು ಸಮಾಧಾನ ಪಡಿಸಿ ಕಳುಹಿಸಿದರು.
ಬೆಳಗ್ಗೆಯಿಂದಲೇ ಎಣಿಕೆ ಕೇಂದ್ರದ ಸುತ್ತ ಅಭ್ಯರ್ಥಿಗಳು, ಅವರ ಬೆಂಬಲಿಗರ ಜತೆಗೆ ವಿವಿಧ ಪಕ್ಷದ ಕಾರ‍್ಯಕರ್ತರು ಜಮಾ ಯಿಸಿದ್ದರು. ಮುಂಚಿತವಾಗಿ ಪಾಸ್‌ಹೊಂದಿದ್ದವರನ್ನು ಮಾತ್ರ ಒಳಗೆ ಬಿಡುತ್ತಿದ್ದರಿಂದ ಕಾಲೇಜಿನ ಎದುರು ಉಳಿದವರು ಫಲಿ ತಾಂಶಕ್ಕಾಗಿ ಕಾಯುತ್ತಾ ನಿಂತಿದ್ದರು. ಕೆಲವು ಸಮಯದ  ನಂತರ ಪೊಲೀಸರು ನಿರ್ಮಿಸಿದ್ದ ತಡೆಗೋಡೆಯನ್ನು ಉಲ್ಲಂಘಿಸಿ ಒಳಗೆ ನುಗ್ಗಲು ಯತ್ನಿಸಿದಾಗ ಜನರನ್ನು ನಿಯಂತ್ರಿಸಲು ಲಘುಲಾಠಿ ಪ್ರಹಾರ ನಡೆಸಿದರು. ಇದು ಆಗಾಗ್ಗೆ ಪುನರಾರ್ವತನೆಗೊಳ್ಳುತ್ತಿತ್ತು.
ಅಂಚೆ  ಮತ, ಲಾಟರಿ ಅದೃಷ್ಟ
ಇಬ್ಬರು ಲಾಟರಿ ಮೂಲಕದ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡರೆ ಮತ್ತೊಬ್ಬರಿಗೆ ಗೆಲುವು ತಂದಿದ್ದು ಅಂಚೆ ಮತ.
ಇಲವಾಲದ ಬಿ.ರೇಖಾ ಅವರಿಗೆ ಅಂಚೆ ಮೂಲಕ ಒಂದು ಮತದಿಂದ ವಿಜಯಲಕ್ಷ್ಮಿ ಒಲಿದಳು.
ಗ್ರಾಮ ಪಂಚಾಯಿತಿ ಎರಡನೇ ಬ್ಲಾಕ್‌ನಿಂದ ಸ್ಪರ್ಧಿಸಿದ್ದ ಬಿ.ರೇಖಾ ಹಾಗೂ ಇವರ ಪ್ರತಿಸ್ಪರ್ಧಿ ತಾರಾಮಣಿ ಅವರಿಗೆ ಚಲಾವಣೆಗೊಂಡು ಎಣಿಕೆ ಕಾಲಕ್ಕೆ ತಲಾ ೧೯೩ ಮತಗಳು ಬಂದು ಸಮಬಲ ಸಾಧಿಸಿದವು. ಈ ಸಮಯದಲ್ಲಿ ಅಂಚೆ ಮೂಲಕ ಮೂರು ಮತಗಳು ಚಲಾವಣೆಗೊಂಡಿದ್ದವು. ಇವುಗಳನ್ನು ಒಡೆದು ಎಣಿಕೆ ಮಾಡಿದಾಗ ರೇಖಾ ಅವರಿಗೆ ಎರಡು ಮತ ಹಾಗೂ ತಾರಾಮಣಿ ಅವರಿಗೆ ಒಂದು ಮತ ಬಂದಿದ್ದರಿಂದ ರೇಖಾ ಅವರು ಒಂದು ಮತದ ಅಂತರದಿಂದ ಗೆಲುವು ಕಂಡರು.
ಇದೇ ರೀತಿ ಬೋಗಾದಿಯ ಪುಟ್ಟೆಗೌಡ ಅವರು ಕಣ್ಣೇಗೌಡ ಅವರೊಂದಿಗೆ ಪಡೆದ ಮತಗಳು ೮೩೦. ಇವರಲ್ಲದೇ ಬೆಳವಾಡಿಯ ಮಹಾದೇವ ಅವರು ೪೩೦ ಮತ ಪಡೆದಿದ್ದರು. ಆಗ ಲಾಟರಿ ಮೂಲಕ ಜಯ ನಿರ್ಧರಿಸಲಾಯಿತು. ಪುಟ್ಟೇಗೌಡ, ಮಹಾದೇವ ಅವರು ಲಾಟರಿಯಿಂದ ಗೆದ್ದರು.
ಅಸಮಾಧಾನ
ಅಂಚೆ ಮತದ ಮೂಲಕ ಒಂದು ಮತದಿಂದ ಸೋಲುಂಡ ತಾರಾಮಣಿ, ಮರು ಎಣಿಕೆ ನಡೆಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಆದರೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದಿದ್ದರಿಂದ ತಾರಾಮಣಿ ಅಸಮಾಧಾನದಿಂದಲೇ ಗೊಣಗುತ್ತಾ ಎಣಿಕೆ ಕೇಂದ್ರದಿಂದ ಹೊರ ನಡೆದರು. ದೂರ ಗ್ರಾಮ ಪಂಚಾಯಿತಿಯಿಂದ ಸ್ಪರ್ಧಿಸಿದ್ದ ಎಂ.ಕುಮಾರ್ ಎಂಬುವವರು  ತನ್ನ ವಿಕಲಚೇತನದ ನಡುವೆಯೂ ಸತತ ಎರಡನೇ ಸಾರಿ ಜಯಗಳಿಸಿದರು.
ಸಿಬ್ಬಂದಿ ಹರತಾಳ
ಊಟದ ವ್ಯವಸ್ಥೆ ಮಾಡಲಿಲ್ಲ ಎಂದು ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದೂ ನಡೆಯಿತು. ೯ರ ಹೊತ್ತಿಗೆ ಊಟ ಬಂದಾಗ ಸಿಬ್ಬಂದಿ ಅಲ್ಲಿಗೆ ಆಗಮಿಸಿದರು. ಅಷ್ಟು ಹೊತ್ತಿಗೆ ಮಳೆ ಬಂದಿದ್ದರಿಂದ ಒಳಗಡೆ ಇದ್ದ ಅಭ್ಯರ್ಥಿಗಳ ಕಡೆಯವರು ಊಟ ಮುಗಿಸಿದರು. ಸಿಬ್ಬಂದಿಗೆ ಊಟ ಸಿಗಲೇ ಇಲ್ಲ. ಇದರಿಂದ ಬೇಸರಗೊಂಡ ಸಿಬ್ಬಂದಿ ಪ್ರತಿಭಟನೆಯನ್ನು ನಡೆಸಿದರು. ಆಗ ತಹಸಿಲ್ದಾರ್ ಮಂಜುನಾಥ್ ಮನ ಒಲಿಸಲು ಹರಸಾಹಸ ಪಡಬೇಕಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ