ದೃಷ್ಟಿ ಇಲ್ಲ; ಆದರೆ ಓದುವ ಛಲವಿತ್ತು !

ಕುಂದೂರು ಉಮೇಶಭಟ್ಟ ಮೈಸೂರು  
ಮೈಸೂರಿನ ಈ ಶಾಲೆಗೆ ಶೇ.೧೦೦ರಷ್ಟು ಫಲಿತಾಂಶ. ಅದೂ ಸತತ ೧೫ನೇ ವರ್ಷವೂ ಎಲ್ಲರೂ ಉತ್ತೀರ್ಣರಾದ ಸಂಭ್ರಮ.
ಇದರಲ್ಲೇನು ವಿಶೇಷ ಎಂದಿರಾ? ಶೇ.೧೦೦ರ ಫಲಿತಾಂಶ ಪಡೆದಿರುವುದು ದೃಷ್ಟಿ ವಿಕಲಚೇತನರಿಗೆಂದೇ ಸರಕಾರ ನಡೆಸುತ್ತಿರುವ ಅಂಧರ ಸರಕಾರಿ ಶಾಲೆ.
ಗುರುವಾರ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಿ ವಿದ್ಯಾರ್ಥಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ರಜೆಗೆಂದು ಊರಿಗೆ ಹೋಗಿದ್ದ ಕೆಲವರು ಫಲಿತಾಂಶಕ್ಕಾಗಿಯೇ ಶಾಲೆಗೆ ಬಂದಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಿರ್ಣರಾಗಿದ್ದಕ್ಕೆ ಏನನ್ನೋ ಜಯಿಸಿದ ಉತ್ಸಾಹ. ಶಿಕ್ಷಕರಲ್ಲೂ ಇಂಥದ್ದೇ ಭಾವನೆ. ಶತಮಾನದ ಇತಿಹಾಸದ ಶಾಲೆಯಲ್ಲಿ ಸತತ ೧೫ ವರ್ಷದಿಂದ ಶೇ.೧೦೦ರ ಫಲಿತಾಂಶ ಬರುತ್ತಿರುವುದಕ್ಕೆ ಹೆಮ್ಮೆಯ ಭಾವ.
ಖುಷಿಯೋ ಖುಷಿ: ಪರೀಕ್ಷೆಗೆ ಹಾಜರಾಗಿದ್ದ ೧೩ ವಿದ್ಯಾರ್ಥಿಗಳಲ್ಲಿ ೪ ಮಂದಿ ಪ್ರಥಮ ದರ್ಜೆ, ೮ ಮಂದಿ ದ್ವಿತೀಯ ದರ್ಜೆ ಹಾಗೂ ಒಬ್ಬನಿಗೆ ತೃತೀಯ ಶ್ರೇಣಿ.
ಮೈಸೂರು ಕಲ್ಯಾಣಗಿರಿಯ ಜಬೀವುಲ್ಲಾ ೪೬೦ ಅಂಕಗಳೊಂದಿಗೆ ಸ್ಕೂಲಿಗೆ ಮೊದಲಿಗ. ೮ನೇ ತರಗತಿಯಿಂದ ಇಲ್ಲೇ ಕಲಿತ ಆತ ಹೆಚ್ಚು ಅಂಕ ಪಡೆಯುವ ನಿರೀಕ್ಷೆ ಶಾಲೆಯವ ರಲ್ಲೂ ಇತ್ತು. ನಂತರದ ಸ್ಥಾನ ಪಡೆದವರು ಹಾಸನದ ಶಿವಣ್ಣ. ಈತನ ಅಂಕ ೪೪೩. ನಂತರದ ಸ್ಥಾನ ಹಾಸನ ಜಿಲ್ಲೆ ನಿಡುವಾಗಿಲು ಕೊಪ್ಪಲು ಗ್ರಾಮದ ವಿಜಯ್‌ಗೆ. ೪೦೩ ಅಂಕಗಳನ್ನು ಪಡೆದ ವಿಜಯ್‌ಗೆ ಇನ್ನಷ್ಟು ಅಂಕಗಳ ನಿರೀಕ್ಷೆಯಿತ್ತು. ಆದರೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿದ್ದಕ್ಕೆ ಖುಷಿಯಾಗಿದೆ. ನಂಜನಗೂಡು ತಾಲೂಕು ನಂದಿಗುಂದಪುರದ ರವಿಗೆ ೩೫೯ ಅಂಕಗಳಿಸಿದ್ದಕ್ಕೆ ಸಂತಸವಾಗಿದೆ.
‘ಈ ವರ್ಷದಿಂದ ನಮಗಿಂತ ಕೆಳ ವಯಸ್ಸಿ ನವರು ನಮಗೆ ಪರೀಕ್ಷೆ ಬರೆಯಲು ಸಹಕರಿಸುವ ಆದೇಶವನ್ನು ಹೊರಡಿಸಲಾಗಿದೆ. ಇದರಿಂದ ಅಂಕ ಕಡಿಮೆಯಾಗಿವೆ. ಈ ಹಿಂದೆಯಂತೆ ಹಿರಿಯರನ್ನೇ ಪರೀಕ್ಷೆ ಬರೆಯಲು ಕೊಟ್ಟರೆ ಉತ್ತಮ. ಮುಂದೆ ಡಿಪ್ಲೊಮಾ ಮುಗಿಸಿ ಎಂಜಿನಿಯರ್ ಆಗಬೇಕು’ ಎನ್ನುತ್ತಾನೆ ವಿಜಯ್.
೧೯೯೬ರಿಂದಲೂ ನಮ್ಮ ಶಾಲೆಗೆ ಶೇ.೧೦೦ರ ಫಲಿತಾಂಶ ಬರುತ್ತಿದೆ. ಹಿಂದೆಯೂ ಉತ್ತಮ ಫಲಿತಾಂಶ ಪಡೆದು ಜೀವನ ರೂಪಿಸಿಕೊಂಡಿ ದ್ದಾರೆ. ನಮ್ಮದು ಹೆಮ್ಮೆಯ ಶಾಲೆಯೇ  ಎನ್ನು ವುದು ಶಿಕ್ಷಕ ನೆಲೆಮನೆ ಶಬ್ಬೀರ್ ಸಂತಸದ ನುಡಿ.
ವಿಸ್ತರಣೆ ಯೋಜನೆ: ಮೈಸೂರು ಮಹಾ ರಾಜರ ಕಾಲದಲ್ಲಿ ದೃಷ್ಟಿ ವಿಕಲಚೇತನರಿಗೆಂದೇ ಈ ಶಾಲೆ ಆರಂಭವಾಯಿತು. ೧೯೦೧ರಲ್ಲಿ ಆರಂಭ ಗೊಂಡರೂ ೧೯೩೩ರಲ್ಲಿ ಸುಸಜ್ಜಿತ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ೧ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ. ಇತ್ತೀಚಿನ ವರ್ಷಗಳಲ್ಲಿ ಸರಕಾರವೇ ಹುಬ್ಬಳ್ಳಿ. ಗುಲ್ಬರ್ಗಾ, ದಾವಣಗೆರೆಯಲ್ಲಿ ಅಂಧರ ಶಾಲೆಗಳನ್ನು ತೆರೆದಿದೆ. ಅಲ್ಲಿ ಪ್ರೌಢಶಾಲೆಯಿಲ್ಲ. ಜತೆಗೆ ಖಾಸಗಿ ಸಂಸ್ಥೆಗಳೂ ಶಾಲೆ ಆರಂಭಿಸಿದ್ದರಿಂದ ಇಲ್ಲಿಗೆ ಬರುತ್ತಿದ್ದವರ ಸಂಖ್ಯೆ ಕಡಿಮೆಯಾಗಿದೆ.
ಪ್ರಸ್ತುತ ೬೨ ಮಂದಿ ಕಲಿಯುತ್ತಿದ್ದಾರೆ. ಇಲ್ಲಿ ೧೨೫ ವಿದ್ಯಾರ್ಥಿಗಳವರೆಗೆ ಅವಕಾಶವಿದೆ. ಶಿಕ್ಷಕರೂ ಸಾಕಷ್ಟಿಲ್ಲ. ಈ ವರ್ಷ ದೃಷ್ಟಿಹೀನ ವಿಕಲಚೇತನರ ಸಂಖ್ಯೆ ಹೆಚ್ಚಳಕ್ಕೆ ಸಮೀಕ್ಷೆ ನಡೆಸಿ ಪ್ರಚಾರವನ್ನೂ ನಡೆಸಲಾಗುತ್ತಿದೆ ಎನ್ನುತ್ತಾರೆ ಶಾಲೆ ಅಧೀಕ್ಷಕಿ ಟಿ.ಎಸ್.ಅರುಂಧತಿ.
ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ ಫಲಿತಾಂಶದ ಪ್ರಮಾಣ ಮಾತ್ರ ಕುಸಿದಿಲ್ಲ. ಇದು ಸಾಮಾನ್ಯ ಶಾಲೆಯ ಮಕ್ಕಳ ಕಣ್ಣು ತೆರೆಸುವ ಸಾಧನೆ. ವಿವರಗಳಿಗೆ ಶಾಲೆಯ ಅಧೀಕ್ಷಕರ ದೂರವಾಣಿ ಸಂಖ್ಯೆ-೯೬೬೩೫೬೭೪೧೮

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ