ವಿಕ ವಿಶೇಷ ಮೈಸೂರು
ಲಕ್ಷ್ಮೀಪುರಂ ಶಾಲೆಗೆ ಸೇರಲು ಮಕ್ಕಳೇ ಬರುತ್ತಿಲ್ಲ !
ಆರು ವರ್ಷ ಉರುಳಿದರೆ ಶತಮಾನೋತ್ಸವ ಆಚರಣೆಯ ಸಡಗರ - ಸಂಭ್ರಮವನ್ನು ಕಾಣಬೇಕಿರುವ ನಗರದ ಅತ್ಯಂತ ಹಳೆಯ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ೨೦೧೦-೧೧ನೇ ಸಾಲಿಗೆ ವ್ಯಾಸಂಗ ಮಾಡಲು ಉಳಿದ ಮಕ್ಕಳ ಸಂಖ್ಯೆ ಕೇವಲ ೫. ತರಗತಿಗಳು ೭, ಮಕ್ಕಳು ೫ ಎಂಬ ವಿಚಿತ್ರ ಸನ್ನಿವೇಶ !
ಹಾಗಾಗಿ ಒಂದಷ್ಟು ದಿನ ಕಾಯ್ದು ನೋಡಿ, ತಾತ್ಕಾಲಿಕವಾಗಿ ಶಾಲೆ ಯನ್ನು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ.
ಲಕ್ಷ್ಮೀಪುರಂನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಇಷ್ಟುದ್ದದ ಹೆಸರಿನಲ್ಲಿ ಕರೆದರೆ, ತಕ್ಷಣ ಯಾರಿಗೂ ಈ ಶಾಲೆಯ ನೆನಪು ಬಾರದು. ಅದೇ ಲಕ್ಷ್ಮೀಪುರಂ ಶಾಲೆ ಎನ್ನಿ ! ತಕ್ಷಣ, ಓ ಅದ... ಸಂಸದ ಎಚ್.ವಿಶ್ವನಾಥ್, ನಟ ಅಂಬರೀಷ್ ಓದಿದ ಶಾಲೆ ಎಂದು ನೆನಪು ಮಾಡಿಕೊಳ್ಳುವವರೇ ಹೆಚ್ಚು.
ಸ್ಥಳೀಯ ಶಾಸಕ ಎಸ್. ಎ. ರಾಮದಾಸ್ ಹಾಗೂ ನಂಜನಗೂಡು ಶಾಸಕ ವಿ. ಶ್ರೀನಿವಾಸಪ್ರಸಾದ್ ಅವರಿಗೂ ಈ ಶಾಲೆ ಅಂದ್ರೆ ಅಚ್ಚು ಮೆಚ್ಚು. ೧೯೧೬ರಲ್ಲಿ ಮೈಸೂರು ಮಹಾರಾಜರಿಂದ ಸ್ಥಾಪನೆಯದ ಈ ಶಾಲೆ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದೆ. ಇಲ್ಲಿ ತಯಾರಾದ ಅಸಂಖ್ಯಾತ ಮಕ್ಕಳು ಸಮಾಜದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಅರಮನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲ ಸಿಬ್ಬಂದಿಗಳ ಮಕ್ಕಳಿಗೂ ಲಕ್ಷ್ಮೀಪುರಂ ಶಾಲೆಯೇ ಸರಸ್ವತಿ ಮಂದಿರ.
ಅಶೋಕಪುರಂ, ಕೃಷ್ಣಮೂರ್ತಿಪುರಂ, ಜಯನಗರ, ಲಕ್ಷ್ಮೀಪುರಂ, ನಂಜುಮಳಿಗೆ ಸೇರಿದಂತೆ ಹೃದಯ ಭಾಗದಲ್ಲಿರುವ ಬಹುತೇಕ ಎಲ್ಲ ನಿವಾಸಿಗಳ ಮಕ್ಕಳು ಹಿಂದೊಮ್ಮೆ ‘ಅ,ಆ,ಇ.ಈ...’-ಕಲಿತಿದ್ದು ಇಲ್ಲಿಯೇ. ಇಂಥ ಶಾಲೆ ಸೇರಲು ಈಗ ಮಕ್ಕಳೇ ಬರುತ್ತಿಲ್ಲ ಎಂಬುದು ಮಾತ್ರ ಸೋಜಿಗದ ಸಂಗತಿ. ಹಿಂದೊಮ್ಮೆ ಈ ಶಾಲೆಯಲ್ಲಿ ೬೦೦ ರಿಂದ ೮೦೦ ಮಕ್ಕಳು ಕಲಿಯುತ್ತಿದ್ದರು, ಅಂಗಳದಲ್ಲಿ ನಿಂತು ಜನಗಣ ಮನ ಹಾಡುವುದನ್ನು ನೋಡುವುದೇ ಒಂದು ಭಾಗ್ಯ ಎಂಬ ದಿನಗಳು ಈಗ ನೆನಪು ಮಾತ್ರ.
೨೦ ವಿದ್ಯಾರ್ಥಿಗಳಿಗೆ ಹುಡುಕಾಟ: ಶಿಕ್ಷಣ ಇಲಾಖೆ ಮೂಲಗಳು ಹೇಳುವ ಪ್ರಕಾರ- ೨೦೦೯-೧೦ನೇ ಸಾಲಿನಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳ ಸಂಖ್ಯೆ ಕೇವಲ ೧೫ರ ಆಸು-ಪಾಸಿನಲ್ಲಿ ಇತ್ತು. ಇವರ ಪೈಕಿ ೧೦ ಮಕ್ಕಳು ಏಳನೇ ತರಗತಿ ಉತ್ತೀರ್ಣರಾಗಿ, ಪ್ರೌಢಶಾಲೆ ಸೇರಲು ಟಿಸಿ ಪಡೆದುಕೊಂಡು ಹೋದರು. ಹಾಗಾಗಿ ಈಗ ಉಳಿದಿರುವವರು ಐವರು ಮಾತ್ರ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಂದನ್ ವಿಜಯ ಕರ್ನಾಟಕಕ್ಕೆ ತಿಳಿಸಿದರು.
‘ಈ ಶಾಲೆಯ ಆಸುಪಾಸಿನಲ್ಲಿ ಇಲಾಖೆ ನಡೆಸಿದ ಗಣತಿ ಪ್ರಕಾರ ಶಾಲೆ ಬಿಟ್ಟ ಮಕ್ಕಳು ಇದ್ದಾರೆ. ಅವರೆಲ್ಲರನ್ನೂ ಶಾಲೆಗೆ ಕರೆತರಲಾಗು ವುದು. ಜೂ. ೩೦ರ ತನಕವೂ ಪ್ರವೇಶಕ್ಕೆ ಅವಕಾಶವಿದೆ. ಒಟ್ಟು ಮಕ್ಕಳ ಸಂಖ್ಯೆ ೨೦ ಆದರೂ ಶಾಲೆಯನ್ನು ಮುಂದುವರಿಸಲಾಗುವುದು’ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಆಕರ್ಷಣೆ : ಲಕ್ಷ್ಮೀಪುರಂ ಸುತ್ತ-ಮುತ್ತ ಖಾಸಗಿ ಶಾಲೆಗಳು ಹೆಚ್ಚಾಗಿದ್ದೇ ಲಕ್ಷ್ಮೀಪುರಂ ಶಾಲೆ ಸೊರಗಲು ಕಾರಣ ವಾಯಿತು. ಈ ನಡುವೆ ಶಾಲೆಯನ್ನು ಸುಧಾರಿಸಿ, ಮಕ್ಕಳನ್ನು ಸೆಳೆ ಯಲು ಶಾಲೆಯನ್ನು ರೋಟರಿ ಸಂಸ್ಥೆಯವರಿಗೆ ದತ್ತು ನೀಡಲಾಯಿತು. ಇದಲ್ಲದೆ, ಮಕ್ಕಳನ್ನು ಸೆಳೆಯಲು, ತಮ್ಮಲ್ಲಿಯೇ ಹಿಡಿದಿಟ್ಟುಕೊಳ್ಳಲು ಇಲಾಖೆ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಲೇ ಇದೆ. ಆದರೂ ಮಕ್ಕಳು ಸರಕಾರಿ ಶಾಲೆಗೆ ಬರುತ್ತಿಲ್ಲ. ಹಾಗಾಗಿ, ಇದಕ್ಕೇನು ಪರಿಹಾರ ಎಂಬುದು ಇಲಾಖೆಗೂ ಹೊಳೆಯುತ್ತಿಲ್ಲ. ಆದರೂ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚದೇ, ಉಳಿಸಿಕೊಳ್ಳಲು ಪ್ರಯತ್ನ ಸಾಗಿದೆ. ಸಂಸದ ಎಚ್. ವಿಶ್ವನಾಥ್, ಸ್ಥಳೀಯ ಶಾಸಕ ಎಸ್. ಎ. ರಾಮದಾಸ್, ವಿ. ಶ್ರೀನಿವಾಪ್ರಸಾದ್ ಶಾಲೆಗೊಮ್ಮೆ ಬಂದು ಹೋಗಬೇಕಿದೆ !
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ