ಕುಕ್ಕರಹಳ್ಳಿ ಕೆರೆಯಲ್ಲಿ ನಳನಳಿಸಲಿವೆ ಹಣ್ಣಿನ ಗಿಡಗಳು

ವಿಕ ಸುದ್ದಿಲೋಕ ಮೈಸೂರು
ಪ್ರೇಮಿಗಳ ತಾಣ, ಕವಿಗಳ ಸ್ಫೂರ್ತಿಯಾಗಿರುವ ಕುಕ್ಕರಹಳ್ಳಿಕೆರೆಯಲ್ಲಿ ಇನ್ನು ಮುಂದೆ ಹಕ್ಕಿಗಳ ಕಲರವ, ದುಂಬಿಗಳ ಝೇಂಕಾರ ನಿರಂತರವಾಗಿ ಕೇಳಿ ಬರಲಿದೆ.
ನಗರದ ಯಾಂತ್ರಿಕ ಜೀವನ, ಮರಗಳ ಹನನ, ಹೆಚ್ಚು ಉಪಯೋಗವಿಲ್ಲದ ಮರಗಳಿಂದ ಕೆರೆ ಅಂಗಳದಿಂದ ದೂರವಾಗುತ್ತಿರುವ ಹಕ್ಕಿ-ಪಕ್ಷಿಗಳನ್ನು ಮರಳಿ ಕರೆತರಲು ಮುಂದಾಗಿರುವ ಮೈಸೂರು ವಿಶ್ವವಿದ್ಯಾಲಯ, ಕೆರೆಯ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸಲು ಮುಂದಾಗಿದೆ. ೧೪೯ ಎಕರೆಯ ಆಯ್ದ ಸ್ಥಳದಲ್ಲಿ ಈ ಹಣ್ಣಿನ ಗಿಡ ಬೆಳೆಸುವ ಪ್ರಯತ್ನಕ್ಕೆ ಅರಣ್ಯ ಇಲಾಖೆ, ನಗರ ಪಾಲಿಕೆ ಜತೆಗೆ ಇತರೆ ಸಂಘ, ಸಂಸ್ಥೆಗಳು ಸಹಕಾರ ನೀಡಿವೆ.
ಮೈಸೂರು ವಿ.ವಿ. ವ್ಯಾಪ್ತಿಗೆ ಒಳಪಡುವ ಕುಕ್ಕರಹಳ್ಳಿ ಕೆರೆಯ ಅಂಗಳದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಜಂಗುಳಿಯಿಂದ ಏಕಾಂತತೆ ಕಳೆದುಕೊಳ್ಳುತ್ತಿದ್ದ ಪಕ್ಷಿಗಳು, ಹೆಚ್ಚು ಉಪಯೋಗವಿಲ್ಲದ ನೀಲಗಿರಿ ಮರಗಳಿಂದಾಗಿ ಜಾಗ ಖಾಲಿ ಮಾಡಲಾರಂಭಿಸಿದ್ದವು. ಇದನ್ನು ಮನಗಂಡು ‘ಕೆರೆಯ ತನ’ ಉಳಿಸುವ ಜತೆಗೆ ಹಕ್ಕಿ-ಪಕ್ಷಿಗಳು ಇಲ್ಲಿಯೇ ಇರುವಂತೆ ಮಾಡಲು ಕ್ರಮಕೈಗೊಳ್ಳಬೇಕೆಂಬ ಒತ್ತಾಯ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿತ್ತಲ್ಲದೇ, ಇದೇ ಕಾಲಕ್ಕೆ ಸರಕಾರವೂ ಕುಕ್ಕರಹಳ್ಳಿಕೆರೆಯ ಜೀರ್ಣೋದ್ಧಾರಕ್ಕೆ ಯೋಜನೆ ಘೋಷಿಸಿದ್ದರಿಂದ ಯೋಜನೆಗೆ ಚಾಲನೆ ದೊರೆತಿದೆ.
ಕೆರೆ ಅಂಗಳದಲ್ಲಿ ಇರುವ ನೀಲಗಿರಿ ಮರಗಳಿಂದ ಪರಿಸರಕ್ಕೆ ಉಪಯೋಗ ಕಡಿಮೆಯಾಗುವುದಲ್ಲದೇ, ಆಮ್ಲಜನಕ ಸೂಸುವುದು ಅಷ್ಟಕ್ಕೆ ಅಷ್ಟೆ. ಇಂಥ ಮರಗಳಿಂದ ಪಕ್ಷಿಗಳಿಗೆ ಯಾವುದೇ ಪ್ರಯೋಜನ ಇಲ್ಲ ಎನ್ನುವುದನ್ನು ಮನಗಂಡ ಮೈಸೂರು ವಿ.ವಿ. ಇಂಥ ನೀಲಗಿರಿ ಮರಗಳನ್ನು ಬುಡ ಸಮೇತ ತೆರವುಗೊಳಿಸಿದೆ. ಈ ಜಾಗದಲ್ಲಿ ಪರಿಸರಕ್ಕೆ ಉಪಯುಕ್ತವಾಗುವ ಜತೆಗೆ ಪಕ್ಷಿಗಳಿಗೆ ಆಹಾರ ಮೂಲವಾಗುವ ಮಾವು, ನೇರಳೆ, ಬೇವು, ಹೊಂಗೆ, ಅತ್ತಿ, ಸಂಪಿಗೆ, ಹಲಸು, ಹಿಪ್ಪನೇರಳೆ ಮತ್ತಿತರರ ಮೂರು ಸಾವಿರ ಗಿಡಗಳನ್ನು ಬೆಳೆಸಲಾರಂಭಿಸಿದೆ. ಇಷ್ಟೆ ಅಲ್ಲದೇ ಪಕ್ಷಿಗಳಿಗೆ ಏಕಾಂತ ಸೃಷ್ಟಿಸುವ ಜತೆಗೆ ಕೆರೆಯ ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಪುಟ್ಟ ದ್ವೀಪ ನಿರ್ಮಾಣಕ್ಕೆ ವಿ.ವಿ. ಮುಂದಾಗಿದೆ.
ಕಾರಂಜಿಕೆರೆಗೆ ಬರುವ ಪರ್ಪಲ್ ಸನ್‌ಬರ್ಡ್, ಇಗ್ರೆಟ್, ಕ್ಯಾಟಲ್ ಎಗ್ರೆಟ್, ಬ್ರಾಹ್ಮಿನಿ ಕೈಟ್, ಪಾರಿಯಾ ಕೈಟ್, ಮೂರ್ ಹೆನ್, ಸ್ಪಾಟ್ ಬಿಲ್ಲಡ್ಡ್‌ಕ್ಸ್, ಫ್ಲವರ್ ಪೆಕ್ಕರ್, ಗೋಲ್ಡನ್ ಓರಿಯಲ್, ಬಾರ್ಬೆಟ್, ಗ್ರೀನ ಬಾರ್ಬೆಟ್, ಕಾರ್ಮೊರಾಂಟ್ಸ್, ಕಿಂಗ್‌ಫಿಷರ್, ಇಂಡಿಯನ್‌ಶಾಗ್, ಸ್ಮಾಲ್ ಗ್ರೀನ್ ಬೀ ಈಟರ‍್ಸ್, ಬುಶ್‌ಲಾರ್ಕ್, ಪೈಂಟೆಡ್ ಸ್ಪಾರ್ಕ್, ಪೆಲಿಕನ್, ಕಾಮನ್ ಕ್ರೋ, ಮೈನಾ, ಔಲೆಟ್, ಗ್ರೇ ಹೆರಾನ್, ಸ್ನೇಕ್ ಬರ್ಡ್, ಸ್ಟ್ಯಾಂಡ್ ಪೈಪರ್, ಲ್ಯಾಪ್‌ವಿಂಗ್, ಈಗಲ್, ಟಾನಿಈಗಲ್, ವ್ಯಾಗ್‌ಟೈಲ್, ಚಿಟ್ಟೆಗಳು, ಮಿಡತೆ, ಕ್ಯಾಟರ್ ಪಿಲ್ಲರ್ ಮತ್ತಿತರ ಪಕ್ಷಿಗಳು ನಗರದಲ್ಲಿದ್ದ ಕುಕ್ಕರಹಳ್ಳಿ, ದಳವಾಯಿ, ಲಿಂಗಾಂಬುದಿ ಸೇರಿದಂತೆ ವಿವಿಧ ಕರೆಗಳಲ್ಲಿ ವಂಶಾಭಿವೃದ್ಧಿಯಲ್ಲಿ ತೊಡಗುತ್ತಿದ್ದವು. ಆದರೆ ಕಾರಂಜಿ ಹೊರತುಪಡಿಸಿ ಉಳಿದ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಬಳಲಿರುವುದರಿಂದ ಪಕ್ಷಿಗಳ ಆಗಮನ ಕಡಿಮೆಯಾಗಿದ್ದವು.
ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ
ಪಕ್ಷಿ ಸಂಕುಲದ ರಕ್ಷಣೆಗಾಗಿ ಕುಕ್ಕರಹಳ್ಳಿಕೆರೆ ಅಂಗಳದಲ್ಲಿ ಹಣ್ಣಿನ ಗಿಡ ಬೆಳೆಸುವ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. ಕೆರೆ ಅಂಗಳದಲ್ಲಿ  ನಡೆದ ಕಾರ‍್ಯಕ್ರಮದಲ್ಲಿ ಮೇಯರ್ ಸಂದೇಶ್‌ಸ್ವಾಮಿ, ಗಿಡ ನೆಡುವ ಮೂಲಕ ಕಾರ‍್ಯಕ್ರಮಕ್ಕೆ ಚಾಲನೆ ನೀಡಿದರು. ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ್, ಕುಲಪತಿ ಪ್ರೊ.ಈ.ಟಿ. ಪುಟ್ಟಯ್ಯ, ಡಿಸಿಎಫ್ ಶಾಶ್ವತಿ ಮಿಶ್ರಾ, ವಲಯಾಧಿಕಾರಿ ರಮೇಶ್, ವಿ.ವಿ. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೆಂಪಂಕೇಗೌಡ, ಕುಕ್ಕರಹಳ್ಳಿಕೆರೆ ಸಂರಕ್ಷಣೆ ಸಮಿತಿ ಸಂಚಾಲಕ ಪ್ರೊ.ಕೆ.ಎಂ.ಜಯರಾಮಯ್ಯ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ