ಪಂಚಾಯಿತಿದಾರರಿಗೆ ನೀತಿಬೋಧೆ ಸಾಮರ್ಥ್ಯವೃದ್ಧಿ ಪಾಠ

ಪಿ.ಓಂಕಾರ್ ಮೈಸೂರು
ರಾಜ್ಯದ ೫,೬೨೮ ಗ್ರಾಮಪಂಚಾಯಿತಿಗಳ ಎಲ್ಲಾ ೯೧,೪೦೨ ನೂತನ ಸದಸ್ಯರ ‘ಸಾಮರ್ಥ್ಯವೃದ್ಧಿ’ಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ (ಎಎನ್‌ಎಸ್‌ಎಸ್‌ಐಆರ್‌ಡಿ) ೪ ಹಂತದ ತರಬೇತಿ  ಕಾರ್ಯಕ್ರಮ ರೂಪಿಸಿದೆ.
ಹಳ್ಳಿ ಪಂಚಾಯಿತಿಗಳಿಗೆ ಆಯ್ಕೆಯಾದ ನೂತನ ‘ಸರದಾರ’ರದ್ದು ವೈವಿಧ್ಯಮಯ ಹಿನ್ನೆಲೆ. ರಾಜಕೀಯ ಸಂಗದಲ್ಲೇ ಇರುವ ಹಳ್ಳಿ ರಾಜಕಾರಣಿಗಳು, ಗುತ್ತಿಗೆದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂಥ ಯಾವುದೇ ಅನುಭವ ಇಲ್ಲದ ಕೃಷಿಕರು,ಕೂಲಿಕಾರರು ಮತ್ತು ಅಕ್ಷರ ವಂಚಿತ ಮಂದಿಯೂ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿದ್ದಾರೆ.
ಇಂಥ ಎಲ್ಲಾ ಸದಸ್ಯರನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ತರಬೇತಿಯನ್ನು ವಿನ್ಯಾಸಗೊಳಿಸಿದ್ದು, ರಾಜ್ಯ ಪಂಚಾಯತ್ ರಾಜ್ ಇಲಾಖೆ ಸಮ್ಮತಿ ನೀಡಿದೆ. ಈಗ ಎಲ್ಲಾ ಪಂಚಾಯಿತಿಗಳಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ‘ಸಂಭ್ರಮ’ ಮನೆ ಮಾಡಿದ್ದು, ಜುಲೈ ೨ನೇ ವಾರದ ವೇಳೆಗೆ ಪಾಠಕ್ಕೆ ಕಿವಿ ಒಡ್ಡಲಿದ್ದಾರೆ. ಈ ಪ್ರಕ್ರಿಯೆ ಮುಂದಿನ ಒಂದು ವರ್ಷ ಜಾರಿಯಲ್ಲಿರುತ್ತದೆ.
ಅಧ್ಯಕ್ಷ, ಉಪಾಧ್ಯಕ್ಷರಿಗೆ: ಮೊದಲ ಹಂತದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರಿಗೆ ಮೂರು ದಿನದ ತರಬೇತಿ. ಜುಲೈ ೨ನೇ ವಾರ ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಏಕಕಾಲಕ್ಕೆ ಆರಂಭವಾಗಲಿದ್ದು, ಆಗಸ್ಟ್ ಅಂತ್ಯದವರೆಗೆ ನಡೆ ಯುತ್ತದೆ. ಮುಖಾಮುಖಿ ತರಬೇತಿ ಈ ಬಾರಿಯ ವಿಶೇಷ. ಹೊಸದಾಗಿ ನೇಮಕಗೊಂಡಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು ಮತ್ತು ಕಾರ್ಯದರ್ಶಿಗಳನ್ನು ೩ನೇ ದಿನ ಅಧ್ಯಕ್ಷ-ಉಪಾಧ್ಯಕ್ಷರ ಜತೆ ಕೂರಿಸಿ ‘ಹೊಂದಾಣಿಕೆ ಆಡಳಿತ’ದ ಪಾಠ ಬೋಧಿಸಲಾಗುತ್ತದೆ.
ಎಲ್ಲಾ ಸದಸ್ಯರಿಗೆ: ೨ನೇ ಹಂತದಲ್ಲಿ ಎಲ್ಲಾ ೯೧,೪೦೨ ಸದಸ್ಯರು ವಿದ್ಯಾರ್ಥಿ ಗಳಾಗಲಿದ್ದಾರೆ. ಮುಖಾಮುಖಿ ಮತ್ತು ಉಪಗ್ರಹ ಆಧರಿತ ಕಾರ್ಯಕ್ರಮಗಳನ್ನು ಸಂಯೋಜಿಸಿ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಆರಂಭ, ಡಿಸೆಂಬರ್ ಅಥವಾ ಮುಂದಿನ ಜನವರಿ ವೇಳೆಗೆ ಪ್ರಕ್ರಿಯೆ ಮುಗಿಯಲಿದೆ.
ತಾಲೂಕುವಾರು ಸದಸ್ಯರ ಸಂಖ್ಯೆಯನ್ನಾಧರಿಸಿ,ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ಸಂಘಟಿಸಲಾಗುತ್ತದೆ. ಪ್ರತಿ ಸದಸ್ಯರಿಗೆ ೧೧ದಿನಕ್ಕೆ ಕಡಿಮೆ ಇಲ್ಲದಂತೆ ಸಾಮರ್ಥ್ಯವೃದ್ಧಿ ಪಾಠ ಲಭ್ಯ.
 ಇ-ಲರ್ನಿಂಗ್ ಪ್ಯಾಕೇಜ್: ಪ್ರಕ್ರಿಯೆಗೆ ಸುಮಾರು ೩೫೦ ರಿಂದ ೩೭೦ ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜತೆಗೆ, ವಿವಿಧ ಯೋಜನೆ ಗಳನ್ನು ಸದ್ಬಳಕೆ ಮಾಡಿಕೊಂಡ ಮಾದರಿ ಪಂಚಾಯಿತಿಯ ಉದಾಹರಣೆ ಇರುವ ಡಿವಿಡಿಗಳನ್ನೊಳಗೊಂಡ ‘ಇ-ಲರ್ನಿಂಗ್ ’ಪ್ಯಾಕೇಜ್‌ಅನ್ನು  ಎಎನ್‌ಎಸ್‌ಎಸ್‌ಐಆರ್‌ಡಿ ರೂಪಿಸಿದೆ. ಸಂಪನ್ಮೂಲ ವ್ಯಕ್ತಿಗಳ ಗೈರು ಸಂದರ್ಭ ಇ-ಲರ್ನಿಂಗ್ ತರಬೇತಿ. ಕಿಟ್‌ಗಳನ್ನು ನಂತರ ಎಲ್ಲಾ ಪಂಚಾಯಿತಿಗಳಿಗೆ ವಿತರಿಸುವ ಉದ್ದೇಶ ಸಂಸ್ಥೆಯದ್ದು.
೩ ಮತ್ತು ೪ನೇ ಹಂತ: ಗ್ರಾ.ಪಂ.ಸ್ಥಾಯಿ ಸಮಿತಿ ಸದಸ್ಯರಿಗೆ ೩ ದಿನದ ತರಬೇತಿ ೩ನೇ ಹಂತದ ಕಾರ‍್ಯಕ್ರಮ. ಪ್ರತಿ ಪಂಚಾಯಿತಿಗಳಲ್ಲಿ ಸ್ಥಾಯಿ ಸಮಿತಿಗಳ ರಚನೆ ಆಗುತ್ತದಾದರೂ ಈ ಹಿಂದಿನ ಅವಧಿಗಳಲ್ಲಿ ಕಾರ‍್ಯ ನಿರ್ವಹಿಸಿದ್ದಿಲ್ಲ. ಕಾರ‍್ಯವ್ಯಾಪ್ತಿಯ ಅರಿವೂ ಇರುವುದಿಲ್ಲ. ಸಮಗ್ರ ಮಾಹಿತಿ ಯನ್ನೊಳಗೊಂಡ ತರಬೇತಿ ಮೂಲಕ ಈ ಐದು ವರ್ಷದ ‘ಹಂಗಾಮಿನಲ್ಲಿ’ ಸಮಿತಿಗಳನ್ನು ಸಕ್ರಿಯಗೊಳಿಸುವ ಆಶಯ ಸಂಸ್ಥೆಯದ್ದು. ೪ನೇ ಹಂತದಲ್ಲಿ, ಎಲ್ಲಾ ಸದಸ್ಯರಿಗೆ ಮತ್ತೊಮ್ಮೆ ಶಿಕ್ಷಣ, ಆರೋಗ್ಯ, ನೀರು, ನೈರ್ಮಲ್ಯ ಇತ್ಯಾದಿ ಸಂಗತಿಗಳ ಕುರಿತು ವಲಯ/ವಿಷಯವಾರು ತರಬೇತಿ ನೀಡಲಾಗುತ್ತದೆ.
ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ: ೨೫೦ ಮಂದಿ ಸಂಪನ್ಮೂಲ ವ್ಯಕ್ತಿಗಳು ಸಂಸ್ಥೆಯ ಸಂಪರ್ಕದಲ್ಲಿದ್ದಾರೆ. ಪಂಚಾಯಿತಿ ವ್ಯವಸ್ಥೆ ಬಗ್ಗೆ ನಂಬಿಕೆ, ತಿಳಿವಳಿಕೆ ಇರುವ, ಬೋಧನೆ ಕೌಶಲ್ಯವುಳ್ಳ ಅರ್ಹರನ್ನು ಸ್ಥಳೀಯವಾಗಿಯೇ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ.ಎಲ್ಲರಿಗೂ ಎಸ್‌ಐಆರ್‌ಡಿಯಲ್ಲಿ ‘ಮಾಸ್ಟರ್ ಟ್ರೈನರ್’ಮೂಲಕ ತರಬೇತಿ ನೀಡಲಾಗುವುದು ಎಂದು ತರಬೇತಿ ಸಲಹೆಗಾರ ವಿಲ್‌ಫ್ರೆಡ್ ಡಿಸೋಜಾ ‘ವಿಜಯ ಕರ್ನಾಟಕ’ಕ್ಕೆ ತಿಳಿಸಿದರು.
ಎಲ್ಲಾ ತಾಲೂಕು ಕೇಂದ್ರದಲ್ಲಿ ನಡೆಯುವ ಪ್ರಕ್ರಿಯೆ ಮೇಲೆ ನಿಗಾ ಇಡಲು ಹತ್ತು-ಹದಿನೈದು ಜನರ ತಂಡವೊಂದನ್ನು ರಚಿಸಲಾಗುತ್ತಿದೆ. ಗ್ರಾಮಾಭಿವೃದ್ಧಿ ದಿಸೆಯಲ್ಲಿ ನೂತನ ಸದಸ್ಯರನ್ನು ಸರ್ವ ಸನ್ನದ್ಧರನ್ನಾಗಿಸಿ, ಹೊಸ ಕನಸು ತುಂಬುವುದು ಉದ್ದೇಶ ಎಂದು ವಿವರಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ