ಸವಲತ್ತಿಲ್ಲ, ಮತದಾನ ಮಾತ್ರ ತಪ್ಪಿಸಿಲ್ಲ


ವಿಕ ಸುದ್ದಿಲೋಕ ಕೃಷ್ಣರಾಜನಗರ
ಎಷ್ಟೋ ಅಧಿಕಾರಿಗಳಿಗೆ  ಸೋಮನಹಳ್ಳಿ ಎಂಬ ಗ್ರಾಮ ತಾಲೂಕಿ ನಲ್ಲಿ ಇದೆ ಎಂಬುದೇ ಗೊತ್ತಿಲ್ಲ ಎಂದರೂ ಆಶ್ವರ್ಯವಿಲ್ಲ , ಗ್ರಾಮದ ಜನತೆ ಇಂದಿಗೂ ಬಸ್ ಹತ್ತಬೇಕಾದರೆ ೨ರಿಂದ ೩ ಕಿ.ಮೀ. ನಡೆದೇ ಹೋಗಬೇಕು.
ಖಾಸಗಿ ಕಂಪನಿಯಿಂದಾಗಿ ಗ್ರಾಮದ ಜನತೆ ವ್ಯವಸಾಯದಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿರುವುದು ಹೊರತುಪಡಿಸಿದರೆ  ಮೂಲ ಸವಲತ್ತುಗಳು ಮಾತ್ರ ಈ ಗ್ರಾಮದಿಂದ ಬಲು ದೂರ.
ಈ ಗ್ರಾಮದಲ್ಲಿ  ಸಮರ್ಪಕ ವಿದ್ಯುತ್, ಕುಡಿಯುವ ನೀರು, ಚರಂಡಿ, ರಸ್ತೆ, ಶೌಚಾಲಯ, ಇಲ್ಲದಾಗಿದೆ.  ಪ್ರತಿಯೊಂದಕ್ಕೂ ದೂರದ ಭೇರ್ಯ, ಇಲ್ಲವೆ ಕೃಷ್ಣರಾಜನಗರ ತಾಲೂಕು ಕೇಂದ್ರ ವನ್ನೇ ಅವಲಂಬಿಸಬೇಕಾಗಿದೆ.  ಇಂದಿಗೂ ಯಾವುದೇ ಸವಲತ್ತು ಬಯಸದ ಇಲ್ಲಿಯ ಜನ ಪ್ರತಿ ಚುನಾವಣೆಯಲ್ಲಿ ಮತ ಚಲಾಯಿಸುತ್ತಾ ಬಂದಿದ್ದಾರೆ.
ತಾ. ಕೇಂದ್ರದಿಂದ ಸುಮಾರು ೨೩ ಕಿ.ಮೀ.ನಲ್ಲಿರುವ ಸೋಮನ ಹಳ್ಳಿಯ ಜನ ಹೊರಜಗತ್ತಿನ ಐಷಾರಾಮಿ ಜೀವನ ತಿಳಿದವರಲ್ಲ.  ಗ್ರಾಮದಲ್ಲಿ ೩೦೦ ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ರಸ್ತೆಗಳು ಹಾಗೂ ಚರಂಡಿಗಳು ಯಾವುದು ಎಂಬುದು ತಿಳಿಯದಾಗಿದೆ. ಸರಕಾರಿ ಬಸ್ ಕಾಣದ ಇಲ್ಲಿನ ಜನ ಸಾಕಷ್ಟು  ವಿದ್ಯೆ ಪಡೆಯದಿದ್ದರೂ, ಧ್ವನಿ ಯಿಲ್ಲದೇ ಪ್ರಶ್ನಿಸಲಾಗದೇ, ಬಾಯಿಮುಚ್ಚಿ ಮತ ಚಲಾಯಿಸುತ್ತಿದ್ದಾರೆ.
ಸಮರ್ಪಕ ರಸ್ತೆಯಿಲ್ಲದೆ  ಶೌಚಾಲಯವಿಲ್ಲದ  ಇಲ್ಲಿ ಅಂಗನ ವಾಡಿ, ೫ನೇ ತರಗತಿವರೆಗಿನ  ಶಾಲೆ ಹಾಗೂ ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯೇ ಇವರ ಪಾಲಿಗೆ ಗತಿಯಾಗಿದೆ. ಚರಂಡಿಯಿಲ್ಲದ ಈ ಗ್ರಾಮದಲ್ಲಿ ಎಲ್ಲೆಂದರಲ್ಲಿ  ಚರಂಡಿ ನೀರು ನಿಂತಿದ್ದು, ಅನಾ ರೋಗ್ಯಕ್ಕೆ ಕಾರಣವಾಗಿದೆ . ಬೋರ್‌ವೆಲ್‌ನಿಂದ ಸೋಮನಹಳ್ಳಿ ಮತ್ತು ಪಕ್ಕದ ಗೇರುದಡ ಗ್ರಾಮಕ್ಕೆ ಕುಡಿಯುವನೀರು ಒದಗಿಸ ಲಾಗುತ್ತಿದ್ದು  ವಿದ್ಯುತ್ ಇದ್ದರೆ ಮಾತ್ರ ಇವರ ಪಾಲಿಗೆ ನೀರು ಲಭ್ಯ. ಇಲ್ಲವಾದಲ್ಲಿ  ಬೇರೆಡೆಗೆ ನೀರಿಗಾಗಿ ಅಲೆಯುವಂತಾಗಿದೆ.    
ಗ್ರಾಮದ ವಾಸಿಗಳಾದ ಪುಟ್ಟಸ್ವಾಮಯ್ಯ ಮತ್ತು ಕುಳ್ಳಯ್ಯ ಅವರನ್ನು ಪತ್ರಿಕೆಯು ಮಾತನಾಡಿಸಿದಾಗ “ಗ್ರಾಮದ ಸೌಕರ್ಯದ ಬಗ್ಗೆ ನಮಗೆ ತಿಳಿಯದು ಸಾರ್, ಎಲೆಕ್ಷನ್ ಬಂದೈತೆ ಓಟ್ ಹಾಕ್‌ಬೇಕು, ಹಾಕ್‌ತೀವಿ ಅಷ್ಟೇ" ಎಂದು ನಿರುತ್ಸಾಹ ವ್ಯಕ್ತಪಡಿಸುತ್ತಾರೆ. ಇವರು ಚುನಾವಣೆ ಬಗ್ಗೆ ಅಂಥ ಕುತೂಹಲವೇನೂ ಇಟ್ಟುಕೊಂಡಂತಿಲ್ಲ.
ಭೇರ್ಯ ಜಿ.ಪಂ. ತಾ.ಪಂ.ಕ್ಷೇತ್ರ ಹಾಗೂ ಗ್ರಾ.ಪಂ.ಗೆ ಸೇರಿರುವ ಈ ಗ್ರಾಮವು ಭೇರ್ಯದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಈ ಗ್ರಾಮದ ನಿವಾಸಿಗಳು ತಮಗಾಗಿ ಏನನ್ನೂ ಪಡೆಯದಿದ್ರೂ ಚುನಾವಣೆಯಲ್ಲಿ ಮಾತ್ರ ಮತ ಚಲಾಯಿಸುವುದನ್ನು ಮರೆಯುವುದಿಲ್ಲ.
ಇಲ್ಲದ ರಸ್ತೆಯ ನಡುವೆ ಇಂದಿಗೂ ಕೆಲವರು ಗುಡಿಸಲುಗಳಲ್ಲಿ ವಾಸಮಾಡುವ, ಈ ಗ್ರಾಮದಲ್ಲಿ ವ್ಯವಸಾಯ ಮತು  ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿರುವ ಜನತೆಯ ಕೂಗು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಕೇಳದಾಗಿದೆ. ಹಿಂದುಳಿದ ಪರಿಶಿಷ್ಟ ಜಾತಿಯವರೇ ವಾಸಿಸುವ ಈ ಗ್ರಾಮದವರು ಇಂದಿನವರೆಗೆ ಇತಿಹಾಸದಲ್ಲಿ ಗ್ರಾ.ಪ. ಸದಸ್ಯರಾದ ಉದಾಹರಣೆ ಇಲ್ಲ.
ಸುಮಾರು ೧೫೦ ಮತದಾರರನ್ನು ಹೊಂದಿರುವ ಗ್ರಾಮದಲ್ಲಿ ಗೆಲ್ಲಲು ಅವಕಾಶ ಇಲ್ಲ ಎಂಬ ಕಾರಣದಿಂದ, ಸ್ಪರ್ಧಿಸಲು ಇಲ್ಲಿಯ ವರು ಹಿಂದೇಟು ಹಾಕುವಂತಾಗಿದ್ದು, ತಮ್ಮ ಮತ ಚಲಾಯಿಸಲು ೪ ಕಿ.ಮೀ.ದೂರದ ಭೇರ್ಯಕ್ಕೆ  ಹೋಗಬೇಕಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ