ಕಾಡು ಪ್ರಾಣಿ ಬೇಟೆ ‘ನಿರಾತಂಕ’

ವಿಕ ತಂಡ ಮೈಸೂರು
ರಾಜ್ಯದಲ್ಲಿ ವನ್ಯಜೀವಿ ಹತ್ಯೆ ಪ್ರಕರಣಗಳಿಗೆ ಕೊರತೆ ಯಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿಗಳು ತಪ್ಪಿತಸ್ಥರನ್ನು ಬಂಧಿಸಿದರೂ ಶಿಕ್ಷೆ ಆಗುತ್ತಿರುವ ಪ್ರಕರಣಗಳೆಷ್ಟು ?
ಇಂಥ ಪ್ರಶ್ನೆ ಇಟ್ಟುಕೊಂಡು ಹೊರಟರೆ ಸಿಗುವ ಉತ್ತರ ಶೂನ್ಯ.
ಲಭ್ಯ ಮಾಹಿತಿ ಪ್ರಕಾರ ಕಟ್ಟುನಿಟ್ಟಾಗಿ ಕಾನೂನು ಜಾರಿಯಾಗುವುದು ಮತ್ತು ಶಿಕ್ಷೆ ಸಿಗುವುದು ಕೇವಲ ಶೇ. ೧ರಷ್ಟು ಪ್ರಕರಣಗಳಲ್ಲಿ. ಉಳಿದದ್ದೆಲ್ಲಾ ಸೂಕ್ತ ಸಾಕ್ಷಿಯಿಲ್ಲ ಎಂಬ ‘ಸಕಾರಣ’ ದಲ್ಲಿ ಖುಲಾಸೆ. ವನ್ಯಜೀವಿ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಯಿತೇ ಇಲ್ಲವೇ ಎಂಬ ಬಗ್ಗೆ ಜನರಿರಲಿ ಸ್ವತಃ ಅರಣ್ಯ ಇಲಾಖೆಯೇ ತಲೆ ಕೆಡಿಸಿಕೊಳ್ಳದು. ಹಾಗಾದರೆ  ಎಡವುತ್ತಿರುವುದು ಎಲ್ಲಿ ? ಎನ್ನುವುದಕ್ಕೆ ಹಲವು ಆಯಾಮಗಳಿವೆ.
ಹುಲಿಯ ಕೊಳೆತ ದೇಹ ಪತ್ತೆ, ಆನೆ ಸಾವು, ದಂತ ಕಳವು, ಹುಲಿ ಸಾವು-ಉಗುರು ನಾಪತ್ತೆ. ಚಿರತ ಚರ್ಮ ಮಾರಾಟಕ್ಕೆ ಯತ್ನ; ಮೂವರ ಬಂಧನ-ಹೀಗೆ ಸುದ್ದಿಗಳಾಗಿ ಆರೋಪಿ ಗಳು, ವಶಪಡಿಸಿಕೊಂಡ ಮಾಲು ಹಾಗೂ ಅರಣ್ಯ ಸಿಬ್ಬಂದಿಯ ಫೋಟೋ ಸಹ ಪ್ರಕಟವಾಗುತ್ತದೆ. ಅಲ್ಲಿಗೆ ಪ್ರಕರಣ ಖತಂ.
ಹೀಗೊಂದು ಕಾರಣ: ಇಲಾಖೆಯ ಅಧಿಕಾರಿಗಳಲ್ಲಿ ಬಹುತೇಕರಿಗೆ ವನ್ಯಜೀವಿ ಅಪರಾಧ ಪ್ರಕರಣಗಳ ತನಿಖೆ ವಿಧಾನವೇ ಗೊತ್ತಿರದು.ಇದಕ್ಕೆ ಹೆಚ್ಚಿನ ಡಿಸಿಎಫ್‌ಗಳು ವಿಜ್ಞಾನ ವಿಷಯ ಹಿನ್ನೆಲೆಯವರು. ಕಾನೂನಿನ ಪರಿಜ್ಞಾನ ಹಾಗೂ ಕೇಂದ್ರ ವನ್ಯಜೀವಿಗಳ ಸಂರಕ್ಷಣಾ ಕಾಯಿದೆ ಬಗ್ಗೆಯೂ ಹೆಚ್ಚು ತಿಳಿದಿರದು. ಸ್ಥಳ ಮಹಜರು, ಡಿಎನ್‌ಎ ಪರೀಕ್ಷೆ, ಪ್ರಥಮ ವರ್ತಮಾನ ವರದಿ, ಆರೋಪ ಪಟ್ಟಿ, ಮಾಲುಗಳ ವಶ-ಒಟ್ಟೂ ತನಿಖೆಯ ಸಮರ್ಪಕ ವಿಧಾನ ತಿಳಿದಿರದು.
ಬೆರಳಿನ ತುದಿಯಲ್ಲಿ ಸುಳಿವು: ಬೇಟೆ ಪ್ರಕರಣಗಳಲ್ಲಿ  ಅದರ ಮಾಂಸದ ಚೂರನ್ನು ಡಿಎನ್‌ಎ ಪರೀಕ್ಷೆ ನಡೆಸಿ ಸೂಕ್ತ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಆದರೆ ಬಹುತೇಕ ಸಂದರ್ಭ ಇದು ಪಾಲನೆಯಾಗದು. ಸತ್ತ ಪ್ರಾಣಿಯ ಪರೀಕ್ಷೆ ನಡೆಸಿ ವೈದ್ಯರು ನೀಡುವ ವರದಿ ಮೇಲೆ ಇಂಥ ಪ್ರಾಣಿಯದ್ದೇ ಮಾಂಸ ಎಂದು ವಾದಿಸಲಾಗುತ್ತದೆ. ಕೆಲ ಪ್ರಕರಣಗಳಲ್ಲಿ ಡಿಎನ್‌ಎ ಪರೀಕ್ಷೆ ನಡೆಸಿದರೆ ಸೂಕ್ತ. ಆರೋಪಿಯ ಬೆರಳಿನ ಉಗುರಿನ ತುದಿಯಲ್ಲಿ ಆ ಪ್ರಾಣಿಯ ರಕ್ತದ ಸೂಕ್ಷ್ಮಾಣು ಕಣಗಳಿರುತ್ತವೆ. ಉಗುರುಗಳ ಮುಂಭಾಗವನ್ನು ಕತ್ತರಿಸಿ ಅದನ್ನು ಡಿಎನ್‌ಎ ಪ್ರಯೋಗಾಲಯಕ್ಕೆ ಕಳುಹಿಸಿ ಆ ಮೂಲಕವೂಸಾಬೀತು ಪಡಿಸಬಹುದೆಂಬುದು ತಜ್ಞರ ಅಭಿಮತ.
ಆರಣ್ಯ ಕಾಯಿದೆಯಡಿ ವರದಿಯಾಗುವ ಪ್ರಕರಣಗಳಲ್ಲಿ ಬಲಿಯಾದ ಪ್ರಾಣಿ, ಅದರ ಚಹರೆ, ವಯಸ್ಸು, ಸ್ಥಳ, ಸಮಯ, ದಿನಾಂಕವೆಲ್ಲವೂ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಚಾರ್ಜ್‌ಶೀಟ್ ಸಲ್ಲಿಕೆ ಇತ್ಯಾದಿ ಕ್ರಮ ಮಹತ್ವದ್ದು. ಇಂದಿಗೂ ಮೈಸೂರು, ಎಚ್.ಡಿ.ಕೋಟೆ , ನಂಜನಗೂಡು, ಗುಂಡ್ಲುಪೇಟೆ, ಕೊಡಗು, ಹಾಗೂ ಚಾಮರಾಜನಗರ, ಕೊಳ್ಳೇಗಾಲ ಸೇರಿದಂತೆ ಹಲವು ನ್ಯಾಯಾಲಯಗಳಲ್ಲಿ ಸಾವಿರಾರು ಪ್ರಕರಣ ಗಳಿವೆ. ತನಿಖೆಯ ಗತಿಯೇ ತಿಳಿಯದು. ಪರಿಣಾಮ ೬೦ ದಿನ ಕಳೆದಾಗ ಆರೋಪಿಗೆ ಆರಾಮವಾಗಿ ಜಾಮೀನು ಸಿಗುತ್ತದೆ. ಆತ ಹೊರಬಂದು ಮತ್ತೊಂದು ಬೇಟೆಗೆ ಸಿದ್ಧತೆ ನಡೆಸುತ್ತಾನೆ.
ಸಿಬ್ಬಂದಿ ಕೊರತೆ: ಇಲಾಖೆಯಲ್ಲಿ ಗಾರ್ಡ್‌ಗಳಿಂದ ಹಿಡಿದು ವಿವಿಧ ಸ್ತರದ  ಒಂದು ಸಾವಿರ ಹುದ್ದೆಗಳು ಖಾಲಿ ಇವೆ. ಹೊಸ ನೇಮಕವಿರಲಿ, ಇರುವವರಿಗೇ ಸರಕಾರ ಉತ್ತಮವಾದ ಶೂ ಅಥವಾ ಗನ್ ಕೊಡಿಸದು.
ಒಟ್ಟಿನಲ್ಲಿ ಇರುವ ಮಂದಿಯೇ ಆನೆ ಹಾವಳಿ ತಡೆಗಟ್ಟಬೇಕು, ಫೈರ್‌ಲೈನ್ ಹಾಕಬೇಕು, ಆನೆ  ಓಡಿಸಬೇಕು, ಬೆಂಕಿ ಕಾಣಿಸಿಕೊಂಡರೆ ನಂದಿಸಬೇಕು, ಮತ್ತೊಂದೆಡೆ ಗುಂಡಿನ ಶಬ್ದ ಕೇಳಿದರೆ ಹಂತಕರ ಬೆನ್ನು ಹತ್ತಬೇಕು...ಹೀಗೆ ಜತೆಗೆ  ಮೇಲಧಿಕಾರಿಗಳ ಆಗು ಹೋಗುಗಳ ಬಗ್ಗೆ ಗಮನಹರಿಸಲೂ ಬೇಕು !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ