ಕುಷ್ಠರೋಗ: ರಾಷ್ಟ್ರೀಯ ಮಾದರಿ ಸಮೀಕ್ಷೆ

ಜೆ.ಶಿವಣ್ಣ ಮೈಸೂರು
ಕುಷ್ಠರೋಗ ನಿರ್ಮೂಲನೆಗೆ ಪಣತೊಟ್ಟಿರುವ ಕೇಂದ್ರ ಸರಕಾರ ೨೦೧೦-೧೧ನೇ ಸಾಲಿನಲ್ಲಿ ದೇಶವ್ಯಾಪಿ ಕುಷೃರೋಗದ ‘ರಾಷ್ಟ್ರೀಯ ಮಾದರಿ ಸಮೀಕ್ಷೆ’ ಕಾರ್ಯಕ್ರಮ ನಡೆಸಲು ಮುಂದಾಗಿದೆ.
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ರಾಷ್ಟ್ರದ ೯೩ ಜಿಲ್ಲೆಗಳನ್ನು ಸಮೀಕ್ಷೆಗೆ ಆರಿಸಿದ್ದು, ರಾಜ್ಯದ ಆರು ಜಿಲ್ಲೆಗಳು ಕಾರ್ಯಕ್ರಮದಲ್ಲಿ ಸೇರಿವೆ. ಮೈಸೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಬೀದರ್, ಬಳ್ಳಾರಿ ಮತ್ತು ಧಾರವಾಡ ಆ ಜಿಲ್ಲೆಗಳು. ಪ್ರತಿ ಜಿಲ್ಲೆಯ ಅತಿ ಹೆಚ್ಚು ಕುಷ್ಠರೋಗ ಸಾಂದ್ರತೆ ತಾಲೂಕು ಮತ್ತು ಕಡಿಮೆ ಸಾಂದ್ರತೆ ತಾಲೂಕುಗಳನ್ನು ಆಯ್ಕೆ ಮಾಡಿಕೊಂಡು ಮಾದರಿ ಸಮೀಕ್ಷೆ   ರೂಪಿಸಲಾಗಿದೆ.
ಸಮೀಕ್ಷೆ ಉದ್ದೇಶ: ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪಿಆರ್ ಮಟ್ಟವನ್ನು ಭಾರತ ತಲುಪಿದ್ದರೂ ಅದು ಎಷ್ಟರ ಮಟ್ಟಿಗೆ ನಿಖರ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು (ಮೌಲ್ಯಮಾಪನ) ಸಮೀಕ್ಷೆಯ ಮೂಲ ಗುರಿ. ಜತೆಗೆ ಕುಷ್ಠರೋಗದ ಹೊಸ ರೋಗಿಗಳ ಸಾಂದ್ರತೆಯ ಜನಸಂಖ್ಯೆಗೆ ಅನುಗುಣವಾಗಿ ಅಧ್ಯಯನ, ಅದರ ಸಾಂದ್ರತೆ ಅನುಸಾರ ಅಂಗವಿಕಲತೆಯನ್ನು ಗ್ರೇಡ್-೧ ಮತ್ತು ಗ್ರೇಟ್ -೨ ಎಂದು ನಿರ್ಧಾರ, ಕುಷ್ಠರೋಗ ಸಾಮಾಜಿಕ ಪಿಡುಗಾಗಿ ಉಳಿದಿದೆಯೇ, ರೋಗಿಗಳನ್ನು ಸಮಾಜದಿಂದ ಪ್ರತ್ಯೇಕಿಸಲಾಗುತ್ತಿದೆಯೇ (ಸೋಷಿಯಲ್ ಸ್ಟಿಗ್ಮಾ ಅಂಡ್ ಡಿಸ್‌ಕ್ರಿಮಿನೇಷನ್) ಎನ್ನುವುದನ್ನು ಗುರುತಿಸುವುದು.
ಜಿಲ್ಲೆಯ ಎರಡು ತಾಲೂಕು: ಮೈಸೂರು ಜಿಲ್ಲೆಯಲ್ಲಿ ಕಡಿಮೆ ಸಾಂದ್ರತೆ ಇರುವ ಹುಣಸೂರು ಹಾಗೂ ಹೆಚ್ಚು ಸಾಂದ್ರತೆ ಇರುವ ತಿ.ನರಸೀಪುರ ತಾಲೂಕಿನಲ್ಲಿ  ಜೂ. ೭ರಿಂದ ಸೆ. ೩೧ರವರೆಗೆ ಮೂರು ತಿಂಗಳ ಕಾಲ ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯಿತಿ ಪ್ರತಿನಿಧಿಗಳ ಸಹಕಾರದೊಂದಿಗೆ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವರು. ಇದಕ್ಕಾಗಿ ನಾಲ್ವರು ವೈದ್ಯ ಅಧಿಕಾರಿಗಳು, ಪ್ರತಿ ತಾಲೂಕಿನಲ್ಲಿ ೨೨ ಮಂದಿ ಶೋಧನಾ ಸದಸ್ಯರು, ೬೦ ಮಂದಿ ಆಶಾ ಕಾರ್ಯಕರ್ತೆಯರು, ೬೦ ಮಂದಿ ಗ್ರಾ.ಪಂ. ಸದಸ್ಯರು ಭಾಗವಹಿಸುವರು. ಅಂತಿಮವಾಗಿ ಶಂಕಾಸ್ಪದ ಪ್ರಕರಣಗಳನ್ನು ದೃಢಪಡಿಸಲು ಇಬ್ಬರು ಹಾಗೂ ಇಬ್ಬರು ಅಧಿಕಾರಿಗಳು ಊರ್ಜಿತ ಗೊಳಿಸುವರು.
ಗ್ರಾಮಕ್ಕೆ ಸಮೀಕ್ಷೆಗೆ ತೆರಳುವ ಮುನ್ನ ದಿನ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಲಾಗು ವುದಲ್ಲದೇ, ಕರಪತ್ರ ಹಂಚಿಕೆ, ಜಾಗೃತಿ ಶಿಕ್ಷಣ ಸಭೆ, ಸ್ವಸಹಾಯ, ಯುವಕ ಸಂಘಗಳೊಡನೆ ಚರ್ಚೆ ಇತ್ಯಾದಿ ಹಮ್ಮಿಕೊಳ್ಳಲಾಗುತ್ತಿದೆ.
ಅಂಕಿ ಅಂಶ: ಕುಷ್ಠರೋಗ ಪ್ರಮಾಣ ಶೇ.೧ಕ್ಕಿಂತ ಕಡಿಮೆ ಸ್ಥಾನಿಕತೆ (ಪ್ರಿವಲೆನ್ಸ್ ದರ ) ಇರಬೇಕೆನ್ನುವುದು ವಿಶ್ವ ಆರೋಗ್ಯ ಸಂಸ್ಥೆಯ ತಾಕೀತು. ಅದರನ್ವಯ ಭಾರತದಲ್ಲಿ ಈಗಾಗಲೇ ಕುಷ್ಠರೋಗ ಪ್ರಮಾಣ (೧೦ ಸಾವಿರ ಜನಸಂಖ್ಯೆಗೆ) ೦.೭೩ರಷ್ಟಿದೆ. ಕರ್ನಾಟಕದಲ್ಲಿ ಆ ಪ್ರಮಾಣ ೦.೫ ಇದ್ದರೆ, ಮೈಸೂರು ಜಿಲ್ಲೆಯಲ್ಲಿ ಕುಷ್ಠರೋಗವು ನಿರ್ಮೂಲನಾ ಹಂತದಲ್ಲಿದ್ದು, ಸ್ಥಾನಿಕತೆ  ೦.೨೨ ರಷ್ಟಿಗೆ ತಲುಪಿದೆ.
ಕುಷ್ಠರೋಗ ನಿವಾರಣೆಗೆ ೧೯೮೯ರಲ್ಲಿ ಬಹು ಔಷಧ ಚಿಕಿತ್ಸೆ ಆರಂಭಿಸಿದಾಗ ಜಿಲ್ಲೆಯಲ್ಲಿ ೩೭೧೦ ರೋಗಿಗಳಿದ್ದಾರಲ್ಲದೇ, ಸ್ಥಾನಿಕತೆ ೧೦,೦೦೦ ಜನಸಂಖ್ಯೆಗೆ ೨೦. ೦೩ ಇತ್ತು. ಪ್ರಸ್ತುತ ೨೦೦೯ರ ಡಿಸೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ೮೬ ಕುಷ್ಠರೋಗಿಗಳಿದ್ದು, ಪ್ರಿವಲೆನ್ಸ್ ದರ  ೦.೨೯ ಕ್ಕೆ ಇಳಿದಿತ್ತು. ಅದಿನ್ನೂ ಕಡಿಮೆಯಾಗಿದೆ. ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣೆ, ಸಲಹೆ, ಮಾರ್ಗದರ್ಶನ ಮತ್ತು ಬಹು ಔಷಧ ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ