ಪಾರ್ಟಿಯಲ್ಲ, ಇವು ಜಾತಿಯ ಔತಣ ಕೂಟಗಳು !

ವಿಕ ಸುದ್ದಿಲೋಕ ಮೈಸೂರು
ದಕ್ಷಿಣ ಪದವೀಧರರ ಕ್ಷೇತ್ರದಂದ ವಿಧಾನ ಪರಿಷತ್‌ಗೆ ನಡೆಯು ತ್ತಿರುವ ಚುನಾವಣೆಯಲ್ಲಿ ಪ್ರಬುದ್ಧ ಮತದಾರರನ್ನು ಸೆಳೆಯಲು ಔತಣಕೂಟಗಳನ್ನು  ಏರ್ಪಡಿಸು ತ್ತಿರುವುದು ಹೊಸ ವಿಷಯ ವೇನಲ್ಲ. ಆದರೆ, ಈ ಔತಣಕೂಟಗಳು ಕೂಡ ಈಗ ಜಾತಿಯ ನೆಲೆಯಲ್ಲಿ, ವೃತ್ತಿಯ ನೆಲೆಯಲ್ಲಿ  ನಡೆಯುತ್ತಿವೆ.  ಜಾತಿ -ವೃತ್ತಿ ಪ್ರೇಮ, ಮತ ದಾರರಿಗೆ ಆಮಿಷ ಒಡ್ಡುವ ಕಡು ಭ್ರಷ್ಟತನಕ್ಕೆ ಹೊಸ ಪರಿಭಾಷೆಯನ್ನು ಹೊಸೆಯಲಾಗಿದೆ ! ಕಾಂಗ್ರೆಸ್, ಜಾತ್ಯತೀತ ಜನತಾದಳ ಮತ್ತು ಬಿಜೆಪಿ-ಈ ಮೂರು         ಪಕ್ಷಗಳು ಈ ವಿಚಾರದಲ್ಲಿ  ಪೈಪೋಟಿಗೆ ಇಳಿದಿವೆ.
ಸಮಾಜ ಬಾಂಧವರಿಗೆ ಪಾರ್ಟಿ
ಮತದಾನ ಸಮೀಪಿಸುತ್ತಿರುವಂತೆ ಚುನಾವಣಾ ಪ್ರಚಾರವನ್ನು ಬಿರುಸು ಗೊಳಿಸಿರುವ ಬಿಜೆಪಿ, ಆಯ್ದ ಜಾತಿ ಹಾಗೂ ವೃತ್ತಿ ಬಾಂಧವರಿಗಾಗಿ ಹೋಟೆಲ್‌ಗಳಲ್ಲಿ  ಔತಣಕೂಟಗಳನ್ನು ಏರ್ಪಡಿಸುತ್ತಿದೆ.
ಮಂಗಳವಾರ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ  ‘ಸ್ನೇಹ ಮಿಲನ’ ಹೆಸರಿನಲ್ಲಿ ನಡೆದ  ಕಾರ್ಯಕ್ರಮದಲ್ಲಿ  ನಗರ ಮತ್ತು ಜಿಲ್ಲೆಯ ಪ್ರಬಲ ಕೋಮಿನ  ಮುಖಂಡರು, ಮತ ಬಾಂಧವರು ಭಾಗವಹಿಸಿದ್ದರು.  ಶಾಸಕ ಎಚ್. ಎಸ್. ಶಂಕಲಿಂಗೇಗೌಡ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಜಿ. ಟಿ. ದೇವೇಗೌಡರ ಹೆಸರಿನಲ್ಲಿ  ಆಯೋಜನೆಯಾಗಿದ್ದ  ಈ ಕಾರ್ಯಕ್ರಮದಲ್ಲಿ  ಮಾಜಿ ಸಚಿವೆ ಶೋಭಾ ಕರಂದ್ಲಾಜೆ  ಅವರೇ ಕೇಂದ್ರ ಬಿಂದು. ಮೈಸೂರು ಪಾಲಿಕೆಯಲ್ಲಿರುವ  ಆ ಸಮುದಾಯಕ್ಕೆ ಸೇರಿದ ಪಾಲಿಕೆ ಸದಸ್ಯರು ಅತ್ಯುತ್ಸಾಹದಲ್ಲಿ ಓಡಾಟ ನಡೆಸಿ, ತಮ್ಮ ಸಮಾಜದ ಬಾಂಧವರನ್ನು ಕಲೆ ಹಾಕಿದ್ದಾರೆ. ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಬಿ. ಪಿ. ಮಂಜುನಾಥ್, ಪಾಲಿಕೆ ಸದಸ್ಯರಾದ ನಾಗೇಂದ್ರ, ನಂದೀಶ್ ಪ್ರೀತಂ, ನಿಂಗಣ್ಣ ಭಾಗ ವಹಿಸಿದ  ಇನ್ನಿತರ ಮುಖಂಡರು. ಅಭ್ಯರ್ಥಿ ಗೋ. ಮಧು ಸೂದನ್ ಕೂಡ ಭಾಗವಹಿಸಿ  ಪ್ರಚಾರ ನಡೆಸಿದರು. ಜಿಲ್ಲೆಯ ೨೫೦ಕ್ಕೂ ಹೆಚ್ಚು ಸರಕಾರಿ ಅಧಿಕಾರಿಗಳು ಭಾಗವಹಿಸಿ ಬಿರಿಯಾನಿ ಊಟವನ್ನು ಸವಿದರು.
ವೃತ್ತಿ ಬಾಂಧವರಿಗೆ ಊಟ
‘ಕರ್ನಾಟಕದ ಸಮಗ್ರ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ’ ಕುರಿತು ಬಿಜೆಪಿ ಜೂ. ೧೬ರಂದು ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ  ಸಂವಾದ ಕಾರ‍್ಯಕ್ರಮ ಆಯೋಜಿಸಿದೆ. ಸ್ವತಃ ವಕೀಲರೂ ಆಗಿರುವ ಕಾನೂನು ಸಚಿವ ಸುರೇಶ್ ಕುಮಾರ್ ಭಾಗವಹಿಸಲಿರುವ ಈ ಕಾರ‍್ಯಕ್ರಮ ವಕೀಲರಿಗೆ ಮಾತ್ರ ಆಯೋಜನೆ ಗೊಂಡಿದೆ.  ವಕೀಲರೂ ಆಗಿರುವ ಶಾಸಕ ತೋಂಟ ದಾರ್ಯ, ಮೃಗಾಲಯ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಎಂ. ನಂಜುಂಡಸ್ವಾಮಿ, ಹಿರಿಯ ವಕೀಲರಾದ ಪಿ. ಡಿ. ಮೇದಪ್ಪ, ಓ. ಶ್ಯಾಂ ಭಟ್ ಭಾಗವಹಿಸುತ್ತಿದ್ದಾರೆ. ಹೆಸರಿಗೆ ರಾಜ್ಯದ ಅಭಿವೃದ್ಧಿಯಲ್ಲಿ ವಕೀಲರ ಪಾತ್ರ  ಏನಿರಬೇಕು ಎಂಬ ವಿಷಯ ಇದ್ದರೂ,  ಅಸಲಿ ಸಂಗತಿಯೇ ಬೇರೆ. ಪಕ್ಷದ ಅಭ್ಯರ್ಥಿ ಗೆಲ್ಲಿಸಲು ವಕೀಲರು ಏನು ಮಾಡಬೇಕು ಎಂಬುದರ ಕುರಿತು ಸಚಿವರು ಸಂವಾದ ನಡೆಸು ವರು. ಬಿಜೆಪಿ ಪಾಳೆ ಯದ ವಕೀಲರಾದ ಎ. ಜಿ. ತಮ್ಮಯ್ಯ, ಎಸ್. ಮಹದೇವಸ್ವಾಮಿ ಮತ್ತು ಅ.ಮ. ಭಾಸ್ಕರ್ ಅವರ ಹೆಸರಲ್ಲಿ ಕಾರ‍್ಯಕ್ರಮ ಆಯೋಜನೆಗೊಂಡಿದೆ.
ಸ್ನೇಹ ಮಿಲನ
ನಾವೇನು ಕಡಿಮೆ ಎಂಬಂತೆ ಇನ್ನೊಂದು ಕೋಮಿನ ಮುಖಂಡರು ಜೂ. ೧೭ರಂದು ಖಾಸಗಿ ಹೋಟೆಲ್‌ನಲ್ಲಿ  ತಮ್ಮವರಿಗಾಗಿ ಸ್ನೇಹ ಮಿಲನ ಆಯೋಜಿಸಿದ್ದಾರೆ. ಶಾಸಕರಾದ ತೋಂಟದಾರ್ಯ,  ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಪಾಲಿಕೆ ಸದಸ್ಯರಾದ ಜಯ ಶಂಕರ ಸ್ವಾಮಿ, ಸುನಂದಾ ಪಾಲನೇತ್ರ, ಪ್ರದೀಪ್‌ಕುಮಾರ್ ಮತ್ತಿತರು ಆಯೋಜಿಸಿರುವ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ- ಮಾಜಿ ಸಚಿವ ವಿ. ಸೋಮಣ್ಣ . ಅಂದಹಾಗೆ- ಪ್ರಬಲ ಕೋಮಿನವರ ಯಾವ  ಪಾರ್ಟಿಗೂ  ಜಿಲ್ಲಾ ಉಸ್ತುವಾರಿ ಸಚಿವರಿಗೆ ಆಹ್ವಾನವಿಲ್ಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ