ರೈಲ್ವೆ ಇಲಾಖೆಗೆ ಯಾವಾಗ ಬುದ್ಧಿ ಬರುತ್ತೋ...

ಕುಂದೂರು ಉಮೇಶಭಟ್ಟ, ಮೈಸೂರು
ಮೂರು ವರ್ಷದ ಹಿಂದೆಯೇ ಇಂಥದೊಂದು ಅಪಘಾತ ಸಂಭವಿಸಿದಾಗಲೇ ರೈಲ್ವೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿತ್ತು, ಅವರಿಗೆ ಯಾವಾಗ ಬುದ್ದಿ ಬರುತ್ತೋ ಗೊತ್ತಾಗುತ್ತಿಲ್ಲ...
ಹೀಗೆ ಸಿದ್ದಲಿಂಗಪುರ, ನಾಗನಹಳ್ಳಿ, ಬೆಲವತ್ತ, ಕೆ.ಆರ್. ಮಿಲ್ ಕಾಲೋನಿಯ ಹಲವಾರು ನಿವಾಸಿಗಳು ಆಕ್ರೋಶ ಮಾತುಗಳನ್ನಾಡುವುದು ಸತ್ಯವೇ ಎನ್ನಿಸುತ್ತದೆ.
ಶನಿವಾರ ಮಧ್ಯಾಹ್ನ ಭಾರಿ ರೈಲ್ವೆ ದುರಂತ ತಪ್ಪಿರ ಬಹುದು. ಹೀಗೆ ಆಗಾಗ ಈ ಗ್ರಾಮಗಳ ಗ್ರಾಮಸ್ಥರು ರೈಲು ಡಿಕ್ಕಿ ಹೊಡೆಯುವುದನ್ನು ತಪ್ಪಿಸಿಕೊಳ್ಳುತ್ತಾರೆ. ಅವರಿಗೆ ಇಲ್ಲಿ ನಿತ್ಯ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ.
ಶ್ರೀರಂಗಪಟ್ಟಣದಿಂದ ನಾಗನಹಳ್ಳಿ ದಾಟಿ ವರುಣಾ ನಾಲೆಗೂ ಮುನ್ನ  ಇರುವ ತಿರುವು ಭಾರಿ ಅಪಾಯ ಕಾರಿ. ತಿರುವಿನ ಜತೆಗೆ ಇಲ್ಲಿನ ಮಾನವ ರಹಿತ ಕ್ರಾಸಿಂಗ್ ಅನ್ನು ನಿತ್ಯ ನೂರಾರು ಮಂದಿ ದಾಟುತ್ತಾರೆ. ಕೆ.ಆರ್.ಮಿಲ್ ಕಾಲೋನಿಯಿಂದ ಬೆಲವತ್ತ,       ಆರ್‌ಬಿಐ ಕಡೆಗೆ ಹೋಗಲು ಇದೇ ರೈಲ್ವೆ ಹಳಿಯನ್ನು ದಾಟಬೇಕು. ಕೆಲವೊಮ್ಮೆ ಹಳಿ ದಾಟುವಾಗ ರೈಲು ಏಕಾಏಕಿ ನುಗ್ಗಿದ ಉದಾಹರಣೆಗಳು ಇವೆ.
ಇದರಿಂದಲೇ ಇಂಥ ಅನಾಹುತಗಳು ಸಂಭವಿಸ ಬಾರದು, ಸಾವಿರಾರು ಮಂದಿ ಸುರಕ್ಷಿತ ಸಂಚಾರಕ್ಕೆ ಇಲ್ಲೊಂದು ಮೇಲ್ಸೇತುವೆ ನಿರ್ಮಿಸಿ ಎನ್ನುವ ಬೇಡಿಕೆಯನ್ನು ಜನ ಕೇಳುತ್ತಲೇ ಬಂದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಬಂದಿದ್ದ ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೂ ಮನವಿ ಸಲ್ಲಿಸಲಾಗಿದೆ. ಸಂಸದ ಎಚ್.ವಿಶ್ವನಾಥ್ ಕೂಡ ಮನವಿ ಸ್ವೀಕರಿಸಿ ದ್ದಾರೆ. ಇಷ್ಟಾದರೂ ರೈಲ್ವೆ ಅಧಿಕಾರಿಗಳಿಗೆ ಜನರ ಮನವಿ ಕೇಳಿಸುತ್ತಿಲ್ಲ. ಇದೇ ಕಾರಣಕ್ಕೆ ಈ ಭಾಗದ ಜನ ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು.
‘ನಾವು ಹಿಂದೆ ಬಹಳಷ್ಟು ಬಾರಿ ಮನವಿ ಕೊಟ್ಟಿದ್ದೇವೆ. ಈಗ ರೈಲ್ವೆ ಸಚಿವರೇ ಮನವಿ ಪಡೆದರೂ ಪ್ರಯೋಜನವಾಗಿಲ್ಲ. ಬರೀ ಭರವಸೆ ಮಾತ್ರ ನಮಗೆ ಸಿಗುತ್ತಿವೆ. ಇಂಥ ಅನಾಹುತ ಸಂಭವಿಸಿದಾಗಲೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ? ಅವರಿಗೆ ಯಾವಾಗ ಜ್ಞಾನ ಬರ‍್ತದೋ ನೋಡೋಣ ಎನ್ನುತ್ತಾರೆ ಕೆ.ಆರ್.ಮಿಲ್ ಕಾಲೋನಿಯ ಮನೋಹರ್.
ಹಿಂದೆಯೂ ತಪ್ಪಿದ್ದ ಅನಾಹುತ: ಮೂರು ವರ್ಷದ ಹಿಂದೆ ಮೈಸೂರು-ಮಯಿಲಾಡುದೊರೈ ರೈಲು ಹೊರಟಿದ್ದಾಗ ಬುಲ್ಡೋಜರ್ ಅಡ್ಡ ಬಂದಿತ್ತು. ಆಗ ದೊಡ್ಡ ಅನಾಹುತ ಸಂಭವಿಸಿರಲಿಲ್ಲ. ನಾಲ್ಕು ದಿನಗಳ ಹಿಂದೆ ಬೈಕ್ ಒಂದು ರೈಲಿಗೆ ಸಿಲುಕಿತ್ತು ಎಂದು ಗ್ರಾಮಸ್ಥರು ಹಾಗೂ ರೈಲ್ವೆ ಅಧಿಕಾರಿಗಳು ಹಳೆ ಘಟನೆ ಗಳನ್ನು ನೆನಪಿಸಿಕೊಳ್ಳುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ