ಉನ್ನತ ಶಿಕ್ಷಣ ಗುಣ, ಪ್ರಮಾಣ ವೃದ್ಧಿಗೆ ಕ್ರಮ

ವಿಕ ಸುದ್ದಿಲೋಕ ಮೈಸೂರು
ಹನ್ನೊಂದನೇ ಪಂಚವಾರ್ಷಿಕ ಯೋಜನೆ ಅಂತ್ಯ ದೊಳಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಶೇ.೧೦ರಿಂದ ೧೫ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಪ್ರೊ.ಸುಖದೇವ್ ಥೋರಟ್ ಹೇಳಿದ್ದಾರೆ.
ಜಿಲ್ಲಾ ಪತ್ರಕರ್ತರ ಸಂಘ  ಮಂಗಳವಾರ  ಆಯೋಜಿಸಿದ್ದ ‘ಮಾಧ್ಯಮ ಸಂವಾದ’ದಲ್ಲಿ ಪಾಲ್ಗೊಂಡಿದ್ದ ಅವರು, ಉನ್ನತ ಶಿಕ್ಷಣ ಸುಧಾರಣೆಗೆ  ಹೇರಳ ಹಣ ಮೀಸಲಾಗಿದೆ. ಗುಣಮಟ್ಟ ಹೆಚ್ಚಳಕ್ಕೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
೨ನೇ ಅಲೆ: ೧೦ನೇ ಪಂಚವಾರ್ಷಿಕ ಯೋಜನೆಯಲ್ಲಿ ಉನ್ನತ ಶಿಕ್ಷಣಕ್ಕೆ ದಕ್ಕಿದ ಅನುದಾನ ೪ ಸಾವಿರ ಕೋಟಿ ರೂ. ೧೧ನೇ ಪಂಚವಾರ್ಷಿಕ ಯೋಜನೆಗೆ (೨೦೦೭-೧೨) ಹತ್ತು ಪಟ್ಟು ಹೆಚ್ಚಿದ್ದು, ೪೮ ಸಾವಿರ ಕೋಟಿ ರೂ. ಅನುದಾನ ಮೀಸಲಾಗಿದೆ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ೨ನೇ ಅಲೆ ಎದ್ದಿದೆ. ಶಿಕ್ಷಣದ ಗುಣಾತ್ಮಕತೆಗೆ ಬಾಧಕ ಆಗದಂತೆ ಗಮನ ವಹಿಸಲಾಗಿದೆ.
‘ಪ್ರಸ್ತುತ‘ ಶಿಕ್ಷಣ: ದೇಶದಲ್ಲಿ ೩೦ ಹೊಸ ಕೇಂದ್ರೀಯ ವಿವಿಗಳು ಆರಂಭವಾಗುತ್ತಿದ್ದು, ಈ ಪೈಕಿ ೧೫ ಚಟುವಟಿಕೆ ಆರಂಭಿಸಿವೆ. ೭ ಐಐಟಿ, ೭ ಐಐಎಂ, ೧ ಸಾವಿರ ಪಾಲಿಟೆಕ್ನಿಕ್‌ಗಳು ಸೇರಿ ೧,೪೬೨ ಹೊಸ ವಿದ್ಯಾಕೇಂದ್ರಗಳು ಪ್ರಾರಂಭವಾಗುತ್ತಿವೆ. ಪ್ರಸ್ತುತ  ಸ್ಪರ್ಧಾತ್ಮಕ  ಜಗತ್ತಿಗೆ ಅಗತ್ಯ ಶಿಕ್ಷಣ ನೀಡಲು ಒತ್ತು ನೀಡಲಾಗುತ್ತಿದೆ.
ಹೊಣೆ ನಿಗದಿ: ಬೋಧಕರಿಗೆ ಆರಂಭದಲ್ಲೇ ಅತ್ಯುತ್ತಮ ವೇತನ  (ಐಎಎಸ್ ಅಧಿಕಾರಿಗಳಿಗಿಂತ ಹೆಚ್ಚು ) ನೀಡಲಾಗುತ್ತಿದೆ. ಆಯ್ಕೆಯ ಮಾನದಂಡ ಗಳನ್ನು ಬಿಗಿಗೊಳಿಸಿದ್ದು, ಹೆಚ್ಚು ವೇತನ ನೀಡು ವುದಲ್ಲದೇ ಅದಕ್ಕೆ ತಕ್ಕಂತೆ ಕೆಲಸವನ್ನೂ ತೆಗೆಸಲಾಗುತ್ತಿದೆ. ಎಲ್ಲರಿಗೂ ಅವರದ್ದೇ ಹೊಣೆಗಾರಿಕೆ  ನಿಗದಿ ಪಡಿಸಿ ಚಟುವಟಿಕೆಗಳ ಮೇಲೂ ವಿವಿ ಕಣ್ಗಾವಲು ಇಡಲಿದೆ. ಬೋಧನೆ, ಸಂಶೋಧನೆ, ಶೈಕ್ಷಣಿಕ ಆಡ ಳಿತದ ಪ್ರಗತಿ ಆಧರಿಸಿಯೇ ಬಡ್ತಿ ಮತ್ತಿತರ  ಸೌಲಭ್ಯ ಕಲ್ಪಿಸಲಾಗುವುದು. ಸಂಶೋಧನೆಗಳ ಗುಣಮಟ್ಟ ವೃದ್ಧಿಗೂ ಅಗತ್ಯ ಮಾನದಂಡಗಳನ್ನು ರೂಪಿಸಲಾಗಿದೆ.
ಕೊಡುಕೊಳ್ಳುವಿಕೆ  ಓಕೆ: ವಿದೇಶಿ ವಿವಿಗಳ ಪ್ರವೇಶ ಪ್ರಸ್ತಾಪ ಸಂಸತ್ ಸ್ಥಾಯಿ ಸಮಿತಿ ಮುಂದಿದೆ. ತೊಂದರೆ ಆಗುತ್ತದೆಯೋ ಇಲ್ಲವೋ ಎನ್ನುವ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ. ಆದರೂ, ವಿದೇಶಿ ವಿವಿಗಳ  ಜತೆ ಒಡಂಬಡಿಕೆ, ಉತ್ಕೃಷ್ಟ ಜ್ಞಾನದ ಕೊಡುಕೊಳ್ಳುವಿಕೆ  ಅಪಾಯವೇನಲ್ಲ.
ಆಮಿಷವಲ್ಲವೇ: ಮೈಸೂರು ವಿವಿ ನೀಡಿದ ಗೌರವ ಡಾಕ್ಟರೇಟ್ ಸ್ವೀಕರಿಸಲು ನಗರಕ್ಕೆ ಆಗಮಿ ಸಿದ್ದ ಥೋರಟ್, ಈ ಕುರಿತ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾದರು.ಯುಜಿಸಿ ಅಧ್ಯಕ್ಷರು- ಸದಸ್ಯರಿಗೆ ವಿವಿಗಳು ಗೌರವ ಡಾಕ್ಟರೇಟ್ ನೀಡುವುದು ‘ಆಮಿಷ’ ಒಡ್ಡಿದಂತಲ್ಲವೇ? ಎನ್ನುವುದು ಪ್ರಶ್ನೆ.
‘ವಿವಿಗಳು ಸ್ವಾಯತ್ತ ಸಂಸ್ಥೆಗಳು. ಅವುಗಳಿಗೆ ಆಯ್ಕೆಯ ಸ್ವಾತಂತ್ರ್ಯವಿದೆ. ಆಯ್ಕೆ ಸಮಿತಿ ಅರ್ಹರನ್ನು ಆರಿಸುತ್ತದೆ. ಯಾವುದೋ  ಒಂದೆರಡು ಉದಾಹರಣೆಗಳನ್ನು ಮುಂದಿಟ್ಟುಕೊಂಡು ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲಾಗದು’ ಎನ್ನುವುದು ಥೋರಟ್ ಸಮಜಾಯಿಷಿ.
ರಾಜ್ಯ ಅನುದಾನ ಹೆಚ್ಚಿಸಲಿ: ಕೆಲ ವಿವಿಗಳು ರ‍್ಯಾಂಕ್ ವಿಜೇತರಿಗೆ ಚಿನ್ನದ ಪದಕದ ಬದಲು ೬೦ ರೂ.ಗಳ ಚೆಕ್ ನೀಡುತ್ತಿವೆ. ಇದು ವಿವಿಗಳ ಆರ್ಥಿಕ ಸಂಕಷ್ಟಕ್ಕೆ ನಿದರ್ಶನವೇ ಎಂಬ ಪ್ರಶ್ನೆಗೆ, ‘ವಿವಿಗಳಿಗೆ ಯುಜಿಸಿ ಶೇ.೪೦,ರಾಜ್ಯ ಸರಕಾರ ಶೇ.೬೦ ಅನುದಾನ  ನೀಡುತ್ತಿದೆ. ಯುಜಿಸಿ ಅನುದಾನ ಪ್ರಮಾಣವನ್ನು ೩ ಪಟ್ಟು ಹೆಚ್ಚಿಸಿದೆ. ಅಂತೆಯೇ ರಾಜ್ಯ ಸರಕಾರವೂ ತನ್ನ ಪಾಲನ್ನು ಹೆಚ್ಚಿಸಬೇಕು’ಎಂದು ಸಲಹೆ ನೀಡಿದರು.
ಮೂಗು ತೂರಿಸುವುದಿಲ್ಲ: ಖಾಸಗಿ ವಿವಿಗಳು ಮೀಸಲು ನಿಯಮ ಪಾಲಿಸದ ಕುರಿತ ಪ್ರಶ್ನೆಗೆ, ‘ ಖಾಸಗಿ ವಲಯ ಮೀಸಲು ನಿಯಮ ಪಾಲಿಸ ಬೇಕೆನ್ನುವ ಕುರಿತು ಯಾವುದೇ ಕಾನೂನು ಇಲ್ಲ. ಆದ್ದರಿಂದ  ಈ ವಿಷಯದಲ್ಲಿ ಯುಜಿಸಿ ಮೂಗು ತೂರಿಸದು’ ಎಂದು ಪ್ರತಿಕ್ರಿಯಿಸಿದರು. ಸಂಘದ ಅಧ್ಯಕ್ಷ ಕೆ.ಶಿವಕುಮಾರ್, ಪ್ರಧಾನ ಕಾರ‍್ಯದರ್ಶಿ ಬಿ.ಎಸ್.ಪ್ರಭುರಾಜನ್, ಉಪಾಧ್ಯಕ್ಷ ರಾಜೇಶ್ವರ್ ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ