ಜ್ಞಾನದ ಬಾಗಿಲು ತೆರೆದ ದಿಟ್ಟೆಯರು

ಈಚನೂರು ಕುಮಾರ್
ಸೂರಿನ ಲಕ್ಷ್ಮೀಪುರಂನಲ್ಲೊಂದು ಸುಂದರ ಭವನ. ಶಾಂತಿವಿಲಾಸ ಅದರ ಹೆಸರು. ಈ ಕಟ್ಟಡಕ್ಕೀಗ ಶತಮಾನೋತ್ಸವ ಸಂಭ್ರಮ. ಈ ಸಂಖ್ಯೆ ನೂರಷ್ಟೇ ನೆನಪಿಗೆ ಕಾರಣವಲ್ಲ. ಅಂಥ ಕಟ್ಟಡದಲ್ಲಿ ಸಾರ್ಥಕ ಜೀವನ ನಡೆಸಿದ್ದ ಎರಡು ಸಾಧಕಿಯರಿಂದ ಕಲ್ಲು ಮಣ್ಣುಗಳ ಆ ನಿರ್ಜೀವ ಕಟ್ಟಡಕ್ಕೂ, ಅದರ ಆಯುಸ್ಸಿಗೂ ಮೌಲ್ಯ.
ಕವಿ ದೇಶಿಕಾಚಾರ್ ರುಕ್ಮಿಣಿಯಮ್ಮ ಮತ್ತು ಎ.ಟಿ. ಲಕ್ಷ್ಮಮ್ಮ. ಬಹುಶಃ ಮೈಸೂರು ಭಾಗದಲ್ಲಿ ಬಿಟ್ಟರೆ ಉಳಿದಂತೆ ಇಂದಿನ ತಲೆಮಾರಿಗೆ ಈ ಎರಡೂ ಹೆಸರು ಅಪರಿಚಿತವೇ. ಆದರೆ ಅಂದಿನ ಅಗ್ಗಳಿಕೆ ಸಣ್ಣದೇನಲ್ಲ. ದಕ್ಷಿಣ ಭಾರತದ ಮೊದಲ ಮೂವರು ಪದವೀಧರೆಯರಲ್ಲಿ ಒಬ್ಬರು ಇದೇ ರುಕ್ಮಿಣಿಯಮ್ಮ. ಅವರ ಮಗಳು ಎ.ಟಿ.ಲಕ್ಷ್ಮಮ್ಮ. ಬಹಳ ಏನು ಬಂತು? ಒಂದೇ ಮಾತಿನಲ್ಲಿ ಹೇಳಿಬಿಡಬಹುದಾದರೆ ಕಳೆದ ಶತಮಾನದ ಮಾದರಿ ಹೆಣ್ಣುಗಳು. ಮಹಿಳೆ ಯರಿಗೆ eನದ ಬಾಗಿಲು ತೆರೆದು ಒಳಗೆ ಕರಕೊಂಡ ಸಾಧ್ವಿಮಣಿಯರು. ಸ್ತ್ರೀ ಸಂಕುಲದ ಮಟ್ಟಿಗೆ ಆರದ ನಂದಾದೀಪಗಳು.  ಇಂದೇನು ನಾವು ಕಾಣುತ್ತಿದ್ದೇವಲ್ಲಾ ಅಂಥ ಆಧುನಿಕತೆಗೆ, ಸ್ತ್ರೀ ಸಂಕುಲದ ಭವಿಷ್ಯದ ಸನ್ನಿವೇಶಕ್ಕೆ ಅದಾಗಲೇ ಕನ್ನಡಿ ಹಿಡಿದು ನಿಂತಿದ್ದರು ರುಕ್ಮಿಣಿಯಮ್ಮ. ಇಂಥ ಸೇವೆಯನ್ನು ಮಹಾರಾಜರು ಪರಿಗಣಿಸಿದ್ದು ‘ಲೋಕ ಸೇವಾ ಪರಾಯಿಣಿ’ ಎಂಬ ಬಿರುದು ನೀಡಿ. ಅಂದು ಇಡೀ ಮಹಿಳಾ ಸಂಕುಲ ಪಟ್ಟ ಖಷಿ ನೋಡಬೇಕಿತ್ತು. ಮಹಿಳಾ ಸಮ್ಮೇಳನಗಳು, ಮಹಿಳಾ ಸಮಾಜಗಳ ಸಭೆ ಎಲ್ಲೆಂದರಲ್ಲಿ ಪ್ರತೀ ಹೆಣ್ಣೂ ಇದು ತನಗೇ ಸಂದದ್ದು ಎಂದು ಭಾವಿಸಿ ಖುಷಿಪಟ್ಟಿದ್ದರೆ ಅದು ನೈಜ ಸೇವೆಯ ಪ್ರತೀಕ.
ರುಕ್ಮಿಣಿಯಮ್ಮ ಎಲ್ಲ ಅಮ್ಮಂದಿರ ಅದೇ ಜೀವನೋತ್ಸಾಹಕ್ಕೆ ಪ್ರತಿನಿಧಿ. ಹೆಣ್ಣೆಂಬ ಸ್ವಾಭಿಮಾನಕ್ಕೆ ಸಂಕೇತ. ಅದರಲ್ಲೂ ಅವರು ಶಿಕ್ಷಕಿ, ಹೀಗಾಗಿ ಸಹಜವಾಗಿಯೇ ಸಹಸ್ರಾರು ವಿದ್ಯಾರ್ಥಿನಿಯರಿಗೆ ತಾವು ನಡೆದ ಹಾದಿಯ ಹದುಳನ್ನೇ ಧಾರೆ ಎರೆದರು. ಮಹಾರಾಣಿ ಕಾಲೇಜಿನಲ್ಲಿ ಸವೆಸಿದ ೩೨ ವರ್ಷಗಳ ಅವಿಚ್ಛಿನ್ನವಾಗಿ ಸೇವಾವಧಿಯಲ್ಲಿ ಅವರಿಂದ ಪುಟವಿಟ್ಟಿಸಿಕೊಂಡ ಚಿನ್ನದ ಗಟ್ಟಿಗಳೆಷ್ಟೋ...
ಸಿಂಹಿಣಿಯ ಹೊಟ್ಟೆಯಲ್ಲಿ ಹುಟ್ಟಿದವರು ಎ.ಟಿ. ಲಕ್ಷ್ಮಮ್ಮ. ತಾಯಿ ರುಕ್ಮಿಣಿಯಮ್ಮನವರು ಮಹಾರಾಣಿ ಕಾಲೇಜಿನಲ್ಲಿ ಬದುಕು ಕಟ್ಟಿಕೊಂಡು ಸಾಹಿತ್ಯ -ಸಾಮಾಜಿಕ ಪರಿಶುದ್ಧತೆಗೆ ಹೋರಾಡಿದರೆ, ಲಕ್ಷ್ಮಮ್ಮ ಮಹಾರಾಣಿ ಹೈಸ್ಕೂಲನ್ನು ಕರ್ಮಭೂಮಿ ಮಾಡಿಕೊಂಡವರು. ವಾಕ್‌ಚಾತುರ್ಯ, ಭಾಷಣ ಗಾರಿಕೆಯಂತೂ ಹೆಸರುವಾಸಿ. ಅದಕ್ಕಾಗಿಯೇ ಇವರನ್ನು ‘ಲೇಡಿ ವಿತ್ ದಿ ಸಿಲ್ವರ್ ಟಂಗ್’ ಎಂದು ಕರೆಯಲಾಯಿತು.  ಕನ್ನಡತಿಯರಲ್ಲಿ ಸ್ವಾಭಿಮಾನದ ಮೊದಲ ಕಿಚ್ಚು ಹೊತ್ತಿಸಿದ, ಆಧುನಿಕ ಸ್ತ್ರೀ ಸಂಕುಲ ಸ್ಮರಿಸಲೇ ಬೇಕಾದ ಈ ಇಬ್ಬರು ದಿಟ್ಟೆಯರಿಗೊಂದು ಹ್ಯಾಟ್ಸ್ ಆಫ್ ಹೇಳದಷ್ಟು ಕೃತಘ್ನರೇ ನಾವು ?
ಮೊದಲಿಗಳಮ್ಮಾ...
ರುಕ್ಮಿಣಿಯಮ್ಮ ಹಲವು ಅಧಿಕಾರ, ಸ್ಥಾನಮಾನ ಅನುಭವಿಸಿದರು. ಜತೆಗೆ ಆಕೆ ಅರಮನೆ ಗುರು-ಮಾರ್ಗದರ್ಶಕ ಅಂಬಿಲ್ ನರಸಿಂಹ ಅಯ್ಯಂಗಾರ್ ಸಂಬಂಧಿಕರು. ಎಲ್ಲಕ್ಕಿಂತ ಹೆಚ್ಚಾಗಿ ‘ಮೊದಲು’ಗಳಿಗೆ ಈಕೆ ಪರ್ಯಾಯ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ಗೆ ನಾಮಕರಣಗೊಂಡ ಮೊದಲ ಸದಸ್ಯೆ. ಮೈಸೂರು ಎಕನಾಮಿಕ್ ಕಾನ್ಫರೆನ್ಸ್, ಓರಿಯಂಟಲ್ ಕಾನ್ಫರೆನ್ಸ್‌ಗಳಲ್ಲಿ ಪಾಲ್ಗೊಂಡ ಅಗ್ಗಳಿಕೆ. ಮೈಸೂರು ಪ್ರಜಾಪ್ರತಿನಿಧಿ ಸಭೆ, ಜಿಲ್ಲಾ ಮಂಡಳಿಯ ಸದಸ್ಯೆ. ಹಿಂದೂ ಕಾನೂನು ಸುಧಾರಣಾ ಸಮಿತಿಗೆ ಅನುಭವದ ಧಾರೆ. ರಾಜ್ಯಾಂಗ ಸುಧಾರಣಾ ಸಮಿತಿಗೂ ಆಯ್ಕೆ; ಗ್ರಾಮೀಣ ಮಹಿಳೆಯ ಅಕ್ಷರದ ಹಕ್ಕಿಗೆ, ಮೌಢ್ಯತೆಯ ನಾಶಕ್ಕೆ ರೂಪುಗೊಂಡ ಮೊದಲ ಆಂದೋಲನ.
ವಾತ್ಸಲ್ಯಮಯಿ ರುಕ್ಮಿಣಿಯಮ್ಮ ಹತ್ತಾರು ಮಹಿಳಾ ಸಂಘಗಳ ಸ್ಥಾಪಕಿ. ಅಖಿಲ ಭಾರತ ಮಹಿಳಾ ಸಮ್ಮೇಳನವನ್ನು ಕಳೆದ ಶತಮಾನದ ಪ್ರಾರಂಭದಲ್ಲೇ ನಡೆಸಿ ಯಶಸ್ವಿಯಾದಾಕೆ. ೧೯೧೮ರಲ್ಲಿ ಮಹಿಳಾ ಸಮಾಜ ಸ್ಥಾಪನೆ. ವಾಣಿವಿಲಾಸ ಲೇಡಿಸ್ ಕ್ಲಬ್ ಹಿಂದೆಯೂ ಇವರ ಪಾತ್ರವಿದೆ. ಬಾಲಕಿಯರ ಪ್ರಾಥಮಿಕ ಶಾಲೆಗಳು ಮೈಸೂರಿನಲ್ಲಿ ಆರಂಭವಾಗಲು ಉತ್ತೇಜನ ನೀಡಿದವರು. ಅವರಿಗೆ ಅಭಿಮಾನಿ ಗಳು ಇಟ್ಟ ಹೆಸರು- ‘ವರ್ಡ್ಸ್ ವರ್ತ್’.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ