ತ.ನಾಡು, ಕೇರಳದಿಂದ ಹೆಣ್ಣು ಮಕ್ಕಳ ಸಾಗಣೆ

ವಿಕ ಸುದ್ದಿಲೋಕ ಮೈಸೂರು
ರಾಜ್ಯದ ಗಡಿ ಜಿಲ್ಲೆಗಳು ಈಗ ನೆರೆಯ ತಮಿಳುನಾಡು ಮತ್ತು ಕೇರಳದಿಂದ ಎಚ್‌ಐವಿ ಪೀಡಿತ ಆನಾಥ ಮಹಿಳೆಯರ ಸಾಗಣೆಗೆ ಹೆದ್ದಾರಿ !
ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಕೆಲ ಗಡಿ ಗ್ರಾಮಗಳಲ್ಲಿ ಹಾದು ಹೋಗುವ ಆಂತಾರಾಜ್ಯ ಹೆದ್ದಾರಿಯಲ್ಲಿ ಕಾಣಸಿಕ್ಕ ನೆರೆ ರಾಜ್ಯಗಳ ಮಾನಸಿಕ ಅಸ್ವಸ್ಥ ಮಹಿಳೆಯರು ಈಗ ಎಚ್‌ಐವಿ ಪೀಡಿತರು.
ಲಾರಿ ಚಾಲಕರಿಂದ ಅತ್ಯಾಚಾರಕ್ಕೀಡಾಗಿ ಹೆದ್ದಾರಿ ಯಲ್ಲಿ ಬಿಟ್ಟ ಈ ಅಮಾಯಕಮಹಿಳೆಯರು ಈಗ ಗಡಿ ಗ್ರಾಮಗಳ ಭಿಕ್ಷುಕಿಯರಷ್ಟೇ ಅಲ್ಲ, ಕಾಮುಕರ ಲೈಂಗಿಕ ದೌರ್ಜನ್ಯದಿಂದ ಮಾನಸಿಕ ಅಸ್ವಸ್ಥಕ್ಕೊಳಗಾಗಿದ್ದಾರೆ. ಅವರ ಪೈಕಿ ಕೆಲವರು ಗರ್ಭಿಣಿಯಾಗಿ, ಎಚ್‌ಐವಿ ಪೀಡಿತ ಶಿಶುವಿಗೆ ಜನ್ಮ ನೀಡಿರುವ ಉದಾಹರಣೆ ಇದೆ. ಇದು ಸರಕಾರಕ್ಕೂ ಗೊತ್ತಿದೆ :
ಈ ಕೃತ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಪರಿಶೀಲಿಸಿ ವರದಿ ಸಲ್ಲಿಸಲು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ಪತ್ರ ಬರೆದಿದೆ. ಅಧಿಕಾರಿಗಳು ಈಗಾಗಲೇ ಪ್ರಾಥಮಿಕ ಮಾಹಿತಿನೀಡಿದ್ದು, ಸದ್ಯದಲ್ಲೇ ವರದಿ ಸಲ್ಲಿಸುವರು. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ಆ ಹೆಣ್ಣುಮಕ್ಕಳಿಗೆ ಸೂಕ್ತ ಆಸರೆ ಒದಗಿಸುವುದಾಗಿ ಹೇಳುತ್ತಾರೆ ಪ್ರಾಧಿಕಾರದ ಸದಸ್ಯ ಡಾ.ಚಂದ್ರಶೇಖರ್.
ಇದೆಲ್ಲ ಹೇಗೆ ನಡೆಯುತ್ತಿದೆ ?: ತಮಿಳುನಾಡು ಮತ್ತು ಕೇರಳ ಗಡಿಯಲ್ಲಿನ ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥ ಹೆಣ್ಣು ಮಕ್ಕಳನ್ನು ಕರೆತರುವ ಲಾರಿ ಚಾಲಕರು ಚಾಮರಾಜನಗರ ವ್ಯಾಪ್ತಿಯ ಬಂಡೀಪುರ ಅರಣ್ಯ ಸಮೀಪದ ಅಂತಾರಾಜ್ಯ ಹೆದ್ದಾರಿ, ಗುಂಡ್ಲುಪೇಟೆ ತಾಲೂಕಿನ ಮಂಗಳ, ಅಂಗಲ ಗ್ರಾಮಗಳಲ್ಲಿ ಹಾದು ಹೋಗುವ ಊಟಿ ಮುಖ್ಯ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಚಾಮರಾಜನಗರ ಜಿಲ್ಲಾ ಆರೊಗ್ಯ ಇಲಾಖೆ ಅಧಿಕಾರಿಗಳೇ ದೃಢಪಡಿಸಿದ್ದಾರೆ.
ಈ ಹೆಣ್ಣುಮಕ್ಕಳು ಲಾರಿಚಾಲಕರಿಂದ ದುರ್ಬಳಕೆ ಯಾಗಿರುವ ಶಂಕೆಯೂ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ ಸೂಚನೆಯಂತೆ ಪರಿಶೀಲಿಸಿದ್ದು, ಪೊಲೀಸರು ಎಚ್ಚರ ವಹಿಸಬೇಕು. ಇಂಥ ಅನಾಥರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಆಸ್ಪತ್ರೆಗೆ ಸೇರಿಸಬೇಕೆಂದು ಸೂಚಿಸಿರುವುದಾಗಿ ಚಾಮರಾಜನಗರ ಮಾನಸಿಕ ಆರೋಗ್ಯಾಧಿಕಾರಿ ಡಾ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಅನಾಥ ಮಹಿಳೆಯರು ಎಲ್ಲಿದ್ದಾರೆ ?
ಇಂಥ ಹೆಣ್ಣುಮಕ್ಕಳಲ್ಲಿ ಬಹುತೇಕರು ‘ಕರುಣಾಲಯ’ದ ಆಶ್ರಯದಲ್ಲಿದ್ದಾರೆ. ಹೆದ್ದಾರಿಗಳಲ್ಲಿ ಅಲೆಯುತ್ತಾ, ಭಿಕ್ಷೆ ಬೇಡುತ್ತಿದ್ದ ಈ ಮಹಿಳೆಯರನ್ನು ಕರೆತಂದು ಚಿಕಿತ್ಸೆ ನೀಡುತ್ತಿರುವುದು ಸಂಸ್ಥೆಯ ಸಿಬ್ಬಂದಿ. ಮೊದಲು ಅವರಿಗೆ ಎಚ್‌ಐವಿ ಪರೀಕ್ಷೆ           ನಡೆಸಿದ್ದು, ನಾಲ್ವರಿಗೆ ಎಚ್‌ಐವಿ ಇರುವುದು ಪತ್ತೆ        ಯಾಗಿದೆ. ಅವರು ಮಾನಸಿಕ ಆಸ್ವಸ್ಥರಾದ್ದರಿಂದ ಅವರು ಯಾರು ಇತ್ಯಾದಿ ವಿವರ ಸಿಗಲಿಲ್ಲ. ಕೆಲ ತಿಂಗಳ ಹಿಂದೆ  ಒಬ್ಬಾಕೆ ಗರ್ಭವತಿಯಾಗಿ ಅಲ್ಲೇ ಹೆರಿಗೆಯೂ ಆಗಿತ್ತು. ಆಕೆಯ ಎಚ್‌ಐವಿ ಪೀಡಿತ ಮಗು ಈಗ ಬೆಂಗಳೂರಿನ ಪುನರ್ವಸತಿ ಚಿಕಿತ್ಸಾ ಕೇಂದ್ರದಲ್ಲಿದೆ.
ಐವತ್ತೈದು ಮಂದಿಗೆ ಆಶ್ರಯ ನೀಡಿರುವ ಕರುಣಾಲಯ ಬೆಲ್ಜಿಯಂ ಮೂಲದ ಸೈಂಟ್ ಚಾರ್ಲ್ಸ್ ಸಂಸ್ಥೆಯದು. ದಕ್ಷಿಣ ಭಾರತದ ಕೆಲ ರಾಜ್ಯಗಳ ಬುದ್ಧಿಮಾಂದ್ಯ ಅನಾಥರಿದ್ದಾರೆ.
ತಮಿಳು ಭಾಷಿಕರೇ ಹೆಚ್ಚು. ಇಲ್ಲಿರುವ ಎಚ್‌ಐವಿ ಪೀಡಿತರು ತಾವು ತಮಿಳುನಾಡು, ಕರ್ನಾಟಕದವರೆಂದು ಹೇಳುತ್ತಾರೆ. ಹೊರಗೆಲ್ಲೂ ಕಳಿಸದೇ, ಇಲ್ಲಿಯೇ ನೋಡಿಕೊಳ್ಳಲಾಗುತ್ತಿದೆ ಎನ್ನುತ್ತಾರೆ ಕರುಣಾಲಯದ ಕ್ರೈಸ್ತ ಸನ್ಯಾಸಿನಿ ಸಿಸ್ಟರ್ ಹಿಲರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ