ನೂರಾರು ಪಕ್ಷಿಗಳ ಮಾರಣಹೋಮ

ವಿಕ ಸುದ್ದಿಲೋಕ ಮಂಡ್ಯ
ತಾಲೂಕಿನ ವಿ.ಸಿ.ಫಾರಂ ಕೃಷಿ ವಿಶ್ವವಿದ್ಯಾನಿಲಯ ಆವರಣ ದಲ್ಲಿ ಸೋಮವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಮರಗಳು ಧರೆಗುರುಳಿದ್ದು, ಮರಗಳಲ್ಲಿ ಆಶ್ರಯ ಪಡೆದಿದ್ದ ನೂರಾರು ಪಕ್ಷಿಗಳು ಮೃತಪಟ್ಟಿವೆ.
ಕೊಕ್ಕರೆ, ಗಿಳಿ, ಕಾಗೆಗಳ ಜಾತಿಯ ನೂರಾರು ಪಕ್ಷಿಗಳ ಪ್ರಾಣಪಕ್ಷಿಯೇ ಹಾರಿ ಹೋಗಿವೆ. ಮತ್ತೆ ಹಲವು ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದು ನೋವು ಅನುಭವಿಸುತ್ತಿವೆ. ಇವು ಮೇಲೇಳಲಾಗದ ಸ್ಥಿತಿಯಲ್ಲಿವೆ.
ಕೃಷಿ ವಿವಿ ಆವರಣದಲ್ಲಿ ನೇರಳೆ, ನೀಲಗಿರಿ, ಸರ್ವೆ, ತೆಂಗು, ಬಾಗೆ ಸೇರಿದಂತೆ ವಿವಿಧ ಜಾತಿಯ ಹಲವು ಮರಗಳನ್ನು ಬೆಳೆಸಲಾಗಿತ್ತು. ಆದರೆ, ಸೋಮವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಯಿಂದಾಗಿ ಸುಮಾರು ೨೦ಕ್ಕೂ ಹೆಚ್ಚು ಮರಗಳು ಬುಡ ಸಮೇತ ಮುರಿದು ಬಿದ್ದಿವೆ.
ಮರಗಳು ನೆಲಕಚ್ಚುತ್ತಿದ್ದಂತೆ ಅವುಗಳಲ್ಲಿದ್ದ ಪಕ್ಷಿಗಳು ಅಪಾಯಕ್ಕೆ ಸಿಲುಕಿದವು. ಗೂಡುಗಳಲ್ಲಿ ಆಶ್ರಯ ಪಡೆದಿದ್ದ ಪಕ್ಷಿಗಳು ಗೂಡು ಸಹಿತ ನೆಲಕ್ಕೆ ಅಪ್ಪಳಿಸಿದ ಪರಿಣಾಮ ಅಸುನೀಗಿದವು. ರಾತ್ರಿಯಿಡೀ ನೋವು ಅನುಭವಿಸಿದ ಕೆಲವು ಪಕ್ಷಿಗಳು ಮಂಗಳವಾರ ಬೆಳಗ್ಗೆ ಮೃತಪಟ್ಟವು.
ಮಂಗಳವಾರ ಬೆಳಗ್ಗೆ ನೋವಿನಿಂದ ಚೀರುತ್ತಾ ನರಳುತ್ತಿದ್ದ ಪಕ್ಷಿಗಳ ಆಕ್ರಂದನವನ್ನು ಕೇಳಿದ ಸ್ಥಳೀಯರು, ಸ್ಥಳಕ್ಕೆ ಆಗಮಿಸಿ ಕೆಲವು ಪಕ್ಷಿಗಳಿಗೆ ನೀರುಣಿಸಿ ಉಪಚರಿಸಿದ್ದಾರೆ. ಪಶು ವೈದ್ಯರು ಸಹ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ಹಾಗೂ ಸ್ಥಳೀಯರ ಆರೈಕೆಯಿಂದ ಚೇತರಿಸಿ ಕೊಂಡ ಕೆಲ ಪಕ್ಷಿಗಳು ಹಾರಾಟ ಆರಂಭಿಸಿ, ಆಹಾರ ಹುಡುಕಿ ಕೊಂಡು ಹೊರಟವು. ತೀವ್ರ ಪೆಟ್ಟು ಬಿದ್ದು ಅಸ್ವಸ್ಥಗೊಂಡಿದ್ದ ಪಕ್ಷಿಗಳು ಹಾರಲಾಗದೆ ಅಲ್ಲೇ ಉಳಿದಿದ್ದವು.
ಗಾಯಗೊಂಡಿದ್ದ ಪಕ್ಷಿಗಳನ್ನು ಪಶು ವೈದ್ಯರು ಸಮೀಪದ ಆಸ್ಪತ್ರೆ ಹಾಗೂ ಮನೆಗಳಿಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಉಪಚಾರ ಮುಂದುವರಿಸಿದ್ದಾರೆ. ಪಕ್ಷಿಗಳ ಕಳೇಬರಗಳು ಬಿದ್ದಿದ್ದ ದೃಶ್ಯ ಮನಃಕಲಕುವಂತಿತ್ತು.
ನೆನಪು: ಕಳೆದ ತಿಂಗಳಷ್ಟೇ ಶ್ರೀರಂಗಪಟ್ಟಣದ ಶ್ರೀ ಕಾಳಿಕಾಂಬ ರಸ್ತೆಯಲ್ಲಿ ಭಾರಿ ಗಾತ್ರದ ಆಲಿಕಲ್ಲು ಬಿದ್ದು ನೂರಾರು ಗಿಳಿ ಮರಿಗಳು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಒಂದು ವರ್ಷದ ಹಿಂದೆ ಬಸರಾಳು ಗ್ರಾಮದಲ್ಲಿ ಹೂ ಮಾರಾಟಗಾರರ ಸ್ವಾರ್ಥಕ್ಕೆ ದೊಡ್ಡ ಮರವನ್ನು ಕಡಿದಿದ್ದರಿಂದ ಅಲ್ಲೂ  ಪಕ್ಷಿಗಳ ಮಾರಣ ಹೋಮವೇ ನಡೆದಿತ್ತು. ಈಗ ಇಂತಹುದೇ ದುರ್ಘಟನೆ ವಿ.ಸಿ.ಫಾರಂನಲ್ಲಿ ಸಂಭವಿಸಿದೆ.
ಹಾನಿ: ಬಿರುಗಾಳಿ ಮತ್ತು ಮಳೆಯಿಂದಾಗಿ ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕಚೇರಿಗಳು, ವಸತಿ ಗೃಹಗಳಿಗೂ ಹಾನಿಯಾಗಿದೆ. ಕಾರ್‌ಶೆಡ್, ಬ್ಯಾಂಕ್‌ನ ಕಚೇರಿಯ ಬಾಗಿಲು ಸಹ ಹಾನಿಗೆ ಒಳಗಾಗಿದೆ. ಕಾಲೇಜು ಆವರಣದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್, ಮಿನಿ ಬಸ್‌ಗಳು ಜಖಂಗೊಂಡಿವೆ.
ಕಚೇರಿಯಲ್ಲಿ ಸಂಗ್ರಹಿಸಿದ್ದ ಜೋಳ, ಬತ್ತ, ರಾಗಿಯ ಬಿತ್ತನೆ ಬೀಜಗಳು ಮಳೆ ನೀರಿನಿಂದ ನೆನೆದು ನಷ್ಟ ಸಂಭವಿಸಿದೆ. ರಸ್ತೆ ಯಲ್ಲೇ ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಮರಗಳನ್ನು ರಸ್ತೆಯಿಂದ ತೆರವುಗೊಳಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ