ಎಚ್ಚರ...! ನಿಮ್ಮ ಆರೋಗ್ಯಕ್ಕೆ ಮುನ್ನೆಚ್ಚರಿಕೆ ಅಗತ್ಯ

ಜೆ.ಶಿವಣ್ಣ, ಮೈಸೂರು
ಸದ್ದಿಲ್ಲದೇ ಕಾಲಿಡುತ್ತಿವೆ ಸಾಂಕ್ರಾಮಿಕ ಕಾಯಿಲೆಗಳು. ನಗರದ ಹಲವೆಡೆ ಈಗಾಗಲೇ ತಮ್ಮ ಇರುವಿಕೆಯನ್ನು ಪ್ರಚುರಪಡಿಸುತ್ತಿವೆ.
ಕುವೆಂಪುನಗರ ಸೇರಿದಂತೆ ವಿವಿಧೆಡೆ ವೈರಾಣು ಜ್ವರ (ವೈರಲ್ ಫೀವರ್), ವಾಂತಿ ಭೇದಿ ದಾಂಗುಡಿ ಇಟ್ಟಿದ್ದು, ಮುಂಗಾರು ಅಡಿಯಿಡುತ್ತಿರುವ ಬೆನ್ನಲ್ಲೇ ತಮ್ಮ ಪ್ರತಾಪ ಪ್ರದರ್ಶಿಸಲಾರಂಭಿಸಿವೆ. ಈಗಾಗಲೇ ಅನೇಕರು ಹಾಸಿಗೆ ಹಿಡಿದಿದ್ದಾರೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ದೌಡಾಯಿಸಿದ್ದು, ಕಾಯಿಲೆ ಉಲ್ಭಣಿಸುತ್ತಿದೆ.
ಆಸ್ಪತ್ರೆಗಳಲ್ಲಿ ವೈದ್ಯರಿಂದ ಹಾಸಿಗೆ ಖಾಲಿ ಇಲ್ಲ ಎನ್ನುವ ಉತ್ತರದೊಂದಿಗೆ ಮನೆಯಲ್ಲೇ ವಿಶ್ರಮಿಸಲು ಸಲಹೆ ಸಿಗುತ್ತಿದೆ. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದಿದ್ದೇ ತಡ ಕುಟುಂಬದ ಇತರರೂ ಜ್ವರ ಬಾಧೆಗೆ ಸಿಲುಕುತ್ತಿದ್ದಾರೆ. ಈಗ ಖಾಸಗಿ ಚಿಕಿತ್ಸಾ ಕೇಂದ್ರಗಳು, ಕ್ಲಿನಿಕ್‌ಗಳಲ್ಲಿ ಜನದಟ್ಟಣೆ. ಈಗಾಗಲೇ ಕುವೆಂಪುನಗರ, ರಾಮಕೃಷ್ಣನಗರ, ಜನತಾನಗರ, ಶಾರದಾದೇವಿ ನಗರ, ಜಯಲಕ್ಷ್ಮಿಪುರಂ, ಜಲಪುರಿ ಮೊದಲಾ ದೆಡೆ ವೈರಾಣು ಜ್ವರ ಪ್ರಕರಣಗಳು ದಾಖಲಾಗಿವೆ.
ಅಲ್ಲಲ್ಲಿ ಚಿಕೂನ್‌ಗುನ್ಯಾ, ಡೆಂಗೆ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಯಾವುವೂ ದೃಢಪಟ್ಟಿಲ್ಲ. ಕಾಯಿಲೆ ಉಲ್ಬಣಿಸಿದ ರೋಗಿಗಳು ಆಸ್ಪತ್ರೆಗಳ ಕದ ತಟ್ಟುತ್ತಿದ್ದು, ಚಿಕಿತ್ಸೆ ಲಭಿಸುವುದಾದರೂ ಹಾಸಿಗೆ ಸಿಗುತ್ತಿಲ್ಲ. ಕಳೆದ ವರ್ಷ ಡೆಂಗೆ, ಚಿಕ್ಯೂನ್‌ಗುನ್ಯಾ, ಹಂದಿ ಜ್ವರ ದಾಂಧಲೆ ನಡೆಸಿ ನಡುಕ ಹುಟ್ಟಿಸಿದ್ದಿನ್ನೂ ಮರೆತಿಲ್ಲ. ಪಾಲಿಕೆ, ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವರ್ಷವೂ ಅದು ಮರುಕಳಿಸುವ ಆತಂಕ ಹೆಚ್ಚಾಗಿದೆ.
ಕಳೆದ ವರ್ಷದ ಮಾಹಿತಿ: ಮುಂಗಾರು ಪೂರ್ವ ಮತ್ತು ಬಳಿಕ ಸಾಂಕ್ರಾಮಿಕ ರೋಗ ಗಳು ಹೆಚ್ಚು. ೨೦೦೯ ನೇ ಸಾಲಿನಲ್ಲಿ ಜನವರಿ ಯಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ ದೃಢೀ ಕೃತ ಡೆಂಗೆ ಪ್ರಕರಣಗಳ ಸಂಖ್ಯೆ ೪೨. ಚಿಕೂನ್‌ಗುನ್ಯಾ - ೪೬, ಕರುಳು ಬೇನೆ- ೮೯೯, ಕಾಲರಾ- ೨೭ ಹಾಗೂ ಮಲೇರಿಯಾ ೪೧ ಪ್ರಕರಣ.
ಮನೆ ಮನೆ ತಪಾಸಣೆ: ನಗರಪಾಲಿಕೆ ಈಗಾಗಲೇ ರೋಗವಾಹಕವಾದ ಸೊಳ್ಳೆಗಳ ವಿರುದ್ಧ ಸಮರ ಸಾರಿದ್ದು, ನಿರ್ಮೂಲನೆಗೆ ಬಳಸಬಹುದಾದ ಎಲ್ಲಾ ವಿಧಾನಗಳನ್ನು ಕಾರ್ಯರೂಪಕ್ಕೆ ತರಲಿದೆ. ಆರೋಗ್ಯ ಇಲಾಖೆ ಸಹಭಾಗಿತ್ವದಲ್ಲಿ ಚಿಕೂನ್‌ಗುನ್ಯಾ, ಡೆಂಗೆ ಜ್ವರ ಶಂಕಿತ ಪ್ರದೇಶಗಳಲ್ಲಿ ಮನೆ ಮನೆ ತಪಾಸಣಾ ಕಾರ್ಯ ಆರಂಭವಾಗಿದೆ.
ನಗರದ ವಿವಿಧ ನರ್ಸಿಂಗ್ ಕಾಲೇಜುಗಳ ಸುಮಾರು ೩೦೬ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಆರೋಗ್ಯ ತಪಾಸಣೆ, ಕರಪತ್ರಗಳ ಮೂಲಕ ಆರೋಗ್ಯ ಜಾಗೃತಿ, ನೀರು ಸಂಗ್ರಹಾಗಾರಗಳ ಸ್ವಚ್ಛತೆ ಕೈಗೊಂಡಿದ್ದಾರೆ. ಜಯನಗರ, ಜನತಾನಗರ, ಕುವೆಂಪುನಗರ, ರಾಮಕೃಷ್ಣನಗರ, ಸರಸ್ವತಿಪುರಂ, ಉದಯಗಿರಿ ಮುಂತಾದೆಡೆ ಮನೆ ಮನೆ ತಪಾಸಣೆ ನಡೆಸಿ ಡೆಮಿಫೋಸ್ ದ್ರಾವಣವನ್ನು ಸೊಳ್ಳೆಗಳ ಲಾರ್ವಾಗಳನ್ನು ನಿರ್ಜೀವಗೊಳಿಸಲು ಸಿಂಪಡಿಸಲಾಗಿದೆ.
ಸಂಪರ್ಕ ಸಾಧನಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ನಿರ್ಧರಿಸಿರುವ ಪಾಲಿಕೆ ಎಸ್‌ಎಂಎಸ್ ಮೂಲಕ ಜನರಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲಿದೆ. ಆಕಾಶವಾಣಿ, ಎಫ್‌ಎಂ ರೇಡಿಯೋನಲ್ಲಿ ಪ್ರಚಾರ, ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ವೇಳೆ ಮಕ್ಕಳಿಗೆ ತಿಳಿವಳಿಕೆ ನೀಡುವ ಕಾರ್ಯವೂ ನಡೆದಿದೆ. ಜಿಲ್ಲಾ ಆರೋಗ್ಯ ಇಲಾಖೆಯೂ  ಮಲೇರಿಯಾ ಮಾಸಾಚರಣೆ ಆರಂಭಿಸಿದ್ದು, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ನಿರಂತರ ಸಮೀಕ್ಷಾ ಕಾರ್ಯ ನಡೆದಿದೆ.
ಮೀನು ಅಸ್ತ್ರ: ಸೊಳ್ಳೆಗಳ ಆಶ್ರಯ ತಾಣವಾದ ಕೆರೆಗಳಲ್ಲಿ ಅವುಗಳ ಸಂಹಾರಕ್ಕೆ ಮೀನುಗಳನ್ನು ಪ್ರಯೋಗಿಸಲಾಗುತ್ತಿದೆ. ಮಲೇರಿಯಾ, ಡೆಂಗೆ ಮತ್ತು ಚಿಕೂನ್‌ಗುನ್ಯಾ ಹರಡುವ ಸೊಳ್ಳೆಗಳ ನಿಯಂತ್ರಣಕ್ಕೆ ಲಾರ್ವಾ ತಿಂದು ಹಾಕುವ ಗ್ಯಾಂಬೂಸಿಯಾ ಮತ್ತು ಗಪ್ಪಿ ಮೀನಿನ ಮರಿಗಳನ್ನು ಮೀನುಗಾರಿಕೆ ಇಲಾಖೆ ಸಹಭಾಗಿತ್ವ ದಲ್ಲಿ ಪಾಲಿಕೆಯು ನಗರದ ಎಲ್ಲ ಕೆರೆಗಳಿಗೆ ಬಿಡುತ್ತಿದೆ.
ನೀರಿನ ತೊಟ್ಟಿಗಳು, ಕಾರಂಜಿ ಮತ್ತಿತರ ನೀರಿನ ಸ್ಥಳಗಳಲ್ಲಿ ಈ ಮೀನುಗಳನ್ನು ಬಿಡಬಹುದು. ಚಿಕೂನ್ ಗುನ್ಯಾ, ಡೆಂಗೆ ಮೊದಲಾದ ರೋಗಗಳನ್ನು ಹರಡುವ ಈಡಿಸ್ ಈಜಿಪ್ಟಸ್ ಜಾತಿಯ ಸೊಳ್ಳೆಗಳು ಸ್ವಚ್ಛ ನೀರಿನಲ್ಲೇ ಮೊಟ್ಟೆ ಹಾಕಿ ಮರಿ ಮಾಡುತ್ತವೆ.
ಈ ಹೊಸ ವಿಧಾನದ ಮೂಲಕ ನಿಯಂತ್ರಿಸಲಾಗುತ್ತಿದೆ. ಸಾರ್ವ ಜನಿಕರೂ ಕೈಜೋಡಿಸಿದರೆ ಮಾತ್ರ ಸಾಂಕ್ರಾಮಿಕ ರೋಗಗಳ ತಡೆ ಸಾಧ್ಯ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ