ನೀರಿನ ಸಮಸ್ಯೆ ನಿವಾರಣೆಗೆ ಜೂನ್‌ನಲ್ಲಿ ಮುಹೂರ್ತ

ವಿಕ ಸುದ್ದಿಲೋಕ ಮೈಸೂರು
‘ನಗರದ ನೀರಿನ ಅಭಾವಕ್ಕೆ ನಿಜ ಕಾರಣ ನೀರುಗಳ್ಳರು’.
ಜಸ್ಕೋಗೆ ವಹಿಸಿದ ಬಳಿಕ ಸರಾಗವಾಗಿ ನೀರು ನೀಡಿ ಎಂದು ಒತ್ತಾಯಿಸಿ ದವರಿಗೆ, ನಾಗರಿಕರಿಗೆ, ಪಾಲಿಕೆ ಆಯುಕ್ತ ಕೆ.ಎಸ್. ರಾಯ್ಕರ್, ಈ ಸತ್ಯ ಬಿಚ್ಚಿಟ್ಟರು.
ಹಾಲಿ ನಗರಕ್ಕೆ ಬರುತ್ತಿರುವ ನೀರೇ ಸಾಕಷ್ಟಿದೆ. ಆದರೆ ಮಿತಿ ಮೀರಿದ ಸೋರಿಕೆ, ೩೦ ಸಾವಿರಕ್ಕೂ ಹೆಚ್ಚಾಗಿರುವ ಅನಧಿಕೃತ ಸಂಪರ್ಕವೇ ನೀರಿನ ಅಭಾವ ಸೃಷ್ಟಿಗೆ ಕಾರಣ. ಸೋರಿಕೆ ತಡೆಯುವ ಕಾರ‍್ಯ ಪ್ರಗತಿಯಲ್ಲಿದ್ದು, ನೀರುಗಳ್ಳರಿಗೆ ಕಡಿವಾಣ ಹಾಕುವ ಕೆಲಸ ನಡೆಯುತ್ತಿದೆ.
ದಿನಪೂರ್ತಿ ನೀರು ಬೇಡ ಸರಿಯಾಗಿ ಎರಡು ಗಂಟೆ ನೀಡಿದರೆ ಸಾಕು ಎಂಬ ನಾಗರಿಕರ ಕೋರಿಕೆಗೆ ‘ಇಪ್ಪನ್ನಾಲ್ಕು ಗಂಟೆ ನೀರು ಕುಡಿಯಲು ಇನ್ನು ನಾಲ್ಕು ವರ್ಷ ಕಾಯಲೇ ಬೇಕು.!’ಎಂಬ ಜಸ್ಕೋ ನಡುವಿನ ಕರಾರು ಮುಂದಿಟ್ಟರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಬಂದ ಹೆಚ್ಚು ಕರೆಗಳನ್ನು ಸಹನೆ ಯಿಂದಲೇ ಆಲಿಸಿದ ಅವರು, ಅತಿಯಾದ ಸೋರಿಕೆಯೇ ಸಮಸ್ಯೆಗೆ ಕಾರಣ. ಇದನ್ನು ತಡೆ ಗಟ್ಟಲು ಗಮನ ನೀಡಲಾಗಿದ್ದು, ನಿರ್ವಹಣೆ ಹೊಣೆ ವಹಿಸಿಕೊಂಡಿರುವ ಜಸ್ಕೋ ಕಂಪನಿಗೆ ಹಂತ, ಹಂತವಾಗಿ ಸಮಸ್ಯೆ ಬಗೆಹರಿಸಲು ಸೂಚಿಸಲಾಗಿದೆ ಎಂದು ಉತ್ತರಿಸಿದರು.
‘ದಿನದ ೨೪ ಗಂಟೆ ನೀರು ಕೊಡುವುದಾಗಿ ಹೇಳಿದ್ದೀರಿ. ಅಷ್ಟೊಂದು ಬೇಡ, ಸರಿ ಯಾಗಿ ಎರಡು ಗಂಟೆ ಕೊಡಿ ಸಾಕು’ ಎಂಬ ಹಲವರ ಆಗ್ರಹಕ್ಕೆ ನಸುನಗುತ್ತಲೇ ಉತ್ತರಿಸಿ, ಸೋರಿಕೆ ತಡೆಗಟ್ಟಲಾಗುತ್ತಿದೆ. ಜೂನ್‌ನಲ್ಲಿ ಪ್ರಾಯೋಗಿಕವಾಗಿ ೫ ವಾರ್ಡ್‌ಗಳಲ್ಲಿ ೨೪೭ ನೀರು ಪೂರೈಕೆ ಆರಂಭಿಸಲಾಗುವುದು. ಡಿಸೆಂಬರ್ ವೇಳೆಗೆ ಮತ್ತೆ ೧೦ರಿಂದ ೧೫ ವಾರ್ಡ್‌ಗೆ ಚಾಲನೆ ನೀಡಿದರೆ, ಮುಂದಿನ ಜೂನ್ ವೇಳೆಗೆ ಮತ್ತಷ್ಟು ವಾರ್ಡ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಪಾಲಿಕೆ ಹಾಗೂ ಜಸ್ಕೋ ನಡುವೆ ನಡೆದ ಒಪ್ಪಂದದ ಪ್ರಕಾರ ೨೦೧೩ರ ವೇಳೆಗೆ ಎಲ್ಲ ವಾರ್ಡ್‌ಗಳನ್ನು ೨೪೭ ಯೋಜನೆಗೆ ಒಳಪಡಿಸಲಾಗುವುದು. ಸರಿಯಾಗಿ ನಿರ್ವಹಿಸದಿದ್ದರೆ ಜಸ್ಕೋ ಕಂಪನಿ ಭಾರಿ ಮೊತ್ತದ ದಂಡ ತೆರಬೇಕಾದೀತು ಎಂದರು.
ನರ್ಮ್, ಮುಖ್ಯಮಂತ್ರಿಗಳ ವಿಶೇಷ ನೂರು ಕೋಟಿ ರೂ. ಅಲ್ಲದೇ ಕೇಂದ್ರದ ಹಲವು ಯೋಜನೆಗಳು ನಗರಕ್ಕೆ ಹರಿದು ಬರುತ್ತಿದ್ದು, ಇದುವರೆಗೆ ೧೧೦ ಯೋಜನೆಗಳನ್ನು ಕೇಂದ್ರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ದೇಶಾದ್ಯಂತ ಯೋಜನೆಗಳಿಗೆ ಅನುಮೋದನೆ ಕೋರಿ ಒಟ್ಟು ೨೦೫ ಅರ್ಜಿಗಳು ಬಂದಿದ್ದರೆ, ಮೈಸೂರು ನಗರ ಒಂದರಿಂದಲೇ ೧೧೦ ಯೋಜನೆಗಳ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಹೆಚ್ಚು ಪ್ರಸ್ತಾವನೆ ಸಲ್ಲಿಸುವ ಜತೆಗೆ, ಕೇಂದ್ರದಿಂದ ಹಲವು ಯೋಜನೆ ಗಳನ್ನು ನಗರಕ್ಕೆ ತರಲು ಹೊರಟಿರುವ ನಗರ ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್, ಶನಿವಾರ ‘ವಿಜಯ ಕರ್ನಾಟಕ’ ಕಚೇರಿಯಲ್ಲಿ ನಡೆದ  ಪೋನ್- ಇನ್ ಕಾರ‍್ಯಕ್ರಮದಲ್ಲಿ ಮೈಸೂರಿನ ಅಭಿವೃದ್ಧಿ ಕುರಿತು ವಿವರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.
ಜೆ.ಪಿ.ನಗರ, ಅಶೋಕಪುರಂ, ವಿದ್ಯಾರಣ್ಯಪುರಂ, ವಿಶ್ವೇಶ್ವರನಗರ ಸೇರಿದಂತೆ ಕೆಲ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ತೊಂದರೆಯಾಗಿದೆ. ಮಧ್ಯರಾತ್ರಿ ನೀರು ಬಿಡುತ್ತಿರುವುದರಿಂದ ನಿದ್ದೆಗಟ್ಟು ನೀರು ಹಿಡಿಯಬೇಕಾದ ಪರಿಸ್ಥಿತಿ ಇದೆ ಎಂಬ ನಿವಾಸಿಗಳ ಅಳಲಿಗೆ ಸಮಾಧಾನ ಹೇಳಿದ ರಾಯ್ಕರ್, ಜೆ.ಪಿ. ನಗರದ ಲೈನ್‌ಗೆ ೨೨ ಸಂಪರ್ಕ ಇರುವುದರಿಂದ ಎಲ್ಲ ಭಾಗಕ್ಕೂ ಏಕಕಾಲದಲ್ಲಿ ನೀರು ಪೂರೈಸಲಾಗುತ್ತಿಲ್ಲ. ಒಂದೊಂದು ಮಾರ್ಗಕ್ಕೂ ಪ್ರತ್ಯೇಕ ವಾಗಿ ನೀರು ನೀಡಬೇಕಿದ್ದು, ಪೂರೈಕೆಯಲ್ಲಿ ವ್ಯತ್ಯಯ ವಾಗುತ್ತಿದೆ. ಜೆ.ಪಿ.ನಗರಕ್ಕೆ ಪ್ರತ್ಯೇಕ ಕೊಳವೆ ಮಾರ್ಗ ಅಳವಡಿಸುತ್ತಿದ್ದು, ೨೦ ದಿನದಲ್ಲಿ ಸಮಸ್ಯೆ ಸುಧಾರಿಸಲಿದೆ ಎಂದರು,
ಜಟಕಾ ಹೋಗುತ್ತೆ, ರಥ ಬರುತ್ತೆ
ಮೈಸೂರಿನ ಅರಮನೆಯ ಸುತ್ತ ಪಾರಂಪರಿಕತೆ ಮಹತ್ವವನ್ನು  ಕಾಯ್ದುಕೊಳ್ಳಲಾಗುವು ದಲ್ಲದೇ, ಜಟಕಾ ಟ್ರ್ಯಾಕ್ ನಿರ್ಮಿಸಲಾಗುವುದು. ಜಟಕಾ ಗಾಡಿಗಳನ್ನು ಪಾರಂಪರಿ ಕತೆಗೆ ತಕ್ಕಂತೆ ‘ರಥ’ವನ್ನಾಗಿಸಲಾಗುವುದು. ಈ ಸಂಬಂಧ ಟಾಂಗಾವಾಲದವರೊಂದಿಗೆ ಚರ್ಚಿಸಲಾಗಿದೆ. ಸುಮಾರು ೪೫ ಮಂದಿ ಮುಂದೆ ಬಂದಿದ್ದು, ರಥವನ್ನು ನಿರ್ಮಿಸುವ ಹೊಣೆಯನ್ನು ಪಂಜಾಬ್‌ನ ಪಟಿಯಾಲದ ಸಂಸ್ಥೆಯೊಂದಕ್ಕೆ ನೀಡಲಾಗಿದೆ. ರಥ ಹಾಗೂ ಕುದುರೆಕೊಳ್ಳಲು ಪಾಲಿಕೆ ಶೇ. ೫೦, ಪ್ರವಾಸೋದ್ಯಮ ನಿಗಮ ಶೇ. ೨೫ ರಷ್ಟು ಹಣವನ್ನು ಭರಿಸಲಿದೆ. ಉಳಿದದ್ದನ್ನು ಟಾಂಗಾವಾಲರೇ ಭರಿಸಬೇಕು. ಇದು ಕಾರ‍್ಯಗತಗೊಂಡರೆ ಪ್ರವಾಸೋದ್ಯಮಕ್ಕೆ ಒತ್ತು ನೀಡಿದಂತಾಗುವುದು ಎಂದು ವಿವರಿಸಿದರು.
ಲಲಿತ ಮಹಲ್ ರಸ್ತೆಯಲ್ಲಿ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುವುದು. ಜಂಬೂ ಸವಾರಿ ತೆರಳುವ ರಾಜಮಾರ್ಗದ ಅಭಿವೃದ್ಧಿ ಕೈಗೆತ್ತಿಕೊಳ್ಳಲಿದ್ದು, ಈಗಾಲೇ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ. ದಸರಾ ವಸ್ತು ಪ್ರದರ್ಶನ ನಡೆಯುವ  ಸ್ಥಳವನ್ನು ದಿಲ್ಲಿಯ ಪ್ರಗತಿ ಮೈದಾನ ಮಾದರಿ ಅಭಿವೃದ್ಧಿಪಡಿಸಲಾಗುವುದು. ಹೈಟೆಕ್ ಹೋಟೆಲ್, ಬಹು ಉಪಯೋಗಿ ಸಮುದಾಯ ಭವನ, ನಿರಂತರ ವಸ್ತು ಪ್ರದರ್ಶನ ನಡೆಸುವಂತೆ ಯೋಜನೆ ಸಿದ್ಧಪಡಿಸಲಾಗಿದೆ ಎಂದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ