ಆತಂಕ ಬೇಕಿಲ್ಲ: ತಜ್ಞರ ಸಲಹೆ


ವಿಕ ಸುದ್ದಿಲೋಕ ಗೋಣಿಕೊಪ್ಪಲು
ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಉದ್ದ ಮೀಸೆ ಮಿಡತೆಗಳು ಲಕ್ಷಾಂತರ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸ ಆತಂಕ ಹುಟ್ಟು ಹಾಕಿವೆ.
ಗೋಣಿಕೊಪ್ಪಲು, ಭದ್ರಗೋಳ, ದೇವರಪುರ, ತಿತಿಮತಿ, ಕುಟ್ಟ, ಚೂರಿಕಾಡು, ಶ್ರೀಮಂಗಲ, ನಾಲ್ಕೇರಿ, ಪಾಲಿಬೆಟ್ಟ ವ್ಯಾಪ್ತಿಯಲ್ಲಿ ಇವು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿವೆ. ರಾತ್ರಿ ವೇಳೆ ಮಿಡತೆಗಳು ಗುಂಪು- ಗುಂಪಾಗಿ ಬೆಳಕಿನೆಡೆಗೆ ಆಕರ್ಷಿತವಾಗಿ (ವಿದ್ಯುತ್ ದೀಪ) ಮನೆಗಳ ಬಳಿ, ಬೀದಿ ದೀಪಗಳ ಬಳಿ ಹಾರು ತ್ತಿದ್ದವು. ಕೆಲವೆಡೆ ದೀಪಗಳ ಕೆಳಗೆ ಮಿಡತೆಗಳ ರಾಶಿಯೇ ಬಿದ್ದಿತ್ತು. ಗಿಡಮರಗಳಲ್ಲಿ, ಎಲೆ, ಕಾಂಡದ ಮೇಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಇವು ಕಂಡು ಬಂದಿವೆ.
ಗೋಣಿಕೊಪ್ಪಲಿನ ಕಾಪ್ಸ್ ವಿದ್ಯಾಸಂಸ್ಥೆ  ಆವರಣ ದಲ್ಲಿ ಬಿದ್ದಿದ್ದ ಮಿಡತೆಗಳ ರಾಶಿಯ ಎತ್ತರವೇ ಸುಮಾರು ಅರ್ಧ  ಅಡಿಯಷ್ಟಿತ್ತು.
ಅವುಗಳಿಂದ ಬೆಳೆಗಳಿಗೆ ಹಾನಿಯಾಗಬಹುದೇ ಎನ್ನುವ ಆತಂಕ ಕೂಡ ಶುರುವಾಗಿದ್ದು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಹಾಗೂ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ರೈತರು ದೂರವಾಣಿ ಕರೆ  ಮಾಡಿ ವಿಚಾರಿಸುತ್ತಿದ್ದಾರೆ. ಈ ರೀತಿ ಅಧಿಕ ಸಂಖ್ಯೆಯಲ್ಲಿ ಮಿಡತೆಗಳನ್ನು ನೋಡುತ್ತಿರುವುದು ಇದೇ ಮೊದಲು ಎನ್ನುತ್ತಾರೆ ಹಲವು ರೈತರು.
ಆತಂಕ ಬೇಡ: ಕೆಲ ಪ್ರಭೇದದ ಮಿಡತೆಗಳು ಅನುಕೂಲಕರ ಸನ್ನಿವೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಲಕ್ಷಗಟ್ಟಲೇ ಗುಂಪು ಗುಂಪಾಗಿ ಕಾಣಿಸಿಕೊಂಡಾಗ ಅವುಗಳನ್ನೇ ‘ಲೋಕಸ್ಟ್’ ಗಳೆಂದು ಕರೆಯಲಾಗುತ್ತದೆ. ಇವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಥವಾ ದೇಶದಿಂದ ದೇಶಕ್ಕೆ ಹೋಗುತ್ತಿರುತ್ತವೆ. ಮಾರ್ಗದಲ್ಲಿ ಬರುವ ಹೆಚ್ಚು  ಕಡಿಮೆ ಎಲ್ಲಾ ಗಿಡಮರ/ ಸಸ್ಯಗಳ ಎಲೆಗಳನ್ನು ತಿಂದು ಮುಗಿಸುತ್ತವೆ.
ಲೋಕಸ್ಟ್‌ಗಳ ದೇಹ ರಚನೆಯಲ್ಲೇ ಕೆಲ ವಿಶಿಷ್ಟ  ಮಾರ್ಪಾಡುಗಳಿರುತ್ತವೆ. ಕುಡಿಮೀಸೆಗಳು ಚಿಕ್ಕದು. ಹಾರಾಟಕ್ಕೆ ಅನುಕೂಲವಾಗುವಂತೆ ಎದೆಯ ಭಾಗದಲ್ಲಿ ಹಾಗೂ ಕಾಲಿನಲ್ಲಿ ಮಾರ್ಪಾಡುಗಳನ್ನು ಕಾಣಬಹುದು. ಕೊಡಗಿನಲ್ಲಿ ಇದೀಗ ಕಾಣಿಸಿಕೊಂಡ ಮಿಡತೆಗಳು ಲೋಕಸ್ಟ್‌ಗಳ ರೀತಿಯ ದೇಹ ರಚನೆ ಹೊಂದಿಲ್ಲ ಎನ್ನುತ್ತಾರೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಷಯ ತಜ್ಞ  ನೆಲ್ಲೀರ ಎಂ. ಪೂಣಚ್ಚ.
ದಕ್ಷಿಣ ಕೊಡಗಿನಲ್ಲಿ ಕಾಣಿಸಿದ ಮಿಡತೆಗಳು ಉದ್ದ (ತಮ್ಮ ದೇಹಕ್ಕಿಂತಲೂ ಉದ್ದವಾದ)ಕುಡಿಮೀಸೆ ಹೊಂದಿವೆ. ಈ ಪ್ರಭೇದದ ಮಿಡತೆಗಳು ಇದುವರೆಗೂ ಬೆಳೆ ಹಾನಿಯುಂಟು ಮಾಡಿದ ವರದಿಯಿಲ್ಲ. ಇವೂ ಸಹ ಸಸ್ಯಾವಲಂಬಿಗಳೇ. ಆದರೂ ಕಾಡಿನಲ್ಲಿ ಬೆಳೆಯುವ ಕೆಲ ಹುಲ್ಲುಗಿಡಗಳನ್ನು ಮಾತ್ರ ತಿನ್ನುತ್ತವೆ. ಹಾಗಾಗಿ ಆತಂಕ ಬೇಡ ಎನ್ನುತ್ತಾರೆ ಅವರು.
ಇದ್ದಕ್ಕಿದ್ದಂತೆ ಇಷ್ಟೊಂದು ಸಂಖ್ಯೆಯಲ್ಲಿ ಮಿಡತೆ ಕಾಣಿಸಿಕೊಂಡ ಕಾರಣದ ಬಗ್ಗೆ ಅಧ್ಯಯನ ನಡೆಯ ಬೇಕಿದೆ. ಯಾವ ಸ್ಥಳದಲ್ಲಿ ಇವು ಉತ್ಪತ್ತಿಯಾಗುತ್ತಿವೆ, ಈ ವರ್ಷದಲ್ಲಿ ಇವುಗಳ ಹೆಚ್ಚಿನ ಉತ್ಪತ್ತಿಗೆ  ಕಾರಣವೇನು, ಈಗಾಗಲೇ ಪ್ರೌಢಾವಸ್ಥೆ  ತಲುಪಿರುವ ಇವು, ತಮ್ಮ ಬೆಳವಣಿಗೆಯ ಹಂತದಲ್ಲಿ ಗಿಡಮರಗಳಿಗೆ ಹೆಚ್ಚಿನ  ಹಾನಿಯನ್ನೇನಾದರೂ ಮಾಡಿರುವವೇ ಹೇಗೆ- ಇತ್ಯಾದಿ ಅಂಶಗಳು ಪತ್ತೆಯಾಗಬೇಕಿದೆ. ಸಾಮಾನ್ಯ ವಾಗಿ ದೀಪಕ್ಕೆ ಮಿಡತೆಗಳು ಆಕರ್ಷಿತವಾಗುವುದಿಲ್ಲ. ಆದರಿಲ್ಲಿ ಬೆಳಕಿಗೆ ಆಕರ್ಷಿತವಾಗುತ್ತಿರುವುದು ಹೇಗೆ ಎಂಬ ಅಂಶವೂ ತಿಳಿಯಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ