ಭಿಕ್ಷೆ ಬೇಡುತ್ತಿದ್ದವರು ಎಸ್‌ಎಸ್‌ಎಲ್‌ಸಿ ಪಾಸಾದರು...

ಪಿ.ಓಂಕಾರ್  ಮೈಸೂರು
ವರ್ಷಗಳ ಹಿಂದೆ ಬೀದಿಯಲ್ಲಿ, ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದವರು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ದುಡಿದು ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದ ‘ಬಾಲ ಕಾರ್ಮಿಕರು’ ಹೂ ನಗೆ ಬೀರಿದ್ದಾರೆ. ಎಸ್‌ಎಸ್‌ಎಲ್‌ಸಿ ‘ಅಗ್ನಿ ಪರೀಕ್ಷೆ’ಯ ಯಶಸ್ಸು ೭ ಮಕ್ಕಳ ಬದುಕಿನಲ್ಲಿ ಆಶಾಕಿರಣ ಮೂಡಿಸಿದೆ. ಈ ‘ಮೊಗ್ಗು’ಗಳು ಹೂವಾಗಿ ಅರಳಲು ಆಸರೆಯಾದದ್ದು ನಗರದ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ). ಇದರ ‘ಆಶಾಕಿರಣ’ (ಬಾಲಕರಿಗೆ) ಮತ್ತು  ‘ಆಶಾಭವನ’(ಬಾಲಕಿಯರು)ದ ಆಶ್ರಯ ದಲ್ಲಿ ಬೆಳೆದು, ಕೀಳನಪುರ  ಸರಕಾರಿ ಪ್ರೌಢಶಾಲೆ ಯಲ್ಲಿ  ಓದಿದ  ಇವರದ್ದು ಹುಬ್ಬೇರಿಸುವಂಥ  ಸಾಧನೆ. ಈ ಪೈಕಿ ಒಂದಿಬ್ಬರಿಗೆ ಅಕ್ಷರ ಜ್ಞಾನವೇ ಇರಲಿಲ್ಲ. ಈ ‘ಛಲದಂಕ ’ರದ್ದು ಒಂದೊಂದು ಕತೆ. ನೀವೇ  ಓದಿ. ವಿಶೇಷ  ಎನ್ನಿಸಿದರೆ ಶಹಬ್ಬಾಸ್ ಹೇಳಿ.  
೧.ರಮೇಶ್ ಚಂದ್ರ
ಅಲೆಮಾರಿ ಕುಟುಂಬದ ಕೂಸು. ಭಿಕ್ಷೆ ಬೇಡಲು ಹೋಗದ್ದಕ್ಕೆ ಹೆತ್ತವರಿಂದ ತಲೆ ಒಡೆಸಿಕೊಂಡು ಯಾರದೋ ಕೃಪೆಯಿಂದ ಚಿಕಿತ್ಸೆ  ಪಡೆದು ಮನೆ ಬಿಟ್ಟಾಗ ನೆನಪಿನಲ್ಲಿ ಉಳಿದಿದ್ದ ಊರು ಹೊಳೆ ನರಸೀಪುರ. ರೈಲಿನಲ್ಲೇ ಭಿಕ್ಷೆ ಬೇಡುತ್ತಾ, ನಿದ್ದೆಗೆ ಶರಣಾಗಿ ಬಂದು ಇಳಿದದ್ದು ಮೈಸೂರು. ನಿಲ್ದಾಣದಲ್ಲಿ ಈತನನ್ನು ಆರ್‌ಎಲ್‌ಎಚ್‌ಪಿ ರಕ್ಷಿಸದಿದ್ದರೆ ಏನಾಗುತ್ತಿದ್ದನೋ? ಈಗ ಆತನ  ಬದುಕು ಅರಳಿದೆ. ೧ನೇ ತರಗತಿಗೆ ಸೇರಿ, ಈಗ ಎಸ್‌ಎಸ್‌ಎಲ್‌ಸಿಯನ್ನು ಪ್ರಥಮ ದರ್ಜೆ (೩೬೦) ಯಲ್ಲಿ ಮುಗಿಸಿದ್ದಾನೆ. ಮುಂದೆ ಓದಬೇಕು, ಶಿಕ್ಷಕ ನಾಗಿ ತನ್ನಂಥ ಹಿನ್ನೆಲೆಯ ಮಕ್ಕಳಿಗೆ ಪಾಠ ಮಾಡಬೇಕು ಎನ್ನುವುದು ಈತನ ಕನಸು ಮತ್ತು ಆದರ್ಶ.
೨. ಮಹದೇವ
ಮೈಸೂರು ತಾಲೂಕಿನ ಕಿರಾಳು ಗ್ರಾಮದವನು. ಮನೆಯಲ್ಲಿ ಕಡುಬಡತನ. ೬ನೇ ತರಗತಿವರೆಗೆ ಓದಿದ್ದ. ನಂತರ ಅಪ್ಪ-ಅಮ್ಮ ಕೂಲಿಗೆ ತಳ್ಳಿದರು. ಇವನಿಗೆ ಓದುವ ತುಡಿತ. ಅಪ್ಪ, ಮೈಸೂರಿಗೆ ಕರೆ ತಂದು ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ೧ ಸಾವಿರ ರೂ. ಪಡೆದು ಕೆಲಸಕ್ಕೆ ಸೇರಿಸಿದ. ಬಾಲಕಾರ್ಮಿಕ ವಿರೋಧಿ ಆಂದೋಲನ ನಡೆಯುತ್ತಿದ್ದಾಗ ಬಾರ್‌ನವರು ಹೊರಹಾಕಿದರು. ಅನಿವಾರ‍್ಯವಾಗಿ ಈತ ಭಿಕ್ಷೆಗೆ ನಿಂತ. ಒಂದು ದಿನ ಸಂಸ್ಥೆಯ ಕಾರ‍್ಯಕರ್ತರ ಕಣ್ಣಿಗೆ ಬಿದ್ದ. ೭ನೇ ತಗತಿಯಿಂದ ಶಿಕ್ಷಣ ಮುಂದು ವರಿದು ಈಗ ೨೯೯ ಅಂಕಗಳೊಂದಿಗೆ ಪಾಸ್. ಕಂಪ್ಯೂಟರ್‌ನಲ್ಲಿ ಆಸಕ್ತಿ. ಅದೇ ಕ್ಷೇತ್ರದಲ್ಲಿ ಬೆಳಯುವ ಕನಸು.
೩.ಮಹದೇವಸ್ವಾಮಿ
ಇವನದ್ದು ಒಂಥರ ಸಿನಿಮಾ ಕತೆ. ಚಾಮರಾಜನಗರದವನು. ಮನೆಯಲ್ಲಿ ಬಡತನ. ಓದುವ ಆಸಕ್ತಿ.  ೬ನೇ ತರಗತಿ ನಂತರ ಹೆತ್ತವರು ಹೊಟೆಲ್‌ನಲ್ಲಿ ಕೆಲಸಕ್ಕೆ ಹಚ್ಚಿದರು. ಅದು ಹಿಡಿಸಲಿಲ್ಲ. ಮನೆ ಬಿಟ್ಟ. ರೈಲಿನಲ್ಲಿ ಭಿಕ್ಷೆಗೆ ನಿಂತ. ಹೀಗೇ ಒಂದು  ದಿನ,  ಮೈಸೂರಿಗೆ ಬಂದು ಚಾಮರಾಜ ಪುರಂ ನಿಲ್ದಾಣದಲ್ಲಿ ಇಳಿದ. ಬೇಸರ  ಸಾವಿನ ಕದ ತಟ್ಟು ವಂತೆ ಮಾಡಿತು. ರೈಲು ಹರಿದು ಹೋಗಲಿ ಎಂದು  ಹಳಿಗಳ ಮೇಲೆ ಕುಳಿತ. ಆದರೆ, ಪೊಲೀಸರು ರಕ್ಷಿಸಿ ಆರ್‌ಎಲ್‌ಎಚ್‌ಪಿಗೆ ಒಪ್ಪಿಸಿದರು. ಶಿಕ್ಷಣ ಮುಂದುವರಿಯಿತು. ೨೬೩ ಅಂಕ ಗಳೊಂದಿಗೆ ಬದುಕಿನ ‘ಅಗ್ನಿ ಪರೀಕ್ಷೆ’ಯಲ್ಲಿ ಮೊದಲ ಜಯ.
೪. ಚೇತನ್
ಸಮೀಪದ ನಾಗನಹಳ್ಳಿಯವ. ಮನೆಯಲ್ಲಿ ಬಡತನ. ಅಪ್ಪನ ‘ಚೆಲ್ಲಾಟ’ದಿಂದ ಮನಸ್ಸಿಗೆ  ಘಾಸಿ. ಹೀಗೇ ಇದ್ದಾಗ ಅಪ್ಪ ಅಪಘಾತದಲ್ಲಿ ಸತ್ತ. ಅಮ್ಮ ಮನೆಗೆಲಸಕ್ಕೆ ನಿಂತಳು. ಕಷ್ಟ ಸಹಿಸಲಾಗದೆ ಮನೆ ಬಿಟ್ಟು ಓಡಿದವ ಮೈಸೂರಿನಲ್ಲಿ ಭಿಕ್ಷೆ ಬೇಡಲು ನಿಂತ. ಚಿಂದಿ ಆಯುವುದು ಉಪ ಕಸುಬು.ನಾಲ್ಕು ವರ್ಷದ ಹಿಂದೆ ಸಂಸ್ಥೆ ಕಣ್ಣಿಗೆ ಬಿದ್ದು ನಾಲ್ಕೋ, ಐದೋ ಓದಿದ್ದವನಿಗೆ ಅನೌಪಚಾರಿಕ ಶಿಕ್ಷಣ ನೀಡಿ ೭ನೇ ತರಗತಿಗೆ  ಸೇರಿಸಿತು. ೨೫೨ ಅಂಕ ಪಡೆದು ಎಸ್‌ಎಸ್‌ಎಲ್‌ಸಿಯನ್ನು ಗೆದ್ದ.
೫. ಮುರುಗೇಶ್
ಈತನ ಬದುಕು ಹುಟ್ಟಿದ್ದೇ ಬೀದಿಯಲ್ಲಿ. ಮನ್ನಾರ‍್ಸ್ ಮಾರ್ಕೆಟ್‌ನ  ಬೀದಿ ಬದಿ ಬದುಕು ಸಾಗಿಸುತ್ತಿದ್ದ  ಹೆತ್ತವರು ಅಲ್ಲಿಯೇ ಕೊನೆಯುಸಿರೆಳೆದರು. ಎಳೆಯ ಪ್ರಾಯದಲ್ಲೇ ಬೋಟಿ ಬಜಾರಿನಲ್ಲಿ ದುಡಿಮೆ. ಓದು ಈತನ ಪಾಲಿಗೆ ಗಗನ ಕುಸುಮವೇ. ೮ ವರ್ಷದ ಹಿಂದೆ ಸಂಸ್ಥೆಗೆ ಸೇರಿದ ನಂತರ ‘ಆಶಾಕಿರಣ’ಮೂಡಿತು. ಒಂದೆರಡು ವರ್ಷದ ಅನೌಪಚಾರಿಕ ಶಿಕ್ಷಣದ ನಂತರ ೫ ನೇ ತರಗತಿಗೆ ದಾಖಲು. ೨೭೩ ಅಂಕ ಪಡೆದು ಪಾಸಾದವನಿಗೆ ಕನಸುಗಳು ದೊಡ್ಡವಿವೆ.
೬.ವೆಂಕಟೇಶ್
ಬದುಕಿನ  ಸಂಘರ್ಷ ಆರಂಭವಾಗಿದ್ದು ಚಿಂತಾಮಣಿ ಯಲ್ಲಿ. ತಂದೆ, ತಾಯಿ ಓದು ಬಿಡಿಸಿ ಕೆಲಸಕ್ಕೆ ಹಚ್ಚಿದ್ದೇ ನೆಪವಾಗಿ ಮನೆಯಿಂದ ಕಾಲ್ಕಿತ್ತ. ಬೆಂಗಳೂರಿನ ಬೀದಿಯಲ್ಲಿ ಹೂವು ಮಾರುವ ಕೆಲಸ. ನಂತರ, ಹೊಟೆಲ್‌ನಲ್ಲಿ ಕೆಲಸ. ಬದುಕು ಬೇಸರ ಎನ್ನಿಸಿ, ೧೫೦ ರೂ. ಕದ್ದು ಕಂಬಿ ಕಿತ್ತು ಬಂದು ನಿಂತದ್ದು ಮೈಸೂರಿನ ಬಸ್ ನಿಲ್ದಾಣದಲ್ಲಿ. ಇಲ್ಲೂ ಹೂ ಮಾರಿದ. ರಾತ್ರಿ, ಪುರಭವನ ಎದುರಿನ  ತಿಂಡಿ ಗಾಡಿಗಳಲ್ಲಿ ಕೆಲಸ. ಆರ್‌ಎಲ್‌ಎಚ್‌ಪಿ ರಕ್ಷಿಸಿದ ನಂತರ  ಓದಿನ ಕನಸು ಅರಳಿ ೨೧೯ ಅಂಕಗಳೊಂದಿಗೆ ಜಸ್ಟ್ ಪಾಸ್. ಸಂತಸದ  ಸಂಗತಿ ಎಂದರೆ, ಆತನ ಹೆತ್ತವರು ಪತ್ತೆ ಆಗಿದ್ದಾರಂತೆ.
೭. ಲತಾ
ಮೈಸೂರು ತಾಲೂಕಿನವಳು. ಅಪ್ಪ ಇಲ್ಲ.ಅಮ್ಮ ಊರೂರು ಸುತ್ತಿ,ಬಳೆ ಮಾರಿ ಬದುಕಿನ ಬಂಡಿ ಎಳೆಯುತ್ತಿದ್ದಳು. ಪುಟ್ಟ ಬಾಲೆಯೂ ಅಮ್ಮನೊಂದಿಗೆ ಹೆಜ್ಜೆ ಹಾಕುತ್ತಿ ದ್ದಳು. ಇದನ್ನು ನೋಡಿದ ಯಾರೋ ಕರುಣಾಳುಗಳು ಈಕೆಯನ್ನು ಸಂಸ್ಥೆಗೆ ದಾಖಲಿಸಿ ದರು. ಬಳೆ ಮಾರುವ ವೃತ್ತಿಯನ್ನೇ ಅನುಸರಿಸಬೇಕಿದ್ದ ಬಾಲೆ ೨೮೭ ಅಂಕ ಗಳೊಂದಿಗೆ ಎಸ್‌ಎಸ್‌ಎಲ್‌ಸಿಯನ್ನು ಜಯಿಸಿದ್ದಾಳೆ. ನರ್ಸ್ ಆಗಬೇಕೆಂಬುದು ಈಕೆಯ ಕನಸು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ