ಹಜ್ರಾ ಸಮಿತಿ ವರದಿಯ ಗತಿ ಏನು ?

ಚೀ. ಜ. ರಾಜೀವ ಮೈಸೂರು
ನ್ಯಾಯಮೂರ್ತಿ ಎಚ್. ರಂಗವಿಠಲಾಚಾರ್ ಸಮಿತಿ ವರದಿಗೇನೋ ‘ಮುಕ್ತಿ’ ಸಿಗುವ ಲಕ್ಷಣ ಸದ್ಯಕ್ಕೆ ಗೋಚರವಾಗುತ್ತಿವೆ. ಆದರೆ, ದಶಕಗಳ ಹಿಂದೆ ಮೈಸೂರು ವಿವಿಯಲ್ಲಿ ಇಂಥದ್ದೇ ಸದ್ದು ಮಾಡಿದ್ದ ಹಜ್ರಾ ಕಮಿಟಿಯ ವರದಿಯ ಕಥೆ ಏನಾಯಿತು ?
ಮೈಸೂರು ವಿವಿ ಅಂಗಳದಲ್ಲಿ ಎದ್ದಿರುವ ಪ್ರಶ್ನೆ ಇದು. ರಂಗವಿಠಲಾಚಾರ್ ಸಮಿತಿ ವರದಿ ಅನುಸಾರ ವಿಶ್ರಾಂತ ಕುಲಪತಿ ಪ್ರೊ. ಜೆ. ಶಶಿಧರ ಪ್ರಸಾದ್ ವಿರುದ್ಧ  ಕ್ರಿಮಿನಲ್ ಮೊಕದ್ದಮೆ ಹೂಡಲು ಸರಕಾರ ಆದೇಶಿ ಸಿದೆ. ಈ ವಿಷಯ ವಿವಿಯ ಸ್ನಾತ ಕೋತ್ತರ ಕೇಂದ್ರಗಳಲ್ಲಿ ಮುಂದೇನು ಎಂಬ ಚರ್ಚೆಗೆ ನಾಂದಿಯಾಡಿದೆ. ಇದರ ಜತೆಯಲ್ಲೇ ೧೯೯೭ರಲ್ಲಿ ಸದ್ದು ಮಾಡಿದ ಹಜ್ರಾ ಸಮಿತಿಯ ವರದಿಯೂ ಉಲ್ಲೇಖವಾಗುತ್ತಿದೆ.
ಪ್ರೊ. ಎಂ. ಮಾದಯ್ಯ ಅವರು ಮೈಸೂರು ವಿವಿ ಕುಲಪತಿಯಾಗಿದ್ದ ೧೯೯೧-೯೭ರ ಅವಧಿಯಲ್ಲಿ ಅಧ್ಯಾಪಕರು ಹಾಗೂ ಅಧ್ಯಾಪಕೇತರ ನೇಮಕ ಅವ್ಯವಹಾರ, ಪರೀಕ್ಷಾ ಅಕ್ರಮ, ಹಣ ದುರುಪಯೋಗದ ಆರೋಪಗಳು ವ್ಯಕ್ತವಾಗಿದ್ದವು. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಲ್ಲಿ ಅಕ್ರಮ, ವಿವಿ ಹಾಗೂ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಇಬ್ಬರು ಮಹಿಳಾ ಪ್ರೊಫೆಸರ್‌ಗಳ ನೇಮಕ, ಕ್ರಿಕೆಟ್ ಸ್ಟೇಡಿಯಂ ಅಭಿವೃದ್ಧಿಗೆ ಬಿಡುಗಡೆಯಾದ ಹಣದ ದುರ್ಬಳಕೆ; ಪರೀಕ್ಷಾ ಅಕ್ರಮ ಎಸಗಿದ ಪ್ರಾಧ್ಯಾಪಕರಿಗೆ ರಕ್ಷಣೆ ಎಂಬುದೂ ಸೇರಿದಂತೆ ೧೫ ಗಂಭೀರ ಆರೋಪಗಳನ್ನು ಕುಲಪತಿ ವಿರುದ್ಧ ಹೊರಿಸಲಾಗಿತ್ತು.
ಇವುಗಳ ಬಗ್ಗೆ ಸಿಒಡಿ ತನಿಖೆಯೇ ನಡೆಯಬೇಕೆಂದು ವ್ಯಾಪಕ ಕೂಗು ಕೇಳಿ ಬಂದಿತ್ತು. ಆಗ ಪ್ರತಿಪಕ್ಷದಲ್ಲಿದ್ದ ಶಾಸಕರಾದ ಕೆ. ಎಸ್. ಪುಟ್ಟಣ್ಣಯ್ಯ, ಎಲ್. ಆರ್. ಶಿವರಾಮೇಗೌಡ, ಸಿ. ಎಸ್. ಪುಟ್ಟೇಗೌಡ, ಎಚ್. ಕೆ. ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರು. ವಿಧಾನ ಮಂಡಲದ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಪರಿಣಾಮ ಅಂದಿನ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಆರೋಪಗಳ ತನಿಖೆಗೆ ಅಂದಿನ ಐಎಎಸ್ ಅಧಿಕಾರಿ ಎಸ್. ಕೆ. ಹಜ್ರಾ ಅವರನ್ನು ನೇಮಿಸಿದರು. ಹಜ್ರಾ ಅವರು ವಿಚಾರಣೆ ನಡೆಸಿ, ೧೯೯೭ರ ಫೆಬ್ರವರಿಯಲ್ಲಿ ವರದಿ ಸಲ್ಲಿಸಿದರು. ನಂತರ ಈ ವರದಿಯಲ್ಲಿ ಏನಿತ್ತು ಎಂಬುದು ಬಹಿರಂಗವಾಗಲೇ ಇಲ್ಲ. ಆಗಿನ ರಾಜ್ಯಪಾಲ ಖುರ್ಷಿದ್ ಆಲಂಖಾನ್ ಅವರಾಗಲಿ, ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕಾಲ ಎಲ್ಲವನ್ನೂ ಮರೆಸಿತು.
ಹತ್ತು ವರ್ಷಗಳ ಬಳಿಕ- ಈ ಅವ್ಯವಹಾರದಲ್ಲಿ ಕುಲಪತಿಯೊಂದಿಗೆ ಭಾಗಿಯಾಗಿದ್ದ ಪ್ರಾಧ್ಯಾಪಕರೊಬ್ಬರು ಬೇರೊಂದು ವಿವಿಯ ಕುಲಪತಿಯೂ ಆದರು. ಯಾರಿಗೂ ಏನೂ ಆಗಲೇ ಇಲ್ಲ. ಹಣ-ಜಾತಿ ಬಲಗಳು ಒಗ್ಗೂಡಿ ಹಜ್ರಾ ಸಮಿತಿ ವರದಿಯನ್ನು ಸಮಾಧಿ ಮಾಡಿದವು ಎಂಬುದು ಅಂದು ಹೋರಾಟದಲ್ಲಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕರೊಬ್ಬರ ನೋವಿನ ಮಾತು !
ಗಂಗೋತ್ರಿಯಲ್ಲಿ ನೇಮಕದ ಚರ್ಚೆ: ನ್ಯಾಯಮೂರ್ತಿ ರಂಗವಿಠಲಾ ಚಾರ್ ಸಮಿತಿ ಶಿಫಾರಸು ಒಂದು ವೇಳೆ ಜಾರಿಗೊಂಡರೆ ಏನಾಗಬಹುದು?, ನೇಮಕವಾದ ಅಧ್ಯಾಪಕರ ಭವಿಷ್ಯವೇನು? ಎಂಬುದೂ ಚರ್ಚೆಯಾಗುತ್ತಿದೆ.
‘ಶಶಿಧರ ಪ್ರಸಾದ್ ಅವಧಿಯಲ್ಲಿ ನೇಮಕವಾದ ಎಲ್ಲವೂ ಅಕ್ರಮ ವೇನಲ್ಲ. ೭೦ ಹುದ್ದೆಗಳ ನೇಮಕಗಳಲ್ಲಿ ಮಾತ್ರ ಅಕ್ರಮ ನಡೆದಿದೆ. ಉಳಿದವು ಕಾನೂನು ಬದ್ಧ. ಹುದ್ದೆಗೆ ಬೇಕಾದ ಎಲ್ಲ ಶೈಕ್ಷಣಿಕ ಅರ್ಹತೆ ಗಳ ಜತೆಗೆ, ಸಾಕಷ್ಟು ಅನುಭವ, ಪ್ರತಿಭೆ ಇರುವವರು ಅಧ್ಯಾಪಕರಾಗಿ ದ್ದಾರೆ. ಹಾಗಾಗಿ ಸಾರಾಸಗಟಾಗಿ ಎಲ್ಲ ನೇಮಕಗಳನ್ನು ರದ್ದು ಪಡಿಸುವ ನಿರ್ಧಾರವನ್ನು ವಿವಿ, ಸರಕಾರ ತೆಗೆದುಕೊಳ್ಳಬಾರದು’ ಎಂಬುದು ಇದ ಮಾಲಿಕೆಯಲ್ಲಿ ನೇಮಕಗೊಂಡ ಪ್ರಾಧ್ಯಾಪಕರೊಬ್ಬರ ನಿಲುವು.
ಅಕ್ರಮ ನೇಮಕದ ಹಿನ್ನೆಲೆಯಲ್ಲಿ ವಿಜಾಪುರ ಮಹಿಳಾ ವಿ ವಿ ೬೭ ಜನ ಅಧ್ಯಾಪಕರ ನೇಮಕವನ್ನು ರದ್ದು ಪಡಿಸಿತ್ತು. ಹಾಗಾಗಿ ಎಲ್ಲರಲ್ಲೂ ಆತಂಕ ಹೆಚ್ಚಿದೆ. ನೇಮಕವಾದ ಬಹಳಷ್ಟು ಅಧ್ಯಾಪಕರು, ಅವರ ಪರ ವಾಗಿರುವ ಪ್ರಭಾವಿಗಳೀಗ ವಿವಿಯ ಸಿಂಡಿಕೇಟ್ ಸದಸ್ಯರ ಮನೆ ಬಾಗಿಲನ್ನು ಎಡತಾಕಲಾರಂಭಿಸಿದ್ದಾರೆ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ