ಪರ್ವತಾರೋಹಿ ಮರೆತ ಸರಕಾರ

ವಿಕ ಸುದ್ದಿಲೋಕ ಮೈಸೂರು
ಮೈಸೂರಿನ ಹೆಸರನ್ನು ಪರ್ವತಾರೋಹಣದ ಮೂಲಕ ದೇಶಾದ್ಯಂತ ಪಸರಿಸಿದ ಗೋವಿಂದ ರಾಜು ಅವರಿಗೆ ಸಿಗಲೇ ಇಲ್ಲ ಗೌರವ. ಅದಕ್ಕಾಗಿ ಕುಟುಂಬದ ಸದಸ್ಯರ ಮನಸಿನಲ್ಲಿ ಬರೀ ನಿರೀಕ್ಷೆಗಳ ಭಾರ.
ಕಾಲು ಬೆರಳು ಕಳೆದು ಕೊಂಡರೂ ಪರ್ವತಾರೋಹಣದ ಉತ್ಸಾಹ ಕಳೆದುಕೊಳ್ಳದೇ ಸಾಧನೆಯ ಉತ್ತುಂಗಕ್ಕೇರಿದ ಗೋವಿಂದರಾಜು ಮೃತಪಟ್ಟು ಇದೀಗ ಒಂದು ವರ್ಷ. ಗೋವಿಂದರಾಜು ಹೆಸರು ಮುಂದಿನ ಪೀಳಿಗೆಗೂ ಮುಟ್ಟ ಬೇಕೆನ್ನುವ ಬಯಕೆಯೊಂದಿಗೆ ಅವರ ಕುಟುಂಬ ಪ್ರಯತ್ನಿಸುತ್ತಿದೆ. ಭಾನುವಾರ ನಡೆದ ಅವರ ವರ್ಷದ ತಿಥಿ ಸಂದರ್ಭದಲ್ಲೂ ಇದೇ ಧ್ಯಾನ. ಗೋವಿಂದರಾಜು ಅವರು ಸ್ಥಾಪಿಸಿದ ಡೆಕ್ಕನ್ ಮೌಂಟೆನರಿ ಲೀಗ್ ಮೂಲಕ ಅಪ್ಪನ ಚಟುವಟಿಕೆ ವಿಸ್ತರಿಸುವುದು ಮಗನ ಹಂಬಲ. ಸಾಕಷ್ಟು ಇಲಾಖೆ ಗಳಿಗೆ ನೆರವಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಯಾರೀ ಗೊವಿಂದರಾಜು: ಮೈಸೂರಲ್ಲಿ ೧೯೩೨ ರಲ್ಲಿ ಜನಿಸಿದ ಗೋವಿಂದರಾಜು ತೇನ್‌ಸಿಂಗ್‌ನ ಕೊನೆಯ ವಿದ್ಯಾರ್ಥಿ. ಪರ್ವತಾರೋಹಣ ಇವರ ಸಾಧನೆ ಕ್ಷೇತ್ರ. ಓದಿದ್ದು ಕಡಿಮೆ. ಮನೆಯ ಲ್ಲೇನೂ ಸ್ಥಿತಿವಂತರಲ್ಲ. ಹರಯಕ್ಕೆ ಬರುವಷ್ಟರಲ್ಲಿ ಪರ್ವತಾರೋಹಣದ ಆಭಿರುಚಿ ಬೆಳೆದಿತ್ತು. ತೇನ್‌ಸಿಂಗ್ ಹಿಮಾಲಯ ಏರಿದ ವಿಚಾರ ಓದಿ ಛಲ ಬಿಡದೇ ಪ್ರಯತ್ನಿಸುತ್ತಿದ್ದರು. ಅದರಂತೆ ಎಲ್ಲಾ ಪರ್ವತಗಳನ್ನು ಏರಿದ ಗೋವಿಂದರಾಜು ಚಿತ್ರರಂಗದಲ್ಲೂ ದುಡಿದರು. ಅತ್ಯುತ್ತಮ ಕುಸ್ತಿ ಪಟು. ಆರು ದಶಕದ ಕಾಲ ಪರ್ವತಾರೋಹಣದ ನಂಟು. ಹಿರಿಯ ಪೊಲೀಸ್ ಅಧಿಕಾರಿಗಳು, ಚಿತ್ರ ನಟರು ಹಾಗೂ ವಿಶೇಷ ಪಡೆಗಳ ತರಬೇತುದಾರ. ಚಿತ್ರನಟ ಎಂ.ಪಿ.ಶಂಕರ್ ಸ್ನೇಹಿತ. ಅವರೊಂದಿಗೆ ಗಂಧದಗುಡಿ ಸೇರಿ ಹಲವು ಚಿತ್ರಗಳ ಸಹಾಯಕ ನಿರ್ದೇಶಕರು. ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರು.
ಅಧಿಕಾರಿಗಳೇ ಇತ್ತ ನೋಡಿ: ಆರು ತಿಂಗಳ ಹಿಂದೆ ಮುಂಬಯಿ ದಾಳಿಯಲ್ಲಿ ಹತರಾದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆಗೂ ಇವರೇ ತರಬೇತುದಾರರು. ಹೈದರಾಬಾದ್‌ನ ಐಪಿಎಸ್ ಅಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ೧೯೮೭ರಿಂದ ೨೦೦೪ರವರೆಗೆ ಗೋವಿಂದರಾಜು ಪರ್ವತಾರೋಹಣ, ಚಾರಣದ ತರಬೇತಿ ನೀಡುತ್ತಿದ್ದರು. ಇದರಲ್ಲಿ ಈಗಿನ ಪೊಲೀಸ್ ಆಯುಕ್ತ ಸುನೀಲ್ ಅಗರವಾಲ್, ಹಿಂದಿನ ಆಯುಕ್ತ ಪ್ರವೀಣ್ ಸೂದ್ ಅವರೂ ಇದ್ದಾರೆ. ಗೋವಿಂದರಾಜು ಮೃತಪಟ್ಟಾಗ ಒಂದಿಬ್ಬರು ಅಧಿಕಾರಿಗಳು ಮನೆಗೆ ಬಂದು ಸಂತಾಪ ಹೇಳಿ, ನಮ್ಮ ಸಹಾಯ ಇರುತ್ತದೆ ಎಂದು ಹೇಳಿಹೋಗಿದ್ದರೂ ಯಾವುದೇ ನೆರವು ಸಿಕ್ಕಿಲ್ಲ.
ಮೈಸೂರಿನ ಚಾಮುಂಡಿವಿಹಾರ ಕ್ರೀಡಾಂಗಣ ದಲ್ಲಿರುವ ಸಾಹಸ ಕ್ರೀಡೆಗೆ ಗೋವಿಂದರಾಜು ಹೆಸರಿಡಬೇಕು. ಕ್ರೀಡಾ ಹಾಗೂ ಯುವಜನ ಇಲಾಖೆಯವರು ಅವರ ಹೆಸರಿನಲ್ಲೊಂದು ಪ್ರಶಸ್ತಿ ಸ್ಥಾಪಿಸಬೇಕು ಎನ್ನುವುದು ಅವರ ಕುಟುಂಬದ ಬೇಡಿಕೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ