ಪೂರ್ಣ ನನಸಾಗದ‘ಸುವರ್ಣ’ ಕನಸು

ವಿಕ ಸುದ್ದಿಲೋಕ ಮೈಸೂರು
ಸುವರ್ಣ ಗ್ರಾಮೋದಯ. ವಿಶಾಲ ಕರ್ನಾಟಕದ ಸುವರ್ಣ ಮಹೋ ತ್ಸವ ಪ್ರಯುಕ್ತ ೨೦೦೬ರ ಅಕ್ಟೋಬರ್‌ನಲ್ಲಿ ಕರ್ನಾಟಕ ಸರಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆ. ಸಮರ್ಪಕವಾಗಿ ಅನುಷ್ಠಾನವಾಗಿ ದ್ದರೆ ಮೈಸೂರು ಜಿಲ್ಲೆ ಏಳು ತಾಲೂಕು ವ್ಯಾಪ್ತಿಯ ೪೫ ಗ್ರಾಮಗಳೂ ಸೇರಿ ಕರ್ನಾಟಕದ ಸಾವಿರ ಹಳ್ಳಿಗಳು ‘ಸುವರ್ಣ’ ಕಳೆ ಪಡೆಯಬೇಕಿತ್ತು.
ಆದರೆ,ಹಲವು ಕೋಟಿಗಳು ಖರ್ಚಾದರೂ ‘ಇದು ಸುವರ್ಣ ಗ್ರಾಮ, ಯೋಜನೆಗಿದು ಮಾದರಿ’ ಎಂದು ಹೇಳಿಕೊಳ್ಳುವಂಥ ಒಂದೇ ಒಂದು ಗ್ರಾಮ ರೂಪುಗೊಂಡಿಲ್ಲ. ಬಹುತೇಕ ಯೋಜನೆ ಗಳಂತೆ ಇಲ್ಲೂ ‘ಆಗಬಾರದ್ದೇ’ ಹೆಚ್ಚಾಗಿದ್ದರಿಂದ ಸುವರ್ಣ ಕನಸು ಹಾಗೇ ಉಳಿದಿದೆ. ಮೊದಲ ಹಂತಕ್ಕೆ ಆಯ್ಕೆಯಾದ ಜಿಲ್ಲೆಯ ಗ್ರಾಮಗಳಲ್ಲಿ ಸುತ್ತು ಹೊಡೆದರೆ ಎಲ್ಲೂ ಅಭಿವೃದ್ಧಿ ಮಂತ್ರ ಪೂರ್ಣ ಅನುರಣಿಸಿದ ಉದಾಹರಣೆ ಇಲ್ಲ.
ಯೋಜನೆಯ ರೂವಾರಿ, ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ‘ರಾತ್ರಿ ವಾಸ್ತವ್ಯ’ಮಾಡಿ ಹೋದ ಹಳ್ಳಿ ಗಳಲ್ಲೂ ಶೇ.೧೦೦ ಗುರಿ ಸಾಧನೆ ಸಾಧ್ಯವಾಗಿಲ್ಲ.ಕೆಲವು ಕಾಮಗಾರಿ ಗಳು ಅಪೂರ್ಣ,ಕೆಲವು ಇನ್ನೂ ಅನುಷ್ಠಾನ ಹಂತದಲ್ಲಿವೆ. ಆರಂಭವೇ ಆಗದವು ಕೆಲವು. ಮಾತ್ರವಲ್ಲ, ಯಾವ ಗ್ರಾಮಕ್ಕೂ ಮಂಜೂರಾದ ಪೂರ್ತಿ ಹಣ ಬಿಡುಗಡೆಯಾಗಿಲ್ಲ.
‘ಹಳ್ಳಿ ರಾಜಕೀಯ’ದಿಂದಲೂ ಯೋಜನೆ ಹೊರತಾಗಿಲ್ಲ. ರಾಜ ಕೀಯ ‘ಪ್ರಬಲ’ರ ಮನೆಗಳಿರುವ ಕಡೆ ಹೆಚ್ಚು ಹಣ ಹರಿಸಿ, ಬಡವರು, ದನಿ ಇಲ್ಲದವರ ಬಗ್ಗೆ ನಿರ್ಲಕ್ಷ್ಯ ತಳೆದದ್ದಕ್ಕೂ ನಿದರ್ಶನ ಗಳಿವೆ. ಯಾವುದೇ ಅಭಿವೃದ್ಧಿ ಯೋಜನೆಗಳ ಫಲ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮಟ್ಟದಲ್ಲೇ ಹೆಚ್ಚು ‘ಹಂಚಿ’ ಹೋಗಿ ಫಲಾನುಭವಿಗಳಿಗೆ ‘ಕಾಲು ಭಾಗ’ಮಾತ್ರ ತಲುಪುತ್ತದೆ ಎನ್ನುವ ವಾಸ್ತವ ಇಲ್ಲಿಯೂ ಪುನರಾವರ್ತನೆಯಾಗಿದೆ. ಗ್ರಾ.ಪಂ. ಸದಸ್ಯರೂ ತಮ್ಮ ಊರಿನ ಉದ್ಧಾರಕ್ಕೆ ‘ಸಂಪೂರ್ಣ’ ತೊಡಗಿಸಿಕೊಂಡಂತಿಲ್ಲ.
ಹಿಂದಿನ ವರ್ಷದ ‘ಬಾಕಿ’ ಉಳಿಸಿಕೊಂಡೇ ಈಗ ಮತ್ತಷ್ಟು ಗ್ರಾಮ ಗಳಲ್ಲಿ ‘ಸುವರ್ಣ’ಕನಸು ಬಿತ್ತಲಾಗಿದೆ. ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಿ,ಆಡಳಿತಾತ್ಮಕ ಅನುಮೋದನೆಗೆ ಕಾಯಲಾಗು ತ್ತಿದೆ. ಈ ಮಧ್ಯೆ, ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ಭರಾಟೆ ಆರಂಭವಾಗಿದೆ. ಊರಿನ ಉದ್ಧಾರದ ಕನಿಷ್ಠ ಕಾಳಜಿ ಹೊಂದಿರ ದವರು ಪಕ್ಷಾತೀತ ರಾಜಕೀಯ ಅಂಗಳದಲ್ಲಿ ತೊಡೆತಟ್ಟಲು ಸಜ್ಜಾಗುತ್ತಿದ್ದಾರೆ. ಈ ಸಂದರ್ಭ ಸುವರ್ಣ ಕನಸಿನ ಅನುಷ್ಠಾನ ಕುರಿತಂತೆ ತಾಲೂಕುವಾರು ನೋಟ.
ಮೈಸೂರು
೨೦೦೬-೦೭ರಲ್ಲಿ ಮೊದಲ ಹಂತಕ್ಕೆ ಇಲವಾಲ, ವರುಣಾ ಹೋಬಳಿ ಹಾರೋ ಹಳ್ಳಿ, ದಡದಕಲ್ಲಹಳ್ಳಿ, ಉದ್ಬೂರು, ಜೈಪುರ ಮತ್ತು ಚಿಕ್ಕಕಾನ್ಯ (೬ ಗ್ರಾಮ) ಆಯ್ಕೆ. ಒಟ್ಟು ಮಂಜೂರಾಗಿದ್ದು ೫.೯೩ ಕೋಟಿ ರೂ. ಬಿಡುಗಡೆ ೪.೩೨ ಕೋಟಿ ರೂ. ಈವರೆಗೆ ಖರ್ಚಾಗಿರುವುದು ೩.೯೧ ಕೋಟಿ ಮಾತ್ರ.
ಈ ಪೈಕಿ ದಡದಕಲ್ಲಹಳ್ಳಿ ಮತ್ತು ಚಿಕ್ಕಕಾನ್ಯ ಗ್ರಾಮಗಳು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ‘ರಾತ್ರಿ ವಾಸ್ತವ್ಯ’ದಿಂದ ಗಮನಸೆಳೆದಿದ್ದವು. ಆದರೆ, ಇಲ್ಲಿಗೂ ಮಂಜೂರಾದಷ್ಟು ಹಣ ಬಿಡುಗಡೆ ಆಗಿಲ್ಲ. ಬಿಡುಗಡೆಯಾದ ಹಣವೂಪೂರ್ತಿ ಖರ್ಚಾಗಿಲ್ಲ.
ಜನಸಂಖ್ಯೆ ಆಧರಿಸಿ ದಡದಕಲ್ಲಹಳ್ಳಿಗೆ ಮಂಜೂರಾಗಿದ್ದು ೨೭.೫೦ ಲಕ್ಷ ರೂ. ಬಿಡುಗಡೆ ೨೫ ಲಕ್ಷ ರೂ. ಖರ್ಚಾಗಿದ್ದು ೧೬.೫೦ ಲಕ್ಷ ರೂ.ಮಾತ್ರ. ಚಿಕ್ಕಕಾನ್ಯದ್ದೂ ಇದೇ ಕತೆ. ಮಂಜೂರಾದ ಮೊತ್ತದ ಪೈಕಿ (೧೨.೭೫ ಲಕ್ಷ ರೂ.) ೫೦ ಸಾವಿರ ಬರಲಿಲ್ಲ. ಬಂದದ್ದರಲ್ಲೂ ೨ಲಕ್ಷ ರೂ.ಬಳಸಿಕೊಂಡಿಲ್ಲ. ಬಹುತೇಕ ಕಡೆ ಚರಂಡಿ, ರಸ್ತೆ, ಮೆಟ್ಲಿಂಗ್, ಅಂಗನವಾಡಿ, ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಆದ್ಯತೆ. ಇಲವಾಲ (೧.೨೩ ಕೋಟಿ ರೂ.), ಹಾರೋಹಳ್ಳಿ (೧.೦೫ಕೋಟಿ ರೂ.), ಉದ್ಬೂರು (೧೦೫.೫೮ಕೋಟಿ ರೂ.) ಗ್ರಾಮಗಳಲ್ಲಿ ಹೆಚ್ಚು   ಹಣ ಬಳಸಿಕೊಳ್ಳಲಾಗಿದೆ ಯಾದರೂ ‘ಸಮಸ್ಯೆಗಳ ಬೇತಾಳ’ ಬೆನ್ನು ಬಿಟ್ಟಿಲ್ಲ.
ಪಶುಸಂಗೋಪನಾ ಇಲಾಖೆ ಒಂದೆರಡು ಕಡೆ ಹೊಂದಾಣಿಕೆ ಮೊತ್ತದಲ್ಲಿ ಸವಲತ್ತು ನೀಡಿದೆಯಾದರೂ, ಉಳಿದ ಇಲಾಖೆಗಳು ಸ್ಪಂದಿಸಿದ್ದಕ್ಕೆ ಉದಾಹರಣೆ ಇಲ್ಲ. ಭೂ ಮಾಫಿಯ ಸಕ್ರಿಯವಾಗಿ ರುವ ಕಾರಣಕ್ಕೆ ಯಾವುದೇ ಗ್ರಾಮದಲ್ಲಿ ಒಂದೇ ಒಂದು ನಿವೇಶನ ವಿತರಣೆ ಸಾಧ್ಯವಾಗಿಲ್ಲ. ಈಗ ಮತ್ತೆ, ೯ ಗ್ರಾಮಗಳನ್ನು ಯೋಜನೆ ವ್ಯಾಪ್ತಿಗೆ ಸೇರಿಸಲು ಕ್ರಿಯಾಯೋಜನೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ.
ಕೃಷ್ಣರಾಜನಗರ
ತಾಲೂಕಿನ ಭೇರ್ಯ, ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಹಳೆಯೂರು ಗ್ರಾಮಗಳು ಯೋಜನೆಗೆ ಒಳಪಟ್ಟಿದ್ದು, ಸುಮಾರು ೫ ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲೂ ಪೂರ್ಣ  ಕಾಮಗಾರಿ ನಡೆದಿಲ್ಲ. ಭೇರ್ಯ ಮತ್ತಿತರ ಕಡೆ ಕಳಪೆ ಕೆಲಸ. ಪ್ರತಿಭಟನೆ ನಡೆದು, ಸ್ವತಃ ಶಾಸಕರೇ ಕಾಮಗಾರಿ ನಿಲ್ಲಿಸಿದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಸಾಲಿಗ್ರಾಮಕ್ಕೆ ೨.೧೫ ಕೋಟಿ ರೂ., ಭೇರ್ಯಕ್ಕೆ ೭೫ಲಕ್ಷ ರೂ., ಮಿರ್ಲೆಗೆ ೧೧೫ ಲಕ್ಷ ರೂ., ಹೆಬ್ಬಾಳಿಗೆ ೮೬ಲಕ್ಷ ರೂ. ಬಿಡುಗಡೆಯಾಗಿದೆ. ಕೆಲವೆಡೆ ಹಣ ಉಳಿದು ವಾಪಸ್ ಹೋದ ಉದಾಹರಣೆಯೂ ಇದೆ. ಬಹುತೇಕ ಕಡೆ ರಸ್ತೆ ಬದಿಯ ತಿಪ್ಪೆಗುಂಡಿ ತೆರವಾಗಿಲ್ಲ. ನಿವೇಶನಗಳು ಉಳ್ಳವರ ಪಾಲಾಗಿರುವ ಉದಾಹರಣೆಗಳೇ ಹೆಚ್ಚು. ತ್ಯಾಜ್ಯ ವಿಲೇವಾರಿ ಮರೀಚಿಕೆ. ಯಾವುದೇ ಗ್ರಾಮ ಪೂರ್ಣ ‘ಸುವರ್ಣ’ವಾದ ಉದಾಹರಣೆ ಇಲ್ಲ.
ಎಚ್.ಡಿ.ಕೋಟೆ
ಹಿರೇಹಳ್ಳಿ, ಅಂತರಸಂತೆ, ಹೈರಿಗೆ, ಪಡುಕೋಟೆ ಗಾಂಧಿನಗರ, ಸಾಗರೆ, ಕೊತ್ತೇಗಾಲ, ಕಂದಲಿಕೆ ಮತ್ತು ಹಂಪಾಪುರ ಗ್ರಾಮಗಳು ಮೊದಲ ಹಂತಕ್ಕೆ ಆಯ್ಕೆಯಾದವು. ೨೦೦೯-೧೦ನೇ ಸಾಲಿಗೆ ಕ್ಯಾತನಹಳ್ಳಿ, ಆಲನಹಳ್ಳಿ. ಚಾಮಲಾಪುರ, ನಂದಿನಾಥಪುರ, ಜಿ.ಬಿ. ಸರಗೂರು, ಆಗತ್ತೂರು, ಕಾಟ ವಾಳು, ಬಿ.ಮಟಕೆರೆ, ರಾಮೇನಹಳ್ಳಿ, ಇಟ್ನ, ಹೆಬ್ಬಲಗುಪ್ಪೆ ಗ್ರಾಮಗಳು ಸೇರಿವೆ.
ಹೆಬ್ಬಲಗುಪ್ಪೆಯಲ್ಲಿ ಸಾಕಷ್ಟು ಕೆಲಸ ನಡೆದಿದ್ದು, ಇನ್ನೂ ೪೨ ಲಕ್ಷ ರೂ.ಗೆ ಬೇಡಿಕೆ ಸಲ್ಲಿಸಲಾಗಿದೆ. ಕೊತ್ತೇಗಾಲ,ಸಾಗರೆ, ಹಂಪಾಪುರ ಮತ್ತು ಪಡು ಕೋಟೆ ಕಾವಲ್ ಗಾಂಧಿನಗರ ಗ್ರಾಮಗಳಲ್ಲಿ ರಸ್ತೆ ಸಂಪೂರ್ಣ. ಹೈರಿಗೆ, ಅಂತರಸಂತೆ, ಆಲನಹಳ್ಳಿ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕೆಲ ರಸ್ತೆಗಳು ಕಾಂಕ್ರೀಟ್ ಭಾಗ್ಯ ಕಂಡಿವೆ. ಚರಂಡಿ ಕಾಮಗಾರಿ ಎಲ್ಲೂ ನಡೆದಿಲ್ಲ. ಹಣ ವನ್ನು ‘ರಸ್ತೆ’ಗೆ ಹಾಕಲು ತೋರಿದ ಆಸಕ್ತಿಯನ್ನು ಉಳಿದ ಸವಲತ್ತು ನೀಡಿಕೆಗೆ ತೋರದ ಕಾರಣ ಗ್ರಾಮಗಳು ಎಂದಿನಂತೆ ಸಮಸ್ಯೆ ಹೊದ್ದು ಮಲಗಿವೆ.
ಪಿರಿಯಾಪಟ್ಟಣ
ಯೋಜನೆಗೆ ಆಯ್ಕೆಯಾದ ಬೆಟ್ಟದಪುರ, ದೊಡ್ಡಹರವೆ, ಮಾಕೋಡು, ಕಂಪಲಾಪುರ, ಹಲಗನಹಳ್ಳಿ ಗ್ರಾಮಗಳಲ್ಲಿ ರಸ್ತೆ, ಚರಂಡಿ ಮತ್ತಿತರ ಸಿವಿಲ್ ಕಾಮಗಾರಿಗೆ ಒತ್ತು. ಒಟ್ಟು ೪೫೩.೬೪ ಲಕ್ಷ ರೂ.ಗಳ ಅನುದಾನ. ಕೆಲವೆಡೆ ಅಂಗನವಾಡಿ,ಸಮುದಾಯ ಭವನ ಕಟ್ಟಡ ನಿರ್ಮಿಸಲಾಗಿದೆ.ತೋಟಗಾರಿಕೆ, ಕೃಷಿ ಉತ್ಪಾದನೆ, ಭೂ ಆಧರಿತ ಚಟುವಟಿಕೆ, ಶೌಚಾಲಯ, ಕೃಷಿ ಅರಣ್ಯೀಕರಣ, ಹೈನುಗಾರಿಕೆ ಮತ್ತಿತರ ಅಭಿವೃದ್ಧಿ ಸಾಧ್ಯತೆಗಳತ್ತ ಮುಖವನ್ನೇ ತೋರಿಸಿಲ್ಲ.
ಕಂಪಲಾಪುರದಲ್ಲಿ ಕೆರೆ ಬಳಿ ಕಸದತೊಟ್ಟಿ ನಿರ್ಮಾಣ, ಅಂಗನವಾಡಿ ಕಟ್ಟಡ ದುರಸ್ತಿ. ದೊಡ್ಡರವೆ, ಹಲಗನಹಳ್ಳಿ ಗ್ರಾಮ ಗಳಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣ. ಬೆಟ್ಟದಪುರದಲ್ಲಿ ಸಿಮೆಂಟ್‌ರಸ್ತೆ, ಸಮುದಾಯ ಭವನ ನಿರ್ಮಾಣ. ಮಾಕೋಡಿನಲ್ಲೂ ಸಿಮೆಂಟ್ ರಸ್ತೆ ಆಗಿದೆ. ಆದರೆ, ಇಲ್ಲಿ ನಿರ್ಮಿಸಿರುವ ಚರಂಡಿ ಅತ್ಯಂತ ಕಿರಿದು. ಕಂಪಲಾಪುರದಲ್ಲಿ ಕೆಲವೆಡೆ ಮನೆಗಳಿಲ್ಲದ ಕಡೆ ಚರಂಡಿ ನಿರ್ಮಿಸಿರುವುದು ನಿರ್ಲಕ್ಷ್ಯಕ್ಕೆ ಸಾಕ್ಷಿ. ಗ್ರಾಮ ಮಧ್ಯದಲ್ಲೇ ತಿಪ್ಪೆಗುಂಡಿ ಗಳು ರಾರಾಜಿಸುತ್ತಿದ್ದು, ಸ್ಥಳಾಂತರಕ್ಕೆ ಕ್ರಮ ಕೈಗೊಂಡಿಲ್ಲ.
ದೊಡ್ಡಹರವೆಗೆ ೧೭.೩೮ ಲಕ್ಷ ರೂ.ಕೊರತೆ. ೧ ಕಿ.ಮೀ. ರಸ್ತೆ ಮತ್ತು ಚರಂಡಿ ಕಾಮಗಾರಿ ಬಾಕಿ. ಬೆಟ್ಟದಪುರ, ಹಲಗನಹಳ್ಳಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೆಲವೆಡೆ ಚರಂಡಿ ಅಂಚುಕಿತ್ತು ಬರುತ್ತಿದ್ದು, ಕಳಪೆ ಕಾಮಗಾರಿಗೆ ನಿದರ್ಶನ. ಮಾಕೋಡು ಗ್ರಾಮದಲ್ಲಿ ಸಮುದಾಯ ಭವನ ಇನ್ನ್ನೂ ತಳಪಾಯ ಹಂತದಲ್ಲಿದೆ. ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣ ಯೋಜನೆ ರೂಪಿಸಿದ್ದರೂ ಕಾರ್ಯಗತವಾಗಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ