‘ಪಂಚಾಚಾರ್ಯ ಪ್ರಭೆ’ ಬೆಳಗಿದ ಪಂಡಿತ ಕಾಶೀನಾಥ ಶಾಸ್ತ್ರಿ ಜಯಂತಿ

೧೧೫ನೇ ಜಯಂತಿಯನ್ನು ಕಾಶೀನಾಥ ಶಾಸ್ತ್ರೀ ಕುಟುಂಬ ದವರಿಂದ ಜೂನ್ ೧೬ ರಂದು ಸಾಂಪ್ರದಾಯಿಕವಾಗಿ ಆಚರಣೆ ಪಂಚಾಚಾರ್ಯ ಪೀಠ, ಪರಂಪರೆ ಪ್ರಸಿದ್ಧ. ಈ ಆಚಾರ್ಯರ ಪ್ರಣೀತ ವಿಚಾರ, ಸಿದ್ಧಾಂತಗಳನ್ನು ಭಾರತದ ಪೂರ್ತಿ ಪ್ರಸರಿಸಬೇಕೆಂದು ಬಯಸಿ ಪ್ರಯತ್ನಿಸಿ ಯಶಸ್ವಿ ಯಾದವರೇ ಪಂಡಿತ ಕಾಶೀನಾಥ ಶಾಸ್ತ್ರಿ. ಇವರ ೧೧೫ನೇ ಜಯಂತಿ  ಅವರ ಕುಟುಂಬವರ್ಗದವರಿಂದ ಬುಧವಾರ ನಡೆಯುತ್ತಿದೆ.
ವೀರಶೈವ ಧರ್ಮದ ಪಂಚಪೀಠದ ಶಾಖಾಮಠಗಳಾದ ಕಾಶಿ, ಕೇದಾರ, ಕಾಶ್ಮೀರ, ನೇಪಾಳ, ಭೂತಾನ, ಕಂಚಿ, ಕುಂಭಕೋಣ, ರಾಮೇಶ್ವರ, ಶ್ರೀಲಂಕಾಗಳಲ್ಲೂ ಸಿದ್ಧಾಂತದ ಪುನರುತ್ಥಾನ ಇವರ ಧ್ಯೇಯ. ಇವರಿಗೆ ದಾರಿದೀಪವಾಯಿತು.
ಕಾಶಿಯಲ್ಲೇ ೧೯೧೮ರಲ್ಲಿ ಪ್ರಥಮ ಪಂಚಾಚಾರ್ಯ ಸಮ್ಮೇಳನ ನಡೆಸಿ ವೀರಶೈವ ಸಿದ್ಧಾಂತದ ಪ್ರಾಚೀನತೆ, ಪರಂಪರೆಯನ್ನು ವಿವಿಧ ಮಾಧ್ಯಮದಲ್ಲಿ ತಿಳಿಸಿದರು. ಪಂಚಪೀಠಗಳ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ದೊರಕುವ ಎಲ್ಲ ಮಾಹಿತಿ ಸಂಗ್ರಹಿಸಿ ‘ಶ್ರೀ ಕಾಶೀನಾಥ ಗ್ರಂಥಮಾಲೆ’ ಪ್ರಾರಂಭಿಸಿ ೬೦ ಕ್ಕೂ ಹೆಚ್ಚು ಸಂಸ್ಕೃತ, ಕನ್ನಡ ಕೃತಿಗಳನ್ನು ಪ್ರಕಟಿಸಿದರು. ಗೋರಖಪುರದಿಂದ ಇಂದಿಗೂ ಬರುತ್ತಿರುವ ಕಲ್ಯಾಣ ತಿಂಗಳ ಪತ್ರಿಕೆಯಲ್ಲಿ ಈಗಲೂ ಶಾಸ್ತ್ರಿಯವರ ವಿದ್ವತ್ ಲೇಖನ ಪುನರ್ ಮುದ್ರಣಗೊಳ್ಳುತ್ತಿವೆ.
ಪಂಚಾಚಾರ್ಯರ ಮೂರ್ತಿ ಶಿಲ್ಪ, ಭಾವಚಿತ್ರ ರೂಪುರೇಷೆ ಮಾಡಿದವರೂ ಇವರೇ. ವೀರಶೈವ ಮಹಾತ್ಮರು, ಶ್ರೀಕರ ಭಾಷ್ಯ, ಶ್ರೀ ರೇಣುಕ ವಿಜಯ, ಸಿದ್ಧಾಂತ ಶಿಖಾಮಣಿಯನ್ನು ಕನ್ನಡ ಲೋಕಕ್ಕೆ ತಂದುಕೊಟ್ಟ ಮಹನೀಯರು. ಶಿವಾದ್ವೈತ ಮಂಜರಿ, ಶ್ರೀಕರ ಭಾಹ್ಯ, ನಂದಿಕೇಶ್ವರ ಕಾರಿಕೆ, ಶಿವಾದ್ವೈತ ಪರಿಭಾಷೆ ಸೇರಿದಂತೆ ದುರ್ವಾದ ದೂರೀಕರಣ, ಸೂಕ್ಷ್ಮಾನಮಃ, ಚಂದ್ರ ಜ್ಞಾನಾಗಮಃ, ಕಾರಣವನು‘ ಮುಕುಟಾಗಮಃ ಶಕ್ತಿವಿಶಿಷ್ಟಾದ್ವೈತ, ವೀರಶೈವರತ್ನ ಬರೆದು ಪ್ರಸ್ತುತಪಡಿಸಿ ದವರು. ಇಂದಿಗೂ ಈ ಗ್ರಂಥಗಳೇ ಆಧಾರಗ್ರಂಥಗಳು.
ಪತ್ರಿಕಾ ಮಾಧ್ಯಮ: ತಾನು ಸಂಶೋಧಿಸಿದ ಪ್ರಾಚೀನ ಪರಂಪರೆಯ ಸಿದ್ಧಾಂತಗಳಿಗಾಗಿ ೮೪ ವರ್ಷಗಳ ಹಿಂದೆ ೧೬-೫-೧೯೨೭ ರಂದು ಕಾಶೀನಾಥ ಶಾಸ್ತ್ರಿ ಅವರು ಪಂಚಾಚಾರ್ಯ ಪ್ರಭಾ ವಾರಪತ್ರಿಕೆಯನ್ನು ಪ್ರಾರಂಭಿಸಿದರು. ಈ ನಾಲ್ಕನೇ ತಲೆಮಾರಿನಲ್ಲೂ ಈ ಪತ್ರಿಕೆ ನಿಂತಿಲ್ಲ. ಜೀವನದ ಏರುಪೇರು, ಕೌಟುಂಬಿಕ ಬಿರುಗಾಳಿಗೂ ಜಗ್ಗದೆ ಪ್ರತಿ ಸೋಮವಾರ ಪ್ರಕಟವಾಗಿ ಸಿದ್ಧಾಂತ, ಅಭಿಮಾನಿ ವಾಚಕರ ಚಂದಾದಾರರನ್ನು ತಲುಪುತ್ತಿದೆ.
ಸಯ್ಯಾಜಿರಾವ್ ರಸ್ತೆಯಲ್ಲಿ ಹೆಸರಾಂತ ಪಂಚಾಚಾರ್ಯ ಎಲೆಕ್ಟ್ರಿಕ್ ಪ್ರೆಸ್ ಇದ್ದ ಸ್ಥಳದಲ್ಲೇ ಈಗ ಚಾಮುಂಡೇಶ್ವರಿ ಚಿತ್ರಮಂದಿರವಿದೆ. ಜರ್ಮನಿಯಿಂದ ಹೊಸ ಮುದ್ರಣ ಮಂತ್ರ ‘ಡ್ಯಾನ್ಸನ್ ಪೇಯ್ನಿ ಅಂಡ್ ಎಲೈಟ್’ ತರಿಸಿ ಪ್ರೆಸ್ ಸ್ಥಾಪಿಸಿ ಮುದ್ರಣ ಕಾರ‍್ಯವನ್ನು ಕೈಗೊಳ್ಳಲಾಯಿತು. ಇದೀಗ ಈ ಯಂತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರ ‘ಮಂಜೂಷ’ ವಸ್ತು ಸಂಗ್ರಹಾಲಯದಲ್ಲಿ ವಿರಾಜಮಾನ.
ಅವಿವಾಹಿತರಾಗಿದ್ದ ಕಾಶೀನಾಥ ಶಾಸ್ತ್ರಿ ಅವರ ಸೋದರ ಮಹದೇವಯ್ಯ ೧೯೫೦ರಿಂದ ೧೯೮೪ರವರೆಗೆ, ನಂತರ ಇವರ ಮಗ ಬಿಲಂ ಸಿದ್ದೇಶ್ವರಯ್ಯ ೧೯೮೪ರಿಂದ ನಡೆಸುತ್ತಿದ್ದು ಇದೀಗ ಇವರ ಮಗ ಬಿ.ಎಸ್.ಕಾಶೀನಾಥ್ ನಿರ್ವಹಿಸುತ್ತಿ ದ್ದಾರೆ.
ಪಂಚಾಚಾರ್ಯ ಪ್ರಭಾದಲ್ಲಿ ಗಾಂಧೀಜಿ ಅವರ ಮೈಸೂರು ಭೇಟಿ ವರದಿ ಅಲ್ಲದೆ ಬಾಲ್ಯ ವಿವಾಹ ನಿವಾರಣೆಗೆ ಬಂದ ಕಾಯ್ದೆ, ಮೈಸೂರು, ತಮಿಳುನಾಡು, ಕಾವೇರಿ ವಿವಾದ, ಜಸ್ಟೀನ್ ಪೇಜ್ ಆಯೋಗ ವರದಿಯಲ್ಲಿದೆ. ನಾಲ್ವಡಿಯವರ ಆಡಳಿತದ ಬೆಳ್ಳಿ ಹಬ್ಬ ಮುಂತಾದ ಸಾವಿರಾರು ಸಂಗತಿಗಳು ಅಚ್ಚಾಗಿವೆ. ಮೈಸೂರಿನ ರಾಜರ ಬಳಿ ಪಂಡಿತರಿಗೆ ಆಶ್ರಯವಿತ್ತು. ಇಲ್ಲೆಲ್ಲಾ ವಿದ್ವಾನ್ ಮಂಡಲಿ, ವಿದ್ವಾಂಸರು ಪಂಡಿತರ ಸಹವಾಸಕ್ಕೆಂದೇ ದೂರದ ನವಲಗುಂದ ತಾಲೂಕಿನಿಂದ ಬಂದ ರೆಡ್ಡೀರ ನಾಗನೂರಿನ ಬೃಹನ್ಮಠದ ಕಾಶೀನಾಥ ಶಾಸ್ತ್ರಿ  ಎಲ್ಲ ವಿದ್ವಾಂಸರ ಮನ್ನಣೆ ಗಳಿಸಿದರು. ಅವರ ಪ್ರತಿಭೆಗಳಿಗೆ ಅವಕಾಶಕೊಟ್ಟು ಸಾಹಿತ್ಯದ ಪ್ರಕಾಶನ ಕೈಗೊಂಡರು. ಇಂಥ ಘನ ವಿದ್ವಾಂಸರಾದ ಇವರು ೧೮೯೫ರಲ್ಲಿ ಜನಿಸಿ ೫೫ ವರ್ಷ ಬಾಳಿ ೧೯೫೦ರಲ್ಲಿ ನಿಧನರಾದರು. ಇವರ ಜಯಂತಿಯನ್ನು ಆಧುನಿಕ ಕೌಟುಂಬಿಕ ಪದ್ಧತಿ ತುಂಬಿರುವ ಈ ಸಮಾಜದಲ್ಲಿ ಜಯಂತಿ ಆಚರಣೆ ಕೈಗೊಂಡಿರುವುದು ಅರ್ಥಪೂರ್ಣ.
-ಈಚನೂರು ಕುಮಾರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ