‘ಬಾವಲಿ’ಗಳ ಬದುಕಿಗೆ ಕುತ್ತಾದ ಅರಣ್ಯ ಇಲಾಖೆ

ಪಿ.ಓಂಕಾರ್ ಮೈಸೂರು
ಸಾವಿರಾರು ಬಾವಲಿಗಳು ನೆಲೆ ತಪ್ಪಿವೆ. ನೂರಾರು ಮರಿಗಳು ಕಣ್ಣು ಬಿಡುವ ಮೊದಲೇ, ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿವೆ. ಹತ್ತಾರು ವರ್ಷಗಳಿಂದ ಬದುಕಿಗೆ ರಕ್ಷೆಯಾಗಿದ್ದ ಕಬಿನಿ ಹಿನ್ನೀರು ಪ್ರದೇಶವೇ ಅಮಾಯಕ ಬಾವಲಿಗಳ ಬದುಕಿಗೆ ಮುಳುವಾಗಿದೆ.
ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಹಿನ್ನೀರು ಪ್ರದೇಶದ ೫ ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ಇಲಾಖೆ ಬೆಳೆಸಿ, ಈಗ ಕಟಾವು ಮಾಡಿಸಿರುವ ಸರ್ವೇ (ಗಾಳಿ ಮರ) ತೋಪಿನಲ್ಲಿ ‘ಸಾವಿನ ವಾಸನೆ’ ಮಡುಗಟ್ಟಿದೆ ಯಾದರೂ, ಅರಣ್ಯಾಧಿಕಾರಿಗಳ ಮೂಗಿಗೆ ಬಡಿದಿಲ್ಲ. ಬಡಿದರೂ ಬಾವಲಿಗಳ ಸಾವು ಮುಖ್ಯ ಎನಿಸಿಲ್ಲ !
೩೦ ವರ್ಷದ ಹಿಂದೆ: ಕಬಿನಿ ಜಲಾಶಯ ನಿರ್ಮಿಸಲು ಈ ಪ್ರದೇಶದಲ್ಲಿ ರೈತರ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ೧೯೭೪ರಲ್ಲಿ ಕಾಮಗಾರಿ ಮುಗಿದು, ಹಿನ್ನೀರಿನಿಂದ ಆಚೆಗೂ ನೂರಾರು ಎಕರೆ ಭೂಮಿ ಉಳಿಯಿತು. ಇಲ್ಲಿ ಉಳುಮೆ ಮಾಡಿದರೆ ಜಲಾಶಯಕ್ಕೆ ‘ಹೂಳು’ ಹರಿಯಬಹುದು ಎನ್ನುವ ಕಾರಣಕ್ಕೆ ರೈತರಿಗೆ ಹಿಂತಿರುಗಿಸಲಿಲ್ಲ.
ಬಾವಲಿ ಕಾಡು: ಹೀಗೆ ಉಳಿದ ಭೂಮಿಯಲ್ಲಿ ೧೯೮೨ ರಲ್ಲಿ ಅರಣ್ಯ ಬೆಳೆಸಲೆಂದು ನೀರಾವರಿ ಇಲಾಖೆ ಅರಣ್ಯ ಇಲಾಖೆಗೆ ವಹಿಸಿತು. ಇಲಾಖೆ ಸರ್ವೇ, ನೀಲಗಿರಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ನೆಟ್ಟಿದ್ದು, ಅವೆಲ್ಲ ಕಾಡಿನ ಸ್ವರೂಪದಲ್ಲಿ ಬೆಳೆದು ನಿಂತಿತ್ತು. ಜಲಾಶಯ ಸಮೀಪದ ಹಿನ್ನೀರು ಪ್ರದೇಶದ ಸರ್ವೇ ತೋಪಿನಲ್ಲಿ ಸಾವಿರಾರು ಬಾವಲಿ ಗಳು ಆಶ್ರಯ ಪಡೆದಿದ್ದವು. ಇದೇ ಕಾರಣಕ್ಕೆ ಈ ಪ್ರದೇಶವನ್ನು ಸ್ಥಳೀಯರು ‘ಬಾವಲಿ ಕಾಡು’ ಎಂದೇ ಕರೆಯುತ್ತಿದ್ದರು. ಒಮ್ಮೆಗೆ ಎಲ್ಲವೂ ಗರಿಬಿಚ್ಚಿ ಹಾರಿದರೆ ‘ಮೋಡಕವಿದ ವಾತಾವರಣ’ ನಿರ್ಮಾಣ ವಾಗುತ್ತಿತ್ತು ಎನ್ನುವುದು ಗ್ರಾಮಸ್ಥರ ಹೇಳಿಕೆ.
ವರಮಾನದ ಮೇಲೆ ಕಣ್ಣು: ಬೆಳೆದು ನಿಂತ ಈ ಮರಗಳನ್ನು ಕಡಿದು, ಹರಾಜಿಗಿಟ್ಟರೆ  ಬರಬಹುದಾದ ವರಮಾನದ ಮೇಲಷ್ಟೇ ಕಣ್ಣಿಟ್ಟ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಕೆಎಸ್‌ಎಫ್‌ಐಸಿ)ಕಟಾವು ಹೊಣೆ ವಹಿಸಿತು. ನಂತರ, ನಿಯೋಜಿತ ಕಾರ್ಮಿಕರು ಯಾಂತ್ರಿಕ ಗರಗಸಗಳಿಂದ ಕತ್ತರಿಸಿ ಲಾರಿಗಳಿಗೆ ತುಂಬಿ ಸಾಗಿಸಿದರು.
ಮನುಷ್ಯ ಯಂತ್ರಗಳು: ಇಂಥ ಮರಗಳನ್ನು ನಿಗದಿತ ಸಮಯ ಮುಗಿದ ನಂತರ ಕಟಾವು ಮಾಡಿಸಿ ಮಾರು ವುದು ಅಕ್ರಮವೇನಲ್ಲ. ಆದರೆ ಕಡಿಯುವ ಮುನ್ನ ಅಲ್ಲಿದ್ದ ಬಾವಲಿಗಳ ಆವಾಸ ಕ್ರಮವನ್ನು ಇಲಾಖೆ ಅರಿಯಲಿಲ್ಲ. ಹಾಗಾಗಿ  ಸಾವಿರಾರು ಬಾವಲಿಗಳ  ಆವಾಸ ಮತ್ತು ಜೀವಕ್ಕೆ ಆಪತ್ತು ತಂದೊಡ್ಡಿಯೂ ‘ಸಾಮೂಹಿಕ ಹತ್ಯೆ’ಯ ಸುಳಿವೇ ಇಲ್ಲದಂತಿದೆ. ಕಡಿ ಯುವ ‘ಕಾಮಗಾರಿ’ಯಲ್ಲಿ ತೊಡಗಿದ ಮನುಷ್ಯರೂ ಯಂತ್ರಗಳಂತಾಗಿದ್ದ ರಿಂದ, ಮರಗಳಿಗೆ ಜೋತು ಬಿದ್ದ ಬಾವಲಿಗಳು, ಅವುಗಳ ಬಿಸಿ ಅಪ್ಪುಗೆಯಲ್ಲಿದ್ದ ಕಣ್ಣು ಬಿಡದ ಮರಿಗಳು ಸತ್ತು ಬೀಳುತ್ತಿದ್ದುದನ್ನು ಗಮನಿಸಲಿಲ್ಲ ಅಥವಾ ಮನಸ್ಸಿನ ಕಣ್ಣು ಕುರುಡಾಗಿ ದ್ದರಿಂದ ಕಂಡೂ ಕಾಣಿಸದಂತಿದ್ದರು.
ಬಾವಲಿ ವಿಶೇಷ: ಬಾವಲಿಗಳು ಮರಿಹಾಕುವುದು ವರ್ಷಕ್ಕೊಮ್ಮೆ ಮೇ, ಜೂನ್ ತಿಂಗಳಲ್ಲಿ. ಪೋಷಿಸಲು ಗೂಡನ್ನು ಕಟ್ಟುವುದಿಲ್ಲ. ಮರಕ್ಕೆ ತಲೆ ಕೆಳಗಾಗಿ ಜೋತು ಬಿದ್ದ ಅಮ್ಮನ ತೆಕ್ಕೆಯಲ್ಲೇ ಮರಿಗಳು ಬೆಳೆಯುತ್ತವೆ. ತಾಯಿ ಬಾವಲಿ ರೆಕ್ಕೆಗಳನ್ನು ಬುಟ್ಟಿಯಂತೆ ಮಾಡಿ ಕರುಳ ಕುಡಿಗಳನ್ನು ರಕ್ಷಿಸುತ್ತದೆ. ಹುಟ್ಟಿದ ೯ ದಿನ ಮರಿ ಕಣ್ಣು ಬಿಡು ವುದಿಲ್ಲ. ತಿಂಗಳವರೆಗೆ ಹಾರುವುದೂ ಸಾಧ್ಯವಿಲ್ಲ. ಅಷ್ಟು ಕಾಲ ತಾಯಿ ಮೊಲೆ ಹಾಲೇ ಅವುಗಳಿಗೆ ಆಹಾರ.
ಸೂಕ್ಷ್ಮಗಳ ಅರಿವಿಲ್ಲ: ಪ್ರಾಣಿ ಲೋಕದ ಇಂಥ ಸೂಕ್ಷ್ಮಗಳು ಮರ ಕಡಿಯುವ ವರಿಗೆ ಗೊತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳೂ ಅವರಂತೆಯೇ ಆಗಿದ್ದು ಬಾವಲಿಗಳ ಪಾಲಿನ ದುರದೃಷ್ಟ. ಇಲಾಖೆ ‘ಬಾವಲಿ ಕಾಡಿನ’ ಸಂಹಾರಕ್ಕೆ ‘ಸುಪಾರಿ’ ಕೊಟ್ಟಿದ್ದು, ನಿಯೋಜಿತ ಕಾರ್ಮಿಕರು ಗರಗಸ ಹಚ್ಚಿದ್ದು ‘ಸಂತಾನಾಭಿವೃದ್ಧಿ’ ಕಾಲದಲ್ಲೇ ಆಗಿದ್ದರಿಂದ ನೂರಾರು ಬಾವಲಿಗಳ ಸಂಹಾರ ನಡೆದಿದೆ ಎನ್ನುವುದು ಪರಿಸರ ಪ್ರಿಯರ ಆಕ್ಷೇಪ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ