ಕರುನಾಡ ‘ಕಪ್ಪು’ ಕಥೆ !

ಚೀ.ಜ.ರಾಜೀವ,  ಮೈಸೂರು
ಅಪಾಯದಲ್ಲಿ ಚಿತ್ರದುರ್ಗ, ದಾವಣಗೆರೆ... ಕಪ್ಪು ನಗರಗಳ ವರ್ಗಕ್ಕೆ ಸೇರಿದ ಬೆಂಗಳೂರು, ಮಂಗಳೂರು, ಬಳ್ಳಾರಿ, ಶಿವಮೊಗ್ಗ ...  ಇನ್ನೂ ಸ್ವಚ್ಛವಾಗಬೇಕಾಗಿರುವ  ಮೈಸೂರು... !
ಕೇಂದ್ರ ನಗರಾಭಿವೃದ್ಧಿ ಇಲಾಖೆ  ೨೦೦೯-೧೦ನೇ ಸಾಲಿನಲ್ಲಿ ನಡೆಸಿರುವ ಸ್ವಚ್ಛತಾ ಸಮೀಕ್ಷೆಯ ಸಾರವಿದು. ದೇಶದ ೪೨೩ ನಗರಗಳ ಪೈಕಿ ಮೈಸೂರಿಗೆ  ಎರಡನೇ ರ‍್ಯಾಂಕ್ ಲಭಿಸಿದೆ  ಎಂದು ಮುಖ್ಯಮಂತ್ರಿ ಸಹಿತ ಎಲ್ಲರೂ ಹೊಗಳುತ್ತಲೇ ಇದ್ದಾರೆ. ಆದರೆ, ಸಮೀಕ್ಷೆಯೊಳಗೆ ಅಡಗಿದ ಸತ್ಯವೆಂದರೆ ಮೈಸೂರು ಸಂಪೂರ್ಣ ಸ್ವಚ್ಛ ನಗರವಲ್ಲ. ಮೊದಲ ರ‍್ಯಾಂಕ್ ಪಡೆದಿರುವ ಚಂಡೀಗಢ ಸೇರಿದಂತೆ ದೇಶದ ಯಾವುದೇ ನಗರವೂ ಸ್ವಚ್ಛ  ಹಾಗೂ ಆರೋಗ್ಯವಂತ ನಗರವಾಗಿಲ್ಲ. ಮೈಸೂರು-‘ಸುಧಾರಣೆಯಾಗುತ್ತಿರುವ ಅನೈರ್ಮಲ್ಯ ಪೀಡಿತ ನಗರ’ವಷ್ಟೆ . ಅಂದರೆ- ಇರುವ ಅನೈರ್ಮಲ್ಯಪೀಡಿತ ನಗರಗಳ ಪೈಕಿ ಮೈಸೂರು ವಾಸಿ !
ಸಮೀಕ್ಷೆಯ ಹಿನ್ನೆಲೆಯಲ್ಲಿ ಮೈಸೂರು ಪಾಲಿಕೆ ಸೇರಿದಂತೆ  ವಿವಿಧ ನಗರ/ಪಟ್ಟಣಗಳ ಸ್ಥಳೀಯ ಆಡಳಿತಗಳು ಬೆನ್ನುತಟ್ಟಿ ಕೊಳ್ಳುತ್ತಿರುವ ಪ್ರಕಾರ ನಮ್ಮ ನಗರಗಳು ಸ್ವಚ್ಛವಾಗಿಲ್ಲ. ಸಮೀಕ್ಷೆಯ ಸಾರಾಂಶದಲ್ಲಿ ತಮಗೆ ಬೇಕಿರುವ ಅಂಶವನ್ನಷ್ಟೇ ಆಯ್ದು, ಅದನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿಕೊಳ್ಳು ತ್ತಿವೆ. ರಾಜ್ಯದ ೨೫ ನಗರಗಳ ಸ್ವಚ್ಛತಾ ಕಾಳಜಿಯೂ ಬಹಿರಂಗವಾಗಿದೆ. ದೇಶದ ಮೊದಲ ೨೫ ರ‍್ಯಾಂಕ್‌ಗಳ ಪಟ್ಟಿಯಲ್ಲಿ ರಾಜ್ಯದ ಮೈಸೂರು-೨, ಮಂಗಳೂರು-೮, ಬೆಂಗಳೂರು-೧೨, ಮಂಡ್ಯ-೧೫ ಮತ್ತು ಬೀದರ್-೨೨ನೇ  ಸ್ಥಾನ ಪಡೆದಿವೆ.  ನಿಜವಾಗಿಯೂ ಸಮೀಕ್ಷೆ ಏನು ಹೇಳುತ್ತಿದೆ ಎಂಬ ಸಂಗತಿ ಇಲ್ಲಿದೆ.
ಯಾಕೆ ಈ ಸಮೀಕ್ಷೆ 
೨೦೦೧ರ ಜನಸಂಖ್ಯೆ ಪ್ರಕಾರ  ೧ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ದೇಶದ ೪೨೩ ನಗರಗಳ ನೈರ್ಮಲ್ಯ ಅಳೆದು, ರ‍್ಯಾಂಕ್ ನೀಡಲು ಕೇಂದ್ರ ನಗರಾಭಿವೃದ್ಧಿ ಇಲಾಖೆ ಪ್ರತಿಷ್ಠಿತ ಮೂರು ಏಜೆನ್ಸಿಗಳ ಮೂಲಕ ಸಮೀಕ್ಷೆ  ನಡೆಸಿದೆ.  ಈ ಮೂಲಕ ಪರಸ್ಪರ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವುದು ಕೇಂದ್ರ ಸರಕಾರದ ಉದ್ದೇಶ. ಮೂರು ಸ್ವತಂತ್ರ ಸಂಸ್ಥೆಗಳ ಪ್ರತಿನಿಧಿಗಳು ಎಲ್ಲ ನಗರಗಳಿಗೂ ಭೇಟಿ ನೀಡಿ, ಅಲ್ಲಿನ ಸ್ಥಿತಿಯನ್ನು ಅಧ್ಯಯನ ಮಾಡಿದ್ದಾರೆ. ಬಳಿಕ ರಾಜ್ಯ ಸರಕಾರ ಹಾಗೂ ಸ್ಥಳೀಯ ಆಡಳಿತದ ಮುಖ್ಯಸ್ಥರೊಂದಿಗೆ ಚರ್ಚಿಸಿ, ವರದಿ ಸಿದ್ಧಪಡಿಸಿದ್ದಾರೆ. ಒಂದರ್ಥದಲ್ಲಿ, ಇಲ್ಲಿರುವ ಶೇ. ೫೦ರಷ್ಟು ಮಾಹಿತಿ ಸ್ಥಳೀಯ ಸಂಸ್ಥೆಗಳು ನೀಡಿದ ಅಂಕಿ-ಅಂಶ, ವರದಿಯನ್ನು ಆಧರಿಸಿದೆ !
ಮಾನದಂಡಗಳೇನು ?
ನಗರದಲ್ಲಿರುವ ಬಯಲು ಶೌಚಾಲಯ ಮುಕ್ತ ವ್ಯವಸ್ಥೆ, ಬಡ ಜನತೆ ಹಾಗೂ ಕೊಳೆಗೇರಿ ನಿವಾಸಿಗಳಿಗೆ ಕಲ್ಪಿಸಿರುವ ಶೌಚಾಲಯ ವ್ಯವಸ್ಥೆ ಮತ್ತು ಅವುಗಳ ಸಮರ್ಪಕ  ನಿರ್ವಹಣೆ-ಬಳಕೆ, ಸಾರ್ವಜನಿಕ ಶೌಚಾಲಯಗಳ  ಲಭ್ಯತೆ, ಶೌಚಗುಂಡಿಗಳಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರ ಸ್ಥಿತಿ-ಗತಿ, ಅವರಿಗೆ ನೀಡುತ್ತಿರುವ ಆಧುನಿಕ ಸೌಲಭ್ಯ-ಪರಿಕರ ಗಳು, ಒಳಚರಂಡಿ ನೀರಿನ ಸಂಸ್ಕರಣೆ ಮತ್ತು ಬಳಕೆ, ಘನ ತ್ಯಾಜ್ಯ ನಿರ್ವಹಣೆ, ಶುದ್ಧ ಕುಡಿಯುವ ನೀರಿನ ಪೂರೈಕೆ,  ನಗರಕ್ಕೆ ನೀರು ಪೂರೈಸುವ ಸಂಪನ್ಮೂಲ ಹಾಗೂ ಅಂತರ್ಜಲದ ಗುಣಮಟ್ಟ, ಸಂಸ್ಕರಣೆ ಸೇರಿದಂತೆ ಕೆಲ ಸೌಲಭ್ಯಗಳ ಲಭ್ಯತೆ ಹಾಗೂ ಸಮರ್ಪಕ ನಿರ್ವಹಣೆಯನ್ನು ಅಧ್ಯಯನ ನಡೆಸಲಾಗಿದೆ. ಸಾರ್ವಜನಿಕರು ಹೆಚ್ಚು ಸೇರುವ ಬಸ್ ಹಾಗೂ ರೈಲು ನಿಲ್ದಾಣ, ಮಾರುಕಟ್ಟೆ ಪ್ರದೇಶಗಳ ಸ್ವಚ್ಛತೆ ಯನ್ನೂ ಅಳೆಯಲಾಗಿದೆ. ಈ ಎಲ್ಲ ಅಂಶಗಳಿಗೂ ನಿಗದಿತ  ಅಂಕ ಎಂದು ನೀಡಿ, ನಗರಗಳ ರ‍್ಯಾಂಕ್ ಪಟ್ಟಿ ತಯಾರಿಸಲಾಗಿದೆ. 
ಮೈಸೂರು ನೀಲಿಯೂರು
ಸಮೀಕ್ಷೆಗೆ ಆಯ್ದುಕೊಂಡ ನಗರಗಳನ್ನು ನಾಲ್ಕು ವರ್ಗಗಳ ನ್ನಾಗಿಸಲಾಗಿದೆ. ತಾನು ನಿಗದಿ ಪಡಿಸಿದ ಮಾನದಂಡಗಳು ಸಂಪೂರ್ಣ ಮಟ್ಟಿಗೆ ಅನುಷ್ಠಾನದಲ್ಲಿದ್ದರೆ, ಆ ನಗರಗಳನ್ನು ಹಸಿರು ನಗರ ಎಂದು ವರ್ಗೀಕರಿಸಿದೆ. ಅಲ್ಲಿಯ ನಗರಗಳನ್ನು ಮಾತ್ರ ‘ಆರೋಗ್ಯಪೂರಿತ ನಿರ್ಮಲ ನಗರಿ’ ಎಂದು ಘೋಷಿಸಿದೆ. ಇಲ್ಲಿ ಸ್ಥಾನ ಪಡೆಯಲು ೯೧ ರಿಂದ ೧೦೦ ಅಂಕ ಗಳಿಸಬೇಕು. ಬೇಸರದ ಸಂಗತಿ ಎಂದರೆ, ಯಾವ ನಗರವೂ ಈ ವರ್ಗದಲ್ಲಿ ಸ್ಥಾನ ಪಡೆದಿಲ್ಲ !
ನಂತರದ ಸ್ಥಾನ ನೀಲಿ ನಗರಗಳದ್ದು!. ಸಮೀಕ್ಷೆ ಪ್ರಕಾರ- ಸುಧಾರಣೆ ಕಾಣುತ್ತಿರುವ ಆದರೂ, ಅನೈರ್ಮಲ್ಯನಗರಗಳು. ಈ ವರ್ಗದಡಿ ೭೩.೪೮ ಅಂಕ ಪಡೆದ ಚಂಡೀಗಢ ಪ್ರಥಮ ಸ್ಥಾನ ಪಡೆದರೆ, ೭೦.೬೫ ಅಂಕ ಪಡೆದ ಮೈಸೂರಿಗೆ ಎರಡನೇ ಸ್ಥಾನ. ಸಮಾಧಾನದ ಸಂಗತಿ ಅಂದ್ರೆ, ದೇಶದ ೪೨೩ ನಗರಗಳ ಪೈಕಿ ಚಂಡೀಗಢ, ಮೈಸೂರು, ಸೂರತ್ ಮತ್ತು ದಿಲ್ಲಿಯ ನ್ಯೂ ದಿಲ್ಲಿ ಮುನ್ಸಿಪಾಲ್ ಕೌನ್ಸಿಲ್ ಮಾತ್ರ ಈ ನೀಲಿ ನಗರಗಳು.
ಕೋಲಾರ ಕಪ್ಪು 
ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಾಣಬೇಕಾದ ನಗರಗಳನ್ನು ಸಮೀಕ್ಷೆ ಕಪ್ಪು ವರ್ಗದ ಪಟ್ಟಿಗೆ ಸೇರಿಸಿದೆ. ಸುಮಾರು ೨೨೮ ನಗರಗಳ ಪೈಕಿ ಬೆಂಗಳೂರು, ಮಂಗಳೂರು, ಮಂಡ್ಯ, ಬೀದರ್,  ಶಿವಮೊಗ್ಗ, ಉಡುಪಿ ಸೇರಿದಂತೆ ೨೧ ನಗರಗಳು ಈ ಪಟ್ಟಿಯಲ್ಲಿವೆ. ರಾಜ್ಯದ ಶೇ. ೮೮ರಷ್ಟು ನಗರಗಳು ಕಪ್ಪು ವರ್ಗಕ್ಕೆ ಸೇರಿವೆ. ಶೇ.೯೦ಕ್ಕಿಂತ ಹೆಚ್ಚು ಕಡೆ, ಮನುಷ್ಯನ ಮಲ-ಮೂತ್ರ ಸಂಗ್ರಹ ಮತ್ತು ನಿರ್ವಹಣೆ ಸ್ಥಿತಿ ಸುಧಾರಿಸಿದೆ. ಆದರೆ, ಇದೇ ಮಾತನ್ನು ತ್ಯಾಜ್ಯ ನೀರುಗಳ ಸಂಸ್ಕರಣೆ ವಿಷಯದಲ್ಲಿ ಹೇಳುವಂತಿಲ್ಲ  !
ಚಿತ್ರದುರ್ಗ ಕೆಂಪು ನಗರ !
ಸಾರ್ವಜನಿಕರ ಆರೋಗ್ಯ ಇನ್ನೇನು ಸಂಪೂರ್ಣ ಹದಗೆಟ್ಟು ಹೋಗಲಿದೆ ಎಂಬ ಭಯಾನಕ ಸ್ಥಿತಿಯ ಅಂಚಿನಲ್ಲಿರುವ, ಪರಿಸರ ಹಾಗೂ ಸ್ವಚ್ಛತೆಗೆ ಸಂಬಂಧಿಸಿ ತುರ್ತು ಚಿಕಿತ್ಸೆಯನ್ನು ನೀಡಲೇಬೇಕಿರುವ ನಗರಗಳನ್ನು ಸಮೀಕ್ಷೆ ಕೆಂಪು ಪಟ್ಟಿಗೆ ಸೇರಿಸಿದೆ. ಆತಂಕಕಾರಿ ವಿಷಯವೆಂದರೆ, ಈ ವರ್ಗದ ಪಟ್ಟಿಯಲ್ಲಿ ಶೇ. ೪೫ ನಗರಗಳು ಇವೆ !
ರಾಜಸ್ತಾನ್, ಗುಜರಾತ್ ಮತ್ತು ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಭಾರತದ ಬಹುತೇಕ ನಗರಗಳು ನೈರ್ಮಲ್ಯದ ವಿಷಯದಲ್ಲಿ ಆತಂಕಕಾರಿ. ರಾಜ್ಯದ ಚಿತ್ರದುರ್ಗ ಮತ್ತು ದಾವಣಗೆರೆ ಈ ಪಟ್ಟಿಯಲ್ಲಿವೆ. ರಾಜ್ಯ ಸರಕಾರ  ಈ ಊರುಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಬೇಕು. ಸಮೀಕ್ಷೆ ಪ್ರಕಾರ ಇವು ಅಪಾಯಕಾರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ